ನಮಗೆ ಹೊಸ ರಾಷ್ಟ್ರಗೀತೆ ಬೇಕೆ?

ನಮಗೆ ಹೊಸ ರಾಷ್ಟ್ರಗೀತೆ ಬೇಕೆ?

ಭರತಭೂಮಿ ಛಪ್ಪನೈವತ್ತಾರು ದೇಶಗಳ ನಾಡು. ಬ್ರಿಟೀಷರ ತೊತ್ತುಗಳಾಗಿದ್ದಾಗ, ನಮ್ಮಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿ, ಖಂಡ ಭಾರತವನ್ನು ಅಖಂಡವಾಗಿಸಿ, ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ, ಸ್ವಾತಂತ್ರವನ್ನು ಪಡೆಯಲು ‘ವಂದೇ ಮಾತರಂ‘ ಗೀತೆ ನೆರವಾಗಿದೆ ಎಂಬುದು ಒಂದು ಐತಿಹಾಸಿಕ ಸತ್ಯ. ಇದನ್ನು ಯಾರು ಅಲ್ಲಗಳೆಯುವುದಿಲ್ಲ. ತಾಯಿನಾಡನ್ನು ತನ್ನ ತಾಯಿಯಂತೆ ಕಾಣುವ ಜಾಯಮಾನ ಇಲ್ಲಿನ ಸಂಸ್ಕೃತಿಗೆ ಅನುಗುಣವಾಗಿದೆ. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಅರ್ಧಗಂಟೆ: ಬಂಕಿಮ ಚಂದ್ರ ಚಟರ್ಜಿ ಅವರು ಒಂದು ಪತ್ರಿಕೆಯನ್ನು ನಡೆಸುತ್ತಿದ್ದರು. ಪುಟ ವಿನ್ಯಾಸಕ ಬಂದು, ಒಂದಷ್ಟು ಸ್ಥಳ ಉಳಿದಿದೆ, ಅದನ್ನು ತುಂಬಲು ಏನನ್ನಾದರೊ ಬರೆದು ಕೊಡಿ ಎಂದು ಕೇಳಿದಾಗ, ಬಂಕಿಮರು ಅವನಿಗೆ ಅರ್ಧ ಗಂಟೆ ಬಿಟ್ಟು ಬರಲು ಹೇಳಿದರು. ಅರ್ಧ ಗಂಟೆಯ ನಂತರ ಬಂದಾಗ ಅವನಿಗೆ ಒಂದುಹಾಳೆಯನ್ನು ಕೊಟ್ಟರು. ಅದರಲ್ಲಿ ‘ವಂದೇ ಮಾತರಂ‘ ಎಂಬ ಗೀತೆಯಿತ್ತು. ಅದನ್ನು ಓದಿದ ಪುಟ ವಿನ್ಯಾಸಕ, ಅರ್ಧ ಸಂಸ್ಕೃತ ಹಾಗೂ ಅರ್ಧ ಬಂಗಾಳಿಯಲ್ಲಿರುವ ಈ ಗೀತೆಯನ್ನು ಯಾರು ತಾನೇ ಓದುತ್ತಾರೆ ಎಂದು ಅನುಮಾನವನ್ನು ವ್ಯಕ್ತಪಡಿಸಿದನು. ಆಗ ಬಂಕಿಮರು ನಗುತ್ತಾ ಇನ್ನು ೨೫ ವರ್ಷಗಳಲ್ಲಿ ಈ ಗೀತೆ ಎಲ್ಲ ಭಾರತೀಯರ ತುಟಿಗಳ ಮೇಲಿರುತ್ತದೆ ನೋಡು ಎಂದರು. ಇದು ನಡೆದದ್ದು ಸೆಪ್ಟೆಂಬರ್ ೭, ೧೯೭೬. ಬಂಕಿಮರು ೧೮೮೨ರಲ್ಲಿ ‘ಆನಂದಮಠ‘ ಎಂಬ ಕಾದಂಬರಿಯನ್ನು ಬರೆಯುತ್ತಿದ್ದರು. ಅದರಲ್ಲಿ ವಂದೇ ಮಾತರಂ ಹಾಡನ್ನು ಸೇರಿಸಿದರು. ಕಾದಂಬರಿಯ ಮೂಲಕ ಇದು ಬಂಗಾಳದಲ್ಲಿ ಎಲ್ಲರಿಗೂ ಒಮ್ಮೆಲೆ ಪರಿಚಯವಾಗಿಬಿಟ್ಟಿತು. ಮೊದಲ ಎರಡು ಪದ್ಯಗಳಲ್ಲಿ ಭಾರತ ದೇಶದ ಸುಂದರ ವರ್ಣನೆ. ಉಳಿದ ನಾಲ್ಕು ಪದ್ಯಗಳಲ್ಲಿ ಭಾರತವನ್ನು ದುರ್ಗೆ ಹೋಲಿಸಿ ವರ್ಣನೆ. ಅದ್ಭುತವಾಗಿತ್ತು ಪದ್ಯ! ಬಂಗಾಳಿ ಜನರು ದುರ್ಗೆಯನ್ನು ತಮ್ಮ ಮಗಳು, ಬಂಗಾಳವೇ ಆಕೆಯ ತಾಯಿ ಮನೆ ಎಂದು ಭಾವಿಸುತ್ತಾರೆ. ಹಾಗಾಗಿ ಈ ಗೀತೆ ಜನಪ್ರಿಯವಾಯಿತು. ಕ್ರಮೇಣ ಈ ಗೀತೆಯು ಭಾರತಾದ್ಯಂತ ಹರಡಿ ಸ್ವಾತಂತ್ರ್ಯಹೋರಾಟಗಾರರ ಉಸಿರಾಯಿತು.

“ರಾಷ್ಟ್ರಗೀತೆ“: ೧೮೯೬ ಕಲ್ಕತ್ತ ಕಾಂಗ್ರೆಸ್ ಅಧಿವೇಶನದಲ್ಲಿ ಶ್ರೀ ರವೀಂದ್ರನಾಥ ಠಾಕೂರ್ ಅವರು ಈ ಗೀತೆಯನ್ನು ಹಾಡಿದರು. ಕಾಂಗ್ರೆಸ್ಸಿಗರು ಈ ಗೀತೆಯ ಮೂಲಕ ಹೋರಾಟಗಾರರನ್ನು ಒಟ್ಟುಗೂಡಿಸಬಹುದು ಎಂಬ ವಿಷಯವನ್ನು ಮನಗಂಡರು. ೧೯೦೫ ರ ಬೆನಾರಸ್ ಕಾಂಗ್ರೆಸ್ ಅಧಿವೇಶನದಲ್ಲಿ, ಇದನ್ನು ‘ರಾಷ್ಟ್ರಗೀತೆ‘ ಎಂದು ಅಂಗೀಕರಿಸಿದರು. ಸರಳಾದೇವಿ ಚೌಧುರಾಣಿಯವರಿಂದ ಹಾಡಿಸಿದರು. ಈ ಅಧಿಕೃತ ಅಂಗೀಕಾರದಿಂದ ವಂದೇ ಮಾತರಂ ಅಪಾರ ಜನಪ್ರಿಯತೆಯನ್ನು ಪಡೆಯಿತು.

ವಿವಾದ: ಬಂಕಿಮಚಂದ್ರ ಚಟರ್ಜಿಯವರ ವಂದೇ ಮಾತರಂ ಗೀತೆಯಲ್ಲಿ ಆರು ಪದ್ಯಗಳಿವೆ. ಮೊದಲ ಎರಡು ಪದ್ಯದಲ್ಲಿ ಭರತಭೂಮಿಯ ಸುಂದರ ವರ್ಣನೆಯಿದೆ. ಮುಂದಿನ ನಾಲ್ಕು ಪದ್ಯಗಳಲ್ಲಿ ಭರತಭೂಮಿಯನ್ನು ದುರ್ಗೆಗೆ ಹೋಲಿಸಿ ಬರೆದ ಸುಂದರ ಚಿತ್ರವಿದೆ. ತಾಯಿಗೂ ತಾಯಿ ಭೂಮಿಗೂ ವ್ಯತ್ಯಾಸ ಕಾಣದ ಭಾರತೀಯರು ಈ ಗೀತಯನ್ನು ಮನಃಪೂರ್ವಕವಾಗಿ ಒಪ್ಪಿದರು. ಆದರೆ ‘ಅಲ್ಲಾನ ಹೊರತಾಗಿ ಮತ್ಯಾರಿಗೂ ತಲೆಬಾಗೆವು‘ ಎಂಬ ನಿಲುವಿನ ಮುಸ್ಲೀಮರು ಈ ಗೀತೆಯನ್ನು ವಿರೋಧಿಸಿದರು. ಅದಕ್ಕೆ ಪೂರಕವಾಗಿ ರವೀಂದ್ರನಾಥ ಠಾಕೂರ್ ಅವರು ಸುಭಾಶ್ ಚಂದ್ರ ಬೋಸರಿಗೆ ಪತ್ರ ಬರೆದು (೧೯೩೭) “ಹತ್ತು ತಲೆಗಳ ದುರ್ಗೆಯನ್ನು ಯಾವ ಮುಸಲ್ಮಾನನು ತಾಯಿನಾಡು ಎಂದು ಒಪ್ಪುವುದಕ್ಕೆ ಸಾಧ್ಯವಿಲ್ಲ‘ ಎಂದರು. ೧೯೩೭. ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ನೇತಾರರು ಈ ಬಗ್ಗೆ ವಿಚಾರ ಮಾಡಿದರು. ಮೊದಲು ಎರಡು ಪದ್ಯಗಳನ್ನು ಮಾತ್ರ ರಾಷ್ಟ್ರಗೀತೆಯೆಂದು ಅಂಗೀಕರಿಸಬೇಕೆಂದು ಉಳಿದ ನಾಲ್ಕನ್ನು ಬಿಟ್ಟುಬಿಡಬೇಕೆಂಬ ಅಂತಿಮ ತೀರ್ಮಾನಕ್ಕೆ ಬಂದರು. ಆ ನಂತರ ಎಲ್ಲ ಅಧಿವೇಶನದಲ್ಲಿ ಮೊದಲ ಎರಡು ಪದ್ಯಗಳನ್ನು ಮಾತ್ರ ಹಾಡಲಾರಂಭಿಸಿದರು.

ಯಾವುದು?  ಆಗಸ್ಟ್ ೧೫, ೧೯೪೭ ರಲ್ಲಿ ನಮಗೆ ಸ್ವಾತಂತ್ರ್ಯ ಬಂದಾಗ ನಮ್ಮ ರಾಷ್ಟ್ರಗೀತೆ ಯಾವುದಾಗಬೇಕು ಎಂಬ ಪ್ರಶ್ನೆ ಬಂದಿತು. ಅಂತಿಮವಾಗಿ ರವೀಂದ್ರನಾಥ ಠಾಕೂರ್ ಬರೆದ ಜನಗಣಮನ ಆಗಬೇಕೋ ಅಥವಾ ಬಂಕಿಮಚಂದ್ರ ಚಟರ್ಜಿ ಬರೆದ ವಂದೇ ಮಾತರಂ ಆಗಬೇಕೋ ಎಂಬ ಚರ್ಚೆ ಆರಂಭವಾಯಿತು. ೧೯೧೧ ರಲ್ಲಿ ಪಂಚಮ ಜಾರ್ಜನ ಸಿಂಹಾಸನಾರೋಹಣ ಸಮಾರಂಭ ನಡೆಯಿತು. ಅದರ ಅಂಗವಾಗಿ ರವೀಂದ್ರನಾಥ್ ಠಾಕೂರ್ ಅವರು ‘ಜನಗಣಮನ ಅಧಿನಾಯಕ ಜಯಹೇ‘ ಗೀತೆಯನ್ನು ಡಿಸೆಂಬರ್ ರಚಿಸಿದರು. ಡಿಸೆಂಬರ್ ೨೭, ೧೯೧೧ ರ ಕಲ್ಕತ್ತ ಅಧಿವೇಶನದಲ್ಲಿ, ಪಂಚಮ ಜಾರ್ಜನ ಭಾರತಯಾತ್ರೆಯ ಸ್ವಾಗತ ಗೀತೆಯನ್ನಾಗಿ ಇದನ್ನು ಹಾಡಲಾಯಿತು. “ಭಾರತೀಯ ಜನ-ಗಣ-ಮನಗಳ ಅಧಿನಾಯಕಾನಾಗಿರುವ ಹೇ ಪಂಚಮ ಜಾರ್ಜನೇ ನಿನಗೆ ಸ್ವಾಗತ“ ಎಂಬುದು ಈ ಹಾಡಿನ ಆಶಯವಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಅಂದಿನ ಪತ್ರಿಕೆಗಳನ್ನು ಗಮನಿಸಬಹುದು. ಆದರೆ ಈ ಗೀತೆಯಲ್ಲಿ ಬರುವ ‘ಭಾಗ್ಯವಿಧಾತ‘ ಪಂಚಮಜಾರ್ಜ್ ಅಲ್ಲ, ಆತ “ಭಗವಂತ“ ಎಂಬ ವಿವರಣೆಯನ್ನು ಇಂದಿನ ದಿನಗಳಲ್ಲಿ ನೀಡಲಾಗುತ್ತಿದೆ. ಆದರೆ ಠಾಕೂರರು ಪಂಚಮ ಜಾರ್ಜನ ವಂದಿಮಾಗದರಾಗಿ ಬರೆದಿದ್ದಾರೆ ಎನ್ನುವುದು ಒಂದು ಐತಿಹಾಸಿಕ ಸತ್ಯವಾಗಿದೆ.

ವಿಜಯ: ಅಂತಿಮವಾಗಿ ಠಾಕೂರರ ಜನಗಣಮನವನ್ನು ರಾಷ್ಟ್ರಗೀತೆಯನ್ನಾಗಿ ಆಯ್ಕೆ ಮಾಡಲಾಯಿತು. ವಂದೇ ಮಾತರಂ ಗೀತೆಯನ್ನು ಪಾಶ್ಚಾತ್ಯ ವಾದ್ಯಸಂಗೀತದಲ್ಲಿ ನುಡಿಸುವುದು ಕಷ್ಟ, ಜನಗಣಮನವನ್ನು ನುಡಿಸುವುದು ಸುಲುಭ ಎಂಬ ಕಾರಣವನ್ನು ನೀಡಿ, ವಂದೇ ಮಾತರಮ್ಮನ್ನು ತಳ್ಳಿಹಾಕಿ ಜನಗಣಮನವನ್ನು ರಾಷ್ಟ್ರಗೀತೆಯನ್ನಾಗಿ ಸ್ವೀಕರಿಸಿದರು. ಮುಸ್ಲೀಮರನ್ನು ಸಂತೃಪ್ತಗೊಳಿಸಿದರು. ಆದರೆ ಬ್ವಹುಸಂಖ್ಯಾತ ಹಿಂದೂ ಕಣ್ಣೀರನ್ನು ಒರೆಸಲು ಡಾ.ರಾಜೇಂದ್ರಪ್ರಸಾದ್ ಅವರು ಜನವರಿ ೨೬, ೧೯೫೦ರಲ್ಲಿ ಲೋಕಸಭೆಯಲ್ಲಿ ‘ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಸ್ಥಾನ ಪಡೆದಿರುವ ‘ವಂದೇ ಮಾತರಂ‘ ಗೀತೆಯನ್ನು ಜನಮನಗಣ ಗೀತೆಗೆ ಸರಿಸಮಾನವಾಗಿ ರಾಷ್ಟ್ರಗೀತೆಯೆಂದು ಪರಿಗಣಿಸತಕ್ಕದ್ದು‘ ಎಂದು ಘೋಷಿಸಿದರು.

ಸತ್ಯ: ಒಂದು ರಾಷ್ಟ್ರಕ್ಕೆ ಎರಡು ರಾಷ್ಟ್ರಗೀತೆಗಳು ಇರಲು ಸಾಧ್ಯವಿಲ್ಲ. ಆದರೆ ನಮ್ಮ ಸಂವಿಧಾನ ಜನಗಣಮನ ಹಾಗೂ ವಂದೇ ಮಾತರಂ ಎರಡನ್ನೂ ರಾಷ್ಟ್ರಗೀತೆಗಳೆಂದು ಘೋಷಿಸಿದೆ. ಆದರೆ ಅಧಿಕೃತವಾಗಿ ಎಲ್ಲಕಡೆ ಜನಗಣಮನವನ್ನೇ ಹಾಡಲಾಗುತ್ತದೆ. ವಂದೇ ಮಾತರಂ ಏನಿದ್ದರೂ ಆಕಾಶವಾಣಿ ಬೆಳಗಿನ ಪ್ರಸಾರದ ಆರಂಭಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ವಂದೇ ಮಾತರಂ ಗೀತೆಯನ್ನೂ ಸಹಾ ರಾಷ್ಟ್ರಗೀತೆಯೆಂದು ಕರೆದಿರುವುದು ಒಂದು ರಾಜಕೀಯ ತಂತ್ರವಾಗಿ ಮಾತ್ರ ಕಾಣುತ್ತದೆ.

ಶತಮಾನ: ವಂದೇ ಮಾತರಂ ಗೀತೆಯ ರಚನೆಯಾದದ್ದು ಸೆಪ್ಟೆಂಬರ್ ೭, ೧೮೮೬ರಂದು. ಇದನ್ನು ರಾಷ್ಟ್ರಗೀತೆಯೆಂದು ಪರಿಗಣಿಸಿದ್ದು ೧೯೦೫ ರಲ್ಲಿ. ಹಾಗಾಗಿ ಈ ದಿನ ಈ ಗೀತೆ ರಚನೆಯಾಗಿ ೧೩೦ ವರ್ಷ ಹಾಗೂ ರಾಷ್ಟ್ರಗೀತೆಯಾಗಿ ಅಂಗೀಕಾರವಾಗಿ ೧೦೦ ವರ್ಷಗಳಾಗಿವೆ. ಈ ಒಂದು ಸಂದರ್ಭದಲ್ಲಿ, ಸೆಪ್ಟೆಂಬರ್ ೭, ೨೦೦೬ ರಂದು ಈ ಗೀತೆಯನ್ನು ರಾಷ್ಟ್ರಾದ್ಯಂತ ಹಾಡಬೇಕೋ ಅಥವಾ ಬೇಡವೋ ಎಂಬ ಪ್ರಶ್ನೆ ಹುಟ್ಟಿದೆ. ಬಿಜೆಪಿ ಆಡಳಿತ ರಾಜ್ಯಗಳು ಹಾಡಬೇಕು ಎಂದರೆ ಕಾಂಗ್ರೆಸ್ ಆಡಳಿತದ ರಾಜ್ಯಗಳು ನಿಮ್ಮಿಷ್ಟ ಎಂದುಬಿಟ್ಟಿವೆ. ಈ ಹಿನ್ನೆಲೆಯಲ್ಲಿ ದೇಶಪ್ರೇಮಕ್ಕಿಂತ ಕೊಳೆತ ರಾಜಕೀಯದ ಗಮಲು ಅಧಿಕವಾಗಿದೆ. ಅಲ್ಪಸಂಖ್ಯಾತ ಮುಸ್ಲೀಂ ಹಾಗೂ ಕ್ರಿಶ್ಚಿಯನ್ನರನ್ನು (ಕೆಲವು ಕ್ರಿಶ್ಚಿಯನ್ ಶಾಲೆಗಳಲ್ಲಿ ಜನಗಣಮನವನ್ನೂ ಹಾಡುವುದಿಲ್ಲ) ಮುಖ್ಯವಾಹಿನಿಯಲ್ಲಿ ಕರೆತರುವುದರ ಬದಲು ಅವರು ಪ್ರತ್ಯೇಕವಾಗಿ ಇರುವಂತೆಯೇ ನೋಡಿಕೊಳ್ಳಲಾಗುತ್ತದೆ. ರಾಷ್ಟ್ರಗೀತೆ ಎನ್ನುವುದು ಜಾತಿ ಮತ ಧರ್ಮಗಳನ್ನು ಮೀರಿ ಇರಬೇಕು ಎಂಬ ಕನಿಷ್ಠ ತಿಳುವಳಿಕೆ ಯಾರಿಗೂ ಇಲ್ಲವಾಗಿದೆ.

ಹೊಸ ಗೀತೆ?  ಜನಗಣಮನವು ಪಂಚಮ ಜಾರ್ಜನ ಭಟ್ಟಂಗಿ ಗೀತೆಯಾದರೆ, ವಂದೇ ಮಾತರಂ ಮುಸ್ಲೀಮರ ಮನಸ್ಸಿಗೆ ನೋವನ್ನುಂಟು ಮಾಡುತ್ತದೆ, ಅದನ್ನು ರಾಷ್ಟ್ರಗೀತೆಯನ್ನಾಗಿ ಮಾಡಲು ಸಾಧ್ಯವೇ ಇಲ್ಲ ಎಂದು ವೋಟ್ ಪ್ರಿಯ ರಾಜಕಾರಣಿಗಳ ನಿಲುವಾದರೆ, ಓರ್ವ ಸಾಮಾನ್ಯ ಭಾರತೀಯ ಹೆಮ್ಮೆ ಪಡಬಹುದಾದಂತಹ ಒಂದು ಹೊಸ ರಾಷ್ಟ್ರಗೀತೆಯನ್ನು ನಾವು ಇನ್ನಾದರೂ ರೂಪಿಸಿಕೊಳ್ಳಬಹುದಲ್ಲವೆ! ಭಾರತವು ಜಗತ್ತಿಗೆ ವೇದ, ಉಪನಿಷತ್ತು, ಗೀತೆ, ರಾಮಾಯಣ, ಮಹಾಭಾರತಗಳಂತಹ ಮಹಾನ್ ಕೃತಿಗಳನ್ನು ನೀಡಿದೆ. ಇಂತಹ ದೇಶವು ತನಗೆ ಸಮ್ಮತವಾಗುವಂತಹ ಒಂದು ಗೀತೆಯನ್ನು ರಚಿಸಿಕೊಳ್ಳಲು ಸಾಧ್ಯವಿಲ್ಲವೇ? ‘ಮಾನವೀಯತೆಯೇ ದೊಡ್ಡದು‘ ಎಂಬ ಆಶಯದ ಒಂದು ಹೊಸ ಗೀತೆಯನ್ನು ರಚಿಸಿ, ಅದನ್ನು ರಾಷ್ಟ್ರಗೀತೆಯನ್ನಾಗಿ ಮಾಡಬಹುದಲ್ಲವೆ?

(ಟಿಪ್ಪಣಿ :- ಮೂಲಲೇಖನವನ್ನು ಯೂನಿಕೋಡ್ ಗೆ ಬದಲಾಯಿಸಿ ಹಾಕಲಾಗಿದೆ - ನಿರ್ವಾಹಕರು )

Rating
No votes yet

Comments