T20 = ತೇಜಸ್ವಿ ಟ್ವೆಂಟಿ : ಅಲೆಮಾರಿಯ ಅಂಡಮಾನ್

T20 = ತೇಜಸ್ವಿ ಟ್ವೆಂಟಿ : ಅಲೆಮಾರಿಯ ಅಂಡಮಾನ್

 


T20 = ತೇಜಸ್ವಿ ಟ್ವೆಂಟ ಮಾಲಿಕೆಯಲ್ಲಿ ಇದು ನನ್ನ ಎರಡನೆಯ ಪ್ರಯತ್ನ. ಈ ಮೊದಲಿಗೆ ಸಹಜಕೃಷಿ ಪುಸ್ತಕವನ್ನು ಈ ಪ್ರಯೋಗಕ್ಕೆ ಬಳಸಿಕೊಂಡಿದ್ದೆ. ಈಗ 'ಅಲೆಮಾರಿಯ ಅಂಡಮಾನ್' ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. (ಈ ಕೃತಿಯಲ್ಲಿ ಅಲೆಮಾರಿಯ ಅಂಡಮಾನ್ ಬರಹವಲ್ಲದೆ, ಮಹಾನದಿ ನೈಲ್' ಎಂಬ ಬರಹವೂ ಸೇರಿದೆ. ಪ್ರಸ್ತುತ ನಾನು ಅಲಮೇರಿಯ ಅಂಡಮಾನ್ ಕಥೆಯನ್ನು ಮಾತ್ರ ಈ 20-20ಯಲ್ಲಿ ಬಳಸಿಕೊಂಡಿದ್ದೇನೆ.)
ಮತ್ತೊಮ್ಮೆ ಓದುಗರಲ್ಲಿ ನನ್ನದೊಂದು ವಿನಂತಿ. ಇಲ್ಲಿನ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು.
ಈಗಾಗಲೇ ಅಲೆಮಾರಿಯ ಅಂಡಮಾನ್ ಕಥೆಯನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ಅಲೆಮಾರಿಯ ಅಂಡಮಾನ್ ಕಥೆಯನ್ನು ಓದಿದವರೂ ಮತ್ತೊಮ್ಮೆ ಓದುವಂತಾದರೆ ಡಬಲ್ ಖುಷಿ ನನ್ನದು.

  ***



  1. ಯಾರಿಗೆ ತಾವಿರುವಲ್ಲೇ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದೂ ವ್ಯರ್ಥ.

  2. ನನಗಂತೂ ಪುಣ್ಯಕ್ಷೇತ್ರಗಳಿಗೆ, ಪವಿತ್ರ ತೀರ್ಥಗಳಿಗೆ, ಚಾರಿತ್ರಿಕ ಸ್ಥಳಗಳಿಗೆ, ಪ್ರವಾಸಿಧಾಮಗಳಿಗೆ ಭೇಟಿಕೊಡುವ ಹಂಬಲವಂತೂ ಕೊಂಚವೂ ಇಲ್ಲ.

  3. (ಪುಣ್ಯಕ್ಷೇತ್ರಗಳ) ಅಲ್ಲಿನ ಅರ್ಚಕರ ದೇವಸ್ಥಾನದ ಏಜಂಟರುಗಳ, ವಸತಿಗೃಹಗಳ ಜನ ಕಾಟ ಗಲಭೆಗಳನ್ನು ಕಂಡು ಹೇಸಿಹೋಗಿದ್ದೇನೆ.

  4. ತಲೆ ಬೋಳಿಸಿಕೊಂಡು, ಕಿಟಕಿಗಳಿಗೆಲ್ಲಾ ತಮ್ಮ ಒದ್ದೆ ಬಟ್ಟೆಗಳನ್ನು ನೇತುಹಾಕಿಕೊಂಡು, ಬಸ್ಸಿನೊಳಗೆಲ್ಲಾ ವಾಂತಿಮಾಡಿಕೊಳ್ಳುತ್ತಾ ಸಾಗುವ ಈ ಪ್ರವಾಸಿಗಳ ಜೊತೆ ಕಣ್ಣು ಮೂಗು ಇರುವ ನರಮನುಷ್ಯ ಪ್ರವಾಸ ಹೋಗಲು ಸಾಧ್ಯವೇ?

  5. ಪಕ್ಕಾ ಐಹಿಕವಾದಿಗಳಾದ ಈ ಅರ್ಚಕರು, ಏಜಂಟುರುಗಳು ಇವರ ಸ್ಪೆಷಲ್ ಪೂಜೆ, ಸೂಪರ್ ಪೂಜೆಗಳಿಂದ ಇವರ ಹುಂಡಿಗಳಿಗೆ ಹಣ ಹಾಕುವುದರಿಂದ ಯಾರಿಗಾದರೂ ಪುಣ್ಯ ಪ್ರಾಪ್ತಿ ಸಾಧ್ಯವೇ?

  6. ಮಾನವ ಪ್ರತಿಯೊಬ್ಬನೂ ಕೊನೆಗೂ ಸಾವಿನಲ್ಲಿ ಏಕಾಂಗಿ ಎನ್ನುವ ಕಠೋರ ಸತ್ಯವನ್ನು ಮರೆಸಲು ಹಿಂದೂಧರ್ಮ ಈ ರೀತಿ ಗಲಾಟೆ ಗದ್ದಲ ದೊಂಬಿ ಮೈಕುಗಳ ಮರೆ ಹೊಕ್ಕಿದೆಯೆ ಎನ್ನುವ ಅನುಮಾನ ಬರುತ್ತದೆ.

  7. ಈಗಿನ ಅವತಾರಪುರುಷರು ಬಿಡಿ, ಹುಟ್ಟುವಾಗಲೇ ಹುಂಡಿ ಕಾಣಿಕೆ ಡಬ್ಬಿಗಳನ್ನು ಕೈಯಲ್ಲಿ ಹಿಡಿದುಕೊಂಡೇ ಹುಟ್ಟುತ್ತಾರೆ.

  8. ಈ ಪ್ರವಾಶಿಧಾಮಗಳ ಒಳಚರಂಡಿ ವ್ಯವಸ್ಥೆಗಳೆಲ್ಲಾ ನಿರೋಧ್‌ಗಳು ಸಿಕ್ಕಿಹಾಕಿಕೊಂಡು ನೀರು ಹೋಗದಂತೆ ಕೆಟ್ಟಿರುತ್ತವೆ.

  9. ಅವ್ಯವಹಾರಗಳ ಆಗರಗಳಾಗಿರುವ ಈ ವಿಹಾರಧಾಮಗಳಿಗೆ ಹೋಗಿ ನಮ್ಮನ್ನು ಅವರೂ ಅವರನ್ನು ನಾವೂ ಪರಸ್ಪರ ಶಂಕೆಯಿಂದ ನೋಡುವುದರ ಬದಲು ಅಲ್ಲಿಗೆ ಹೋಗದಿರುವುದೇ ಮೇಲಲ್ಲವೇ?

  10. ಈ ಪುಣ್ಯಕ್ಷೇತ್ರಗಳು ದೇವಸ್ಥಾನಗಳು ಯಾವುವೂ ಇಲ್ಲದ ಜಾಗ ಅಂಡಮಾನ್ ಆಗಿದ್ದರೆ ನನ್ನಂಥ ಅಲೆಮಾರಿಗೆ ಅದೇ ಸರಿ.

  11. ನಮ್ಮ ಕಲ್ಪನೆಯ ‘ನಮಗೂ’ ನಿಜವಾದ ನಮಗೂ ವ್ಯತ್ಯಾಸವಿರುವುದರಿಂದಲೇ ನಮ್ಮ ಫೋಟೋಗಳು ನಮ್ಮ ಸರಿಯಾದ ಪ್ರತಿಬಿಂಬವಾಗಿಲ್ಲವೆಂದು ಅದನ್ನು ದೂಷಿಸುತ್ತೇವೆ.

  12. ದರಿದ್ರ ದೇಶ! ನೋಡಿ ಹೇಗಿದೆ. ಆ ಬಡತನ! ಆ ರಾಜಕಾರಣಿಗಳೂ! ಆ ಭ್ರಷ್ಟಾಚಾರ! ಆ ಜನಸಂಖ್ಯೆ! ಆ ಪರಿಸರ ನಾಶ! ಸಾಕಪ್ಪಾ! ಈ ಶನಿಯನ್ನು ಬಿಟ್ಟು ದೂರ ಹೋಗುವುದಕ್ಕೆ ನನಗೇನೋ ಸಂತೋಷವೇ ಆಗುತ್ತಿದೆ.

  13. ಕಂತ್ರಿ ರಾಜಕಾರಣಿಗಳ ಮುಖಾಂತರ, ಭ್ರಷ್ಟ ಅಧಿಕಾರಿಶಾಹಿಯ ಮುಖಾಂತರ, ಲಂಪಟ ಓಟುದಾರರ ಮುಖಾಂತರ ಕ್ಷಣಕ್ಷಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ದೇಶವನ್ನು ಪೃಏಮಿಸುವುದು ನಮಗೆ ಅಸಾಧ್ಯವಾಗಿ ಕಂಡಿತು.

  14. ಸಹಸ್ರಾರು ಮೈಲಿ ದೂರದ ಅಂಡಮಾನಿಗೆ ಶಿಕ್ಷೆ ಅನುಭವಿಸಲು ಅಥವಾ ಮರಣದಂಡನೆಗೆ ಹಿಂದೆಲ್ಲಾ ಹೋಗುತ್ತಿದ್ದ ಖೈದಿಗಳಿಗೆ ಏನೆನ್ನಿಸಿರಬಹುದು? ಭಾರತಕ್ಕೆ ಹೋರಾಡಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಏನೆನ್ನಿಸಿರಬಹುದು? ವೀರಸಾವರ್ಕರ್‌ಗೆ ಈ ಕ್ಷಣಗಳು ಹೇಗೆ ಕಂಡಿರಬಹುದು?

  15. ಸಾರ್ವಜನಿಕ ಸ್ವತ್ತು ಎಂದಾದ ಕೂಡಲೇ ಏನಾದರೂ ಮಾಡಿ ಅದನ್ನು ಹಾಳುಮಾಡುತ್ತಾರೆ. ಸಮುದ್ರದ ಮಧ್ಯೆ ಮುಳುಗಿಹೋಗುತ್ತೇವೆನ್ನುವ ಭಯ ಇಲ್ಲದಿದ್ದರೆ ಪ್ರಯಾಣಿಕರು ಹಡಗನ್ನೇ ತಮ್ಮ ಸೂಟ್ ಕೇಸಿಗೆ ತುಂಬಿಕೊಳ್ಳುತ್ತಿದ್ದರೋ ಏನೋ!

  16. ನನಗೆ ನನ್ನ ಕ್ಯಾಬಿನ್ನಿನಲ್ಲಿ ಇದ್ದ ಲೈಫ್ ಜಾಕೆಟ್ಟನ್ನು ನೋಡಿದಾಗೆಲ್ಲ ಕರಿ ನೀಲಿಯ ಸಮುದ್ರದ ಕರೆ ಕೇಳಿದಂತಾಗುತ್ತಿತ್ತು.

  17. ನಾವು ಎಲ್ಲಿಗಾದರೂ ಹೋದರೆ ಪ್ರವಾಸ ಮುಗಿಸಿ ವಾಪಸಾದ ನಂತರ ನಮ್ಮನ್ನು ವಿಚಾರಿಸಿ ವಿವರಗಳನ್ನು ಕೇಳುವ ಮಿತ್ರರ ದೃಷ್ಟಿಯನ್ನೂ ನಾವೂ ಪ್ರವಾಸದಲ್ಲಿ ಪರಿಗಣಿಸುತ್ತೇವೆ.

  18. ರಾಜೀವ್‌ಗಾಂಧಿ ನಮ್ಮ ಜನತೆಗೆ ಹತ್ತಿಸಿರುವ ಇಪ್ಪತ್ತೊಂದನೆಯ ಶತಮಾನದ ಪಿತ್ತ ನೋಡಿದರೆ ಇನ್ನು ಹತ್ತು ವರ್ಷಗಳೊಳಗಾಗಿ ಅಂಡಮಾನ್ ನಾಶವಾಗಬಹುದೆಂದು ನನಗನ್ನಿಸುತ್ತದೆ.

  19. ಮರಗಳಿದ್ದಲ್ಲಿ ಮಲೆಯಾಳಿಗಳನ್ನು ನೋಡಿದರೆ ಶಕುನ ನೋಡಿದಂತಾಗುತ್ತದೆ.

  20. ಪೂಜೆಯ ಭಟ್ಟನಿಗೆ ತೆಂಗಿನಕಾಯಿ ಒಡೆಯಲು ಸುತ್ತಮುತ್ತ ಯಾವ ಕಲ್ಲಾಗಲೀ ಕತ್ತಿಯಾಗಲೀ ಕಾಣಲಿಲ್ಲ. ಹಾಗಾಗಿ ಆತ ಕಾಯನ್ನು ಪಂಪ್ ಸೆಟ್ಟಿನ ಉಕ್ಕಿನ ಕವಚದ ಮೇಲೆ ಕುಕ್ಕಿದ. ಭಟ್ಟನ ಕೈಯಲ್ಲಿದ್ದ ತಿಪಟೂರಿನ ತೆಂಗಿನಕಾಯಿ ಹೇಗಿತ್ತೋ ಹಾಗೇ ಇತ್ತು! ಕಿರ್ಲೋಸ್ಕರ್ ಪಂಪ್ ಸೆಟ್ಟು ಮಾತ್ರ ಸರಿಯಾಗಿ ಎರಡು ಹೋಳಾಯ್ತು!

ಕೃತಿಯ ಹೆಸರು         :    ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್

ಲೇಖಕರು                 :    ಕೆ.ಪಿ. ಪೂರ್ಣಚಂದ್ರ ತೇಜಸ್ವಿ


ಪ್ರಕಾಶಕರು               :    ಪುಸ್ತಕ ಪ್ರಕಾಶನ, ಮೈಸೂರು

1990ರಲ್ಲಿ ಮೊದಲ ಮುದ್ರಣವಾಗಿದ್ದ ಈ ಕೃತಿ 2008ರ ಹೊತ್ತಿಗೆ ಒಂಬತ್ತು ಮುದ್ರಣಗಳನ್ನು ಕಂಡಿದೆ.

ಕೃತಿಯ ಬೆನ್ನುಡಿಯಿದು:
'ಅಲೆಮಾರಿಯ ಅಂಡಮಾನ್' ಕನ್ನಡ ಸಾಹಿತ್ಯದಲ್ಲಿ ಈವರೆಗೂ ಬಂದಿಲ್ಲದಹೊಸರೀತಿಯ ಪ್ರವಾಸ ಕಥನ. ಕಾಲ ಮತ್ತು ದೇಶಗಳಲ್ಲಿ ಅಥವಾ ಚರಿತ್ರೆ ಮತ್ತು ವರ್ತಮಾನಗಳಲ್ಲಿ ಒಮ್ಮೆಲೇ ಚಲಿಸುವ ಬರಹಗಾರರ ಪ್ರಜ್ಞೆ ಅನುಭವುಗಳ ಅನೇಕ ಆಯಾಮಗಳನ್ನು ಒಟ್ಟೊಟ್ಟಿಗೇ ಸೃಷ್ಟಿಸುತ್ತದೆ. ಅಲೆಮಾರಿಯ ಅಂಡಮಾನ್ ಹೊಸರೀತಿಯ ಕಥನತಂತ್ರವನ್ನೇ ಕನ್ನಡ ಸಾಹಿತ್ಯದಲ್ಲಿ ಸೃಷ್ಟಿಸಿದೆ.


***
Rating
No votes yet

Comments