ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

ಮುಂಬೈನಲ್ಲಾದ ಹೇಯ ಕೃತ್ಯಕ್ಕೆ ಈಗಾಗಲೆ ಅನೇಕರು ತಮ್ಮ ಆಕ್ರೋಶ ಮತ್ತು ದುಃಖಗಳನ್ನು ಇಲ್ಲಿ ವ್ಯಕ್ತ ಪಡಿಸಿದ್ದಾರೆ. ಈ ಸಮಯದಲ್ಲಿ ನಮ್ಮ ದೇಶದ ಜನರಲ್ಲಿ ನನ್ನ ಒಂದು ಪ್ರಾಮಾಣಿಕ ಮನವಿ. ದಯವಿಟ್ಟು ಈ ಅಂಶಗಳನ್ನು ಗಮನಿಸಬೇಕು ಎಂದು ಕೋರುತ್ತೇನೆ.

೧) ಆತಂಕವಾದಿಗಳು ಭಾರತದ ಮೇಲೆ ಧಾಳಿ ಮಾಡಿದ್ದಾರೆ! ಜಾತಿ ಮತದ ಭೇದವಿಲ್ಲದೆ ಎಲ್ಲ ಭಾರತೀಯರೂ ಈಗ ಒಂದುಗೂಡಿ ಈ ವೈರಿಯನ್ನು ಎದುರಿಸಬೇಕು

೨) ಹಿಂದು ಮುಸ್ಲಿಮ್ ಮತಗಳ ಘರ್ಷಣೆಯನ್ನು ತೀವ್ರಗೊಳಿಸಬೇಡಿ. ಆ ರೀತಿ ಯಾರಾದರೂ ಮಾಡಿದರೆ ಅದನ್ನು ಪ್ರತಿಭಟಿಸಿ. ಈ ಕೃತ್ಯವನ್ನು ಎಸಗಿದವರ ಮೇಲಿನ ರೋಶವನ್ನು ನಿರ್ದೋಷಿಗಳು ಮತ್ತು ಅಮಾಯಕರ ಮೇಲೆ ತೋರಿಸಬೇಡಿ. ಭಾರ್ತೀಯರು ಹಾಗೆ ಮಾಡಿ ತಮ್ಮ ತಮ್ಮಲ್ಲೆ ಕಚ್ಚಾಡಿ ನಾಶವಾಗಲಿ ಎಂದೇ ಈ ಪಾಪಿಗಳು ಈ ಕೆಲಸವನ್ನು ಮಾಡಿರುವುದು.

೩) ಭಾರತದ ನಾಯಕರು ಮತ್ತು ಆಡಳಿತ ವರ್ಗದವರು ಇಂತಹ ಶತೃಗಳನ್ನು ನಿರ್ನಾಮಗೊಳಿಸಲು ಪಣತೊಟ್ಟಿಲ್ಲ ಎನ್ನುವುದು ನಿಜ. ಆದರೆ ಈ ಘಟನಾವಳಿಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಲು ಅವಕಾಶ ಕೊಡಬೇಡಿ.

೪) ೧೫೦ ಮಿಲ್ಲಿಯನ್ ಮುಸ್ಲಿಮರು ನಮ್ಮಂತೆ ಭಾರತದ ಪ್ರಜೆಗಳೆ. ಅವರಲ್ಲಿ ಹೆಚ್ಚಿನ ಜನ ನಮ್ಮ ನಿಮ್ಮಂತೆ ನೆಮ್ಮದಿಯ ಜೀವನ ನಡೆಸುವ ಸಾಮಾನ್ಯ ಬಯಕೆ ಇರುವಂತಹವರೆ. ನಿಮ್ಮ ಸಹಕೆಲಸಗಾರರು, ನಿಮ್ಮ ಸಹಪಾಟಿಗಳು, ನಿಮ್ಮ ಅಕ್ಕಪಕ್ಕದವರು ಬೇರೆ ಮತದವರಾಗಿದ್ದರೆ ಅವರೊಡನೆ ಹೆಚ್ಚಿನ ಸಂಪರ್ಕ ಬೆಳೆಸಿಕೊಳ್ಳಿ. ಈ ರೀತಿ ಮಾಡಿದರೆ ಅಪನಂಬಿಕೆಗಳು, ಭಯ ಮತ್ತು ದ್ವೇಷ ಕಡಿಮೆಯಾಗುತ್ತದೆ ಎಂದು ನನ್ನ ನಂಬಿಕೆ.

ಇಲ್ಲಿ ಅಮೇರಿಕದಲ್ಲಿ ನನಗೆ ಅನೇಕ ಪಾಕಿಸ್ತಾನಿಯರು ಪರಿಚಯವಾಗಿದ್ದಾರೆ. ಅವರೊಡನೆ ಕೆಲಸ ಮಾಡಿದ್ದೇನೆ. ನಾನು ಅರಿತುಕೊಂಡಿದ್ದೇನೆಂದರೆ ಅವರೆಲ್ಲರ ರೀತಿನೀತಿಗಳು ಭಾರತೀಯರಿಗಿಂತ ಬಿನ್ನವಾಗೇನೂ ಇರಲ್ಲಿಲ್ಲ. ನಾನು ಬೆಂಗಳೂರಿನಲ್ಲಿದ್ದಾಗ ನನ್ನ ಸ್ನೇಹಿತರೊಂದಿಗೆ (ಅವರಲ್ಲಿ ಕೆಲವರು ಮುಸ್ಲಿಮರೂ ಇದ್ದರು) ಹೇಗೆ ವ್ಯವಹರಿಸುತ್ತಿದೆನೊ ಅದೇ ರೀತಿ ಇವವರೊಡನೆಯೂ ವ್ಯವಹರಿಸುತ್ತೇನೆ. ಕಾಶ್ಮೀರದ ವಿಚಾರದಲ್ಲಿ ವಾದ ಮಾಡುತ್ತಿದ್ದರೂ ನಮ್ಮ ನಮ್ಮ ನಿಲುವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ ಮತ್ತು ಅದನ್ನು ನಮ್ಮ ನಡುವಿನ ಕಂದರದಂತೆ ಕಾಣುವುದಿಲ್ಲ.

ಇನ್ನು ನಮ್ಮ ದೇಶದ ಮುಸ್ಲಿಮರು ಹೇಗೆ ತಾನೆ ಬೇರೆ.?

ನಾವು ಭಾರತೀಯರು ನಮ್ಮ ನಮ್ಮ ವ್ಯತ್ಯಾಸಗಳನ್ನು ಎತ್ತಿತೋರಿಸುತ್ತ ಜಾತಿ ಮತದ ಆಧಾರದ ಮೇಲೆ ನಮ್ಮ ನಡುವೆಯೇ ಬೇಲಿ ಹಾಕಿಕೊಳ್ಳುವುದು ನಮ್ಮ ವಿನಾಶವನ್ನು ನಾವೇ ತಂದುಕೊಂಡಂತೆಯೆ!. ನಾನು ನಂಬಿಕೊಂಡಿರುವ ಒಂದು ಒಳ್ಳೆಯ ಮಾತೇನೆಂದರೆ "ಪ್ರತಿಯೊಬ್ಬರೂ ತಮ್ಮ ಪರಿಸರದ ಚೌಕಟ್ಟಿನಲ್ಲಿ ತಮ್ಮ ನಂಬಿಕೆಗಳನ್ನು ರೂಪಿಸಿಕೊಳ್ಳುತ್ತಾರೆ. ಆ ಚೌಕಟ್ಟಿನಲ್ಲಿ ಅವರ ನಂಬಿಕೆಯೆ ಸತ್ಯವಾಗಿರುತ್ತದೆ. ಅದನ್ನು ಒಪ್ಪದವರು ಒಮ್ಮೆ ಅವರ ದೃಷ್ಟಿಯಿಂದ ನೋಡಿದಾಗ ಅವರನ್ನು ಅರ್ಥಮಾಡಿಕೊಳ್ಳಬಹುದು. ಇದರಿಂದ ಸೌಹಾರ್ದತೆ ಬೆಳೇಯುತ್ತದೆ. "

ನನ್ನ ನಂಬಿಕೆಗಳನ್ನು ಹಂಚಿಕೊಂಡಿದ್ದೇನೆ. ನಿಮ್ಮ ಅಭಿಪ್ರಾಯ ಬೇರೆ ಇದ್ದರೆ ನಿಮ್ಮ ಮೂಗಿನ ನೇರಕ್ಕೆ ನೋಡಲು ಸಿದ್ಧವಾಗಿಯೇ ಇದ್ದೇನೆ -:))

ಮಧು ಕೃಷ್ಣಮೂರ್ತಿ.
My English Blog at http://rasikararajya.blogspot.com/

Rating
No votes yet

Comments