ದಲಿತತ್ವದಿಂದ ಉನ್ನತಿಯೆಡೆಗೆ! - 5

ದಲಿತತ್ವದಿಂದ ಉನ್ನತಿಯೆಡೆಗೆ! - 5

     ಇದುವರೆಗೆ ದಲಿತರ ಸ್ಥಿತಿ-ಗತಿಗಳು, ಅವರ ಸುಧಾರಣೆಗಾಗಿ ಶ್ರಮಿಸಿದ ಮಹನೀಯರುಗಳು, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆ, ರಾಜಕೀಯದಲ್ಲಿ ಪಾಲುಗೊಳ್ಳುವಿಕೆ, ದಲಿತ ಸಾಹಿತ್ಯ, ಸಮಸ್ಯೆಗಳು ಇತ್ಯಾದಿಗಳ ಕುರಿತು ಕಿರುನೋಟ ಹರಿಸಿದ್ದಾಯಿತು. ದಲಿತ ಎಂಬ ಪದದ ವ್ಯಾಖ್ಯೆಯನ್ನು, ವ್ಯಾಪ್ತಿಯನ್ನು ನಿರ್ಧರಿಸುವುದು ಸೂಕ್ತವೆನಿಸುತ್ತದೆ. ಸಾವಿರಾರು ಕೋಟಿ ರೂ. ಬೆಲೆ ಬಾಳುವ ಆಸ್ತಿ-ಪಾಸ್ತಿಗಳನ್ನು, ರಾಜಕೀಯವಾಗಿ ಉನ್ನತ ಸ್ಥಾನ-ಮಾನಗಳನ್ನು ಹೊಂದಿರುವವರನ್ನು ದಲಿತ ಎನ್ನುವುದಾದರೆ ಅದು ಆ ಪದದ ಅರ್ಥಕ್ಕೆ ಮತ್ತು ನಿಜವಾಗಿ ದಲಿತರೆನಿಸಿಕೊಂಡವರಿಗೆ ಮಾಡುವ ಅಪಹಾಸ್ಯವಾಗುತ್ತದೆ. ಇಂತಹ ಬಲಿತರು ಸಾಮಾನ್ಯರಂತೆ ಪರಿಗಣಿತರಾಗಬೇಕು ಮತ್ತು ಮೀಸಲಿರಿಸದ ಸಾಮಾನ್ಯ ಸ್ಥಾನಗಳಿಂದ ಸ್ಪರ್ಧಿಸುವಂತಾಗಬೇಕು. ಹೀಗಾದಾಗ ಮಾತ್ರ ನಿಜದಲಿತರು ಅಧಿಕಾರ ಹಿಡಿಯಲು ಸಾಧ್ಯವಿದೆ. ಜಾತಿಪದ್ಧತಿ ನಾಶವಾಗಬೇಕೆನ್ನುವವರೇ ಇಂದು ಜಾತಿ ಆಧಾರದಲ್ಲಿ ಸಿಗುವ ಸವಲತ್ತುಗಳಿಗಾಗಿ ಜಾತಿಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆಂದರೆ ಇದನ್ನು ಪರಿಸ್ಥಿತಿಯ ವ್ಯಂಗ್ಯವೆನ್ನಬಹುದು. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು, ಗೃಹಮಂತ್ರಿಯಾಗಿ ಉನ್ನತ ಅಧಿಕಾರ ಹೊಂದಿರುವವರು, ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವವರು ಮತ್ತು ಕೋಟ್ಯಾಂತರ ರೂ.ಗಳ ಆಸ್ತಿಯ ಒಡೆಯರು ಮುಖ್ಯಮಂತ್ರಿಯ ಹುದ್ದೆ ಅಲಂಕರಿಸುವ ಸಲುವಾಗಿ ದಲಿತ ಎಂಬುದನ್ನು ದಾಳವಾಗಿ ಬಳಸಿಕೊಳ್ಳುತ್ತಾರೆಂದರೆ ಏನೆನ್ನಬೇಕು? ಜಾತಿಯ ಹೆಸರಿನಲ್ಲೇ ರಾಜಕಾರಣ ಮಾಡುವ ಧುರೀಣರು ತಮ್ಮನ್ನು ಜಾತ್ಯಾತೀತರೆಂದು ಕರೆಸಿಕೊಳ್ಳುತ್ತಿರುವುದು ಕ್ರೂರ ಹಾಸ್ಯವಾಗಿದೆ. ಎ.ಡಿ.ಜಿ.ಪಿ.ಯಂತಹ ಉನ್ನತ ಅಧಿಕಾರಿಯೊಬ್ಬರು ತಮ್ಮ ವಿರುದ್ಧ ದೂರು ಬಂದಾಗ ದಲಿತ ಎಂಬ ಕಾರಣಕ್ಕಾಗಿ ತೊಂದರೆ ಕೊಡುತ್ತಾರೆಂದು ಹುಯಿಲೆಬ್ಬಿಸಿದ್ದರು. ವೇಶ್ಯಾವಾಟಿಕೆಗೆ ಸಹಕರಿಸಲು ಲಂಚ ಪಡೆದ ಆರೋಪಕ್ಕೊಳಗಾಗಿರುವ ಹಿರಿಯ ಪೋಲಿಸ್ ಅಧಿಕಾರಿಣಿಯೊಬ್ಬರು ತಾವು ದಲಿತರೆಂಬ ಕಾರಣಕ್ಕೆ ಕಿರುಕುಳ ಕೊಡುತ್ತಿದ್ದಾರೆಂದು ಅಲವತ್ತುಕೊಳ್ಳುತ್ತಾರೆ. ಸಚಿವರೊಬ್ಬರು ತಮ್ಮ ಪತ್ನಿಯ ಮೂಲಕ ಲಂಚ ಸ್ವೀಕರಿಸಿದ ಆರೋಪ ಬಂದಾಗಲೂ ಈ ದಲಿತ ಕಾರ್ಡಿನ ಬಳಕೆಯಾಯಿತು. ಸ್ವಾರ್ಥ ಮತ್ತು ಆರೋಪದ ವಿರುದ್ಧ ರಕ್ಷಣೆ ಎರಡಕ್ಕೂ ಜಾತಿ ಬಳಕೆಯಾಗುತ್ತದೆಂದರೆ ವ್ಯವಸ್ಥೆಯಲ್ಲಿ ಏನೋ ಲೋಪವಿದೆ ಅನ್ನಿಸುವುದಿಲ್ಲವೇ? ಆರ್ಥಿಕವಾಗಿ ಬಲಾಢ್ಯರಾಗಿರುವವರಿಗೆ ಜಾತಿ ಆಧಾರದ ಸವಲತ್ತುಗಳು ನಿಲ್ಲಬೇಕು ಮತ್ತು ಅವರನ್ನು ಸಾಮಾನ್ಯ ವರ್ಗಕ್ಕೆ ಸೇರಿಸಬೇಕು ಎಂಬ ವಾದದಲ್ಲಿ ಹುರುಳಿಲ್ಲವೆನ್ನಲಾಗುವುದಿಲ್ಲ. ವಾರ್ಷಿಕ ಆದಾಯದ ವಿವರ ಅನುಸರಿಸಿ ಎಷ್ಟು ಆದಾಯದ ಮೇಲಿದ್ದರೆ ಅವರನ್ನು ದಲಿತರೆಂದು ಪರಿಗಣಿಸಬಾರದು ಎಂಬ ಮಿತಿ ನಿಗದಿಸುವುದು ಉತ್ತಮ. ದಲಿತರೆಂದರೆ ಕೇವಲ ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದವರೆಂಬ ಭಾವನೆ ದೂರವಾಗಬೇಕು. ಎಲ್ಲಾ ಬಡವರ, ದೀನ-ದಲಿತರ ಅಭಿವೃದ್ಧಿಯನ್ನು ಜಾತಿ ತಾರತಮ್ಯವಿಲ್ಲದೆ ಮಾಡುವ ಕಾಲ ಬಂದರೆ ಜಾತಿ ಆಧಾರದಲ್ಲಿ ತಾರತಮ್ಯ ಮಾಡಲು ಅವಕಾಶವಿಲ್ಲದ ಸಂವಿಧಾನಕ್ಕೆ ಬೆಲೆ ಮತ್ತು ಗೌರವ ಬರುತ್ತದೆ.

     ಸವರ್ಣೀಯರು ಎಂಬ ಪದದ ಬಳಕೆ ಕುರಿತೂ ಸಹ ಚರ್ಚೆಯಾಗಬೇಕಿದೆ. ಇಂದು ವ್ಯಾವಹಾರಿಕವಾಗಿ ವರ್ಣಾಶ್ರಮ ಪದ್ಧತಿ ಜಾರಿಯಲ್ಲಿ ಇಲ್ಲವೇ ಇಲ್ಲ. ಜನಸಾಮಾನ್ಯರಂತೂ ತಮ್ಮನ್ನು ವರ್ಣೀಯರು ಎಂದು ಗುರುತಿಸಿಕೊಳ್ಳುವುದೇ ಇಲ್ಲ. ಈಗ ಇರುವುದು ಹುಟ್ಟಿನ ಆಧಾರದ ಜಾತಿಪದ್ದತಿ. ಇದನ್ನೇ ಸಾಂಪ್ರದಾಯಿಕರು, ರಾಜಕಾರಣಿಗಳು, ತಮ್ಮನ್ನು ತಾವೇ ಪ್ರಗತಿಪರರು, ಬುದ್ಧಿಜೀವಿಗಳು, ಜಾತ್ಯಾತೀತರು ಎಂದೆಲ್ಲಾ ಹಣೆಪಟ್ಟಿ ಹಚ್ಚಿಕೊಂಡು ಜನರ ಕಣ್ಣಿಗೆ ಮಣ್ಣೆರಚುವವರು, ಜಾತಿ ಆಧಾರದಲ್ಲಿ ಬೇಳೆ ಬೇಯಿಸಿಕೊಳ್ಳುವವರು ಮತ್ತಷ್ಟು ಬಲಗೊಳಿಸುತ್ತಿದ್ದಾರೆ. ಜಾತಿ ಬದಲಾವಣೆಗೆ ಕಾನೂನು ಒಪ್ಪಲಾರದು. ಬ್ರಾಹ್ಮಣ/ಲಿಂಗಾಯತ/ಒಕ್ಕಲಿಗ ಜಾತಿಗೆ ಸೇರಿದವರೊಬ್ಬರು ಕುರುಬ ಜಾತಿಗೆ ಅಥವ ಪರಿಶಿಷ್ಟ ಜಾತಿಗೆ ಸೇರಲು ಇಚ್ಛಿಸಿದರೆ ಅವಕಾಶವಿದೆಯೇ? ಸವಲತ್ತಿನ ಸಲುವಾಗಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಅದೆಷ್ಟು ಪ್ರಕರಣಗಳಿವೆಯೋ! ಇಂತಹ ಜಾತೀಯತೆಯನ್ನು ಬಲಪಡಿಸುವ ವ್ಯವಸ್ಥೆಯಲ್ಲಿ ತಮ್ಮ ಆಸಕ್ತಿಗೆ ಅನುಸಾರವಾದ ವರ್ಗವನ್ನು ಆರಿಸಿಕೊಳ್ಳುವ ಅವಕಾಶವಿದ್ದ ವರ್ಣವ್ಯವಸ್ಥೆಯನ್ನು ಹೋಲಿಸುವುದು ಸಾಧ್ಯವೇ ಇಲ್ಲ. ವರ್ಣೀಯತೆ ಮತ್ತು ಹುಟ್ಟಿನ ಆಧಾರದ ಜಾತೀಯತೆಗಳು ವಿರುದ್ಧವಾದ ಸಂಗತಿಗಳು. ವರ್ಣೀಯತೆಯಲ್ಲಿ ಹುಟ್ಟಿನ ಆಧಾರದ ಜಾತಿಗೆ ಬೆಲೆಯಿಲ್ಲ. ಹುಟ್ಟಿನ ಆಧಾರದ ಜಾತಿಯಲ್ಲಿ  ವರ್ಣೀಯತೆಗೆ ಅರ್ಥವಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದರೆ ಈಗ ವರ್ಣೀಯತೆ ಚಾಲ್ತಿಯಲ್ಲಿ ಇಲ್ಲವೇ ಇಲ್ಲ.

     ಇತ್ತೀಚಿನ ವಾಸ್ತವಿಕ ಉದಾಹರಣೆ ಕೊಡಬೇಕೆಂದರೆ ಹೊಳೆನರಸಿಪುರ ತಾಲ್ಲೂಕಿನ ಸಿಗರನಹಳ್ಳಿಯಲ್ಲಿ ದೇವಸ್ಥಾನಕ್ಕೆ ಪ.ಜಾ.,ಪ.ಪಂ.ಗಳಿಗೆ ಸೇರಿದವರಿಗೆ ಗ್ರಾಮದ ದೇವಸ್ಥಾನಕ್ಕೆ ಪ್ರವೇಶ ನಿಶೇಧದ ವಿಷಯ ರಾಜ್ಯಾದ್ಯಂತ ವ್ಯಾಪಕ ಪ್ರಚಾರ ಪಡೆದು, ಸವರ್ಣೀಯರು ಮತ್ತು ದಲಿತರ ನಡುವಿನ ಸಂಘರ್ಷ ಎಂಬಂತೆ ಬಿಂಬಿಸಲಾಯಿತು. ಆ ಗ್ರಾಮದಲ್ಲಿರುವುದು 270 ಒಕ್ಕಲಿಗ ಕುಟುಂಬಗಳು ಮತ್ತು 30 ಪ.ಜಾ./ಪ.ಪಂ. ಕುಟುಂಬಗಳು ಮಾತ್ರ. ಬೇರೆ ಯಾವುದೇ ಜಾತಿಗಳವರು ಅಲ್ಲಿ ಇಲ್ಲ. ಅಲ್ಲಿನ ಯಾವುದೇ ಒಕ್ಕಲಿಗ ಕುಟುಂಬಗಳವರು ತಮ್ಮನ್ನು ಸವರ್ಣೀಯರು ಎಂದು ಗುರುತಿಸಿಕೊಳ್ಳುತ್ತಾರೆಯೇ? ಗುರುತಿಸಿಕೊಳ್ಳುವುದಾದರೆ ಯಾವ ವರ್ಣಕ್ಕೆ ಸೇರಿದವರೆಂದು ಹೇಳಿಕೊಳ್ಳುತ್ತಾರೆ ಎಂಬುದನ್ನು ಆ ಪದ ಬಳಸುವವರೇ ವಿವರಿಸಬೇಕು. ಹುಟ್ಟಿನ ಜಾತಿ ಆಧಾರದ ಜಾತಿ ವ್ಯವಸ್ಥೆ ಪ್ರಬಲವಾಗಿರುವ ಇಂದಿನ ವ್ಯವಸ್ಥೆಯಲ್ಲಿ ಕರ್ಮಕ್ಕನುಗುಣವಾದ ಜಾತಿ ವ್ಯವಸ್ಥೆಗೆ ಬೆಲೆಯೇ ಇಲ್ಲ. ಹಾಗಿದ್ದೂ ಸವರ್ಣೀಯರು ಎಂಬ ಪದದ ಬಳಕೆ ಎಷು ಉಚಿತ?  

     ವರ್ಣ ಎಂದರೆ ಆರಿಸಿಕೊಳ್ಳುವುದು ಎಂದರ್ಥ. ಇದು ಹುಟ್ಟಿನಿಂದ ಬರುವಂತಹುದಲ್ಲ. ತಮ್ಮ ವೃತ್ತಿ, ಗುಣ, ಸ್ವಭಾವಕ್ಕೆ ಅನುಸಾರವಾಗಿ ಆರಿಸಿಕೊಳ್ಳುವಂತಹದು. ಒಬ್ಬ ಬ್ರಾಹ್ಮಣನ ಮಗ ಬ್ರಾಹ್ಮಣ ಆಗಬಹುದು, ಆಗದೆಯೂ ಇರಬಹುದು. ವೈಶ್ಯ, ಕ್ಷತ್ರಿಯ, ಶೂದ್ರರ ಮಕ್ಕಳೂ ಸಹ ತಮ್ಮದಲ್ಲದ ವರ್ಣಕ್ಕೆ ಸೇರಲು ತಮ್ಮ ಸಾಮರ್ಥ್ಯ, ಆಸಕ್ತಿಗಳಿಗನುಸಾರವಾಗಿ ಅವಕಾಶವಿತ್ತದ್ದು ವರ್ಣಾಶ್ರಮ. ಈಗ ಈ ರೀತಿ ವ್ಯವಸ್ಥೆ ಇದೆಯೇ? ಬಹು ಹಿಂದೆ ಈ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಇತ್ಯಾದಿಗಳು ವರ್ಣ ಪದ್ಧತಿಯಲ್ಲಿ ಹುಟ್ಟಿನ ಜಾತಿಯನ್ನು ತೋರಿಸುತ್ತಿದ್ದುದಾಗಿರಲಿಲ್ಲ. ಗುರುಗಳ ಗುರು ಎಂದು ಪೂಜಿಸಲ್ಪಡುವ ವ್ಯಾಸ ಮಹರ್ಷಿ ಮೂಲತಃ ಬೆಸ್ತ ಜನಾಂಗದವರು. ಸಪ್ತರ್ಷಿಗಳೆಂದು ಕರೆಯಲ್ಷಪಡುವ ವಿಶ್ವಾಮಿತ್ರ, ವಸಿಷ್ಠ ಮುಂತಾದವರು ಯಾರೂ ಸಹ ಹುಟ್ಟಿನ ಬ್ರಾಹ್ಮಣರಲ್ಲ. ಮಹಾಪತಿವ್ರತೆಯೆಂದು ನಮಿಸಲ್ಪಡುವ ಅನಸೂಯೆ ಈಗ ಅಂತ್ಯಜರೆಂದು ಗುರುತಿಸಲ್ಪಡುತ್ತಿರುವ ಜಾತಿಗೆ ಸೇರಿದ್ದವಳಾಗಿದ್ದಳು. ಕ್ಷಾತ್ರ ತೇಜದಿಂದ ಬೆಳಗಿದ ಬ್ರಾಹ್ಮಣರಿಗೇನೂ ಕೊರತೆಯಿರಲಿಲ್ಲ. ಇವು ಕೇವಲ ಉದಾಹರಣೆಗಾಗಿ ಉಲ್ಲೇಖಿಸಿದ್ದಷ್ಟೆ. ಇಂತಹ ಸಹಸ್ರಾರು ನಿದರ್ಶನಗಳು ಕಾಲನ ಬುತ್ತಿಯಲ್ಲಿವೆ. ನಮಗೆ ಗೊತ್ತಿಲ್ಲದ ಅದು ಯಾವುದೋ ಬಹುದೀರ್ಘವಾದ ಹಿಂದಿನ ಕಾಲಘಟ್ಟದಲ್ಲಿ ಇವು ಹುಟ್ಟಿನ ಜಾತಿಗಳಂತೆ ಪರಿಗಣಿತವಾಗಿ ಬಂದಿರುವುದು ದುರದೃಷ್ಟ. ಮಕ್ಕಳು ತಮ್ಮ ತಂದೆ-ತಾಯಿಯರ ವೃತ್ತಿಯನ್ನೇ ಸಾಮಾನ್ಯವಾಗಿ ಮುಂದುವರೆಸಿಕೊಂಡು ಬಂದುದೂ ಇದಕ್ಕೆ ಒಂದು ಕಾರಣವಿದ್ದೀತು. ನಾಲ್ಕು ವರ್ಣಗಳು ನಾಲ್ಕು ಜಾತಿಗಳಾಗಿ ಮುಂದುವರೆದಿದ್ದರೆ ವರ್ಣಾಶ್ರಮ ಬೇರೆ ರೀತಿಯಲ್ಲಿ ಚಾಲ್ತಿಯಲ್ಲಿದೆ ಎನ್ನಬಹುದಿತ್ತು. ಈಗ ಅದೆಷ್ಟು ಜಾತಿ, ಉಪಜಾತಿಗಳಿವೆಯೋ ದೇವರಿಗೇ ಗೊತ್ತು.

     ಯಾವುದೇ ರಾಷ್ಟ್ರವಿರಲಿ, ಅದಕ್ಕೆ ಅದರದೇ ಆದ ಏನೇ ಸಿದ್ಧಾಂತಗಳಿರಲಿ, ಕಮ್ಯುನಿಸ್ಟ್ ದೇಶವಾಗಿರಲಿ, ಮತೀಯ ಆಡಳಿತವಿರುವ ದೇಶವೇ ಆಗಲಿ ಈ ನಾಲ್ಕು ಬಗೆಯ ವಿಭಾಗಗಳು ಇದ್ದೇ ಇರುತ್ತವೆ- ಬುದ್ಧಿಜೀವಿ, ವ್ಯಾಪಾರೋದ್ಯಮ ಜೀವಿ, ಶಕ್ತಿಜೀವಿ ಮತ್ತು ಶ್ರಮಜೀವಿ. ಒಪ್ಪಲಿ, ಒಪ್ಪದಿರಲಿ ಈ ಬಗೆಯ ವರ್ಣಾಶ್ರಮ ಇದ್ದೇ ಇರುತ್ತದೆ. ಎಲ್ಲರೂ ಬುದ್ಧಿಜೀವಿಗಳು, ಎಲ್ಲರೂ ವ್ಯಾಪಾರಿಗಳು, ಎಲ್ಲರೂ ಯೋಧರು, ಪೋಲಿಸರು ಮತ್ತು ಎಲ್ಲರೂ ಶ್ರಮಜೀವಿಗಳು ಆಗಲು ಸಾಧ್ಯವಿದೆಯೇ? ಅವರವರ ಶಕ್ತಿ, ಸಾಮರ್ಥ್ಯ, ಅವಕಾಶ ಮತ್ತು ಬುದ್ಧಿಮತ್ತೆಗಳಿಗೆ ಅನುಸಾರವಾಗಿ ಆಯಾ ವರ್ಗಕ್ಕೆ ಸೇರಿರುತ್ತಾರೆ. ಇದನ್ನೇ ಜಾತಿಯೆನ್ನಬಹುದೇ? ಈ ನಾಲ್ಕು ಅಂಗಗಳೂ ಸಾಮರಸ್ಯದಿಂದ ಕೆಲಸ ಮಾಡಿದರೆ ದೇಶ ಮುನ್ನಡೆಯುತ್ತದೆ. ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಿದ್ದರೆ ಅವರೂ ಮುಂದುವರೆಯುವುದಿಲ್ಲ, ಇನ್ನೊಬ್ಬರಿಗೂ ಅವಕಾಶವಾಗುವುದಿಲ್ಲ, ಪರಿಣಾಮವಾಗಿ ದೇಶಕ್ಕೆ ನಷ್ಟವಾಗುತ್ತದೆ. ಸವರ್ಣೀಯರು, ಅವರ್ಣೀಯರು ಎಂಬ ಪದಗಳು ಈಗ ಮಾಧ್ಯಮಗಳಲ್ಲಿ, ರಾಜಕೀಯ ಮಾಡುವವರಲ್ಲಿ, ಬೆಂದ ಮನೆಯಲ್ಲಿ ಗಳ ಹಿರಿಯುವವರಲ್ಲಿ ಜೀವಂತವಾಗಿರಿಸಲಾಗಿರುವ ಇಲ್ಲದ ಗುಮ್ಮ ಅಷ್ಟೆ. ಈ ಪದಗಳ ಬಳಕೆಯನ್ನು ನಿಷೇಧಿಸುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಜಾತಿಬೇಧ, ಅಸ್ಪೃಷ್ಯತೆಗಳ ವಿರುದ್ಧ ಹೋರಾಡುವ ನೈಜ ಕಳಕಳಿಯಿದ್ದರೆ ಹುಟ್ಟಿನ ಜಾತಿ ಪದ್ಧತಿ ವಿರೋಧಿಸುವ ಚಳುವಳಿ ನಡೆಯಲಿ. ಕಾಲ್ಪನಿಕ ಗುಮ್ಮನ ವಿರುದ್ಧ ಹೋರಾಡುವ ಬದಲು ನೈಜ ರಾಕ್ಷಸನನ್ನು ಎದುರಿಸುವುದು ಒಳ್ಳೆಯ ನಡೆಯೆನಿಸುತ್ತದೆ.

(ಮುಂದುವರೆಯುವುದು)

-ಕ.ವೆಂ.ನಾಗರಾಜ್.

 

Comments

Submitted by makara Fri, 09/14/2018 - 20:48

>>ಹಿಂದಿನ ಕಾಲದಲ್ಲಿ ಆಯಾ ಜಾತಿಯವರು ತಮಗೆ ವಿಶಿಷ್ಟವಾಗಿದ್ದ ಕೆಲಸವನ್ನೇ ಆರಿಸಿಕೊಳ್ಳಬೇಕಾಗಿತ್ತು. ಈ ಕೆಲಸಗಳ ಅಥವಾ ಕಸುಬುಗಳ ಬಗೆಗೆ ಮೇಲು ಕೀಳೆಂಬ ಭಾವನೆಯುಂಟಾಗಿ ಅದರಿಂದ ಜಾತಿಗಳ ಬಗೆಗೂ ಅದೇ ಭಾವನೆಯು ಬಂದಿತು ಎನ್ನಬಹುದು. ಆದರೆ ಈಗ ಪರಿಸ್ಥಿತಿ ಪೂರ್ಣವಾಗಿ ಬದಲಾಗಿದೆ. ಯಾವ ಜಾತಿಯವರೇ ಆಗಲಿ ತಕ್ಕ ಶಿಕ್ಷಣ ಪಡೆದು ಯಾವ ಕಸುಬನ್ನೇ ಆಗಲಿ ಕೈಗೊಳ್ಳಲು ಸ್ವಾತಂತ್ರ್ಯವಿರುತ್ತದೆ. ಆದುದರಿಂದ ಜಾತಿದ್ವೇಷ ಕಲಹಗಳು ಅರ್ಥಹೀನ, ಅವಿವೇಕದ ಪರಮಾವಧಿ, ಆತ್ಮಘಾತುಕ ಎನ್ನಬಹುದು.<< ಪ್ರಶ್ನೋತ್ತರ ರೂಪದಲ್ಲಿ ಹಿಂದೂ ಧರ್ಮ - ಸ್ವಾಮಿ ಹರ್ಷಾನಂದ