ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?

ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?

Comments

ಬರಹ

ಪ್ರಿಯ ಸಂಪದ್ಬಾಂಧವರೇ,
ನಾನು ಈ ಕೆಳಗೆ ಕೊಟ್ಟಿರುವುದು ಪುರಂದರದಾಸರು ರಚಿಸಿರುವ ಒಂದು ಅತ್ಯಂತ ಜನಪ್ರಿಯ ಆದರೆ ಜಟಿಲ ಕೀರ್ತನೆ. ನನಗಂತೂ ಅದರ ಅರ್ಥವೇ ತಿಳಿಯುತ್ತಿಲ್ಲ. ತಮ್ಮಲ್ಲಿ ಯಾರಾದರೂ ಅರ್ಥ ವಿವರಿಸುವಿರಾ?

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ||
ಎರಡು ಬರಿದು ಒಂದು ತುಂಬಲಿಲ್ಲ || ೧ ||

ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ||
ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ || ೨ ||

ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ||
ಎರಡು ಬರಡು ಒಂದಕ್ಕೆ ಕರುವೇ ಇಲ್ಲ || ೩ ||

ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ||
ಎರಡು ಸವಕಲು ಒಂದು ಸಲ್ಲಲೇ ಇಲ್ಲ || ೪ ||

ಸಲ್ಲದಾ ಹೊನ್ನುಗಳಿಗೆ ಬಂದರು ಮೂರು ನೋಟಗರು ||
ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ || ೫ ||

ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ||
ಎರಡು ಹಾಳು ಒಂದಕೆ ಒಕ್ಕಲೇ ಇಲ್ಲ || ೬ ||

ಒಕ್ಕಲಿಲ್ಲದ ಊರಿಗೆ ಬಂದರು ಮೂರು ಕುಂಬಾರರು ||
ಇಬ್ಬರು ಚೊಂಟರು ಒಬ್ಬನಿಗೆ ಕೈಯೇ ಇಲ್ಲ || ೭ ||

ಕೈಯಿಲ್ಲದ ಕುಂಬಾರರು ಮಾಡ್ಯಾರು ಮೂರು ಮಡಿಕೆಗಳ ||
ಎರಡು ಒಡಕು ಒಂದಕೆ ಬುಡವೇ ಇಲ್ಲ || ೮ ||

ಬುಡವಿಲ್ಲದ ಗಡಿಗೆಗೆ ಹಾಕಿದರು ಮೂರು ಅಕ್ಕಿಗಳ ||
ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ || ೯ ||

ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ||
ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ || ೧೦ ||

ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣಪೆಗಳ ||
ಎರಡು ಸೋಂಕವು ಒಂದು ತಾಕಲೇ ಇಲ್ಲ || ೧೧ ||

ಇನ್ನು ಈ ಅರ್ಥಗಳೆಲ್ಲ ಪುರಂದರವಿಠಲ ಬಲ್ಲ ||
ಅನ್ಯರಾರೂ ತಿಳಿದವರಿಲ್ಲ || ೧೨ ||

ದಾಸವರೇಣ್ಯರೇನೋ ಅನ್ಯಾರಾರೂ ತಿಳಿದವರಿಲ್ಲ ಎಂದಿದ್ದಾರೆ. ಹಾಗಾದರೆ ಈ ಒಗಟಿನ ಅರ್ಥ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet