ಸ್ವಘಟ್ಟಿ ಎರಡನೆಯ ದರ್ಜೆಯ ಲೇವಡಿಯ ಸರಕೇ? ಹೌದು!

ಸ್ವಘಟ್ಟಿ ಎರಡನೆಯ ದರ್ಜೆಯ ಲೇವಡಿಯ ಸರಕೇ? ಹೌದು!

ಸಂಪದದ ಪ್ರತಿಕ್ರಿಯೆಯೊಂದರಲ್ಲಿ ನಾವು ನಮ್ಮ ಕಿರಿಯ ಗೆಳೆಯ ಸುಪ್ರೀತ್ ಕಲ್ಪನೆಯ ಸ್ವಘಟ್ಟಿಯು ಭಾವಹೀನ ಎರಡನೆಯ ದರ್ಜೆಯ ಸರಕು ಎಂದು ಹೇಳಿದ್ದೆವು. ಹಾಗೆ ಹೇಳಿ ಸುಂಟರಗಾಳಿಯು ಸೃಷ್ಟಿಯಾಗುವುದಕ್ಕೆ, ಸುನಾಮಿಯು ಅಪ್ಪಳಿಸುವುದಕ್ಕೆ ಕಾಯುತ್ತ ಕೂತಿದ್ದೆವು.

ಸಂಪದವೆಂಬುದು ನಮ್ಮ ತಿಳುವಳಿಕೆಯಲ್ಲಿ ಹಿಡಿಕೆಯಿರುವ ದೊಡ್ಡದೊಂದು ಬಟ್ಟಲಿನಲ್ಲಿರುವ ಚಹಾ. ಬಟ್ಟಲಿನೊಳಗೆ ಚಹಾ ಇದೆ ಎಂದರೆ, ಇಲ್ಲ ಎಂದರೆ ಇಲ್ಲ. ಅವನತಿ ಅಂಚಿನಲ್ಲಿರುವ ಜೀವಿಯಾದ ಗೆಳೆಯ ಸುಪ್ರೀತ್ ತನ್ನ ಮೊನಚು ವೈಚಾರಿಕತೆ, ಹರಿತ ನಾಸ್ತಿಕತೆಯನ್ನು ಬಚ್ಚಿಟ್ಟು ಸ್ವಘಟ್ಟಿ ಎಂಬ ಮುಖವಾಡವನ್ನು ತೊಟ್ಟಿದ್ದನ್ನು ಯಾರೂ ಗಮನಿಸಲಿಲ್ಲ. ಸ್ವಘಟ್ಟಿ ಹುಟ್ಟಿದ ಮೇಲೆ ನಮ್ಮ ಕಾಮ್ರೇಡ್ ‘ಒಡೆದು ಕಟ್ಟುವ ಕೆಲಸ’ಗಳನ್ನು ಕೈಗೆತ್ತಿಕೊಳ್ಳಲಿಲ್ಲ. ಡಾಕಿನ್ಸ್ ಆಗಲಿ ಡಾರ್ವಿನ್ಗಾಗಲಿ ಔತಣಕ್ಕೆ ಕರೆಯಲಿಲ್ಲ. ಸಂಪದದಲ್ಲಿರುವ ಮುಗ್ಧ ಆಸ್ತಿಕರು ಸಹ ತಮ್ಮ ತಾಳ್ಮೆ ಕಳೆದುಕೊಂಡು ಪ್ರತಿಕ್ರಿಯಿಸುವ, ಶಾಪ ಹಾಕುವ, ಬೆದರಿಕೆ ಒಡ್ಡುವ ಪ್ರಸಂಗಗಳು ಎದುರಾಗಲಿಲ್ಲ. ಧಾರ್ಮಿಕ ನಂಬಿಕೆಗಳ ಬಗೆಗೆ liberal ಆದವರು ಸ್ವಘಟ್ಟಿಯನ್ನು ಅಪ್ಪಿಕೊಂಡರು. ತಮ್ಮ ನಿಜ ಸಮಾಜದಲ್ಲಿ ಧಾರ್ಮಿಕ ಭಾವನೆಗಳ ಬಗೆಗೆ ತಾವು ಬಳಸದ ಸ್ವಾತಂತ್ರ್ಯವನ್ನು ಇಲ್ಲಿ ಬಳಸಲು ಅವರಿಗೆ ಸವಡಾಯಿತು. ಸುಪ್ರೀತ ಸ್ವಘಟ್ಟಿಯ ಬಗ್ಗೆ ಐದು ಮುಕ್ಕಾಲು ಲೇಖನಗಳನ್ನು ಬರೆದುದರಿಂದ ಏನೋ ಬಹುದೊಡ್ಡ ಬದಲಾವಣೆಯಾಯಿತು, ಬೌದ್ಧಿಕ ಸ್ಥಿತ್ಯಂತರವಾಯಿತು ಎನ್ನುವವರು ಇದೆಲ್ಲ ಚಹಾ ಕಪ್ಪಿನೊಳಗಿನ ಬಿರುಗಾಳಿ ಎಂಬುದನ್ನು ಅರಿಯಬೇಕು.

ಇರಲಿ. ನಾವು ಸ್ವಘಟ್ಟಿಯನ್ನು ಎರಡನೆಯ ದರ್ಜೆಯ ಲೇವಡಿಯ ಸರಕು ಎಂದಿರುವುದನ್ನು ಸ್ವತಃ ಸುಪ್ರೀತ್ ಸಹ ನಿರಾಕರಿಸುವುದಿಲ್ಲ. ಸುಪ್ರೀತ್ ತನಗೆ ಧರ್ಮದ ಮೇಲೆ, ದೇವರ ಬಗೆಗೆ ಇರುವ ಅಸಮಾಧಾನವನ್ನು, ಆಸ್ತಿಕರ ನಂಬಿಕೆಗಳಲ್ಲಿರುವ ಅಸಂಬದ್ಧತೆಯನ್ನು ವ್ಯಕ್ತಪಡಿಸುವುದಕ್ಕೆ ಸ್ವಘಟ್ಟಿಯನ್ನು ಆರಿಸಿಕೊಂಡ. ಉತ್ತಮವಾದ ಮೊದಲನೆಯ ದರ್ಜೆಯ ಹಾಸ್ಯಕ್ಕೆ ವಸ್ತು ನಮ್ಮ ನಡುವಿನ ಸಂಗತಿಗಳೇ ಆಗುತ್ತವೆಯಾದರೂ ಆ ಹಾಸ್ಯಕ್ಕೆ ಓದುಗರನ್ನು ನಗಿಸುವ, ಅವರು ಕಾಣದ ಹಾಸ್ಯದ ಆಯಾಮವನ್ನು ಕಣ್ಣೆದುರು ಕಡೆದಿಟ್ಟು ಅವರ ಗಾಂಭೀರ್ಯ ಮುರಿಯುವ, ಅವರು ಮನಸಾರೆ ನಗುವ ಯಾವುದೋ ಕ್ಷಣದಲ್ಲಿ ಅವರೊಳಗಿರುಗ ಆ ಮುಗ್ಧ ಮಗುವನ್ನು ನೆನಪಿಸುವುದು ಗುರಿಯಾಗಿರುತ್ತದೆ. ಅದನ್ನು ಹೊರತು ಪಡಿಸಿ ಒಂದು ನಂಬಿಕೆಯನ್ನು ಹಳಿಯುವ, ಒಂದು ಸಿದ್ಧಾಂತವನ್ನು ಹಣಿಯುವ ಕೆಲಸಕ್ಕೆ ಹಾಸ್ಯವನ್ನು ಬಳಸಿದರೆ ಅದು ಎರಡನೆಯ ದರ್ಜೆಯದೇ ಆಗಿರುತ್ತದೆ. ಆಸ್ತಿಕರ ಅವೈಚಾರಿಕ ನಂಬಿಕೆಗಳನ್ನು ಲೇವಡಿ ಮಾಡುವ ಸ್ವಘಟ್ಟಿಯ ಕಣ್ಣಿಗೆ ನಾಸ್ತಿಕರ ಅವೈಚಾರಿಕ ‘ವೈಚಾರಿಕತೆ’, ಕುರುಡು ವಿಜ್ಞಾನ ಮೋಹಗಳು ಕಾಣದಿರುವುದೇ ಅದು ಎರಡನೆಯ ದರ್ಜೆಯ ಲೇವಡಿ ಎಂಬುದಕ್ಕೆ ಸಾಕ್ಷಿ. ವಿಜ್ಞಾನ ಎಲ್ಲವನ್ನೂ ಒದಗಿಸಬಲ್ಲದು, ಸತ್ಯ ಎನ್ನುವುದು ವಿಜ್ಞಾನದ ಸ್ವತ್ತೆಂದು ನಂಬುವುದಕ್ಕಿಂತ ಭಯಂಕರವಾದ ಅವೈಚಾರಿಕ ನಂಬಿಕೆ ಇರಲು ಸಾಧ್ಯವೇ?

ಇನ್ನು ಸ್ವಘಟ್ಟಿಯನ್ನು ಭಾವರಹಿತ ಎಂದಿರುವುದಕ್ಕೆ ಕಾರಣವಿದೆ. ಸ್ವಘಟ್ಟಿಯನ್ನು ನಾವು ನಮ್ಮ ನಡುವಿರುವ ಹದಿಹರೆಯದ, ಬಿಸಿ ರಕ್ತದ, ವೈಚಾರಿಕರಿಗೆ ಪ್ರತಿಮೆಯಾಗಿ ಕಾಣಬಹುದು. ಈ ಜೀವಿಗೆ ಎರಡು ತಲೆಗಳಿವೆ, ನಾಲ್ಕು ನಾಲಿಗೆಗಳಿವೆ, ಹದಿನಾರು ಕಿಡ್ನಿಗಳಿವೆ, ಒಂದು ಬಾಲವೂ ಇದೆ. ಆದರೆ ಹೃದಯವೇ ಇಲ್ಲ! ಹೃದಯಕ್ಕೆ ನೀಡಬೇಕಾದ ಮಹತ್ವವನ್ನು ಮರೆತು ಹದಿನಾರು ಕಿಡ್ನಿಗಳನ್ನು ಕೆತ್ತುವುದರಲ್ಲಿ ಇದರ ಸೃಷ್ಟಿಕರ್ತ ತೋರಿದ ಶ್ರದ್ಧೆ, ಆತನಲ್ಲಿರುವ - ಯೌವನದಲ್ಲಿ ಸಹಜವಾದ- ಒಂದು ಗುಣವನ್ನು ತೋರುತ್ತದೆ: ಆದರ್ಶವಾದ. ಹೌದು ಯುವ ಆದರ್ಶವಾದಿಗೆ ಇಡೀ ಜಗತ್ತು ತಪ್ಪುಗಳ ಸಂತೆಯಾಗಿ ಕಾಣುತ್ತೆ. ಎಲ್ಲವನ್ನೂ, ಎಲ್ಲರನ್ನೂ ಬದಲಾಯಿಸುವ ಕನಸು ಆತನದು. ಅದಕ್ಕಾಗಿ ಪರಿಶುದ್ಧಗೊಳಿಸುವ ಕಿಡ್ನಿಗಳಿಗೆ ಇರುವ ಮಹತ್ವ ಭಾವ ಕೇಂದ್ರವಾದ ಹೃದಯಕ್ಕಿಲ್ಲ.

ನಾಸ್ತಿಕ, ಆಸ್ತಿಕ- ಈ ಎರಡು ಪಂಗಡಗಳಲ್ಲಿ ಒಂದನ್ನು ಸೇರಿ ಆ ಪಂಗಡದ ರಕ್ಷಣೆಗೆ ಇನ್ನೊಂದು ಪಂಗಡವನ್ನು ಅವಹೇಳನ ಮಾಡುತ್ತ ಸಮಯ ಕಳೆಯುವುದು ವೇಸ್ಟು ಎಂದು ಹಿಂದೊಮ್ಮೆ ಆತನೇ ನಮಗೆ ಹೇಳಿದ್ದ. ಆಮೇಲೆ ಕೆಲವು ಕಾಲ ನಾಸ್ತಿಕ ಜಗತ್ತಿನ ಆರಾಧ್ಯ ಮೂರ್ತಿಗಳಾದ ಕಾರ್ಲ್ ಮಾರ್ಕ್ಸ್, ರಿಚರ್ಡ್ ಡಾಕಿನ್ಸ್, ಕಾರ್ಲ್ ಸೇಗನ್, ಕ್ರಿಸ್ಟೋಫರ್ ಹಿಚಿನ್ಸ್, ಬಿಲ್ ಮಹರ್, ಪ್ರೇಮಾನಂದ, ಡಾ||ನರೇಂದ್ರ ನಾಯಕ್ ಗಳನ್ನು ತನ್ನ ಪೂಜಾ ಕೋಣೆಯಿಂದ ಹೊರಗೆಸೆದ. ಆದರೆ ಆ ಮೂರ್ತಿಭಂಜಕತೆಯೆಲ್ಲಾ ಆವಿರ್ಭವಿಸಿ ವಿರುದ್ಧ ದಿಕ್ಕಿನಲ್ಲಿ ಸಾಗಿ ಸ್ವಘಟ್ಟಿಯಾಗಿ ಮೂರ್ತೀಭವಿಸಿದ್ದು ಶೋಚನೀಯ. ಇದು ಆತನ ನಾಸ್ತಿಕಪ್ರೇಮದ ಇನ್ನೊಂದು ಮಗ್ಗುಲು ಅಷ್ಟೇ.

ಸ್ವಘಟ್ಟಿಯು ಸುಪ್ರೀತನ ಸೃಷ್ಟಿಯಾಗಿದ್ದರೆ ಈ ಧಾರ್ಮಿಕ ‘ಇಮೇಜ್’ಗಳು ಸಹ ಒಬ್ಬ ‘ಸುಪ್ರೀತ’ನಿಂದಲೇ ಸೃಷ್ಟಿಯಾಗಿರುವುದು. ಹೀಗಿರುವಾಗ ಈ ಸ್ವಘಟ್ಟಿಯನ್ನು ಸುಮ್ಮನೆ ಬಿಡುವುದೇಕೆ, ಆತನನ್ನೂ ಡಿಸೆಕ್ಷನ್ ಟೇಬಲ್ ಮೇಲೆ ಮಲಗಿಸೋಣ, ಆತನನ್ನೂ ಲೇವಡಿ ಮಾಡೋಣ. ತಪ್ಪೇನಿದೆ?

Rating
No votes yet

Comments