ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೧

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೧

ಒಂದಾನೊಂದು ಕಾಲದಲ್ಲಿ ಸೀಗೆ ಗುಡ್ಡದ ತಪ್ಪಲಲ್ಲಿ ಒಂದು ಕರಡಿ ಸಂಸಾರ ವಾಸವಾಗಿತ್ತು. ಅಮ್ಮ, ಅಪ್ಪ ಮತ್ತೆ ಪುಟಾಣಿ. ಬೆಟ್ಟದ ಮೇಲೆ ಕುರುಚಲು ಕಾಡಿದ್ದರಿಂದ ಅವರ ಸಂಸಾರಕ್ಕೆ ಹಲಸಿನ ಹಣ್ಣಿಗೂ, ಜೇನುತುಪ್ಪಕ್ಕೂ ಯಾವತ್ತೂ ಕೊರತೆ ಆಗಿರ್ಲಿಲ್ಲ. ಸುತ್ತ ಮುತ್ತ ಹಳ್ಳೀ ಜನರೂ ಕೂಡ ಸೀಗೆ ಗುಡ್ಡದಲ್ಲಿ ಕರಡಿ ಸಂಸಾರ ಇರೋದು ಗೊತ್ತಿದ್ರಿಂದ ಹೆಚ್ಚಾಗಿ ಯಾರೂ ಬೆಟ್ಟದ ಮೇಲೇ ಬರೋದಾಗ್ಲಿ, ಕರಡಿಗಳಿಗೆ ತೊಂದ್ರೆ ಮಾಡೋದಾಗ್ಲಿ ಮಾಡ್ತಿರ್ಲಿಲ್ಲ.

ಪುಟಾಣಿ ಕರಡಿ ಇದೆಯಲ್ಲ, ಅದು ಬಹಳ ಚೇಷ್ಟೆ. ನಿಂತ ಕಡೆ ಕಾಲು ನಿಲ್ಲೋದಿಲ್ಲ. ಒಂದು ದಿನ ಹಾಡುಹಗಲೇ ಅಮ್ಮನ ಕಣ್ಣು ತಪ್ಪಿಸಿ ಗುಡ್ಡದ ಕೆಳಗಿರೋ ಊರಿಗೆ ಹೋಗಿಬಿಟ್ಟಿದೆ! ನಟ್ಟ ನಡು ಮಧ್ಯಾಹ್ನ. ಎಲ್ಲೋ ಮಕ್ಕಳು ಹಾಡು ಹೇಳೋದು ಕೇಳಿ ಹೋಗಿ ನೋಡತ್ತೆ, ಒಂದು ಪುಟಾಣಿ ಗುಡಿಯೊಳಗೆ ಯಾರೋ ಮಕ್ಕಳಿಗೆ ಏನೋ ಹೇಳಿಕೊಡ್ತಿದಾರೆ. ಪುಟಾಣಿ ಅಲ್ಲೇ ಕಿಟಕಿ ಹತ್ರ ಕಿವಿಇಟ್ಟು ಕೇಳತ್ತೆ. ಮೂಡಲ - ಪಡುವಲ - ಬಡಗಲ - ತೆಂಕಲ ಇವು ನಾಕು ದಿಕ್ಕುಗಳು. ಇವಕ್ಕೇ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಅಂತಲೂ ಅಂತಾರೆ ಅಂತ ಪೇಟ ಕಟ್ಟಿಕೊಂಡವರೊಬ್ಬ್ರು ಹೇಳ್ತಿದ್ರೆ, ಮಕ್ಕಳೂ ಅದೇ ಮಾತನ್ನೆ ತಿರುಗಿ ತಿರುಗಿ ಹೇಳ್ತಿದ್ದು ಕೇಳಿಸ್ತು. ಅಷ್ಟರಲ್ಲೇ, ಪೇಟದವರು, ಹೋಗಿ ಮಕ್ಳಾ , ಇನ್ನು ಮನೇಗೆ ಹೋಗಿ ಊಟ ಮಾಡೀ ಅಂತ ಇದ್ದಾಗ ಕರಡೀ ಮರಿಗೆ ಯಾರಾದ್ರೂ ನೋಡಿದ್ರೆ ಅಂತ ಭಯವಾಗಿ ಓಟ ಕಿತ್ತಿತು.

ಅತ್ಲಾಗಿ ಅಮ್ಮ ಕರಡೀಗೆ ಜೀವವೇ ಬಾಯಿಗೆ ಬಂದಿತ್ತು. ಮಗು ಎಲ್ಲಾದ್ರೂ ಹೋಗಿ ಏನಾದ್ರೂ ಅಪಾಯ ಮಾಡಿಕೊಂಡರೆ ಅಂತ. ವಾಪಸ್ ಬಂದ ಮಗುವಿಗೆ ಒಂದು ಕೋಪದಲ್ಲಿ ಏಟು ಕೊಟ್ಟು, ಆಮೇಲೆ ಮುದ್ದು ಮಾಡಿ, ಹಾಗೆಲ್ಲ ಮಾಡ್ಬಾರ್ದು ಮರೀ, ನಮ್ಮ ಮನೆ ಈ ಗುಡ್ಡ. ನಮ್ಮ ಮನೆಯಲ್ಲಿ ನಾವೇ ರಾಜರು. ಹೊರಗೆ ಹೋದರೆ ನಮಗೆ ಕಷ್ಟ ಅಂತ ಒಳ್ಳೇ ಮಾತಲ್ಲಿ ತಿಳೀಹೇಳಿ, ಇನ್ಯಾವತ್ತೂ ಹಾಗೆ ಹಳ್ಳೀಗೆ ಹೋಗ್ಬಾರ್ದು ಅಂತ ಮಾತು ತೊಗೋತು.

ಹಳ್ಳಿಗೆ ಹೋಗಿ ಬಂದ ಮರೀಗೆ ಒಂದೇ ಯೋಚನೆ. ಅದೇನದು ಪೇಟ ಸುತ್ತಿದ್ದವರು ಪೂರ್ವ ಪಶ್ಚಿಮ ಅಂತಿದ್ರಲ್ಲ ಅಂತ. ಅಮ್ಮನ್ನ ಕೇಳಿತು. ಅಮ್ಮ, "ಅದೆಲ್ಲ ನಂಗೆ ಗೊತ್ತಿಲ್ಲ ಕಣೋ. ನಿಮ್ಮಣ್ಣನ್ನ ಕೇಳು, ಗೊತ್ತಿದ್ರೆ ಹೇಳ್ತಾರೆ" ಅಂತು. ಸಂಜೇ ಮೊದಲು ದೊಡ್ಡ ಜೇನುಹಟ್ಟಿಯೊಂದನ್ನ, ಜೊತೆಗೆ ಎರಡು ಹಲಸಿನ ಹಣ್ಣನ್ನ ಅಪ್ಪ ತೊಗೊಂಬಂದಾಗ ಪುಟಾಣಿ ಕೇಳೇ ಕೇಳ್ತು. "ಅಣ್ಣ, ಪೂರ್ವ ಪಶ್ಚಿಮ ತೆಂಕಲ ಬಡಗಲ ಅಂದ್ರೇನು?" ಅಂತ. ಅಷ್ಟು ಹೊತ್ತಿಗೆ ಅಮ್ಮನೂ ಪುಟಾಣಿಯ ಸಾಹಸದ ವಿಷಯ ಅಪ್ಪನ ಹತ್ತಿರ ದೂರಿ ಆಗಿತ್ತು. ಅಪ್ಪ ಅರ್ಧ ಕೋಪ ಅರ್ಧ ಪ್ರೀತಿಯಿಂದ, "ಸರಿ ಅದೆಲ್ಲ ಆಮೇಲೆ ಹೇಳ್ತೀನಿ. ಬೇಗ ಒಂದಿಷ್ಟು ಹಣ್ಣು ತಿನ್ನು" ಅಂತ ತಿನ್ನಿಸಿ ಗಡಗಡ ಅಂತ ಗುಡ್ಡದ ಮೇಲಿದ್ದ ಗುಡೀ ತನಕ ಕರ್ಕೊಂಡು ಹೋಯ್ತು ಪುಟಾಣೀನ.

ಅಪ್ಪ ಕರಡೆ ಅಲ್ಲಿ ನಿಂತು ಮುಳುಗೋ ಸೂರ್ಯನ್ನ ತೋರಿಸಿ, "ನೋಡು ಮರಿ, ಈಗ ಸೂರ್ಯ ಮುಳುಗ್ತಿದಾನಲ್ಲ, ಆ ದಿಕ್ಕಿಗೆ ಪಶ್ಚಿಮ, ಪಡುವಲು ಅಂತಾರೆ. ಇದಕ್ಕೆ ಎದುರುಗಡೆ , ಬೆಳಗ್ಗೆ ಸೂರ್ಯ ಹುಟ್ತಾನಲ್ಲ ಅದಕ್ಕೆ ಮೂಡಲು, ಅಥ್ವಾ ಪೂರ್ವ ಅಂತಾರೆ. ಮತ್ತೆ, ನೀನು ಪೂರ್ವದ ಕಡೇನೋಡ್ತಾ ನಿಂತರೆ ನಿನ್ನ ಬಲಗೈ ತೋರಿಸೋ ಕಡೆ ತೆಂಕಲು ಅಥ್ವಾ ದಕ್ಷಿಣ. ಎಡಗೈ ತೋರಿಸೋದು ಉತ್ತರ ಅಥವಾ ಬಡಗಲು. ಇವಕ್ಕೆ ದಿಕ್ಕುಗಳು ಅಂತಾರೆ" ಅಂತು.

ಅಷ್ಟು ಹೊತ್ತಿಗೆ ಕತ್ತಲಾಗ್ತಾ ಹೋಯ್ತು. "ಸೂರ್ಯ ಮುಳುಗಿದ್ಮೇಲೆ, ದಿಕ್ಕು ಕಾಣೋದು ಹೇಗೆ ಅಣ್ಣಾ?" ಅಂತು ಪುಟಾಣಿ. ಅದಕ್ಕೆ ಅಪ್ಪ ಅಲ್ಲಿ ಕಾಣೋಕೆ ಶುರುವಾಗಿದ್ದ ಒಂದು ನಕ್ಷತ್ರ ತೋರಿಸಿ "ನೋಡು ಮರಿ, ಅದಕ್ಕೆ ಧ್ರುವ ನಕ್ಷತ್ರ ಅಂತಾರೆ. ಅದು ಉತ್ತರ ದಿಕ್ಕನ್ನ ತೋರಿಸತ್ತೆ.ಅದೊಂದು ದಿಕ್ಕು ಗೊತ್ತಾದ್ರೆ ಎಲ್ಲ ಗೊತ್ತಾದ್ ಹಾಗೆ ಅಲ್ವಾ" ಅಂತು. ಪುಟಾಣೀಗೆ ಯಾಕೋ ಬಗೆ ಹರೀಲಿಲ್ಲ.

ಸರಿ ಚಂದ್ರನ ಬೆಳಕಲ್ಲೇ ಕಥೆ ಶುರುಮಾಡ್ತು ಅಪ್ಪ ಕರಡಿ.

"ನೋಡು ಪುಟಾಣಿ. ಭೂಮಿ ಒಂದು ಚೆಂಡಿನ ತರಹ ಇದೆ. ಅದು ತುಂಬ ದೊಡ್ಡದು, ಅದಕ್ಕೆ ನಮಗೆ ಅದು ಗೊತ್ತಾಗೋಲ್ಲ. ನೋಡಿಲ್ಲಿ,ಈ ಕಿತ್ತಳೇ ಹಣ್ಣಿನ ತರ್ಹ ಇದೆ ಭೂಮಿ.ಈ ಹಣ್ಣಿನ ನಡುವೆ ಒಂದು ಕಡ್ಡಿ ಚುಚ್ಚಿಬಿಡೋಣ" ಅಂತ ಚುಚ್ಚಿ ತೋರಿಸಿತು. ಆಮೇಲೆ ಕಡ್ಡಿಯನ್ನ ಹಿಡಿದು ಹಣ್ಣನ್ನ ತಿರುಗಿಸ್ತಾ ಹೇಳ್ತು - ನೋಡು ಭೂಮೀ ಹೀಗೇ ತಿರುಗ್ತಿರತ್ತೆ. ಗೊತ್ತಾಯ್ತಾ? ಈ ಕಡ್ಡಿಯ ಒಂದು ಕಡೇನ ನಾವು ಉತ್ತರ ಅಂತೀವಿ, ಇನ್ನೊಂದನ್ನ ದಕ್ಷಿಣ ಅಂತೀವಿ. ಅಂದ್ರೆ, ಈ ಹಣ್ಣಿನ, ಅಂದ್ರೆ ಭೂಮಿ ಮೇಲೆ ಎಲ್ಲೇ ನಿಂತ್ರೂ ಉತ್ತರ ದಕ್ಷಿಣ ಈ ಕಡ್ಡಿಯ ತುದಿ ಅಂತಲೇ ಇಟ್ಕೋ" ಅಂತು.

ಭೂಮಿ ಒಂದು ಕಿತ್ತಳೇ ಹಣ್ಣಿನ ತರಹ -೧ 


"ಸ್ವಲ್ಪ ಅರ್ಥ ಆಯ್ತು - ಇನ್ನೂ ಬಿಡಿಸಿ ಹೇಳಿ ಅಣ್ಣಾ" ಅಂತು ಪುಟಾಣಿ. ಪಾಪ , ಚಿಕ್ಕದಲ್ಲ್ವಾ?

"ನೋಡು, ನಾವು ಯಾವೂರಲ್ಲೇ ಇರಲಿ, ಈ ಉತ್ತರ ಅನ್ನೋ ಕಡೇಲಿ ಹೋಗ್ತಾ ಇದ್ರೆ, ಈ ಕಡ್ಡಿ ಹಣ್ಣಿಂದ ಹೊರಕ್ಕೆ ಬರ್ತಿದೆಯಲ್ಲಾ, ಅಲ್ಲಿಗೇ ಹೋಗಿ ಸೇರ್ಬೇಕು. ಅಂದ್ರೆ, ನಮ್ಮ ಮನೆ ಸೀಗೇಗುಡ್ಡದಿಂದ ನೇರವಾಗಿ ಈ ಧ್ರುವನಕ್ಷತ್ರ ನೋಡ್ತಾ ಹೋದ್ರೆ ನೀನು ಒಂದಲ್ಲ ಒಂದು ದಿನ ಆ ಕಡ್ಡಿ ಇರೋ ಕಡೇಗೆ ಹೋಗ್ತೀಯ. ಆ ಜಾಗಕ್ಕೆ ಉತ್ತರ ಧ್ರುವ ಅಂತಾರೆ. ಅಲ್ಲಿ ಹೋದಾಗ,ನೀನು ತಲೆ ಎತ್ತಿ ನೋಡಿದರೆ, ಸರೀಯಾಗಿ ನೆತ್ತಿ ಮೇಲೆ ನಿನಗೆ ಈ ಧ್ರುವ ನಕ್ಷತ್ರ ಕಾಣತ್ತೆ. ಹಾಗೇ, ನಿನ್ನ ಚಿಕ್ಕಪ್ಪನ ಮನೇ ನೋಡಿದೀಯಲ್ಲ, ಮಾಲೇಕಲ್ಲು ತಿರುಪತೀಲಿ, ಅಲ್ಲಿ ಅವರ ಮನೇ ಪುಟಾಣಿ ಅವರ ಮನೇಯಿಂದ ಆ ಧ್ರುವ ನಕ್ಷತ್ರ ನೋಡ್ತಾ ನಡ್ಕೊಂಡು ಹೋದ್ರೆ ಅದೂ ಒಂದಲ್ಲ ಒಂದು ದಿನ ಅದೇ ಉತ್ತರ ಧ್ರುವವನ್ನೇ ಸೇರತ್ತೆ"

ಭೂಮಿ ಒಂದು ಕಿತ್ತಳೇ ಹಣ್ಣಿನ ತರಹ -೨ 

"ಓ ಗೊತ್ತಾಯ್ತು. ಉತ್ತರ ದಕ್ಷಿಣ ಎಲ್ಲಾ ಊರಿಂದಲೂ ಒಂದೇ ಆಯ್ತು. ಹಾಗಾದ್ರೆ, ಪೂರ್ವ ಪಶ್ಚಿಮ ಎಲ್ಲಿ?" ಅಂತು ಪುಟಾಣಿ.

"ಹ್ಮ್ಮ್.. ಅದೇ ತಮಾಶಿ ನೋಡು. ಈ ಪೂರ್ವ ಪಶ್ಚಿಮಕ್ಕೆ ಸ್ವಂತಿಕೆ ಅನ್ನೋದೇ ಇಲ್ಲ.  ನೀನು ಬೇರೆಬೇರೆ ಕಡೇಗೆ ಹೋಗ್ತಾ ಪೂರ್ವ ಪಶ್ಚಿಮ ಬೇರೆ ಬೇರೆ ಆಗ್ತಾ ಇರತ್ತೆ. ಭೂಮಿ ಸುತ್ತೋ ದಿಕ್ಕಲ್ಲೇ ಹೋಗ್ತಾ ಇದ್ರೆ ಅದೇ ಪೂರ್ವ. ಸೀಗೇ ಗುಡ್ಡದ ಪೂರ್ವಕ್ಕೆ ಕೊಂಡಜ್ಜಿ - ಅದೇ ನೀನಿವತ್ತು ಬೆಳಗ್ಗೆ ಹೋಗಿದ್ಯಲ್ಲ, ಆ ಗುಡಿ ಕೊಂಡಜ್ಜಿ ವರದರಾಜನ ಗುಡಿ. ಹಾಗೇ ಮುಂದೆ ಹೋದರೆ ತಿಮ್ಮನ ಹಳ್ಳಿ. ಇನ್ನೂ ಮುಂದಕ್ಕೆ ಹೋದರೆ ಗಂಡಸಿ. ಹಾಗೇ ಹೋಗ್ತಾ.... ಇದ್ದರೆ, ಭೂಮೀ ಎಲ್ಲ ಸುತ್ಕೊಂಡು ಮತ್ತೆ ಸೀಗೇಗುಡ್ಡಕ್ಕೇ ಹಗರೇ ಕಡೇಯಿಂದ ಬರ್ತೀಯ; ಅದೇ ನಿಮ್ಮ ಚಿಕ್ಕಪ್ಪನ ಮನೇ ಪುಟಾಣಿ ಮಾಲೇಕಲ್ಲಿಂದ ಪೂರ್ವಕ್ಕೆ ಹೋಗ್ತಾ ಇದ್ದ್ರೆ, ಮೊದ್ಲು ಶೆಟ್ಟಿಕೆರೆ  ಸಿಕ್ಕತ್ತೆ . ಆಮೇಲೆ ಕೋಟೆಕೆರೆ. ಹಾಗೇ ಹೋಗ್ತಾ ಹೋಗ್ತಾ ಹೋಗ್ತಾ ಇದ್ರೆ, ಒಂದಲ್ಲ ಒಂದು ಅರಸೀಕೆರೆ ಕಡೆಯಿಂದ ಮಾಲೇಕಲ್ಲಿಗೆ ಹತ್ಬಹುದು!"

 

ಪುಟಾಣಿಗೆ ಇದೆಲ್ಲ ಕೇಳಿ ಬಹಳ ಖುಷಿ ಆಯ್ತು! "ಓ ಚೆನ್ನಾಗಿದೆ ತುಂಬಾ! ಅಪ್ಪ, ಹಾಗಾರೆ ನೀನು ಚಿಕ್ಕಪ್ಪಂಗೆ ಹೇಳು - ಅವ್ರೆಲ್ಲಾ ಮಾಲೇಕಲ್ಲಿಂದ ಹೊರಡ್ಲಿ. ನಾವಿಲ್ಲಿಂದ ಹೊರ್ಡಣ. ಮತ್ತೆ ಉತ್ತರ ಧ್ರುವಕ್ಕೆ ಹೋಇ ಅಲ್ಲೊಂದು ಮನೇ ಮಾಡ್ಕೊಂಡು ಇದ್ಬಿಡಣ!" ಅಂತು.

ಅಪ್ಪ ಅದಕ್ಕೆ " ಅಯ್ಯೋ ಪುಟ್ಟ, ಅದು ತುಂಬಾ ದೂರ. ಅಲ್ಲಿ ತುಂಬಾ ಚಳಿ ಜಾಸ್ತಿ, ಆದ್ರೆ ಅಲ್ಲಿ ನಮ್ ದಾಯಾದಿಗಳ್ ಮನೆಗಳು ಬೇಕಾದಷ್ಟಿವೆ. ಆದ್ರೆ ತಮಾಷಿ ಗೊತ್ತಾ? ಅವರಿಗೆ ನಮ್ ತರಹ ಹಗ್ಲು ರಾತ್ರಿ ಇಲ್ಲ. ಆರ್ತಿಂಗಳು ಹಗಲು ಆರ್ತಿಂಗಳು ರಾತ್ರಿ" ಅಂತು.

ಪುಟಾಣಿ ಕಕ್ಕಾಬಿಕ್ಕಿ! "ಸೂರ್ಯ ಆರ್ತಿಂಗಳು ಮುಳುಗ್ದೇ ಇದ್ರೆ, ಅಲ್ಲಿರೋ ನಮ್ ದಾಯಾದಿಗಳಿಗೆ ಪೂರ್ವ ಯಾವ್ದು, ಪಶ್ಚಿಮ ಯಾವ್ದು ಅಂತ ಹೇಗೆ ಗೊತ್ತಾಗತ್ತೆ ಅಣ್ಣ?" ಅಂತು.

ಅಪ್ಪ ಅದಕ್ಕೆ, "ಪುಟ್ಟೂ, ಅದೊಂದು ದೊಡ್ಡ ಕತೆ - ಈಗಾಗ್ಲೇ ರಾತ್ರಿ ಆಗಿದೆ. ಬೇಗ ಹೋಗಿ ಮಲ್ಕೋಳೋಣಾ, ಅದೆಲ್ಲ ಇನ್ನೊಂದ್ಸಲ ಹೇಳ್ತೀನಿ" ಅಂತ ಪುಸಲಾಯ್ಸಿ ಮಗೂನ ಮನೇಗೆ ಕರ್ಕೊಂಡು ಹೋಯ್ತು.

(ಮುಂದುವರೆಯುವುದು ....)

-ಹಂಸಾನಂದಿ

ಕೊಸರು: ಸೀಗೇಗುಡ್ಡ ಹಾಸನದ ಹತ್ತಿರದ ಒಂದು ಗುಡ್ಡ. ನಮ್ಮ ಶಾಲೆಯಿಂದ ನಿತ್ಯ ಕಾಣುತ್ತಿದ್ದ ಗುಡ್ಡ. ಅದರ ಮೇಲೆ ಕರಡಿಗಳು ಇವೆ ಅಂತ ಎಲ್ಲ ಹುಡುಗರೂ ಹೇಳ್ತಿದ್ದರು. ಈಗಲೂ ಒಂದು ತರಹ ಕುರುಚಲು ಕಾಡಿದೆ.

ಕೊನೆಯ ಕೊಸರು: ಮಾಲೇಕಲ್ಲು ತಿರುಪತಿ ಅರಸೀಕೆರೆ ಬಳಿಯ ಒಂದು ಬೆಟ್ಟ. ಮೇಲೆ ವೆಂಕಟ ರಮಣನ ಗುಡಿ ಇದೆ. ಅಲ್ಲೂ ಕರಡಿಗಳಿವೆ ಅಂತ ಹೇಳುವುದನ್ನು ಕೇಳಿರುವೆ.

 

Rating
No votes yet

Comments