ವೈದ್ಯಕೀಯ ಶಿಕ್ಷಣದ ಸವಾಲು
ಯುದ್ಧಪೀಡಿತ ಯೂಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಅಲ್ಲಿ ವೈದ್ಯಕೀಯ ವ್ಯಾಸಂಗಕ್ಕೆಂದು ಹೋದವರೇ. ಭಾರತದ ಬಹುತೇಕ ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಯೂಕ್ರೇನ್ ನಂತಹ ಪುಟ್ಟ ಪುಟ್ಟ ರಾಷ್ಟ್ರಗಳಿಗೆ ತೆರಳುತ್ತಿರುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರದ ಹುಡುಕಾಟದಲ್ಲಿ ಇಲ್ಲಿನ ವೈದ್ಯಕೀಯ ಶಿಕ್ಷಣದ ಕೊರತೆಗಳು ಢಾಳಾಗಿ ಕಂಡು ಬಂದಿವೆ. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ‘ಯುವ ಜನರು ವೈದ್ಯಕೀಯ ಶಿಕ್ಷಣಕ್ಕಾಗಿ ಸಣ್ಣ ಸಣ್ಣ ದೇಶಗಳಿಗೆ ಹೋಗುವ ಬದಲು ಸ್ವದೇಶದಲ್ಲಿ ವ್ಯಾಸಂಗ ಮಾಡುವುದು ಒಳಿತು. ಈ ನಿಟ್ಟಿನಲ್ಲಿ ಖಾಸಗಿ ವಲಯದವರೂ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಬೇಕು ಮತ್ತು ರಾಜ್ಯ ಸರಕಾರಗಳು ಕೂಡ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಹೀಗಾದಾಗ ಭಾರತದಿಂದಲೇ ಹೆಚ್ಚು ವೈದ್ಯಕೀಯ ಪದವೀಧರರು ಹೊರಹೊಮ್ಮುತ್ತಾರೆ’ ಎಂದಿದ್ದಾರೆ. ಮೂಲ ಸೌಕರ್ಯಗಳ ವಿಸ್ತರಣೆ, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಿಸುವುದು ಅಗತ್ಯವೇ; ಆದರೆ ಕೊರತೆಗಳನ್ನು ನಿವಾರಿಸಿ, ವೈದ್ಯಕೀಯ ಶಿಕ್ಷಣ ಜನಸಾಮಾನ್ಯರಿಗೂ ಕೈಗೆಟಕುವಂತೆ ಮಾಡುವುದು ಅತಿಮುಖ್ಯ.
ಸರ್ಕಾರಿ ಹಾಗೂ ಖಾಸಗಿ ಸೇರಿ ದೇಶದಲ್ಲಿ ಎಂಬಿಬಿಎಸ್ ಶಿಕ್ಷಣ ನೀಡಲು ೫೯೫ ಸಂಸ್ಥೆಗಳಿದ್ದು, ಅಂದಾಜು ೮೩ ಸಾವಿರ ಸೀಟುಗಳಿವೆ. ಕರ್ನಾಟಕದಲ್ಲಿ ೧೯ ಸರ್ಕಾರಿ, ೩೦ ಖಾಸಗಿ ಮತ್ತು ೧೨ ಡೀಮ್ಡ್ ವಿವಿಗಳಿವೆ. ಇವುಗಳಲ್ಲಿ ೨,೯೦೦ ಸರ್ಕಾರಿ, ೬,೫೯೫ ಖಾಸಗಿ ಸೇರಿ ಒಟ್ಟು ೯,೩೪೫ ಎಂಬಿಬಿಎಸ್ ಸೀಟುಗಳಿವೆ. ದೇಶದಲ್ಲಿ ಲಭ್ಯವಿರುವ ಅಂದಾಜು ೮೩ ಸಾವಿರ ಸೀಟುಗಳಿಗೆ ೧೫-೧೬ ಲಕ್ಷ ಆಕಾಂಕ್ಷಿಗಳು ನೀಟ್ ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ! ಅದೇ ರೀತಿ ಕರ್ನಾಟಕದ ೯,೩೪೫ ಸೀಟುಗಳಿಗೆ ದಾಖಲಾಗಲು ೧ ಲಕ್ಷಕ್ಕಿಂತ ಹೆಚ್ಚಿನ ಆಕಾಂಕ್ಷಿಗಳಿರುತ್ತಾರೆ. ಇಷ್ಟು ಸ್ಪರ್ಧಾತ್ಮಕತೆಯಲ್ಲಿ ಉನ್ನತ ರಾಂಕಿಂಗ್ ಪಡೆದವರಿಗೆ ಮಾತ್ರವೇ ಸರ್ಕಾರಿ ಕಾಲೇಜುಗಳಲ್ಲಿ ಸೀಟು ಸಿಗುತ್ತವೆ. ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್ ಮೆಂಟ್ ಕೋಟಾದಡಿ ಪ್ರವೇಶ ಪಡೆದು, ಎಂಬಿಬಿಎಸ್ ಮುಗಿಸಲು ೫೦-೬೦ ಲಕ್ಷ ರೂ. ಕೆಲವೊಮ್ಮೆ ಇದಕ್ಕಿಂತಲೂ ಅಧಿಕ ಮೊತ್ತ ಖರ್ಚಾಗುತ್ತದೆ. ಮಧ್ಯಮ ವರ್ಗದವರಿಗೆ ಇಷ್ಟು ವೆಚ್ಚ ಮಾಡಿ, ವ್ಯಾಸಂಗ ಕೈಗೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿಯೇ, ಕಡಿಮೆ ಶುಲ್ಕವಿರುವ ಸಣ್ಣ ರಾಷ್ಟ್ರಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಾರೆ. ಆದರೆ ಯೂಕ್ರೇನ್ ನಂತಹ ಭಯಾನಕ ಬಿಕ್ಕಟ್ಟು ಎದುರಾದಾಗ ಅಥವಾ ಇತರ ಆಪತ್ತುಗಳು ಸಂಭವಿಸಿದಾಗ ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನವಾಗುತ್ತದೆ. ಕೆಲ ದೇಶಗಳಲ್ಲಿ ಎಂಬಿಬಿಎಸ್ ಪೂರೈಸಿದರೂ ಭಾರತದಲ್ಲಿ ಪ್ರಾಕ್ಟೀಸ್ ಮಾಡಲು ಪ್ರತ್ಯೇಕ ಪರೀಕ್ಷೆ ಉತ್ತೀರ್ಣರಾಗಬೇಕು. ಇದಕ್ಕೆ ಪರಿಹಾರವಾಗಿ, ಇಲ್ಲಿನ ವ್ಯವಸ್ಥೆಯಲ್ಲಿಯೇ ಅಮೂಲಾಗ್ರ ಸುಧಾರಣೆಯಾಗಬೇಕು. ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ವೈದ್ಯಕೀಯ ಶಿಕ್ಷಣ ಕೈಗೆಟಕುವಂತಾಗಬೇಕು. ರಾಜ್ಯ ಸರ್ಕಾರಗಳು ಈ ಬಗ್ಗೆ ಸ್ವಲ್ಪ ಕಾಳಜಿ ತೋರಿದ್ದಲ್ಲಿ ಮಹತ್ವದ ಪರಿವರ್ತನೆ ತರುವುದು ಅಸಾಧ್ಯವೇನಲ್ಲ. ಹಾಗೆಯೇ, ವಿದ್ಯಾರ್ಥಿಗಳು ಕೂಡ ಭಾರತದಲ್ಲೇ ವ್ಯಾಸಂಗ ಮಾಡಲು ಮನಸ್ಸು ಮಾಡಬೇಕು.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ. ೨೮-೦೨-೨೦೨೨
ಚಿತ್ರ ಕೃಪೆ: ಇಂಟರ್ನೆಟ್ ತಾಣ
- Log in to post comments
Comments
ನಮ್ಮ ದೇಶದಲ್ಲಿ ಮೆಡಿಕಲ್…
- Log in to post comments
ಕೃತಜ್ಞತೆಯ ಮಾತಾಡದ ಭಾರತೀಯರಿಗೆ…
ಕೃತಜ್ಞತೆಯ ಮಾತಾಡದ ಭಾರತೀಯರಿಗೆ ಏನೆಂದು ಹೇಳೋಣ; ದೇವರೇ ಇವರಿಗೆ ಒಳ್ಳೆಯ ಬುದ್ಧಿಕೊಡು ! ?
ನಮ್ಮವರೇ ಆದ ನೂರಾರು ವಿದ್ಯಾರ್ಥಿಗಳು ಕೇವಲ ಮೆಡಿಕಲ್ ತಿಳಿವು ಕಲಿಯಲು ಉಕ್ರೇನ್ ದೇಶ ಕ್ಕೆ ಹೋದಾಗ ಅವರಿಗೆ ಸಹಾಯಮಾಡಿದ ದೇಶಕ್ಕೆ, ಒಂದು ಕೃತಜ್ಞತೆಯ ಮಾತಾದರೂ ಹೇಳುವುದು ಬೇಡವೇ ?
'ಈ ಸಂಕಟದ ಸಮಯದಲ್ಲಿ ಅವರಿಗೆ ದೇವರು ಸಹಾಯಮಾಡಲಿ ; ಬೇಗ ಮೊದಲಿನ ಪರಿಸ್ಥಿತಿಗೆ ಬರಲಿ. ಶಾಂತಿ ನೆಮ್ಮದಿ ಮೇಳೈಸಲಿ. ರಷ್ಯಾ ದೇಶಗಳ ಮಧ್ಯೆ ಸುಮಧುರ ಬಾಂಧವ್ಯ ಬೇಗ ಏರ್ಪಡಲಿ', ಎಂದು ಕೇಳಿಕೊಳ್ಳುವ ಸೂಕ್ಷ್ಮ-ಪ್ರಜ್ಞೆ ನಮ್ಮ ಭಾರತೀಯ ಸಂಜಾತರ ಮನಸ್ಸಿನಲ್ಲಿ ಮೂಡದೇ ಹೋಯಿತಲ್ಲಾ ! ಯಾರಾದರೂ ಇಂತಹ ಸೂಕ್ಷಗಳನ್ನು ಹೇಳಿಕೊಡಬೇಕೇನು ?
- Log in to post comments