ಕಗ್ಗ ದರ್ಶನ – 26 (1)
ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ?
ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ
ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು
ವಿಧಿಯ ಬಗೆಯೆಂತಿಹುದೊ! - ಮಂಕುತಿಮ್ಮ
“ಅದು ಒಳ್ಳೆಯದು, ಇದು ಕೆಟ್ಟದು ಎಂಬ ಹಟ ನಿನಗೇಕೆ?” ಎಂಬ ಸರಳ ಪ್ರಶ್ನೆಯ ಮೂಲಕ ದೊಡ್ಡ ಸತ್ಯವೊಂದನ್ನು ಈ ಮುಕ್ತಕದಲ್ಲಿ ವಿವರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ದೈವ ಎಲ್ಲದಕ್ಕೂ ಒಂದು ತೆರೆಯನ್ನು ಹೊದಿಸಿರುತ್ತದೆ. ಆ ತೆರೆ ಸರಿದಾಗ ವಿಧಿಯ ಉದ್ದೇಶ ತಿಳಿದೀತು – ವಿಷದ (ನಂಜು) ಬಟ್ಟಲಿನಲ್ಲಿ ಅಮೃತದ (ಸೊದೆಯ) ಪರಿಮಳ ಕಂಡುಬಂದಂತೆ – ಎಂದು ತಿಳಿಸುತ್ತಾರೆ ಅವರು.
ಕೆಲವು ಹೆತ್ತವರು ಮನೆಯ ಹತ್ತಿರದ ಶಾಲೆಗಳೆಲ್ಲ ಕೆಟ್ಟವು ಎಂದು ತೀರ್ಮಾನಿಸಿ, ಯಾವುದೋ ದೂರದ ಶಾಲೆಗೆ ಮಗುವನ್ನು ವಿದ್ಯಾಭ್ಯಾಸಕ್ಕಾಗಿ ಸೇರಿಸುತ್ತಾರೆ. ಇದರಿಂದಾಗಿ, ದಿನಕ್ಕೆ ಎರಡು-ಮೂರು ತಾಸು ಆ ಶಾಲೆಗೆ ಹೋಗಿ ಬರಲಿಕ್ಕಾಗಿ ಪ್ರಯಾಣಿಸುವ ಮಗು ದಣಿದು ಬಂದು ಚೆನ್ನಾಗಿ ಕಲಿಯಲಿಕ್ಕಿಲ್ಲ. ಅಲ್ಲಿನ ಹತ್ತಿರದ ಶಾಲೆಗೆ ಹೋಗಿ ಬರುವ ಇತರ ಮಕ್ಕಳು ಆ ಹೊತ್ತಿನಲ್ಲಿ ಚೆನ್ನಾಗಿ ಓದಿಕೊಂಡು ಒಳ್ಳೆಯ ಅಂಕ ಗಳಿಸುತ್ತಾರೆ. ಹಾಗಾದರೆ, ಯಾವ ಶಾಲೆ ಒಳ್ಳೆಯದು, ಯಾವುದು ಕೆಟ್ಟದು?
ಕೆಲವು ಯುವಕ – ಯುವತಿಯರು ತಮಗೆ ವೈದ್ಯಕೀಯ ಶಿಕ್ಷಣವೇ ಬೇಕು ಅಥವಾ ಇಂಜಿನಿಯರಿಂಗ್ ಶಿಕ್ಷಣವೇ ಬೇಕು; ಇದೇ ಒಳ್ಳೆಯದು, ಉಳಿದದ್ದೆಲ್ಲ ಕೆಟ್ಟದು ಎಂಬ ಹಟಕ್ಕೆ ಬೀಳುತ್ತಾರೆ. ಈಗ ವಿದ್ಯಾರ್ಥಿಗಳಿಗೆ ಕಲಿಕೆಗೆ ಎರಡು ಸಾವಿರಕ್ಕಿಂತ ಜಾಸ್ತಿ ಕೋರ್ಸುಗಳು ಲಭ್ಯ. ಯಾವುದೇ ಕೋರ್ಸ್ ಕಲಿತರೂ ಸಂಬಳದ ಉದ್ಯೋಗಕ್ಕೆ ಅಥವಾ ಸ್ವಂತ ಉದ್ಯೋಗಕ್ಕೆ ಅವಕಾಶವಿದೆ. ಬಿ.ಕಾಂ. ಕಲಿತಿರುವ ಗಗನ್ ರಾಜ್, ಯಾವುದೇ ಉದ್ಯೋಗಕ್ಕೆ ಸೇರಿಕೊಳ್ಳಲಿಲ್ಲ; ಶ್ರೀರಂಗ ಪಟ್ಟಣದಲ್ಲಿ ನಾಟಿ ಕೋಳಿ ಫಾರ್ಮ್ ಶುರು ಮಾಡಿ ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ. ಮಾತ್ರವಲ್ಲ, ಹಲವರಿಗೆ ಉದ್ಯೋಗ ನೀಡಿದ್ದಾರೆ. ಆದ್ದರಿಂದ, ನಮ್ಮ ಆಸಕ್ತಿಗೆ ಹೊಂದುವ ಯಾವುದೇ ಕೋರ್ಸಿಗೆ ಸೇರಿ ಚೆನ್ನಾಗಿ ಕಲಿಯುವುದೇ ಒಳ್ಳೆಯದು, ಅಲ್ಲವೇ?
ಇನ್ನು ಕೆಲವರಿದ್ದಾರೆ. ತಾನು ಪ್ರೇಮಿಸಿದವಳನ್ನೇ ಅಥವಾ ಪ್ರೀತಿಸಿದವನನ್ನೇ ಮದುವೆಯಾಗಬೇಕೆಂಬ ಹಟಕ್ಕೆ ಬೀಳುವವರು. ಪ್ರಿಯತಮೆ ಅಥವಾ ಪ್ರಿಯಕರ ತನ್ನನ್ನು ಪ್ರೀತಿಸುತ್ತಿದ್ದಾರೆಯೇ ಎಂದು ಇವರು ಯೋಚಿಸುವುದೇ ಇಲ್ಲ. ಕುರುಡು ಪ್ರೀತಿಯಿಂದ ಮದುವೆಯಾದವರು ಕೆಲವೇ ತಿಂಗಳುಗಳಲ್ಲಿ ವಿವಾಹ – ವಿಚ್ಛೇದನಕ್ಕೆ ಅರ್ಜಿ ಹಾಕುವುದನ್ನು ಕಂಡರೂ ಇವರು ಪಾಠ ಕಲಿಯುವುದಿಲ್ಲ. ನಾವೊಂದು ಬಗೆದರೆ, ವಿಧಿ ಇನ್ನೊಂದು ಬಗೆಯುತ್ತದೆ, ಅಲ್ಲವೇ?
- Log in to post comments
Comments
ಉ: ಕಗ್ಗ ದರ್ಶನ – 26 (1)
_/\_ _/\_ _/\_