ಎಂಥ ನಾಡಿದು ಎಂಥ ಕಾಡಾಯಿತೋ

ಎಂಥ ನಾಡಿದು ಎಂಥ ಕಾಡಾಯಿತೋ

ಸಂಪದಕ್ಕೆ ಲಾಗ್ ಇನ್ ಆದಾಗಲೆಲ್ಲಾ, ರಂ . ಶ್ರೀ. ಮುಗಳಿಯವರ ಈ ಮಾತು 'ಅನುಭವಾಮೃತಗಳ'ಲ್ಲಿ ಕಣ್ಣಿಗೆ ಬೀಳುತ್ತಿತ್ತು. ಇದು ನನಗೆ ಬಹಳ ಪ್ರಿಯ ವಿಷಯಗಳಾದ ಕನ್ನಡ ಹಾಗೂ ಕರ್ನಾಟಕದ ಇತಿಹಾಸಗಳನ್ನು ನೆನಪಿಗೆ ತರುತ್ತಿದ್ದವು. ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ ಆಗಾಗ, ವಾಚನಾಲಯಗಳಲ್ಲಿ ಓದಿದ್ದ, ಕನ್ನಡ ನುಡಿ, ಸಾಹಿತ್ಯದ ಬಗೆಗಿನ ಪುಸ್ತಕಗಳಿಂದ ನಾನು ತಿಳಿಕೊಂಡದ್ದನ್ನು ಬರೆಯೋಣವೆನಿಸಿದೆ. ಕರ್ನಾಟಕದ ಏಕೀಕರಣಕ್ಕಾಗಿ ನಡೆಯುತ್ತಿದ್ದ ಹೋರಾಟದ ಸಮಯದಲ್ಲಿ, ಶ್ರೀಯುತರುಗಳಾದ, ರಂ. ಶ್ರೀ. ಮುಗಳಿ, ಶಂಬಾ ಜೋಶಿ, ಆಲೂರು ವೆಂಕಟರಾಯರುಗಳ ಕೆಲವು ಕೃತಿಗಳನ್ನು ಓದಿದ್ದೆ. ಅವುಗಳಲ್ಲಿ, 'ಕಂನುಡಿಯ ಹುಟ್ಟು', 'ಕರ್ನಾಟಕ ಪರಂಪರೆ' ಎಂಬೆರೆಡು ಪುಸ್ತಕಗಳ ಹೆಸರು ನೆನಪಿದೆ. ಈ ಕೃತಿಗಳಲ್ಲಿ ಕೃತಿಕಾರರುಗಳು ಕನ್ನಡದ ಪ್ರಾಚೀನತೆಯ ಬಗ್ಗೆ ಹಾಗೂ ಅದರ ಹರಹಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಚಾಲುಕ್ಯ, ರಾಷ್ಟ್ರಕೂಟರ ಆಡಳಿತ ಇಂದಿನ ಮಹಾರಾಷ್ಟ್ರಕ್ಕೂ ವ್ಯಾಪಿಸಿತ್ತು ಎಂಬುದು ಸಾಕಷ್ಟು ತಿಳಿದಿರುವ ವಿಚಾರ. ಆದರೆ, ಆಗ ಈ ಪ್ರದೇಶದ ಜನರ ಆಡುನುಡಿಯೂ ಕನ್ನಡವೇ ಆಗಿತ್ತು ಎಂಬುದನ್ನು ಶಂಬಾ ಜೋಶಿಯವರು ಸಾಕಷ್ಟು ಐತಿಹಾಸಿಕ ಪುರಾವೆಗಳ ಮೂಲಕ ತೋರಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ಅವರು ಬಹಳ ಮುಖ್ಯವಾಗಿ ಬಳಸಿರುವುದು, ಸ್ಥಳನಾಮಗಳನ್ನು. ಈ ದಿನದ ವರೆಗೂ ಮಹಾರಾಷ್ಟ್ರದ ಅನೇಕ ಊರುಗಳ ಹೆಸರು ಅಚ್ಚಕನ್ನಡದ್ದಾಗಿವೆ. ಅವರು ಕೊಡುವ ಕೆಲವು ಉದಾಹರಣೆಗಳು, ಲಟ್ಟಲೂರು -> ಲಾತೂರು ಸೊನ್ನಲಿಗೆ -> ಸೊಲ್ಲಾಪುರ ಬೋರಿವಲಿ -> ಬೋರಿಹಳ್ಳಿ ಕಾಂದಿವಲಿ -> ಕಾಂದಿಹಳ್ಳಿ ಹೀಗೆ..... ಅಷ್ಟೇ ಅಲ್ಲದೆ, ಔರಂಗಾಬಾದ್ ಜಿಲ್ಲೆಯಲ್ಲಿನ ಒಂದು ತಾಲ್ಲೂಕಿನ ಹೆಸರು 'ಕನ್ನಡ್' ಎಂದು. ಅಲ್ಲದೆ, ಊರು ಎಂಬ ಕನ್ನಡ ಸೇರಿದಂತೆ, ಇತರ ದ್ರಾವಿಡ ಭಾಷೆಗಳ ಸ್ಥಳವಾಚಕ, ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿದೆ. ಉದಾ:- ಶಿರೂರು, ಲಾತೂರು, ಯೇವೂರು ಇತ್ಯಾದಿ. ಹಾಗಯೇ ಮರಾಠೀ ಭಾಷೆಯಲ್ಲಿಯೂ ಸಹ ಕನ್ನಡದ ಅನೇಕ ಶಬ್ಧಗಳು ಸೇರಿಕೊಂಡಿವೆ. ತುಪ್ಪ, ಅಕ್ಕ, ಅಪ್ಪ, ತಾಯಿ, ಅಣ್ಣ, ಅತ್ತೆ, ಅಜ್ಜ, ಅಜ್ಜಿ ಹೀಗೆ. ಹೀಗೇ, ಕನ್ನಡದಲ್ಲಿಯೂ ಅನೇಕ ಮರಾಠೀ ಶಬ್ಧಗಳು ಪ್ರಚಲಿತವಾಗಿವೆ. ಬಂಡುಕೋರ, ಬಂಡವಾಳ ಹೀಗೆ. ಮುಂಬಯಿ ಬಳಿಯಿರುವ ಎಲಿಫೆಂಟಾದ ಗುಹಾಂತರ ದೇಗುಲಗಳೂ ಚಾಲುಕ್ಯರಿಂದಲೇ ನಿರ್ಮಿತವಾದವು. ಹಾಗೆ ನೋಡುವುದಾದರೆ, ಇಂದಿನ ಮಹಾರಾಷ್ಟ್ರದ ಹೃದಯಭಾಗಗಳೆಲ್ಲವೂ ಕನ್ನಡರ ಆಳ್ವಿಕೆಯಲ್ಲಿದ್ದವು. ಆದರೆ ನಂತರದ ಸಮಯಗಳಲ್ಲಿ, ಕನ್ನಡಿಗರ ರಾಜಕೀಯ ಶಕ್ತಿ ಕುಸಿದಂತೆ, ಕನ್ನಡ ನಾಡಿನ ಉತ್ತರ ಭಾಗಗಳೇ ಮರಾಠರ ಆಳ್ವಿಕೆಗೆ ಒಳಪಟ್ಟಿದ್ದು ವಿಪರ್‍ಯಾಸವಲ್ಲದೆ ಮತ್ತೇನು. ಇಷ್ಟೆಲ್ಲ ಆದಮೇಲೆ, ಮೊಟ್ಟ ಮೊದಲ ಮರಾಠ ರಾಜ್ಯವನ್ನು ಸ್ಥಾಪಿಸಿದ ಶಿವಾಜಿ ಮಹಾರಾಜನ ವಂಶದ ಮೂಲ ಪುರುಷನೂ ಕನ್ನಡಿಗನೇ ಆಗಿದ್ದ. ಹೀಗಿರುವಾಗ, ಮರಾಠಿಗರು ಬೆಳಗಾವಿಗಾಗಿ ಹಪಹಪಿಸುವುದು ಎಷ್ಟು ಹಾಸ್ಯಾಸ್ಪದ ಎನಿಸದಿರದು.
Rating
No votes yet

Comments