ಒಂದು ಕೆಟ್ಟ ದಾಸರ ಪದ

ಒಂದು ಕೆಟ್ಟ ದಾಸರ ಪದ

ಕೇಳೋ ಸಚ್ಚರಿತ, ಮನುಜಾ
ಧೃಡ ಭಕ್ತಿಯಿಂದಲಿ ಹರಿಯ ನೆನೆದರೆ ಪಡೆವ ಮೋಕ್ಷ ಸಾಕ್ಷಿ || ಮನುಜಾ
ಧೃಡ ಭಕ್ತಿಯಿಲ್ಲದೆ ಹರಿಯ ನೆನೆದರೆ ಪಡುವ ನರಕವೇ ಸಾಕ್ಷಿ || ಮನುಜಾ ಕೇಳೋ ಸಚ್ಚರಿತ

ಕನ್ಯಾದಾನವ ಮಾಡಿದವರಿಗೆ ಹೆಣ್ಣಿನ ಭೋಗವೇ ಸಾಕ್ಷಿ
ಕನ್ಯಾದಾನವ ಮಾಡದವರಿಗೆ ಹೆಣ್ಣಿನ ಕಾಟವೇ ಸಾಕ್ಷಿ || ಕೇಳೋ

ಪಂಕ್ತಿ ವಂಚನೆ ಮಾಡಿದವರಿಗೆ ಜನ್ಮರೋಗವೇ ಸಾಕ್ಷಿ
ಪಂಕ್ತಿ ವಂಚನೆ ಮಾಡದವರಿಗೆ ಪುತ್ರ ಭಾಗ್ಯವೇ ಸಾಕ್ಷಿ || ಕೇಳೋ

ಅನ್ನದಾನವ ಮಾಡಿದವರಿಗೆ ಉಣ್ಣುವ ಊಟವೇ ಸಾಕ್ಷಿ
ಅನ್ನದಾನವ ಮಾಡದವರಿಗೆ ಅನ್ನಕಳವುದೇ ಸಾಕ್ಷಿ || ಕೇಳೋ

ಆಡಿದ ಮಾತಿಗೆ ಹರಿಯೆ ಸಾಕ್ಷಿ ತೋಡಿದ ಬಾವಿಗೆ ಜಲವೇ ಸಾಕ್ಷಿ
ಮಾಡಿದ ಪಾಪಕೆ ಮನವೇ ಸಾಕ್ಷಿ ಸಾಟಿಗೆ ಪುರಂದರ ವಿಠಲನೇ ಸಾಕ್ಷಿ

ತಮಗೆ ಸರಿಕಾಣದ ಹಲವು ಲೋಕ ರೂಢಿಗಳನ್ನು ಟೀಕಿಸುವ ಪದಗಳನ್ನು ಪುರಂದರದಾಸರು ಬರೆದಿದ್ದಾರೆ. ಅಂತಹವುಗಳನ್ನು ಉದ್ಧರಿಸಿ ನಾವು ಅವರ ಮಹಿಮೆಯನ್ನು ಕೊಂಡಾಡುತ್ತೇವೆ. ಹಾಗೆಯೇ ಕೆಲವು ಕೆಟ್ಟ ಪದಗಳೂ ಇವೆ. ಅವನ್ನು ಗುರುತಿಸಿ ಹಾಗೆ ಯೋಚಿಸುವುದು ಸರಿಯಲ್ಲ ಎಂದು ಎಚ್ಚರಿಸಿಕೊಳ್ಳುವುದೂ ಮುಖ್ಯವೇ. ಅಂತಹ ಒಂದು ಪದ ಮೊನ್ನೆ ಕೇಳಿದೆ.

ಮೋಕ್ಷ/ಸ್ವರ್ಗ-ನರಕದ ಪ್ರತಿಮೆಗಳನ್ನು ಪುರಂದರ ದಾಸರು ಸಿಕ್ಕಾಪಟ್ಟೆ ಬಳಸುತ್ತಾರೆ. ದೇವರನ್ನು ವಿವರಿಸುವ/ಹೊಗಳುವ ಹಲವು ಸಾಲುಗಳನ್ನು ಬರೆದಿದ್ದಾರೆ. ಆದರೆ ಈ ಮೇಲಿನ ಪದ್ಯದಲ್ಲಿ ಹೆಣ್ಣಿನ ಬಗ್ಗೆ, ಜಾತಿಯ ಬಗ್ಗೆ ಅವರು ತಳೆವ ನಿಲುವು ಇಂದಿಗಲ್ಲ, ಅಂದಿಗಾದರೂ ಒಪ್ಪುತ್ತದೆಯೇ ಎಂಬ ಪ್ರಶ್ನೆ ಏಳುತ್ತದೆ.

ಇಲ್ಲಿ ಕನ್ಯಾದಾನದ ಬಗ್ಗೆ ಹೇಳುವ ಮೊದಲ ಸಾಲು ಒಳ್ಳೆಯ ಬಗೆಯಲ್ಲಿ ಹೇಗೆ ಅರ್ಥೈಸಿಕೊಳ್ಳುವುದು ಎಂದು ಯೋಚಿಸಿದೆ. ಎರಡನೆಯ ಸಾಲಂತೂ ಹೆಣ್ಣನ್ನು ನೋಡುವ ದೃಷ್ಟಿ ಆರೋಗ್ಯಕರವೇ ಅಲ್ಲ ಅನಿಸಿತು. ಇನ್ನು ಪಂಕ್ತಿ ವಂಚನೆಯ ಬಗ್ಗೆ ಯೋಚಿಸಿ ನೋಡಿ. ಪಂಕ್ತಿ ವಂಚನೆ ಅಂದರೇನು? ಯಾರು ಯಾರಿಗೆ ವಂಚನೆ ಮಾಡುತ್ತಿರುವುದು? ಅಂತಹವರಿಗೆ ಕಾದಿರುವುದು ಜನ್ಮರೋಗ(?) ಬೇರೆ! ಇನ್ನು ಪಂಕ್ತಿ ವಂಚನೆ ಮಾಡದವರಿಗೆ ಗಂಡು ಮಗು ಹುಟ್ಟುತದಂತೆ! ಅನ್ನದಾನದ ವಿಜೃಂಭಣೆ ಇರುವುದರಲ್ಲೇ ಕೊಂಚ ಸರಿಯಪ್ಪ ಅನ್ನಿಸುವಂತಹ ಸಾಲು.

ಇಂತಹ ಹಾಡುಗಳನ್ನು ಇಂದಿಗೂ ಹಾಡುವುದು ಕೇಳಿದಾಗ ಇವು ನಮಗೆ ಏನು ಹೇಳುತ್ತದೆ? ಮಕ್ಕಳು ಇದನ್ನು ಕೇಳಿದರೆ ಹೇಗೆ ಅರ್ಥೈಸಿಕೊಳ್ಳುತ್ತಾರೆ? ಇಂತಹ ಪದಗಳು ರೂಪಿಸುವ ಮನಸ್ಸು ಎಂತಹದಿರುತ್ತದೆ? ಸಣ್ಣವರಿಗೆ ಇದನ್ನು ಪುರಂದರದಾಸರ ಕಾಲಕ್ಕೆ ಹೊಂದಿಸಿಕೊಂಡು ನೋಡು ಎಂದು ಹೇಳುವುದು ಹೇಗೆ? ಅದು ಎಷ್ಟು ಸರಿ? ಅದೂ ಕೂಡ, ಅವರ ಜೀವನದ ಹಲವು ವಿವರಗಳನ್ನು ನೆನ್ನೆ ತಾನೆ ನಡೆದಿದ್ದು ಎನ್ನುವಂತೆ ಹೇಳುವಾಗ? ಪವಾಡ ಮತ್ತು ನಂಬಿಕೆಗಳನ್ನು ಚರಿತ್ರೆ ಎನ್ನುವಂತೆ ಹೇಳುವಾಗ?

ಇವುಗಳಿಂದಾಗುವ ಅಪಾಯಗಳೇನು ಎಂದು ತುಸುವಾದರೂ ಯೋಚಿಸುವುದು ಒಳ್ಳೆಯದು.

Rating
Average: 5 (1 vote)

Comments