ಕನ್ನಡದವರು ಏಕೆ ಹೀಗೆ?

ಕನ್ನಡದವರು ಏಕೆ ಹೀಗೆ?

ನಾನು ಕೆಲಸ ಮಾಡುವುದು ಭಾರತೀಯ ವಾಯು ಸೇನೆಯಲ್ಲಿ. ಹೆಚ್ಚಾಗಿ ಉತ್ತರ ಭಾರತದಲ್ಲಿ ತಿರುಗಿಕೊಂಡಿರುವವನು. ೯೨ರಿಂದ ೯೬ರವರೆಗೆ ದೆಹಲಿಯಲ್ಲಿ ಇದ್ದೆ. ಉತ್ತರ ಭಾರತ ಶೈಲಿಯ ಊಟ ತಿಂಡಿಗಳಿಂದ ಬೇಸರ ಬಂದಾಗ ನೇರ ತಲಪುವ ಸ್ಥಳ ಮೋತಿ ಬಾಗಿನ ’ದೆಹಲಿ ಕನ್ನಡ ಸಂಘ’. ಗಲ್ಲಾದಲ್ಲಿ ಕುಳಿತಿರುವ ಮಾಲಕರ ಜೊತೆ, ಮಾಣಿಗಳ ಜೊತೆ ಕನ್ನಡ ಮತ್ತು ತುಳುವಿನಲ್ಲಿ ಮಾತನಾಡಿ, ಉಡುಪಿ ಊಟದ ಸವಿಯುಂಡರೆ ಕನ್ನಡದ ನೆಲದ ನೆನೆಪಾಗುತ್ತಿತ್ತು.

ಇತ್ತೀಚೆಗೆ ದೆಹಲಿಗೆ ಹೋಗಬೇಕಾಗಿ ಬಂತು, ತುಂಬಾ ಸಮಯದ ನಂತರ. ಸರಿ, ಸಿಕ್ಕಿದ ಅವಕಾಶವೆಂದುಕೊಂಡು ದೆಹಲಿ ಕನ್ನಡ ಸಂಘಕ್ಕೆ ಹೋದೆ. ಅಲ್ಲಿ ಆದ ಅನುಭವ ನನ್ನನ್ನು ತೀವ್ರ ಬೇಸರಕ್ಕೊಳಮಾಡಿತು. ಗಲ್ಲಾದಲ್ಲಿ ಕುಳಿತಿರುವವರನ್ನು ಕಂಡ ಕೂಡಲೆ ತಮಿಳರು ಎಂದು ಅರಿತೆ. ನನ್ನ ಅರಿವು ತಪ್ಪಾಗಿರಲಿ ದೇವರೇ ಎಂದುಕೊಳ್ಳುತ್ತಾ ಕುಳಿತೆ. ಬಂದ ಮಾಣಿಗೆ ಕನ್ನಡದಲ್ಲಿ ಮಸಾಲೆ ದೋಸೆ ತರಲು ಹೇಳಿದೆ. ಆತ "ಕ್ಯಾ ಚಾಹಿಯೆ ಸಾಬ್" ಅಂದ. ಸರಿ, ಹಿಂದಿಯಲ್ಲಿ ಪುನಃ ಅದನ್ನೇ ಹೇಳಿದೆ.

ತಿಂದು ಮುಗಿಸುವಾಗ ಅಡುಗೆಯವರೂ ಕನ್ನಡದವರಲ್ಲ ಎಂದು ದೋಸೆ-ಕಾಫಿಗಳ ರುಚಿಯೇ ಸಾರಿ ಹೇಳಿತು. ದುಡ್ಡು ಕೊಡಲು ಗಲ್ಲಾಕ್ಕೆ ಹೋದಾಗ ಆಘಾತ ಕಾದಿತ್ತು!! ಗಲ್ಲಾದ ಮೇಲೆ ಯಾವುದೋ ಸ್ವಾಮಿಯವರ ಪ್ರವಚನದ ತಮಿಳು ಕರಪತ್ರಗಳನ್ನು ಹಂಚಲಾಗುತ್ತಿತ್ತು!!!

ದೆಹಲಿಯಲ್ಲಿ ಎಷ್ಟೋ ಕನ್ನಡದ ಉದ್ಯಮಿಗಳಿದ್ದಾರೆ, ಕನ್ನಡದವರ ಹೋಟೆಲುಗಳಿವೆ. ಆದರೆ ಪ್ರತಿಷ್ಠಿತ ದೆಹಲಿ ಕನ್ನಡ ಸಂಘದಲ್ಲಿ ಹೋಟೆಲು ನಡೆಸಲು ತಮಿಳರೇ ಸಿಕ್ಕರೆ? ಸಂಘದ ಅಧ್ಯಕ್ಷರಿಗೆ ಮನದಲ್ಲೇ ಬೈದುಕೊಂಡೆ.

ನಮ್ಮ ಕನ್ನಡದವರು ಯಾಕೆ ಹೀಗೆ?

Rating
No votes yet

Comments