ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?

ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?

ಸೀರಿಯಲ್‍ಗಳ ಟಿ.ಆರ್.ಪಿ ಹೆಚ್ಚುತ್ತಲೇ ಇದೆ. ಅದರಲ್ಲಿ ಅತ್ತೆ ಸೊಸೆ ಪರಸ್ಪರ ಜುಟ್ಟು ಹಿಡಿದು ಜಗಳವಾಡುತ್ತಲೇ ಇದ್ದಾರೆ. ಮಾತು ಮಾತಿಗೆ ದೇವರ ಕೋಣೆಗೆ ಹೋಗಿ ದೀವಾರ್ ಸಿನೆಮಾದಂತೆ ದೇವರನ್ನು ಬ್ಲಾಕ್ ಮೈಲ್ ಮಾಡಿ ತಮ್ಮ ಕೆಲಸ ಗಿಟ್ಟಿಸುತ್ತಲೇ ಇದ್ದಾರೆ. ದಿನ ದಿನ ಕಡುವಾ ಚೌತ್ ಮಾಡಿ ತಮ್ಮ ಗಂಡಂದಿರ ಆಯುಷ್ಯ ಹೆಚ್ಚಿಸುತ್ತಲೇ ಇದ್ದಾರೆ. ನಮ್ಮ ಕಾಲೇಜು ಹುಡುಗ ಹುಡುಗಿಯರು ಈ ಸೀರಿಯಲ್‍ಗಳನ್ನು ಬೈಯ್ಯುತ್ತಲೇ ಕದ್ದು ಮುಚ್ಚಿ ತಮ್ಮ ಪ್ರೇಮಿಗಳಿಗಾಗಿ ಉಪವಾಸ ಮಾಡುವುದು, ಕಡುವಾ ಚೌತ್ (ನಂಬಿದರೆ ನಂಬಿ ಬಿಟ್ಟರೆ ಬಿಡಿ... ಆದರೆ ಇದು ನಿಜ!) ನಡೆಸುತ್ತಿದ್ದಾರೆ! ಕನ್ನಡದ ಉತ್ತಮ ನಿರ್ದೇಶಕರೊಬ್ಬರ ಮನೆಗೆ ನಾನು ಹೋಗಿದ್ದ ಸಂದರ್ಭದಲ್ಲಿ ಉತ್ತಮ ಕಲಾವಿದೆಯಾಗಿರುವ ಅವರ ಹೆಂಡತಿಯೂ ಸಹ ಇಂಥದ್ದೇ ಸೀರಿಯಲ್ ನೋಡಿಕೊಂಡು ಕುಳಿತಿದ್ದದ್ದು ಕಂಡು ನಾನು ಎರಡು ವರ್ಷ ಹಿಂದೆ ಆಶ್ಚರ್ಯ ಪಟ್ಟಿದ್ದೆ. ವರ್ಷ ಉರುಳುತ್ತಾ ಸಾಗಿದೆ. ಸೀರಿಯಲ್‍ಗಳ ಎಪಿಸೋಡ್ ಸಂಖ್ಯೆ ಉರುಳಿದಂತೆ. ನಾವಿನ್ನೂ ಇದರಿಂದ ಮೇಲೆದ್ದಿಲ್ಲ.

ಅದ್ಯಾವುದೋ ಸೀರಿಯಲ್‍ನಲ್ಲಿ ಅತಿಭಯಂಕರ ಲಕ್ಷ್ಮಿ ವೃತ ( ;-) ) ಮಾಡಿ ನಾಯಕ ಬದುಕಿ ಉಳಿದನಂತೆ. ನಮ್ಮಲ್ಲಿ ಒಬ್ಬರು ಬಂದು ಆ ಪುಸ್ತಕ ಕೇಳಿದರು. ಇಲ್ಲವಲ್ಲಾ ಎಂದು ನಾವು ವಿಶಾದಪಟ್ಟು ಅವರನ್ನು ಹಿಂದೆ ಕಳಿಸಿದೆವು. ಆದರೆ ಮರುದಿನದ ಪಾರ್ಸೆಲ್ಲಿನಲ್ಲಿ ಬೆಂಗಳೂರಿನ ಯಾವುದೋ ಹೆಸರೇ ಕೇಳಿರದ ಪ್ರಕಾಶಕರ ಸೀಲ್ ಹೊತ್ತು ನಮ್ಮ ಹಂಚಿಕೆದಾರರ ಮೂಲಕ ಬಂತೇ ಬಂತು ಭಯಂಕರ ಲಕ್ಷ್ಮಿಯ ಭಯಂಕರ ಪುಸ್ತಕ (!) ನೋಡಿದರೆ ಕೆಟ್ಟ ಭಾಷೆಯಲ್ಲಿ ಏನೋ ಭಯಂಕರ ಮಂತ್ರ! ಈ ಪೂಜೆಯನ್ನು ಮಾಡಿ ಪೂಜೆಯಲ್ಲಿ ಈ ಪುಸ್ತಕದ ಎಂಟು ಪ್ರತಿಯನ್ನು ಬ್ರಾಹ್ಮಣರಿಗೆ ಹಂಚಬೇಕಂತೆ. (ಉಚಿತವಾಗಿ!) ವಾಹ್! ಭಲೇ! ದೇವರು ಪುಸ್ತಕದ ಬ್ರಾಂಡ್ ಅಂಬ್ಯಾಸಿಡರ್ ಆದದ್ದನ್ನೂ ನೋಡಿದ್ದಾಯಿತು!

ಎಂಥಾ ಕಾಲವಯ್ಯ! ಇದು ಎಂಥಾ ಕಾಲವಯ್ಯ! ಆದರೆ ಯಾರನ್ನೇ ಕೇಳಿ, ಅಯ್ಯೋ ಈಗಿನ ಸೀರಿಯಲ್ಲೋ.... ದರಿದ್ರ.. ದರಿದ್ರ... ಎನ್ನುವವರೇ ಎಲ್ಲ. ಹಾಗಾದರೆ ಇದನ್ನು ನೋಡುವವರು ಯಾರು? ಯಾಕೆ? ಆ ಸಂದರ್ಭದಲ್ಲಿ ಅವರು ತಮ್ಮ ತಲೆಯನ್ನು ಎಲ್ಲಿಟ್ಟಿರುತ್ತಾರೆ? ಇದನ್ನು ಸರಿಪಡಿಸುವುದು ಹೇಗೆ? ಎಂದಿತ್ಯಾದಿ ಯೋಚಿಸುತ್ತಾ ಇದ್ದೇನೆ.

Rating
No votes yet

Comments