ಶಿ'ರಾಡಿ' ಮೇಳ - ೨೦೦೯

ಶಿ'ರಾಡಿ' ಮೇಳ - ೨೦೦೯

ರಾಷ್ಟ್ರೀಯ ಹೆ(ಹೊಂಡ)ದ್ದಾರಿ-೪೮ಯಲ್ಲಿ ಅತ್ಯಂತ ಕ್ಲಿಷ್ಟವಾದ ಪ್ರಯಾಣ ಎಂದರೆ ಶಿರಾಡಿ ಘಾಟಿಯ ೪೦ ಕಿ.ಮೀಗಳು. ಇತ್ತೀಚಿಗೆ ಘಾಟಿ ಪ್ರಯಾಣಕ್ಕೆ ಸಂಪೂರ್ಣ ಅಯೋಗ್ಯವಾಗಿದೆ. ಬೇಡದ್ದಕ್ಕೆ ಖರ್ಚು ಮಾಡುವ ಸರ್ಕಾರಗಳಿಗೆ, ಈ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ ಮಾಡಲಿಕ್ಕೆ ಹಣವಿಲ್ಲ. ಆದ್ದರಿಂದ ಈ ರಸ್ತೆ ಕಾಂಕ್ರಿಟೀಕರಣಕ್ಕೆ ದೇಣಿಗೆ ಸಂಗ್ರಹಿಸಲು ಹಾಗೂ ಈ ರಸ್ತೆಯನ್ನು ಸದಾ ಸುದ್ದಿಯಲ್ಲಿಡಲು ಹೆದ್ದಾರಿ ಇಲಾಖೆ ತೀರ್ಮಾನಿಸಿದೆ. ಅದರಂತೆ ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದೊಂದಿಗೆ ಶಿ'ರಾಡಿ' ಮೇಳ - ೨೦೦೯ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಈ ಮೇಳದಲ್ಲಿ ಅನೇಕ ವಿಧದ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳು ನಡೆಯಲಿದೆ ಅಂತ ಇಲಾಖೆ ಘೋಷಿಸಿದೆ. ಹಾಗೆ ವ್ಯಾಪಾರ ಮಳಿಗೆಗಳು ತಲೆ ಎತ್ತಲಿವೆ ಎಂದು ಅದು ಹೇಳಿದೆ. ಬಂದ ದೇಣಿಗೆಯಲ್ಲಿ ಶಿರಾಡಿಯನ್ನು ಸಂಪೂರ್ಣ ದುರಸ್ತಿಗೊಳಿಸಲಾಗುವುದು ಎಂಬ ಭರವಸೆ(??) ಕೂಡ ನೀಡಿದೆ.

ಮೊದಲೇ ಹೇಳಿದಂತೆ ಅನೇಕ ಸ್ಪರ್ಧೆಗಳು ಕಾರ್ಯಕ್ರಮಗಳು ಕಾಲಕ್ಕೆ ತಕ್ಕಂತೆ ನಡೆಯಲಿವೆ. ಮೊದಲನೆ ಬಾರಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಡೆಯುತ್ತಿರುವುದರಿಂದ ಅನೇಕ ಪ್ರಾಯೋಜಕರು ಪ್ರಾಯೋಜಕತೆಗೆ ಮುಂದೆ ಬಂದಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಗಣಿ ಮತ್ತು ರೆಸಾರ್ಟ್ ಸಂಸ್ಕೃತಿಯನ್ನು ಉತ್ತೇಜಿಸಲು ಗಣಿ ದೊರೆಗಳು ಬಹಳ ಹಣ ಸುರಿಯಲು ನಿರ್ಧರಿಸಿದ್ದಾರೆ.

ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರು:
೧) ಚಿತ್ರದುರ್ಗ-ತುಮಕೂರು ಸೀಮೆಯ ಗಣಿ ನಾಯಕರು.
೨) ಮಂಗಳೂರು ರಿಫೈನೆರಿ (MRPL)
೩) ನವಮಂಗಳೂರು ಬಂದರು ಮಂಡಳಿ (NMPT)
೪) ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ.
೫) ಸರ್ಕಾರಿ ಮತ್ತು ಖಾಸಗಿ ಬಸ್ಸು ಮಾಲೀಕರು
೬) ರೈಲ್ವೆ ಇಲಾಖೆ.

ಪ್ರಾಯೋಜಕರ ಕಿರು ಪರಿಚಯ:

೧) ಗಣಿ ನಾಯಕರು ಎಲ್ಲರಿಗೂ ಚಿರಪರಿಚಿತರು. ೨೦ ಟನ್ ಗಣಿ ಸಾಗಿಸುವ ಬದಲು ೪೦ ಟನ್ ಸಾಗಿಸಿ ಶಿ'ರಾಡಿ' ಶಬ್ದಕ್ಕೆ ಮಹತ್ವ ಕೊಟ್ಟವರು.
೨) ದಿನಕ್ಕೆ ೨೦೦ ಬುಲೆಟ್ ಟ್ಯಾಂಕರ್ ಗಳು ಶಿರಾಡಿಯಲ್ಲಿ ಸಂಚರಿಸಲು ಕಾರಣಕರ್ತರಾದ MRPL ಅವರು ಕೂಡ ಘಾಟಿ ರಸ್ತೆ ಸುಸ್ಥಿತಿಗೆ ಕಾರಣರಾದವರಲ್ಲಿ ಒಬ್ಬರು.
೩) ಶಿರಾಡಿ ರಸ್ತೆ ಗುಣಮಟ್ಟವನ್ನು ಅತ್ಯಂತ ಸೂಕ್ಷ್ಮವಾಗಿ ವೀಕ್ಷಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ.
೪) ತನ್ನ ಸಾಮರ್ಥ್ಯಕ್ಕಿಂತಲೂ ಅಧಿಕ ಗಣಿ ರಫ್ತು ಮಾಡಿ ಸಾವಿರಾರು ಗಣಿ ಲಾರಿಗಳನ್ನು ಅಥಿತಿಯಂತೆ ಕಾಣುತ್ತಿರುವ NMPT
೫) ಹಾಗೆಯೇ ಹಗಲು ರೈಲಿಗೆ ಅಡ್ಡಗಾಲು ಹಾಕುತ್ತಿರುವ ಸರಕಾರೀ ಮತ್ತು ಖಾಸಗಿ ಬಸ್ಸು ಮಾಲಕರು.
೬) ಕೊನೆಯದಾಗಿ ಎಲ್ಲ ಲಾಬಿಗಳಿಗೂ ಸೈ ಎನ್ನುವ ರೈಲ್ವೆ ಇಲಾಖೆ.

ವ್ಯಾಪಾರ ಮಳಿಗೆಗೆ ಬಹಳ ಬೇಡಿಕೆ ಬಂದಿದೆ. ಅವುಗಳಲ್ಲಿ ವಿಶೇಷ.
೧) ಹಲವು ಪ್ರದೇಶದ ವಿಶೇಷ ಗಣಿಗಳ ಪರಿಚಯ.
೨) ಹೆದ್ದಾರಿ ಇಲಾಖೆ ಇಂದ ಗುಣಮಟ್ಟದ(?) ರಸ್ತೆ ಮಾಡುವುದು ಹೇಗೆ.
೩) ದೇಶದ ಪ್ರತಿಷ್ಟಿತ ವಾಹನ ಸಂಸ್ಥೆಯಿಂದ ಶಿರಾಡಿ ಘಾಟಿಗೆಂದೆ ತಯಾರಿಸಿದ ವಿಶೇಷ ವಾಹನಗಳ ಅನಾವರಣ.

ಸ್ಪರ್ಧೆಗಳ ವಿವರ ಇಂತಿದೆ:

ಸೂಚನೆ: ಸ್ಪರ್ಧೆಗಳಿಗೆ ಪ್ರವೇಶ ಶುಲ್ಕ ಇದೆ. ಹಾಗೆಯೇ ಗೆದ್ದವರಿಗೆ ವಿಶೇಷ ಬಹುಮಾನಗಳು ಕೂಡ. ಪರಿಸರವಾದಿಗಳಿಗೆ ಪ್ರವೇಶವಿಲ್ಲ.

ಬೇಸಿಗೆ ವಿಶೇಷ - ೧: ಶಿರಾಡಿಯಲ್ಲಿ ರಸ್ತೆ ಹುಡುಕುವ ಸ್ಪರ್ಧೆ
ಎಲ್ಲ ಸಾರ್ವಜನಿಕರಿಗೆ ಈ ಸ್ಪರ್ಧೆಯಲ್ಲಿ ಅವಕಾಶ ಇದೆ. ಅತಿ ಹೆಚ್ಚು ವಿಸ್ತೀರ್ಣದಲ್ಲಿ ರಸ್ತೆ ಕಂಡು ಹಿಡಿದವರಿಗೆ ಬಹುಮಾನ.
ಸೂಚನೆ: ಸ್ವಲ್ಪವೂ ರಸ್ತೆ ಕಾಣದಿದ್ದರೆ ಆಯೋಜಕರು ಜವಾಬ್ದಾರರಲ್ಲ.


ಬೇಸಿಗೆ ವಿಶೇಷ - ೨: ಘಾಟಿಯಲ್ಲಿ ವೋಲ್ವೋ ಬಸ್ಸು ಚಾಲನೆ ಸ್ಪರ್ಧೆ

ಇದು ಈ ಬಾರಿಯ ವಿಶೇಷ. ಘಾಟಿಯಲ್ಲಿ ಇಳಿಯುವುದು ಸ್ವಲ್ಪ ಸುಲಭವಾದ್ದರಿಂದ, ಸ್ಪರ್ಧೆ ರೋಚಕತೆ ಹೆಚ್ಚಿಸಲು, ಘಾಟಿ ಏರುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಗುಂಡ್ಯ ಫಾರೆಸ್ಟ್ ಗೇಟ್ ಇಂದ ಸಕಲೆಶಪುರದವರೆಗಿನ ೪೦ ಕೀ.ಮಿ ರಸ್ತೆ(ರಾಡಿ)ಯಲ್ಲಿ ಈ ಸ್ಪರ್ಧೆ.

ನಿಯಮಗಳು:
೧) ಬಸ್ಸು ಇಲಾಖೆ ವತಿಯಿಂದ ಒದಗಿಸಲಾಗುವುದು. ಒಟ್ಟಿಗೆ ಮೂರು ಬಸ್ಸುಗಳನ್ನು ಒದಗಿಸಲಾಗುವುದು.
೨) ಬಸ್ಸು ಪಲ್ಟಿ ಹೊಡೆದರೆ ಅದನ್ನು ಸಂಪೂರ್ಣ ಸರಿಪಡಿಸುವ ಜವಾಬ್ದಾರಿ ಚಾಲಕರದ್ದು.
೩) ತಿರುವು ಮತ್ತು ಹೊಂಡಗಳಲ್ಲಿ ಜೋರಾಗಿ ಓಡಿಸಿ ಬಸ್ಸು ಕಂದಕಕ್ಕೆ ಬಿದ್ದರೆ ನಾವು ಜವಾಬ್ದಾರರಲ್ಲ.
೪) ಬಸ್ಸಿನ ರೇರ್ ಇಂಜಿನ್ನಿಗೆ ಸ್ವಲ್ಪವೂ ಹಾನಿಯಾಗಕೂಡದು.
೫) ಘಾಟಿ ಮಧ್ಯೆ ಕೇವಲ ೩ ಬಾರಿ ಫರ್ಸ್ಟ್ ಗೆಯರ್ ಹಾಕುವ ಅವಕಾಶವಿದೆ.
೬) ಘಾಟಿ ಮಧ್ಯದಲ್ಲಿ ೬-ನೇ ಗೆಯರ್ ನಲ್ಲಿ ಹೆಚ್ಚು ಹೊತ್ತು ಚಲಾಯಿಸುವವರಿಗೆ ವಿಶೇಷ ಬೋನಸ್ ಬಹುಮಾನ.
ವಿಶೇಷ ಸೂಚನೆ: ಗಣಿ ಲಾರಿ ಚಾಲಕರಿಗೆ ಮೊದಲ ಪ್ರಾಶಸ್ತ್ಯ

ಮಳೆಗಾಲ ವಿಶೇಷ: ಮಳೆಗಾಲದಲ್ಲಿ ಘಾಟಿ ಸಂಪೂರ್ಣ ಕೆಸರುಮಯವಾಗುವುದರಿಂದ ಸ್ಪರ್ಧೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

೧)ಮೊದಲ ಹತ್ತು ಕಿ.ಮೀ ರಾಜಕೀಯ ವಿಶೇಷ:
ಮಂತ್ರಿ ಮಹೋದಯರಿಂದ ಮತ್ತು ರಾಜಕೀಯ ನಾಯಕರುಗಳಿಂದ ವಿಶೇಷ ಕೆಸರೆರಚಾಟದ ಮನೋರಂಜನೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ಇದೆ.

೨) ನಂತರದ ೨೦ ಕಿ.ಮೀ ನಲ್ಲಿ ಭತ್ತ ಬೆಳೆಯುವ ಸ್ಪರ್ಧೆ: ಆಯ್ದ ೨೦ ಪ್ರಗತಿಪರ ರೈತರನ್ನು ಆಯ್ಕೆ ಮಾಡಿ ಒಬ್ಬರಿಗೆ ೧ ಕೀ.ಮಿ ಗುತ್ತಿಗೆಯಂತೆ ಕೃಷಿ ಮಾಡಲು ಅನುಮತಿ ನೀಡಲಾಗುವುದು. ಅಧಿಕ ಇಳುವರಿ ತರುವ ೮ ರೈತರಿಗೆ ಮೂರು ಬಹುಮಾನಗಳು ಹಾಗು ೫ ಸಮಾಧಾನಕರ ಬಹುಮಾನುಗಳು ಇವೆ.

೩) ಕೊನೆಯ ೧೦ ಕಿ.ಮೀ ನಲ್ಲಿ ಬಾಳೆಗಿಡ ನೆಡುವ ಸ್ಪರ್ಧೆ: ಇಲ್ಲೂ ೨೦ ಮಂದಿಗೆ ಅವಕಾಶ. ಪ್ರತಿ ೫೦೦ ಮೀ ಗೆ ಗುತ್ತಿಗೆ. ಬಹುಮಾನಗಳು ಭತ್ತ ಬೆಳೆಯುವ ಸ್ಪರ್ಧೆಯಂತೆ.

ನಿಯಮಗಳು:
೧) ಕೆಸರೆರಚಾಟದ ಸಮಯದಲ್ಲಿ ಕೆಸರು ವೀಕ್ಷಕರ ಮೇಲೆ ಬಿದ್ದರೆ ಆಯೋಜಕರು ಜವಾಬ್ದಾರರಲ್ಲ. ತುಂಬ ಬಿದ್ದರೆ ತಿರುಗಿ ನೀವು ಕೆಸರನ್ನು ಎಸೆಯಬಹುದು.
೨) ಕೃಷಿಗೆ ಬೇಕಾದ ಉಪಕರಣಗಳನ್ನು ರೈತರೇ ತರಬೇಕು.
೩) ಮಳೆಗಾಲದಲ್ಲಿ ಪ್ರವಾಹ ಬಿರುಗಾಳಿ ಸಾಮಾನ್ಯ. ಬೆಳೆ ನಷ್ಟವಾದರೆ ಆಯೋಜಕರು ಹೊಣೆ ಅಲ್ಲ.
೪) ಮಳೆ ಬರದಿದ್ದರೂ ಆಯೋಜಕರು ಹೊಣೆ ಅಲ್ಲ.
೫) ನೈಸರ್ಗಿಕ ಕೃಷಿಗೆ ಮಾತ್ರ ಅನುಮತಿ.

ಚಳಿಗಾಲ ವಿಶೇಷ: ಶಿರಾಡಿ ಹೈವೆ ಕಂಬಳ

ಸಂಪೂರ್ಣ ೪೦ ಕೀ.ಮಿ. ವ್ಯಾಪ್ತಿಯಲ್ಲಿ ಕಂಬಳ ನಡೆಯಲಿದೆ. ಹಾಗೆಯೇ ಕೋಣಗಳನ್ನು ಸೊಗಸಾಗಿ ಸಿಂಗಾರ ಮಾಡಿದವರಿಗೂ ವಿಶೇಷ ಬಹುಮಾನಗಳಿವೆ.

ಹಾಗೆ ರಾತ್ರಿಯಂದು ವಿಶೇಷ ಯಕ್ಷಗಾನ ಮೇಳ ನಡೆಯಲಿವೆ. ಮುಖ್ಯವಾದವು ಶಿರಾಡಿ ಮಹಿಮೆ, ಗಣಿ ಕೈಲಾಸ ಮುಂತಾದವು.

ಸೂಚನೆ: ಕಂಬಳದಲ್ಲಿ ಭಾಗವಹಿಸುವವರು ಹೊಂಡದ ಬಗ್ಗೆ ಜಾಗೃತರಾಗಿರಬೇಕು ಎಂದು ವಿನಂತಿ. ಹಾಗೆಯೇ ಕಂದಕಗಳು ಇರುವುದರಿಂದ ಕೋಣಗಳನ್ನು ಸ್ವಲ್ಪ ನಿಧಾನವಾಗಿ ಹೊಡೆಯುವುದು. ಹೊಂಡದಲ್ಲಿ ಮುಗ್ಗರಿಸಿ ಬಿದ್ದಲ್ಲಿ ಅಥವಾ ಕಂದಕಕ್ಕೆ ಬಿದ್ದಲ್ಲಿ ಆಯೋಜಕರು ಜವಾಬ್ದಾರರಲ್ಲ.

ಪ್ರವೇಶ ಶುಲ್ಕ:

೧) ರಸ್ತೆ ಹುಡುಕುವ ಸ್ಪರ್ಧೆಗೆ ೨ ಮೂಟೆ ಸಿಮೆಂಟ್ ಅಥವಾ ಅದಕ್ಕೆ ಸಮಾನಾಂತರವಾದ ಜಲ್ಲಿ ಕಲ್ಲು.
೨) ವೋಲ್ವೋ ಬಸ್ ಚಾಲನೆ ಸ್ಪರ್ಧೆಗೆ ೮ ಮೂಟೆ ಸಿಮೆಂಟ್ ಮತ್ತು ಅಪಘಾತ ಠೇವಣಿ ೨ ಲೋಡ್ ಜಲ್ಲಿ ಕಲ್ಲು. ಬಸ್ಸು ಸರಿಯಾಗಿ ಘಾಟಿ ಹತ್ತಿದರೆ ಠೇವಣಿ ವಾಪಾಸ್ ಮಾಡಲಾಗುವುದು.
೩) ಕೆಸರೆರಚಾಟದ ಕಾರ್ಯಕ್ರಮಕ್ಕೆ ೧ ಮೂಟೆ ಸಿಮೆಂಟ್.
೪) ಕೃಷಿ ಮತ್ತು ಬಾಲೆ ನೆಡುವ ಸ್ಪರ್ಧೆಗೆ ೪ ಮೂಟೆ ಸಿಮೆಂಟ್.
೫) ಕಂಬಳಕ್ಕೆ ೬ ಮೂಟೆ ಸಿಮೆಂಟ್ ಮತ್ತು ವೀಕ್ಷಣೆಗೆ ೨ ಮೂಟೆ ಸಿಮೆಂಟ್. ಕೋಣಗಳಿಗೆ ಪ್ರವೇಶ ಶುಲ್ಕ ಇಲ್ಲ.
೬) ಯಕ್ಷಗಾನಕ್ಕೆ ೧ ಮೂಟೆ ಸಿಮೆಂಟ್
೭) ಪ್ರತಿ ವ್ಯಾಪಾರ ಮಳಿಗೆಗೆ ದಿನಕ್ಕೆ ೨ ಮೂಟೆ ಸಿಮೆಂಟ್ ಬಾಡಿಗೆ ಇದೆ.

ಬಹುಮಾನಗಳು:

ಮೊದಲನೆಯ ವಿಜೇತರಿಗೆ ೫ ಟನ್ ವಿಶೇಷ ಗಣಿ ಮಣ್ಣು (ಮಣ್ಣು ಹೊತ್ತು ಕೊಂಡು ಹೋಗಲು ತಮ್ಮದೇ ವಾಹನಗಳನ್ನು ತರಬೇಕಾಗಿ ವಿನಂತಿ)
ಎರಡನೆಯ ಬಹುಮಾನ: ೦.೫ ಬಾರೆಲ್ ಡಾಮರ್.
ಮೂರನೆಯ ಬಹುಮಾನ: NMPT ವತಿಯಿಂದ ವಿಶೇಷ ರಫ್ತು ಕೂಪನ್.
೫ ಸಮಾಧಾನಕರ ಬಹುಮಾನುಗಳು: ಬಸ್ಸು ಮಾಲಿಕರಿಂದ ವಿಶೇಷ ರಿಯಾಯಿತಿ ಕೂಪನ್.

ಬಂಪರ್ ಬಹುಮಾನ:
ಅಧಿಕ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಗಣಿ ಪ್ರದೇಶಗಳಿಗೆ ವಿಶೇಷ ಪ್ರವಾಸ.

ಬಹುಮಾನ ವಿತರಕರು: ರಾಜ್ಯದ ಗಣಿ ಶ್ರೇಷ್ಠ ನಾಯಕರು.
ವಿತರಣೆ ದಿನ: ವರುಷದ ಕೊನೆಯ ದಿನ.

ಸಾರ್ವಜನಿಕರಲ್ಲಿ ವಿನಂತಿ: ಬಂದ ಬಹುಮಾನಗಳನ್ನು ಆಯೋಜಕರಿಗೆ ಒಪ್ಪಿಸಿದರೆ ಶಿರಾಡಿ ದುರಸ್ತಿ ಕಾರ್ಯ ಮತ್ತಷ್ಟು ಚುರುಕುಗೊಳ್ಳುತ್ತದೆ. ಸಾರ್ವಜನಿಕರು ಈ ವಿಷಯವನ್ನು ಉದಾರ ಮನಸ್ಸಿನಿಂದ ಪರಿಗಣಿಸಬೇಕಾಗಿ ವಿನಂತಿ. ಹಾಗೆ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಕೋರುತ್ತೇವೆ.

ಅಧಿಕ ಮಾಹಿತಿ:
ನಿಮ್ಮ ಸಮೀಪದ ಹೆದ್ದಾರಿ ಅಥವಾ ಲೋಕೋ(ಅ)ಪಯೋಗಿ ಇಲಾಖೆಯನ್ನು ಸಂಪರ್ಕಿಸಿ!!
********************************
ಚಿತ್ರ ಕೃಪೆ: ಹಿಂದು ಪತ್ರಿಕೆ
ರಸ್ತೆ ಹುಡುಕುವ ಸ್ಪರ್ಧೆಯ ಸಲಹೆ: ಸಂಪದಿಗ ಅನಿಲ್ ಅವರು. ಅವರಿಗೂ ಸಹ ಹೆದ್ದಾರಿ ಇಲಾಖೆ ವತಿಯಿಂದ ವಿಶೇಷ ಸಮ್ಮಾನ ಇದೆ.

Rating
No votes yet

Comments