ಈ ಸಾರಿ, ಮೋದಿ ಸರಕಾರದ ಬಾರಿ ..

ಈ ಸಾರಿ, ಮೋದಿ ಸರಕಾರದ ಬಾರಿ ..

ಕೊನೆಗೂ ಚುನಾವಣೆಯ ಫಲಿತಾಂಶ ಹೊರಬಿದ್ದು, ನಿಚ್ಛಳ ಬಹುಮತದೊಂದಿಗೆ ಮೋದಿ ಸರಕಾರ ಗದ್ದುಗೆಗೇರಲಿದೆ. ಈ ಬಾರಿಯ ಸಂತಸದ ಸುದ್ದಿಯೆಂದರೆ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತೆ ಸಿಕ್ಕಿರುವುದು. ಹೀಗಾಗಿ ಸಮಯಸಾಧಕ ರಾಜಕೀಯ ಗುಂಪುಗಳ ಕಾಟ, ಗೋಳಾಟ ಇರುವುದಿಲ್ಲ. ಸ್ಪೈಡರ್ ಮ್ಯಾನ್ ನಲ್ಲಿ ಹೇಳುವಂತೆ 'ಹೆಚ್ಚಿನ ಸಾಮರ್ಥ್ಯವಿದ್ದಷ್ಟೂ ಹೊಣೆಗಾರಿಕೆಯ ಹೊರೆಯೂ ಹೆಚ್ಚಿರುತ್ತದೆ' - ಎಂಬ ಮಾತನ್ನು ಮರೆಯದೆ ಆಡಳಿತ ನಡೆಸಿದರೆ ಸಾಕು, ದೇಶ ಪ್ರಗತಿಯತ್ತ ದಾಪುಗಾಲಿಕ್ಕುವುದರಲ್ಲಿ ಅನುಮಾನ ಇರುವುದಿಲ್ಲ . 

ಚುನಾವಣೆಯ ಪ್ರಕ್ರಿಯೆ ದೂರದ ಸಿಂಗಪುರದಿಂದಲೆ ಗಮನಿಸುತ್ತ ನಡುವೆ ಒಂದೆರಡು ಕವನ ಬರೆದಿದ್ದೆ. ಆದರೆ ಚುನಾವಣಾ ಪ್ರಕ್ರಿಯೆಯ ನಡುವೆ ಹಾಕುವುದು ಉಚಿತವಲ್ಲವೆಂದು ಪ್ರಕಟಿಸಿರಲಿಲ್ಲ. ಈಗ ಫಲಿತಾಂಶವೂ ಹೊರ ಹೊಮ್ಮಿರುವುದರ ಕಾರಣ ಸಂಪದದಲ್ಲಿ ಹಾಕುತ್ತಿದ್ದೇನೆ - ಈ ಅದ್ಭುತ ವಿಜಯಕ್ಕೆ ಮೋದಿ ಮತ್ತು ಬೀಜೆಪಿಗೆ ಅಭಿನಂದಿಸುತ್ತ ಮತ್ತು ಮೌಲಿಕ ರಾಜ್ಯಭಾರದ ಆಶಯದೊಂದಿಗೆ :-) 

೦೧. ಗೆದ್ದ ಗಳಿಗೆ  
____________________

ಕುಣಿದಾಡಿದ್ರಣ್ಣ ಎಗರಾಡಿದ್ರಣ್ಣ
ತಲೆಕೆಳಗಾಗಿ ನೇತಾಡಿದ್ರಣ್ಣ
ತುಂಬಾ ಶ್ಯಾಣೆ ಬಗ್ಗದ ಜಾಣ
ಕೈಲಿರದಿದ್ದರೂ ಸರಿ ರಾಮಬಾಣ ||

ಎಷ್ಟೊಂದುದ್ದದ ಚುನಾವಣೆ ಯಾನ
ಬೆವರಾಡಿ ಸುಸ್ತಾಗಿ ಮುಗಿದರೆ ಸಾಕಣ್ಣ
ಎಂದವರೆ ಎಲ್ಲ, ಪಕ್ಷಗಳು ಹೊರತಲ್ಲ
ನಿಟ್ಟುಸಿರು ಬಿಟ್ಟ ಜನ 'ಸದ್ಯ ಮುಗೀತಲ್ಲ' ||

ಕಿತ್ತಾಟ ಚೀರಾಟ ಬೈದಾಟ ಪ್ರತಾಪ
ಚಾರಿತ್ರ ವಧೆಯ ಜತೆ ಹಗರಣದ ಕೂಪ
ಕುರುಕ್ಷೇತ್ರದ ಸಮರ ನಡೆದಂತೆ ಪೂರ
ಮೀಡಿಯಾ ಜನ ಕೂಡ ಮಂಕಾದ ಸ್ವರ ||

ಮಾತಿನ ಮೋಡಿ ಮೋದಿಯ ಜಾಡಿ
ಚತುರ ಮಾತಲ್ಲೆ ಮುರಿದಂತೆ ಕಡ್ಡಿ
ಮುನಿಸೆ ಇಲ್ಲ ಸರಿ ತರ್ಕದ ಬಗಲ
ಅಂಕಿ ಅಂಶ ಪ್ರಗತಿ ಹೆಸರಲ್ಲೆ ಸಕಲ ||

ಬೈಯ್ದವರು ಮೋದಿ ಹೊಗಳಿದರೂ ಮೋದಿ
ನಾಮೋಚ್ಛಾರದಲಿ ಎತ್ತಿ ಹಿಡಿದಾ ಮಂದಿ
ಮಾತಾಡೆ ಕಷ್ಟ ಆಡದಿರಲು ಸಂಕಷ್ಟ
ಕುಡಿಯಲಾಗದ ಬಿಡದ ಬಿಸಿ ಚಹದ ಕಷ್ಟ ||

೦೨. ನಾಯಕತ್ವದ ಸತ್ವ
_________________________

ಮಗಳೆನ್ನದಿದ್ದರೂ ಮಗಳಾಗಿಸಿ ಸುದ್ದಿ
ಭೂ ಮಾರಾಟ ರಾದ್ದಾಂತವನು ಗುದ್ದಿ
ಕದ್ದಾಲಿಕೆ ಜಾಡಿಸಿ ಕಾಲೆಳೆದವರೆಲ್ಲಾ
ಭ್ರಷ್ಟಾಚಾರಕುತ್ತರ ಪ್ರಗತಿ ಮಾತೆ ಇಲ್ಲ! ||

ಆಡಿಕೊಳ್ಳುವ ಅವಸರದಲಿ ಗೋದ್ರಾ
ಭಾಷಣ ಮಾಡಲು ಬಿಡದಾ ಖದರ
ಸ್ಮೃತಿಯಿಂದ ದೂರ 'ಯಾರಾಕೆ?' ಎನ್ನುವರ
ಗೋಳಾಡಿಸಿದಷ್ಟು ಮೋದಿ ಕೀರ್ತಿ ಪ್ರಖರ ||

ಜೀವನ ಶೈಲಿ ಹಿಂದುತ್ವ, ಸಹಿಷ್ಣುತೆ ಬಲ
ಒಂದೇ ಭಾರತೀಯ ಪರಿಕಲ್ಪನೆ ಹೃದಯ
ಪ್ರಗತಿ ಮಂತ್ರ ದೇಶೋದ್ದಾರದ ಕನಸು
ಎದೆಗಾರಿಕೆಯುತ್ತರ ಭರವಸೆ ಹುಲುಸು ||

ನಾಯಕತ್ವದ ಅಪರೂಪದ ಮಾದರಿ
ತನ ರಾಜ್ಯದ ಯಶ ತಂಡಕೆ ಹಂಚಿದ ಪರಿ
'ತಿನ್ನುವುದಿಲ್ಲ ತಿನ್ನಬಿಡುವುದಿಲ್ಲ' ಸದ್ದು ಕೇಳಿಸಿತ ?
ಬಾಯ್ಮುಚ್ಚಿ ಕೂರೆ ಸರಿ ಪಕ್ಷದೊಳ ಧೂರ್ತ ||

ಕಂಡಿರಲಿಲ್ಲ ಇಂಥಹ ನಾಯಕತ್ವ ಸತ್ವ
ಮಲಿನವಾಗದೆ ದೇಶ ನಡೆಸಿದರೆ ತತ್ವ
ಬರೆಯಬಹುದು ಹೊಸ ಇತಿಹಾಸ
ಮರೆಸೆಲ್ಲ ತರದ ಕೀಳರಿಮೆ ಸಂಘರ್ಷ ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

 

Comments

Submitted by Amaresh patil Fri, 05/16/2014 - 22:46

ನಾಗೇಶರವರೇ ದೂರದ ಸಿಂಗಾಪೂರದಲ್ಲಿ ಕುಳಿತು ಭಾರತದ ಚುನಾವಣೆಯ ಫಲಿತಾಂಶವನ್ನು ಗಮನಿಸಿ ನರೇಂದ್ರ ಮೋದಿಯವರ ಹೆಸರನ ಅಲೆಯಲ್ಲಿ ನಡೆದ ಈ ಚುನಾವಣೆಯ ಹಿಂದಿನ ಟೀಕೆ ಟಿಪ್ಪಣಿಗಳನ್ನು ಹಾಗೂ ಅವರ ಗೆಲುವಿನ ಹಿಂದೆ ಇರುವ ಪರಿಶ್ರಮನ್ನು ತಮ್ಮ ಕವನದಲ್ಲಿ ಚನ್ನಾಗಿ ಬಿಂಬಿಸಿದ್ದಿರಿ ತುಂಬಾ ಸಂತೋಷ ನಮ್ಮ ಭಾರತದ ಸಮಗ್ರ ಪ್ರಗತಿ ತುಂಬಾ ಎತ್ತರಕ್ಕೆ ನಿಲ್ಲಲ್ಲಿ ಎನ್ನುವ ಮಹಾದಾಸೆಯೊಂದಿಗೆ ನಾವುಕೂಡಾ ಭಾಗಿಯಾಗುತ್ತೆವೆ ಎಂದು ನನ್ನ ಅಭಿನಂದನೆಗಳನ್ನು ತಿಳಿಸುತ್ತೆನೆ "ಧನ್ಯವಾದಗಳು"

Submitted by nageshamysore Sat, 05/17/2014 - 18:11

In reply to by Amaresh patil

ಅಮರೇಶ ಪಾಟೀಲರೆ, ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದ. ಈ ಸರಕಾರ ವಿಕಾಸ, ಪ್ರಗತಿಯ ಆಶ್ವಾಸನೆಯಡಿಯಲ್ಲಿ ಇಡೀ ಜನ ಸಮುದಾಯದ ಅಖಂಡ ಆಶೋತ್ತರಗಳ ಹೊರೆಯನ್ನು ಹೊತ್ತು ಅಧಿಕಾರಕ್ಕೇರುತ್ತಿರುವ ಗಳಿಗೆ. ಗುಜರಾತಿನ ಆಡಳಿತದಲ್ಲಿ ದಕ್ಷತೆ ತರಲು ಬಳಸಿದ ಪರಿಣಾಮಕಾರಿ ವಿಧಾನ, ಚಿಕಿತ್ಸೆಗಳನ್ನು ಗಮನಿಸಿದರೆ - ಅದು ದೇಶದ ಮಟ್ಟದಲ್ಲೂ ಅನುಷ್ಠಾನಕ್ಕೆ ಬಂದರೆ ಆಗಬಹುದಾದ ಉನ್ನತಿಯ ಪರಿಮಾಣ ಕಡೆಗಣಿಸಲಾಗದಂತದ್ದು. ಹಾಗಾಗಲೆಂದು ಎಲ್ಲರೂ ಆಶಿಸೋಣ. 'ಸರ್ವರ ಸಹಮತದ ಜತೆ ಸರ್ವರ ವಿಕಾಸ' ಕನಸು ನನಸಾಗಲೆಂದು ಹಾರೈಸೋಣ.

Submitted by nageshamysore Thu, 05/22/2014 - 03:42

In reply to by kavinagaraj

+೧  :-) 
 ಅಂದಹಾಗೆ ನಿನ್ನೆ ಒಂದು ಕುತೂಹಲಕಾರಿ ಬರಹ ನೋಡಿದೆ - ಎಷ್ಟು ನಿಜವೊ, ಎಷ್ಟು ಸುಳ್ಳೊ ಗೊತ್ತಿಲ್ಲ - ೨೦೧೪ ರಲ್ಲಿ ಮೋದಿ ಪ್ರಧಾನಿತ್ವದ ಕುರಿತು ನಾನೂರು ವರ್ಷಗಳ ಹಿಂದಿನ ನೊಸ್ಟ್ರಾಡಮಸ್ ಬರಹದಲ್ಲೂ ದಾಖಾಲಾತಿ ಇದೆಯಂತೆ ! ವಿಚಿತ್ರವೆಂದರೆ ಹೆಸರೂ ಕೂಡ !