ಒಲಿದುಬಿಡು ಸಂಕ್ರಾಂತಿಗಾದರು...

ಒಲಿದುಬಿಡು ಸಂಕ್ರಾಂತಿಗಾದರು...

ನಭದಿ ದಿನಪನು ಬದಲಿಸಿಹನು
ಪಯಣ ಪಥ ಸಂಕ್ರಾಂತಿ ನೆಪದಲಿ
ಮಕರ ಸಂಕ್ರಮಣದ ತೇರನೇರಿ ಹೊರಟ
ದಿಕ್ಕು ಬದಲಿಸಿ ನಡೆದರು ನಿನಗೇಕಿ ಹಠವೆ ? ||

ಸುಡುಸುಡು ಕೆಂಡದವ ದಿನಕರನೆ
ಮಂಕಾಗುವಂತೆ ಮಾಡಿತೆ ಚಳಿಗಾಲ
ಮುಚ್ಚಿಡಲೆಷ್ಟು ಕಾಲ ? ಬೇಸತ್ತ ಓಲೈಸುತ್ತ
ಮುಖ ತಿರುಗಿಸಿ ನಡೆವಾಗ ಸುಮ್ಮನಿದ್ದರೆ ವ್ಯರ್ಥ ||

ಅರೆ ಮುಖ ತಿರುಗಿಸಿ ನಡೆದರು ನೋಡು
ಸಂದಿಗ್ದದಲಿನ್ನು ಅರೆ ಬಿಸಿಲು ಅರೆ ನೆರಳು
ಮುಸುಕಲಿ ಗುಸುಗುಸು ಯುದ್ಧ ಬರಿ ಮರುಳು
ಸರಿದು ಬಿಸಿಯಾಗುವ ಮೊದಲೆ ಅಪ್ಪಿಬಿಡೆ ಜಾಣೆ ||

ಬಿಗುಮಾನ ದುಮ್ಮಾನ ದೊಡ್ಡಸ್ತಿಕೆ ಬಿಡೆಲ್ಲ
ಬಂದಿದೆ ಸಂಕ್ರಾಂತಿ ನೆಪ ಬೀರು ಎಳ್ಳು ಬೆಲ್ಲ
ಎಳ್ಳು ಬೀರುವ ನೆಪದಲಿ ಕಣ್ಣ ರೆಪ್ಪೆ ಬಡಿಸೆ ವಿಚಲಿತ
ಆಗದ ದಿನಕರನೆಲ್ಲಿ ? ಕರಗಿ ತನ್ನ ಬಿಸಿಗೆ ತಾನಾಗಿಯೆ ||

ವೃದ್ಧ ಭೀಷ್ಮನು ಕಾದ ಗಳಿಗೆಯಿದು ಮುಹೂರ್ತ
ಉತ್ತರಾಯಣ ಪುಣ್ಯಕಾಲ ಸ್ವರ್ಗದ ಗಡಿ ಸನ್ನಿಹಿತ
ಬಿಟ್ಟೆಲ್ಲ ಕುಂಟುನೆಪ ಒಪ್ಪಿಕೊ ತಪ್ಪೊಪ್ಪಿಗೆ ಬಿನ್ನಹ
ಸರಿಯಿ ತಪ್ಪೊ ದುಃಖ ಬದಿಗಿಡು ಪ್ರೀತಿಗ್ಯಾವ ಲೆಕ್ಕ ?
 
(Picture courtesy from : http://cn.bing.com/images/search?q=love+angry&view=detailv2&&id=A891D1AB...)

Comments

Submitted by H A Patil Sat, 01/16/2016 - 18:30

ನಾಗೇಶ ಮೈಸೂರುರವರಿಗೆ ವಂದನೆಗಳು
ಸಂಕ್ರಾಂತಿ ಕುರಿತು ಬರೆದ ಕವನ ಸೊಗಸಾಗಿದೆ ಕೊನೆಯ ಸಾಲುಗಳು ಮನದಲ್ಲಿ ದಾಖಲಾಗುಂತಹವು, ವರ್ತಮಾನದಿಂದ ತಪಕ್ಕನೆ ದ್ವಾಪರಕ್ಕೆ ಓದುಗರನ್ನು ಕೊಂಡೊಯುತ್ತದೆ ಈ ಕವನ, ಕವನದ ಹುಟ್ಟು ಸಾರ್ಥಿಕ ಧನ್ಯವಾದಗಳು.

Submitted by nageshamysore Tue, 01/19/2016 - 08:43

In reply to by H A Patil

ಪಾಟೀಲರೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.. ಸಂಕ್ರಾಂತಿಗೆ ಎಳ್ಳು ತಿಂದು ಒಳ್ಳೆ ಮಾತಾಡೆನ್ನುವ ನುಡಿಗು, ಮುನಿಸಿಕೊಂಡು ಮಾತಾಡಲೊಲ್ಲದ ಮನಸ್ಥಿತಿಗು ನಡುವಿನ ಸೇತುವೆಯಾಗಿಸಲೆಂದು ಕಟ್ಟಿದ ಕವನ - ತಮಗೆ ಹಿಡಿಸಿದ್ದು ನಿಜಕ್ಕು ಖುಷಿ. ಆದರೆ ತಾಂತ್ರಿಕ ತೊಡಕಿನಿಂದ ತಕ್ಷಣ ಪ್ರತಿಕ್ರಿಯಿಸಲಾಗಲಿಲ್ಲ :-)

Submitted by santhosha shastry Sat, 01/16/2016 - 19:14

ರಾಯರ ಕವನ/ಕಥನ ಸೊಗಸಾಗಿ ಮೂಡಿಬಂದಿದೆ. ಆದರೆ ಈ ಕವನವಾಚನದಿಂದಲೂ ನನ್ನಾಕೆಯ ಸಿಟ್ಟಿಳಿಯದೇ ನಮ್ಮ ಸಂಕ್ರಾಂತಿ some-ಕ್ರಾಂತಿಯಾಯ್ತು! ಸಂಕ್ರಾಂತಿಯ (belatedly) ಶುಭಾಶಯಗಳು.

Submitted by nageshamysore Tue, 01/19/2016 - 08:52

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರ, ತಮಗೂ ಸಹ ಶುಭಾಶಯಗಳು ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಸಾಧಾರಣ ಮುನಿಸಿದ್ದಾಗ, ಕವನ ವಾಚನದೊಂದರಿಂದಲೆ ಕೆಲಸ ಆಗಲ್ಲ ಬಿಡಿ. ಜತೆಗೇನಾದರು ಕ್ರಾಂತಿಕಾರಕ, ಸಂಕ್ರಾಂತಿ ಭಕ್ಷೀಸು ಸೇರ್ಸಿ ಟ್ರೈ ಮಾಡಬೇಕಿತ್ತು :-)