ಕಗ್ಗ ದರ್ಶನ – 20 (2)

ಕಗ್ಗ ದರ್ಶನ – 20 (2)

ಕಷ್ಟ ಭಯ ತೋರ್ದಂದು, ನಷ್ಟ ನಿನಗಾದಂದು
ದೃಷ್ಟಿಯನು ತಿರುಗಿಸೊಳಗಡೆ ನೋಡಲ್ಲಿ
ಸೃಷ್ಟಿಯಮೃತದ್ರವಂ ಸ್ರವಿಸುವುದು ಗುಪ್ತಿಯಿಂ  
ಪುಷ್ಟಿಗೊಳ್ಳದರಿಂದೆ – ಮರುಳ ಮುನಿಯ
ಅದೇ ಚಿಂತನೆಯನ್ನು ಈ ಮುಕ್ತದಲ್ಲಿಯೂ ಮಿನುಗಿಸಿದ್ದಾರೆ ಮಾನ್ಯ ಡಿ.ವಿ.ಜಿ.ಯವರು. ಕಷ್ಟನಷ್ಟಗಳು ನಿನಗಾದಾಗ ನಿನ್ನೊಳಗೆ ನೋಡು, ಸೃಷ್ಟಿಯ ಅಮೃತದ್ರವ ಗುಪ್ತವಾಗಿ ಅಲ್ಲಿ ಸ್ರವಿಸುತ್ತಿದೆ; ಅದರಿಂದ ಶಕ್ತಿ ಪಡೆದುಕೋ ಎನ್ನುತ್ತಾರೆ.
ಆಂಧ್ರಪ್ರದೇಶದ ಗೋದಾವರಿ ನದಿ ತೀರದ ಹಳ್ಳಿ ತೀಪಾರು. ಅಲ್ಲಿನ ಹುಡುಗ ನಾಗನರೇಶ. ೧೯೯೩ರ ಜನವರಿ ತಿಂಗಳಿನಲ್ಲಿ ಲಾರಿ ಚಾಲಕನ ಬಲಪಕ್ಕದಲ್ಲಿ ಕೂತಿದ್ದಾತ, ಫಕ್ಕನೆ ಕೆಳಕ್ಕೆ ಬಿದ್ದು, ಆಸ್ಪತ್ರೆ ಸೇರಬೇಕಾಯಿತು. ಕೊನೆಗೆ ಅವನ ಎರಡೂ ಕಾಲುಗಳನ್ನು ತೊಡೆಯ ತನಕ ಕತ್ತರಿಸಬೇಕಾಯಿತು. ಎಂಟನೆಯ ಕ್ಲಾಸಿನಲ್ಲಿದ್ದ ಆತ “ತನ್ನದೆಲ್ಲ ಮುಗಿಯಿತೆಂದು” ಕೈ ಚೆಲ್ಲಲಿಲ್ಲ. ಹಟಕ್ಕೆ ಬಿದ್ದು ಓದಿದ. ಚೆನ್ನೈನ ಐಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಕಲಿತೇ ಬಿಟ್ಟ. ಅವನೀಗ ಬೆಂಗಳೂರಿನಲ್ಲಿ ಗೂಗಲ್ ಕಂಪೆನಿಯಲ್ಲಿ ದೊಡ್ದ ಹುದ್ದೆಯಲ್ಲಿದ್ದಾನೆ. ದುಷ್ಟರು ರೈಲಿನಿಂದ ತಳ್ಳಿದಾಗ, ರೈಲಿನ ಚಕ್ರಗಳಡಿ ಬಿದ್ದು ಕಾಲು ಕಳೆದುಕೊಂಡ ಅರುಣಿಮಾ ಸಿನ್ಹಾ ಅನಂತರ ಎರಡೇ ವರುಷಗಳಲ್ಲಿ ಕೃತಕ ಕಾಲು ತೊಟ್ಟು, ಭೂಮಿಯ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟ್ ಏರಿದ್ದು ಈಗ ಇತಿಹಾಸ.
ಕನ್ನಡದ ಪ್ರಸಿದ್ಧ ಲೇಖಕಿ ಡಾ. ಅನುಪಮ ನಿರಂಜನ ಅವರನ್ನು ಕ್ಯಾನ್ಸರ್ ಕಾಡಿತು. ಅವರು ಅಂಜಲಿಲ್ಲ, ಅಳುಕಲಿಲ್ಲ. ಅನಂತರ, ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತ ೧೩ ವರುಷ ಅತ್ಯಂತ ಜೀವನೋತ್ಸಾಹದಿಂದ ಬದುಕಿದರು. ಕ್ಯಾನ್ಸರ್ ಪೀಡೆಯನ್ನು ಎದೆಗಾರಿಕೆಯಿಂದ ಎದುರಿಸಿದ ಇನ್ನೊಬ್ಬ ಕನ್ನಡದ ಬರಹರಾರ್ತಿ ಕುಸುಮಾ ಶಾನಭಾಗ. ಕ್ಯಾನ್ಸರ್ ಜೊತೆ ಹೋರಡುತ್ತಲೇ “ಪುಟಗಳ ನಡುವಿನ ನವಿಲುಗರಿ” ಅಂಕಣ ಬರಹಗಳನ್ನು, ವೇಶ್ಯಾ ಸಮಸ್ಯೆ ಬಗ್ಗೆ ದಶಕದ ಅಧ್ಯಯನ ಆಧಾರಿತ “ಕಾಯದ ಕಾರ್ಪಣ್ಯ” ಪುಸ್ತಕವನ್ನು ಹಾಗೂ ಕಾದಂಬರಿಗಳನ್ನು ಬರೆದರು. ಅಮೆರಿಕದಲ್ಲಿ ಪ್ರಸಿದ್ಧ ಫ್ಯಾಷನ್ ಡಿಸೈನರ್ ಆಗಿ ಸಂಭ್ರಮಿಸುತ್ತಿದ್ದ ಮಾಯಾ ತಿವಾರಿ ತತ್ತರಿಸಿದ್ದು ಅವರಲ್ಲಿ ಕ್ಯಾನ್ಸರ್ ಪತ್ತೆಯಾದಾಗ. ಆಗ ಅವರು ತಮ್ಮ ಬದುಕಿನ ದಾರಿಯನ್ನೇ ಬದಲಾಯಿಸಿದರು – ಯೋಗದ ದಾರಿಯಲ್ಲಿ ಮುನ್ನಡೆದು, ಕ್ಯಾನ್ಸರ್ ಪೀಡೆಯನ್ನೇ ಗೆದ್ದು, ಸಾವಿರಾರು ಜನರಿಗೆ ದಾರಿದೀಪವಾದರು. ಇಂತಹ ಹಲವರ ಬದುಕನ್ನು ಗಮನಿಸಿದಾಗ ಗೊತ್ತಾಗುತ್ತದೆ: ಕಷ್ಟನಷ್ಟ ಎದುರಾದಾಗ ಅವರು ಪರಿಹಾರಕ್ಕಾಗಿ ಹೊರಗೆ ನೋಡಲಿಲ್ಲ; ಬದಲಾಗಿ ತಮ್ಮ ದೃಷ್ಟಿ ಒಳಗೆ ತಿರುಗಿಸಿಕೊಂಡರು; ತಮ್ಮೊಳಗಿನ ಅಮೃತಸತ್ವ ಕಂಡರು. ಅದರ ಬಲದಿಂದ ಬದುಕು ಬೆಳಗಿಸಿಕೊಂಡರು.   
 

Comments