ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!

ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!

ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು


ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು


 


ವಿಜಯ ಕರ್ನಾಟಕದ ತುಂಬೆಲ್ಲಾ ಈಗ ಆಂಗ್ಲ ಪದಗಳ ದಾಳಿ


ಕನ್ನಡವನೇ ಮರೆಸುವಂತಿದೆ ಅದೀಗ ಹೊಸ ರೂಪವ ತಾಳಿ


 


ಲವಲvk ಎಂಬ ಹೊಸ ಪತ್ರಿಕೆ ಕಾದಿಹುದು ನೋಂದಣಿಗಾಗಿ


ಪ್ರತಿಭಟಿಸಲೇ ಬೇಕು ಕನ್ನಡವ ಕೊಲ್ಲುವವರನು ನಾವೊಂದಾಗಿ


 


ಮೊದಲೇ ತಪ್ಪುಗಳ ರಾಶಿಯಲಿ ಕನ್ನಡ ಕುಲಗೆಟ್ಟು ಹೋಗಿತ್ತು


ಈಗ ಆಂಗ್ಲ ಪದಗಳ ಬೆರಕೆಯಿಂದ ಸತ್ಯನಾಶ ಆದಂತಾಯ್ತು


 


ಯಾವ ಸಾಧನೆಗಾಗಿ ಈ ಪರಿಯ ಹುಚ್ಚಾಟವೋ ನಾನರಿಯೇ


ಹೆತ್ತ ತಾಯಿಯಿಂದಲೇ ಕ್ಯಾಬರೇ ಕುಣಿಸುವ ಮಹದಾಸೆಯೇ


 


ಟೈಮ್ಸ್ ಆಫ್ ಇಂಡಿಯಾವನಾಗಲೇ ಕಂಗ್ಲೀಷೀಕರಿಸಿಯಾಗಿದೆ


ಈಗ ನೋಡಿ ವಿ.ಕ. ವಿಚಿತ್ರ ಕರ್ನಾಟಕವಾಗಿ ಮಾರ್ಪಾಡಾಗಿದೆ


 


ಅಪ್ಪಟ ಕನ್ನಡವನು ನಮ್ಮ ಪತ್ರಿಕೆಗಳಲ್ಲಾದರೂ ಕಾಣಬಹುದಿತ್ತು


ಇದೀಗ ಈ ಹೊಸ ತಲೆಗೆಡುಕತನದಿಂದ ಅದಕೂ ಬಂತೇ ಕುತ್ತು


 


ಸರ್ಕಾರೀ ಮದ್ಯದ ಅಂಗಡಿಗಳಲ್ಲಿದ್ದವು ಕೆಂಪು ನಾಮ ಫಲಕಗಳು


ದಿನಪತ್ರಿಕೆಗಳಲೀಗ ಮತ್ತೇರಿಸುವ ಕೆಂಪು ಬಣ್ಣದ ತಲೆ ಬರಹಗಳು


 


ಇನ್ನಾದರೂ ಎಚ್ಚೆತ್ತು ಮರಳಿ ಬಂದು ಬಿಡಿ ನಮ್ಮ ಸವಿಗನ್ನಡಕೆ


ನಮ್ಮದು ಸದಾ ಚೆನ್ನ ಇವೆಲ್ಲಾ ಏನಿದ್ದರೂ ಬರೇ ನಾಲ್ಕು ದಿನಕೆ


 


ಹೊಗಳಿ ಬರೆದ ನೂರಾರು ಪತ್ರಗಳು ಬೆಳಕ ಕಂಡವು ವಿ.ಕ.ದಲ್ಲಿ


ನನ್ನ ಮಾತುಗಳು ಕಂಡಿಲ್ಲ ಹಾಗಾಗಿ ಪ್ರಕಟಿಸುತ್ತಿದ್ದೇನೆ ನಾನಿಲ್ಲಿ


************************************


 


-ಆತ್ರಾಡಿ ಸುರೇಶ್ ಹೆಗ್ಡೆ


 

Rating
No votes yet

Comments