ರೊಟ್ಟಿ ತುಣುಕು-

ರೊಟ್ಟಿ ತುಣುಕು-

ನನ್ನ 2ನೇ ಕಥೆ -

 

ರೊಟ್ಟಿ ತುಣುಕು--ಮಹೇಶ ಕಲಾಲ ಯಾದಗಿರಿ

 

ಸಂಜೆಯಾಗುತ್ತಿತ್ತು ಯಾಕೋ ಬೇಜಾರಾಗಿತ್ತು. ಇದ್ದಕ್ಕಿದ್ದಂತೆ ಏನೋ ಬೇಸರ. ಬೇಸರ ಕಳೆಯಲು ಸಂಜೆ ವಾಕಿಂಗ್ ಹೋದರಾಯ್ತು ಅಂತ ಎದ್ದೆ. ಅಡುಗೆ ಮನೆಯಲ್ಲಿ ನನ್ನ ಹೆಂಡತಿ ಪಾತ್ರೆ ತೊಳೆಯುತ್ತಿರುವ ಶಬ್ದ ಮತ್ತೇಕೆ ಅವಳಿಗೆ ಹೇಳೋದು ಮಾಮೂಲಿನಂತೆ ಹೋದರಾಯ್ತು ಅಂತ ಹೊರ ಕೊಣೆಗೆ ಬಂದೆ. ನನ್ನ ಇರುವಿಕೆಯ ಶಬ್ದವನ್ನು ಗ್ರಹಿಸಿದ ಅರ್ಧಾಂಗೀನಿ ರೀ ಕಾಫಿ ಮಾಡಲಾ ಅಂತ ಅಂದಳು. ಬೇಡ ಕಣೆ ಯಾಕೋ ಸುಸ್ತು, ಒಂಥರಾ ಬೇಜಾರು ಇಲ್ಲೇ ಹೊರಗಡೆ ಹೋಗಿ ಬರುತ್ತೇನೆ ಅಂದೆ .ಅದಕ್ಕವಳು ಯಾಕೆ ಏನಾಯ್ತು ಅಂತ ಹೊರಬಂದಳು. ನನ್ನ ಮುಖ ನೋಡಿ ಒಂದು ಕ್ಷಣ ಆಶ್ಚರ್ಯಗೊಂಡವಳಂತೆ ಯಾಕ್ರಿ ಮುಖ ಇಷ್ಟೊಂದು ಸುಕ್ಕುಗಟ್ಟಿ ಹಣೆ ಬಿರಿದುಕೊಂಡಿದೆ. ಏನು ಅಂಥ ಟೆನಷನ್ ಇದೆ. ಅಂತ ಕೇಳಿದಳು. ಏನಿಲ್ಲ ಯಾಕೋ ಒಂಥರಾ ಬೆಳಗ್ಗಿನಿಂದ ಬೇಜಾರು ಅದಕ್ಕೆ ಹೊರಗಡೆ ಹೋಗಿ ಬಂದರಾಯ್ತು ಅಂತ ಅಂದೆ. ಸರಿ ನಾನು ಬರುತ್ತೇನೆ ಅಂದಳು. ಹೇ ಬೇಡ ಕಣೆ ಇಲ್ಲೆ ಹೋಗಿಬರುತ್ತೇನೆ ನೀನು ಕೆಲಸ ಮಾಡು ಅಂದೆ. ಅದಕ್ಕವಳು ಅಂತ ಏನು ಕೆಲಸ ಇಲ್ಲ. ಬೆಳಗ್ಗೆ ಮಾಡಿದ ಅನ್ನ ಮತ್ತು ಹುಳಿ ಇದೆ. ಸಂಜೆಗೆ ಅದನ್ನೆ ಬಿಸಿ ಮಾಡಿದರಾಯ್ತು ಅಂದಳು. ಸರಿ ನಡಿ ಅಂತ ಅವಳನ್ನು ಕರೆದುಕೊಂಡು ರಸ್ತೆಗೆ ಬಂದೆ.

ದಾರಿಯುದ್ದಕ್ಕೂ ಮೌನದ ಮೆರವಣಿಗೆ ನಡೆಯಿತು. ನನ್ನ ಮೌನ ಹೆಂಡತಿಗೆ ಸಹಿಸಲಸಾಧ್ಯವಾಯಿತು ಅಂತ ಕಾಣುತ್ತೆ. ವಾಚಾಳಿಯಾದ ನಾನು ಹೀಗೆ ಮೌನದಲ್ಲಿ ಹೆಜ್ಜೆ ಹಾಕುತ್ತಿರುವುದನ್ನು ಕಂಡು ಅವಳೇ ಮಾತಿಗೆ ಬಂದಳು. ಏನು ಮದುವೆಯಾದ ಹೊಸತರಲ್ಲಿ ಮದುವಣಗಿತ್ತಿಯಂತೆ ನಡುಬಳಕಿಸುತ್ತ ನಡೆಯುತ್ತಿದ್ದಿರಲ್ಲ ಜಾರಿ ಬಿದ್ದಿರಿ ಜೋಕೆ ಎಂದಳು ಹಾಸ್ಯ ಭರಿತ ಧಾಟಿಯಲ್ಲಿ .

ಮುಂಜಾನೆಯಿಂದ ಮನಸ್ಸಿನಲ್ಲಿ ಏನೋ ಕಸಿವಿಸಿ ಇದ್ದಿದ್ದರಿಂದ ನನ್ನ ಹೆಂಡತಿ ಬೀಸಿದ ನಗೆ ಚಾಟಿ ನನಗೆ ತಾಗಲಿಲ್ಲ. ಬದಲಿಗೆ ಅದು ಹುಸಿಯಾಯ್ತು. ನನ್ನ ಹೆಂಡತಿಗೆ ಕೋಪ ಬಂತು ಅಂತ ಕಾಣುತ್ತೆ. ನನ್ನಲ್ಲಿ ಎಂದು ಕಾಣದ ಮೌನಕ್ಕೆ ಬೆದರಿದ ಅವಳು ಅಲ್ರಿ ಅಂಥz್ದÉೀನು ಹರಿದುಕೊಂಡು ಹೋಗ್ಯಾದ ಅಂತ ಹಿಂಗಿದ್ದಿರಿ ಅಂಥ ಸ್ವಲ್ಪ ಖಾರವಾಗಿಯೇ ಪ್ರಶ್ನಿಸಿದಳು.

ನನ್ನ ಮನಸ್ಸಿನಲ್ಲಿ ಮೂಡಿದ ಯಾವುದೋ ಅವ್ಯಕ್ತ ಭಾವ ಅದನ್ನು ಪರಿಹರಿಸಿಕೊಳ್ಳದಿದ್ದರೇ ಅದು ಮತ್ತಷ್ಟು ಭಾರವಾದಂತೆ ತೋರುವುದೆಂಬ ಭಯ ನನ್ನನ್ನು ಕಾಡಿತು. ಕಡೆಗೂ ಮೌನ ಮುರಿಯಲೇಬೇಕಾದ ಪ್ರಸಂಗ ಬಂತು. ಅವಳ ತೀಕ್ಷ್ಣ ದೃಷ್ಠಿಗೆ ಬೆದರಿದ ನಾನು ಏನಿಲ್ಲ ಬೆಳಗ್ಗೆ ಮಾರ್ಕೆಟ್ಗೆ ಹೋದಾಗ ನಡೆದ ಒಂದು ಸಣ್ಣ ಘಟನೆ ನನ್ನ ಮನಸ್ಸನ್ನು ಅಲ್ಲಾಡಿಸಿ, ಅಲ್ಲೋಲ ಕಲ್ಲೋಲ ಮಾಡಿ ಅಲೆಗಳನ್ನೆಬ್ಬಿಸಿದೆ ಎಂದೆ.

ಯಾಕೆ ಏನಾಯ್ತು ಅಂಥ ಗಾಬರಿಯಿಂದ ಕೇಳಿದಳು. ಬೆಳಗ್ಗೆ ಮಾರುಕಟ್ಟೆಯ ಹೋಟೆಲ್ ಎದುರಿನಲ್ಲಿ ಒಂದು ಹುಡುಗ ಏನೋ ಹುಡುಕುತಿದ್ದ. ನಾನು ಏನೋ ಕಳೆದುಕೊಂಡಿರಬೇಕು ಅಂತ ಹಾಗೆ ಅವನನ್ನು ಗಮನಿಸಿದೆ. ಕೊನೆಗೆ ಕಸದ ತೊಟ್ಟಿ ಹತ್ತಿರ ತುಣುಕು ರೊಟ್ಟಿ ಸಿಕ್ಕಿದ್ದರಿಂದ ಅವನಿಗಾದ ಸಂತೋಷ ಅಷ್ಟಿಷ್ಟಲ್ಲ. ಆ ತುಣುಕು ರೊಟ್ಟಿಯನ್ನಿಡಿದುಕೊಂಡು ಅಲ್ಲೆ ಬಳಿ ಬಿದ್ದಿದ್ದ ಹೆಚ್ಚಿ ಬಿಸಾಡಿದ ನಿಂಬೆ ಕಾಯಿ ಹೋಳು ತೆಗೆದುಕೊಂಡು ರೊಟ್ಟಿ ಮೇಲೆ ತಿಕ್ಕುತ್ತಾ ಕುಳಿತದ್ದು ನೋಡಿ ನನಗೆ ಏನೋ ಕಸಿವಿಸಿಯಾಯ್ತು. ಆ ದುಂಡು ಮುಖ, ಬಹಳದಿನಗಳಿಂದ ಮುಖಕ್ಕೆ ಸೇವಿಂಗ್ ಮಾಡಿಸಿರದಿದ್ದುದರಿಂದ ಪೆÇದೆಯಂತೆ ಬೆಳೆದ ಧಾಡಿ, ಚಿಗುರು ಮೀಸೆಯ ಕುವರನಾಗಿದ್ದರೂ ಹಿರಿಯನಂತೆ ಬೆಳೆಸಿದ ಮೀಸೆ, ಹಸಿವೆಯಿಂದ ಮುಖ ಬಾಡಿದ್ದರೂ ಅದೇನೋ ಕಾಂತಿ. ಮುಖದಲ್ಲಿ ಹಸಿವು ತಾಳದ ನೋವು, ಹೇಳತೀರದ ಸಂಕಟ ಕಂಡಿತು ಎಂದು ನನ್ನ ಹೆಂಡತಿಗೆ ಹೇಳಿದೆ. ಅದಕ್ಕವಳು ಅಷ್ಟಕ್ಕೆ ನಿವ್ಯಾಕೆ ಇಷ್ಟೊಂದು ಹಚ್ಚಿಕೊಂಡಿದ್ದಿರಿ ಅವನು ನಿನಗೇನು ಮಗನಾಗಬೇಕಾ ಎಂದವಳು ಪ್ರಶ್ನಿಸಿದಳು.

ಬಾ ಇಲ್ಲೆ ಕುಳಿತುಕೊಳ್ಳೋಣ ಅಂತ ಪಾರ್ಕಿನಲ್ಲಿಯ ಮೂಲೆಯೊಂದರ ಬೆಂಚ್ ಮೇಲೆ ಕುಳಿತುಕೊಳ್ಳುತ್ತಾ ಯಪ್ಪಾ ಶಿವ ಶಿವ ಅಂತ ಬೆಂಚ್ನ ಗೊಡೆಗೆ ಬೆನ್ನು ತಾಗಿಸಿದೆ ಹಾಯೆನಿಸಿದಂತಾಗಿ ಏನೋ ಒಂಥರಾ ಹಿತವಾಗಿ ನೆಮ್ಮದಿ ಎನಿಸಿತು.

ಬರುವಾಗ ಪೇಪರ್ ಮಾರುವ ಹುಡುಗ 2ರೂಗೆ ಕೊಟ್ಟ ಸಂಜೆ ದಿನ ಪತ್ರಿಕೆ ಮೇಲೆ ಕಣ್ಣಾಡಿಸೋಣವೆಂದು ಬಿಚ್ಚಿದೆ ನನಗೆ ಅಚ್ಚರಿ ಕಾದಿತ್ತು. ಬೆಳಗ್ಗೆ ಕಂಡ ಆ ಮುಖದ ಹುಡುಗನಿಗೆ ರಸ್ತೆ ಅಪಘಾತವಾಗಿ ತೀರಿಕೊಂಡಿದ್ದ. ಸಂಜೆ ಆತನ ಶವ ಸಂಸ್ಕಾರವಿದೆ. ಯಾರಾದರೂ ಪರಿಚಿತರಿದ್ದರೆ ಬನ್ನಿ ಎಂದು ನಗರ ಪಾಲಿಕೆಯವರು ಸುದ್ದಿ ಕೊಟ್ಟಿದ್ದರೂ ತಡ ಮಾಡದೇ ನನ್ನ ಹೆಂಡತಿಯನ್ನು ಕರೆದುಕೊಂಡು ಹೋದರೆ ನಗರ ಸಭೆಯಲ್ಲಿ ಯಾರು ಇರಲಿಲ್ಲ. ಬೆಳಗ್ಗಿನ ಅಪರಿಚಿತ ಶವ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಸುದ್ದಿ ತಿಳಿದು ನದಿ ತೀರಕ್ಕೆ ಹೋದೆ. ಅಲ್ಲಿ ಕೆಲವರು ನನ್ನ ಗುರುತಿಸಿ ವಿಷಯ ಕೇಳಿದರು. ನನ್ನ ಮಗನೆಂದು ಹೇಳಲು ನನ್ನಲ್ಲಿ ಯಾವ ಆಧಾರವಿಲ್ಲದ್ದಿರಿಂದ ನಮ್ಮ ಹತ್ತಿರದ ಸಂಬಂಧಿ ಎಂದು ಹೇಳಿದ್ದಕ್ಕೆ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ದಿಢೀರ್ ಅಂತ ಬಂದು ಶವ ಸಂಸ್ಕಾರಕ್ಕೆ ನಿಂತಿದ್ದರಿಂದ ಅವಕ್ಕಾದ ನನ್ನ ಹೆಂಡತಿ ಪಿಳಿಪಿಳಿ ಕಣ್ಣು ಬಿಡುತ್ತಿದ್ದಳು. ಅವಳಿಗೆ ಮುಸ್ಸಂಜೆಯಲ್ಲಿ ಇವರಿಗೆ ಏನೋ ಹುಚ್ಚು ತಗಲಿರಬೇಕು, ಇಲ್ಲ ಅರವತ್ತರ ಅರಳು ಮರಳು ಆಗಿರಬೇಕು ಎಂದುಕೊಂಡು ಮಾರುತ್ತರ ನೀಡದೆ ಸುಮ್ಮನೆ ನಿಂತಿದ್ದಳು.

ಸಂಸ್ಕಾರ ಮುಗಿಸಿ ಹೊರ ಬಂದ ಮೇಲು ಅವಳಿಗೆ ಏನು ನಂಬಲಿಕ್ಕಾಗಕದೆ ಸುಮ್ಮನೆ ನನ್ನ ಜೊತೆ ಹೆಜ್ಜೆ ಹಾಕಿದಳು. ನನ್ನೊಡನೆ ಮಾತಾಡದೆ ಮೌನಿಯಾಗಿ ನಡೆಯುತ್ತಿದ್ದರೂ ಮೊಬೈಲ್ ಮೂಲಕ ಅಡುಗೆಯವಳಿಗೆ ಪೆÇೀನ್ ಮಾಡಿ ನೀರು ಕಾಯಿಸಲು ಹೇಳಿದಳು. ಸದ್ಯ ನನ್ನ ಹೆಂಡತಿ ಮೌನ ಮುರಿದಳಲ್ಲ ಎಂದು ನಾನೆ ಮಾತನಾಡಿಸಿದೆ. ಏನಾಯ್ತು ಹೀಗೆ ಮೌನಿಯಾಗಿದ್ದೆಯಲ್ಲ ಅಂತ ಕೇಳಿದೆ.

ಅದಕ್ಕವಳು ಕಣ್ಣಲ್ಲಿ ನೀರು ತುಂಬಿಕೊಂಡು ನಡುರಸ್ತೆಯಲ್ಲೆ ನನ್ನ ಎದೆಗವಚಿಕೊಂಡಳು. ಯಾಕೆ ಅಂತ ಅವಳನ್ನು ಕೇಳಿದೆ. ಅಲ್ರಿ ಬೆಳಗ್ಗೆಯಿಂದ ನಿಮ್ಮ ಮುಖ ಕಂದುಗಟ್ಟಿದೆ. ದಿನಾಲು ಉತ್ಸಾಹದಿಂದ ಇರುವು ನೀವು ಇಂದು ಯಾಕೋ ಏನೋ ಕಳೆದವರಂತೆ ವರ್ತಿಸುತ್ತಿದ್ದಿರಿ. ಈಗ ಬೇರೆ ಯಾರೋ ಗೊತ್ತು ಗುರಿಯಲ್ಲದವರ ಶವಕ್ಕೆ ನಮ್ಮ ಸಂಬಂಧಿಕರು ಅಂತ ಸಂಸ್ಕಾರ ಮಾಡಿದಿರಿ ಯಾಕೆ ಹೀಗೆ ವರ್ತಿಸುತ್ತಿದ್ದಿರಿ ಅಂತ ಮಾತಿನ ಮಳೆಗರೆದಳು.

ಏನಿಲ್ಲ ಬೆಳಗ್ಗೆ ನಾನು ದಿನಾಲು ಹೋದಂತೆ ಮಾರುಕಟ್ಟೆಗೆ ಹೋದಾಗ ಅಲ್ಲಿ ಒಬ್ಬ ಯುವಕನನ್ನ ನೋಡಿದೆ ಅಂತ ಹೇಳಿದ್ದೆನಲ್ಲ ಅವನು ನಮ್ಮ ಶಶಿಕಾಂತನಂತೆ ಕಂಡ ಅದೇ ಮುಖ ಅವನನ್ನು ನೋಡಿದ ಕೂಡಲೇ ನನ್ನ ಹೃದಯದಲ್ಲಿ ಏನೋ ಒಂಥರಾ ಕಸಿವಿಸಿ ಅಂತಂದೆ. ಅಲ್ರಿ ಅವನ ಮುಖ ಇವನಂತೆ ಇರಲಿಲ್ಲ. ಅದು ಬೇರೆ ಬಹಳ ದಿನದಿಂದ ನಮ್ಮ ಹುಡುಗ ಮನೆ ಬಿಟ್ಟು ಹೋಗಿದ್ದರಿಂದ ನಿಮ್ಮ ಮನಸ್ಸಿನಲ್ಲಿ ಹೀಗೆ ಆಗುತ್ತಿದೆ ಅಂತ ಸಮಧಾನಪಡಿಸಿದಳು. ಸಂಬಂಜ ಅನ್ನೊದು ಬಹಳ ದೊಡ್ಡೊದು ಕಣ ಅನ್ನೊ ಹಿರಿಯರ ಮಾತು ನೆನಪಿಗೆ ಬಂತು.

ಮನೆಗೆ ಬಂದೆವು ಮನೆ ಹೊರಗಡೆ ಯಾವುದೋ ಹುಡುಗನ ಚಪ್ಪಲಿ ಕಂಡವು. ಅಡುಗೆಯವಳಿಗೆ ಬೇಕಾದವರಿರಬಹುದು ಅಂತ ಹಾಗೆ ಸ್ನಾನ ಗೃಹಕ್ಕೆ ಹೋದೆ. ಸ್ನಾನ ಮಾಡಿ ದೇವರ ಕೋಣೆಗೆ ಹೋಗಿ ನಾನು ನನ್ನ ಹೆಂಡತಿ ದೀಪ ಹಚ್ಚಿ ಹೊರ ಬಂದೆವು. ಅಡುಗೆಯವಳು ಚಹಾ ತರುತ್ತಾ ಅಮ್ಮಾವರೆ ಯಾರೋ ನಿಮ್ಮ ಮಗ ಅಂತ ಬಂದಾರ್ರಿ ಬೆಡ್ ರೂಮಿನಲ್ಲಿ ಮಲಗಿ ಕೊಂಡಾರ ಅಂತಂದಳು. ಈಗ ಅವಕ್ಕಾಗುವ ಸರದಿ ನನ್ನದಾಗಿತ್ತು.

ಆ ಮಾತಿಗೆ ನಾನು ನನ್ನ ಹೆಂಡತಿ ಎದ್ದು ಬೆಡ್ ರೂಮಿಗೆ ಹೋಗಿ ನೋಡುತ್ತವೆ. ಕಳೆದ 12ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಳೆದು ಹೋದ ನಮ್ಮ ಶಶಿ. ನನ್ನ ಮತ್ತು ನನ್ನ ಹೆಂಡತಿಯ ಕಣ್ಣು ನಂಬಲಿಕ್ಕಾಗಲಿಲ್ಲ ಯಾಕೆಂದರೆ ಇದೀಗ ಸಂಸ್ಕಾರ ಮುಗಿಸಿಕೊಂಡು ಬಂದ ಹುಡುಗನ ಚಹರೆಗೂ ಮತ್ತು ಶಶಿಗೂ ಯಾವ ವ್ಯತ್ಯಾಸವು ಇರಲಿಲ್ಲ. ಮಗನನ್ನು ದಿಟ್ಟಿಸಿ ನೋಡಿದ ನನ್ನ ಹೆಂಡತಿ ಮೂಗಿನ ಮೇಲೆ ಬೆರಳಿಟ್ಟುಕೊಂಡು ನನ್ನ ಕಡೆ ನೋಡಿ ಹಾಗಾದರೆ ಅವನು? ನನ್ನ ಕಣ್ಣು ನಂಬಲಿಕ್ಕಾಗಲಿಲ್ಲ. ನನ್ನ ಬಾಯಿಂದ ತನ್ನಿಂದತಾನೆ ಋಣಾನುಬಂಧ ರೂಪೇನ ಎಂಬ ಮಾತು ಹೊರಬಿದ್ದಿತು.

 

Comments

Submitted by mounyogi Tue, 04/04/2017 - 20:37

ಕತೆ ಓದಿನ ಹಿರಿಯರು ಶೈಲಿಯ ಬಗ್ಗೆ ಮಾರ್ಗದರ್ಶನ ನೀಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ