ನಂದೂ ಒಂದು ಪುಸ್ತಕ ಓ(ಮೋ)ದಿ....!

ನಂದೂ ಒಂದು ಪುಸ್ತಕ ಓ(ಮೋ)ದಿ....!

ಇದೇ ಜೂನ್ 16 ನೇ ದಿನಾಂಕದಂದು ನಾನು ಬರೆದ ‘ನರೇಂದ್ರ ದಾಮೋದರದಾಸ್ ಮೋದಿ (ಜೀವನ ಚರಿತ್ರೆ)’ ಯು ವಾಸನ್ ಪಬ್ಲಿಕೇಷನ್ಸ್ ರವರಿಂದ ಪ್ರಕಟಿಸಲ್ಪಟ್ಟು ಇದೀಗ ರಾಜ್ಯಾದ್ಯಂತದ ಎಲ್ಲಾ ಪ್ರಮುಖ ಪುಸ್ತಕದಂಗಡಿಗಳಲ್ಲಿ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಪುಸ್ತಕದ ಲೇಖಕನಾದ ನಾನು ನನ್ನದೇ ಪುಸ್ತಕದ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನವನ್ನಿಲ್ಲಿ ಮಾಡಿದ್ದೇನೆ. ತಾವೆಲ್ಲರೂ ನನ್ನ ಪುಸ್ತಕವನ್ನು ಓದಿ ತಮ್ಮ ಸಲಹೆ ಸೂಚನೆಗಳನ್ನು ನೀಡುತ್ತೀರೆಂದು ನಂಬಿರುತ್ತೇನೆ.

 

ಗೆಳೆಯರಿಗೆಲ್ಲಾ ನನ್ನ ನಮಸ್ಕಾರಗಳು,

ನರೇಂದ್ರ ಮೋದಿ ಇಂದು ಭಾರತದ ಪ್ರಧಾನಿಗಳಾಗಿದ್ದಾರೆ. ದೇಶದ ಯುವಜನತೆಯಲ್ಲಿ ಹೊಸದೊಂದು ಭಾರವಸೆಯನ್ನು ಮೂಡಿಸಿದ ಈ ವ್ಯಕ್ತಿ ಇಂದು ದೇಶದ ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿಯುವ ಮುನ್ನ ಏನಾಗಿದ್ದರು, ಏನೇನು ಕಾರ್ಯಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆನ್ನುವುದನ್ನು ಇಂದು ಎಲ್ಲರೂ ಬಲ್ಲರು. ನರೇಂದ್ರ ಮೋದಿಯವರ ಜೀವನ ಕುರಿತಂತೆ ಕನ್ನಡ, ಆಂಗ್ಲ ಭಾಷೆಯೂ ಸೇರಿದಂತೆ ದೇಶದ ನಾನಾ ಭಾಷೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪುಸ್ತಕಗಳು ಪ್ರಕಟವಾಗಿವೆ, ಆಗುತ್ತಿವೆ. ಅಲ್ಲದೆ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಈ ದಿನಗಳಲ್ಲಿ ಅಂತರ್ಜಾಲದಲ್ಲಿ ಸಹ ನರೇಂದ್ರ ಮೀದಿಯವರ ಬದುಕಿನ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಿದೆ. (ಕಳೆದ ತಿಂಗಳಿನಲ್ಲಿ ಗೂಗಲ್ ಸರ್ಚ್ ನಲ್ಲಿ ನರೇಂದ್ರ ಮೋದಿಯವರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹುಡುಕಲ್ಪಡುತ್ತಿದ್ದ ವ್ಯಕ್ತಿಯಾಗಿದ್ದರು.)

ಆದರೆ ಸಹ ಇಂದಿಗೂ ನರೇಂದ್ರ ಮೋದಿಯವರ ಕುರಿತಂತೆ ತಿಳಿದುಕೊಳ್ಳುವ ಕುತೂಹಲವಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ ಸಹ ನಮ್ಮ ಮುಂದಿನ ತಲೆಮಾರಿನವರಿಗೆ, ಇದೀಗ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಇಂದಿನ ಪ್ರಧಾನಿಗಳ ಕುರಿತಂತೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಗಾಂಧಿ, ನೆಹರೂ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಚರಿತ್ರೆಗಳನ್ನು ಓದಿ ತಿಳಿದುಕೊಂಡಂತೆ ಇಂದಿನ ಯುವ ಮನಸ್ಸುಗಳಿಗೆ ಹತ್ತಿರವಾದ ಕಾರ್ಯ ದಕ್ಷತೆಯ ಮೂಲಕ ಅಭಿವೃದ್ದಿಯ ಮಾರ್ಗದಲ್ಲಿ ದೇಶವನ್ನು ಮುನ್ನಡೆಸಲು ಪಣ ತೊಟ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಜೀವನದ ಬಗೆಗೆ ಮಕ್ಕಳಲ್ಲಿ ಸಾಕಷ್ಟು ಪ್ರಶ್ನೆಗಳಿರುತ್ತವೆ.

ಅಂತಹಾ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ನಾನು ಇದೀಗ ಬರೆದಿರುವ ಪುಸ್ತಕ - ‘ನರೇಂದ್ರ ಮೋದಿ (ಜೀವನ ಚರಿತ್ರೆ}’ ಬಿಡುಗಡೆಯಾಗಿದೆ ಎಂದು ಹೇಳಲು ಸಂತೋಷಿಸುತ್ತೇನೆ.

ಕನ್ನಡ ಹಾಗೂ ಆಂಗ್ಲ ಭಾಷೆಯ ಪ್ರಖ್ಯಾತ ಪ್ರಕಾಶಕರುಗಳಲ್ಲಿ ಒಬ್ಬರಾದ ವಾಸನ್ ಪಬ್ಲಿಕೇಷನ್ಸ್ ರವರು ನನ್ನಿಂದ ಬರೆಸಿದ ನರೇಂದ್ರ ಮೋದಿಯವ 48 ಪುಟಗಳ ಈ ಜೀವನ ಚರಿತ್ರೆ ಪುಸ್ತಕದಲ್ಲಿ ನಾನು ನರೇಂದ್ರ ಮೋದಿಯವರ ಜನನ, ಬಾಲ್ಯದ ಕೆಲ ಪ್ರಮುಖ ಘಟನೆಗಳ್, ಅವರ ವಿದ್ಯಾಭ್ಯಾಸದ ವಿವರಗಳನ್ನು ನೀಡುವುದರೊಡನೆ ಅವರು ತಮ್ಮ ತಾರುಣ್ಯದಲ್ಲಿ ರಾಜಕೀಯದಲ್ಲಿ ಬೆಳೆದು ಬಂದ ರೀತಿ, ಅವರಲ್ಲಿನ ವಿಶೇಷ ವ್ಯಕ್ತಿತ್ವದ ಕುರಿತಾಗಿ ಬರೆದಿರುತ್ತೇನೆ.

ಮಕ್ಕಳಿಗೆ ಇಷ್ಟವಾಗುವ ಹಾಗೂ ಅನೇಕರಿಗೆ ಬಹುಷಃ ತಿಳಿದಿರದ ಮೋದಿಯವರ ಸಾಮಾಜಿಕ ಕೆಲಸ ಕಾರ್ಯಗಳಲ್ಲಿನ ಕಳಕಳಿಗೆ ಕುರುಹಾಗಿರುವ ‘ಸಂಸ್ಕಾರ ಧಾಮ’ ಶಾಲೆಯ ಕುರಿತಾಗಿಯೂ ವಿಶೇಷ ವಿವರಗಳನ್ನು ನೀಡಿದ್ದೇನೆ. ಗುಜರಾತು ಮುಖ್ಯಮಂತ್ರಿಗಳಾಗಿದ್ದಾಗಿನ ಅವರ ಅಬೀವೃದ್ದಿ ಕೆಲಸಗಳು, ಅವರು ಪ್ರಾರಂಭಿಸಿದ ಹಲವಾರು ಸಂಖ್ಯೆಯ ಉತ್ತಮ ಯೋಜನೆಗಳಿಂದ ಗುಜರಾತು ಇಂದು ಮಾದರಿ ರಾಜ್ಯವಾಗಿರುವ ರೀತಿಯ ವಿವರಣೆ ನೀಡಿದ್ದೇನೆ.

ಹೀಗೆ ನರೇಂದ್ರ ಮೋದಿಯವರ ಬಾಲ್ಯದಿಂದ ಪ್ರಾರಂಭಿಸಿ 26 ಮೇ 2014 ರಂದು ಅವರು ಪ್ರಧಾನಿಗಳಗಿ ಪ್ರಮಾಣಾವಚನ ಸ್ವೀಕರಿಸುವವರೆಗಿನ ಅವರ ಜೀವನ ವಿವರಗಳು ಸಂಕ್ಷೇಪವಾಗಿ, ಮಕ್ಕಳಿಗೆ ಸುಲಭಗ್ರಾಹ್ಯವಾಗುವ ರೀತಿಯಲ್ಲಿ ಇಲ್ಲಿ ನಮೂದಿಸಿದ್ದೇನೆ. ಅಂದಹಾಗೆಯೇ ಮೋದಿಯವರ ರಾಜಕೀಯ ವೃತ್ತಿ ಬದುಕಿನಲ್ಲಿ ನಡೆದಿದ್ದ ಕೆಲ ದುರಂತಗಳು, ಅದರ ಹಿನ್ನೆಲೆಯಲ್ಲಿ ಭುಗಿಲೆದ್ದ ಕೆಲ ವಿವಾದಗಳನ್ನು, ಅವುಗಳಿಗೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ಕೈಬಿಡಲಾಗಿದೆ. ಇದಕ್ಕೆ ಕಾರಣ, ಇದಕ್ಕೆ ಮೊದಲು ಹೇಳಿದಂತೆ ಇದು ಶಾಲಾ ಮಕ್ಕಳನ್ನು ದೃಷ್ಟಿಯಲ್ಲಿಟ್ಟು ರಚಿಸಲಾದ ಪುಸ್ತಕವಾಗಿರುವುದು. ಮಕ್ಕಳ ಮನಸ್ಸಿನಲ್ಲಿ ಗೊಂದಲಗಳಿಗೆ ಅವಕಾಶ ಮಾಡಿಕೊಡುವ ಇಂತಹಾ ವಿವರಗಳಿಂದ ಏನು ಪ್ರಯೋಜನವಾದೀತು? ಮಕ್ಕಳ ಮನಸ್ಸು ತಿಳಿಯಾಗಿರುವ ಕೊಳದ ನೀರಿನಂತಹುದು. ಅದಕ್ಕಾಗಿಯೇ ಅವರಿಗಿಷ್ಟವಾಗುವ, ಸುಲಲಿತ ಭಾಷೆಯಲ್ಲಿ ನರೇಂದ್ರ ಮೋದಿಯವರ ಜೀವನ ಚಿತ್ರಣವನ್ನು ಬಿಡಿಸಿದ್ದೇನೆ. ಇದು ಮಕ್ಕಳಿಗೂ, ಮಕ್ಕಳ ಪೋಷಕರು ಎಲ್ಲರೂ ಓದಬಹುದಾದ ಕೃತಿಯೆನ್ನುವುದು ನನ್ನ ಅಭಿಮತ.

ಇನ್ನು ಕೊನೆಯದಾಗಿ ನನ್ನ ಮೇಲೆ ವಿಶ್ವಾಸವಿಟ್ಟು ನನ್ನಿಂದ ಈ ಒಂದು ಕೃತಿಯನ್ನು ಬರೆಯಿಸಿದ ವಾಸನ್ ಪಬ್ಲಿಕೇಷನ್ಸ್ ನ ಮುಖ್ಯಸ್ಥರಾದ ಶ್ರೀ ವಾಸನ್ ಶ್ರೀನಿವಾಸರವರಿಗೆ ನಾನು ಆಭಾರಿಯಾಗಿದ್ದೇನೆ.

ಇದೀಗ ತಾನೆ ಹೊಸದಾಗಿ ಬರವಣಿಗೆಯ ಕ್ಷೇತ್ರಕ್ಕೆ ಕಾಲಿರಿಸುತ್ತಿರುವ ನನ್ನಂತಹಾ ಸಾವಿರಾರು ಮಂದಿ ಈ ಕನ್ನಡ ನೆಲದಲ್ಲಿದ್ದಾರೆ. ನನಗೂ, ನನ್ನಂತಹವರೆಲರಿಗೂ ಓದುಗರಾದ ತಮ್ಮಿಂದ ಉತ್ತಮ ಪ್ರೊತ್ಸಾಹ ದೊರಕುತ್ತದೆನ್ನುವುದು ಈ ಹೊತ್ತಿನ ನನ್ನ ಮಹದಭಿಲಾಷೆ. 

“ಪುಸ್ತಕಗಳನ್ನು ಕೊಳ್ಳಿರಿ,

ಪುಸ್ತಕಗಳನ್ನು ಓದಿರಿ,

ಪುಸ್ತಕಗಳನ್ನು ನೀಡಿರಿ.”

ಜೈ ಹಿಂದ್....!

Comments

Submitted by kavinagaraj Fri, 06/20/2014 - 10:24

ಯಾವುದೇ ವಿಚಾರವನ್ನು ಬಿಡದೆ ಪ್ರಸ್ತಾಪಿಸಬೇಕಿತ್ತೆಂದು ಅನಿಸುತ್ತದೆ. ಪ್ರಸ್ತಾಪಿಸಿದರೆ ತಪ್ಪಾಗುತ್ತಿರಲಿಲ್ಲ. ಬದಲಾಗಿ ಕಳಂಕದ ಕಪ್ಪುಚುಕ್ಕೆ ಅಳಿಸಿದಂತಾಗುತ್ತಿತ್ತೇನೋ ಎಂಬುದು ನನ್ನ ಅನಿಸಿಕೆ. ಅಭಿನಂದನೆಗಳು.