ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ

ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ

Comments

ಬರಹ

ಇತ್ತೀಚೆಗೆ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್‍, ಪತ್ರಿಕಾಗೋಷ್ಠಿಯೊಂದರಲ್ಲಿ, ಕನ್ನಡ ಚಿತ್ರರಂಗದ ಬಹಳ ಪ್ರಸ್ತುತ ಸಮಸ್ಯೆಯಾದ ಮಾರುಕಟ್ಟೆ ವಿಸ್ತರಣೆಯ ಬಗ್ಗೆ, ಉತ್ತಮ ಚರ್ಚೆಯೊಂದನ್ನು ಪ್ರಾರಂಭಿಸಿದ್ದರು. ( http://www.prajavani.net/Content/Jun152007/cinema2007061432731.asp )

೭೩ ವರ್ಷಗಳ ಹಿಂದೆ, ಪರಪ್ರಾಂತ್ಯದ ನಗರವಾದ ಚೆನ್ನೈಯಲ್ಲಿ, ನಿರ್ಮಾಣವಾದ ಚಲನಚಿತ್ರಗಳಿಂದ ಪ್ರಾರಂಭವಾಯಿತು ಕನ್ನಡ ಚಿತ್ರರಂಗದ ಪಯಣ. ಭಾರತಕ್ಕೆ ಸ್ವತಂತ್ರ ಬರುವವರೆಗೂ, ಚೆನ್ನೈ ನಗರವೇ ಕನ್ನಡ ಚಿತ್ರ ನಿರ್ಮಾಣದ ಪ್ರಮುಖ ಕೇಂದ್ರವಾಗಿತ್ತು. ಹೀಗೆ, ಪರಭಾಷೆಯ, ಹಂಗಿನಲ್ಲೇ ಆರಂಭವಾದ ಕನ್ನಡ ಚಿತ್ರಗಳು, ಇಂದಿಗೂ, ಆ ಪ್ರಭಾವಗಳನ್ನು ಸಂಪೂರ್ಣವಾಗಿ ಕಳಚಿಕೊಳ್ಳಲು ಸಾಧ್ಯವಾಗಿಲ್ಲ. ಕೆಲವೇ ಕೆಲವು , ಪ್ರಬುದ್ಧ ನಿರ್ದೇಶಕರನ್ನು ಬಿಟ್ಟರೆ, ಒಟ್ಟಾರೆ ಕನ್ನಡ ಚಿತ್ರರಂಗ ಇನ್ನೂ ಶೈಶವಾವಸ್ಥೆಯಲ್ಲೇ ಇದೆ.

ಗಲ್ಲಾಪೆಟ್ಟಿಗೆಯಲ್ಲಿ ರಾರಾಜಿಸುವ, ಪರಭಾಷೆಗಳಿಂದ ಭಟ್ಟಿ ಇಳಿಸಿದ ರಿಮೇಕ್ ಚಿತ್ರಗಳು, ಪ್ರಯೋಗಶೀಲತೆಯಿಲ್ಲದ, ಜಾಳು ನಿರೂಪಣೆಯ ಚಿತ್ರಗಳು, ಕನ್ನಡ ಸಂಸ್ಕೃತಿಯ ಕಿಂಚಿತ್ ಗಂಧವೂ ಇಲ್ಲದ ಚಿತ್ರಗಳು... ಒಟ್ಟಾರೆಯಾಗಿ, ಕನ್ನಡ ಚಿತ್ರರಂಗ ಕನ್ನಡ ಸಂಸ್ಕೃತಿಯ ಭಾಗವಾಗುವಲ್ಲಿ ಸಂಪೂರ್ಣವಾಗಿ ಎಡವಿದೆ.

ತೆರೆಯ ಮೇಲಿನ ಪಾತ್ರಗಳು, ಉಲಿಯುವ ನುಡಿ ಕನ್ನಡವಾದಾಕ್ಷಣ ಅದು ಕನ್ನಡ ಚಿತ್ರವೆನಿಸಿಕೊಳ್ಳಲಾರದು. ಅದು ನಮ್ಮ ಜೀವನವಿಧಾನದ ಪ್ರತಿಬಿಂಬವಾಗಿರಬೇಕು, ಆಗಲೇ ಅದು ಜನರಿಗೆ ಹತ್ತಿರವಾಗಲಿಕ್ಕೆ ಸಾಧ್ಯ.

ಇದಕ್ಕೆ, ಮೂಲಭೂತ ಕಾರಣವೇ ಬೇರೊಂದಿದೆ. ಅದೇನೆಂದರೆ, ಒಟ್ಟಾರೆಯಾಗಿ, ಕನ್ನಡ ಜನಾಂಗ ಒಂದು ದನಿಯಲ್ಲಿ ಮಾತನಾಡುವ, ಒಂದು ಸಮುದಾಯವಾಗಿ ಗುರುತಿಸಿಕೊಳ್ಳುವಲ್ಲಿ, ಇತರ ಭಾಷಾ ಸಮುದಾಯಗಳ ತುಲನೆಯಲ್ಲಿ, ಬಹಳ ಬಹಳ ಹಿಂದಿದೆ, ಎನ್ನುವುದಕ್ಕಿಂತಲೂ ಸೋತಿದೆ ಎನ್ನುವುದೇ ಸತ್ಯಕ್ಕೆ ಹೆಚ್ಚು ಹತ್ತಿರವಾಗುವ ಮಾತಾದೀತು. ೫೦ ವರ್ಷಗಳಾದರೂ, ಇಂದಿಗೂ ಅಸ್ತಿತ್ಷದಲ್ಲಿರುವ, ಪ್ರಾಂತೀಯತೆ, ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ಕಂಟಕಪ್ರಾಯವಾಗಿದೆ. ಪ್ರಾದೇಶಿಕ ಅಸಮಾನತೆಯ ಬಗೆಗೆ ಮಾತನಾಡದಿದ್ದರೇ ಒಳಿತು.

ಆಗಾಗ ಮನಸ್ಸಿನೊಳಗೆ, ಸುಳಿಯುತ್ತ, ಸಂಕಟಕ್ಕೆ ಕಾರಣವಾಗುವ ಈ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಲು ಒಂದು ಕಾರಣವಿದೆ.
ವಾರದ ಹಿಂದಷ್ಟೇ (೧೫, ಜೂನ್, ೨೦೦೭) ರಂದು ಅದ್ಧೂರಿ ಪ್ರಚಾರದೊಂದಿಗೆ ಇಡೀ ದೇಶದ ಪ್ರಮುಖ ಮಹಾನಗರಗಳೂ ಸೇರಿದಂತೆ, ಪ್ರಪಂಚದಾದ್ಯಂತ ಬಿಡುಗಡೆಯಾದ, ತಮಿಳು ಚಿತ್ರ ’ಶಿವಾಜಿ’, ತದನಂತರದ ವಿದ್ಯಮಾನಗಳು.

ಭಾಷಾ ಮತ್ಸರ, ಸಿನಿಕತನವೆಂದು ತೋರಿದರೂ, ನಿಜವಾಗಿಯೂ ನನ್ನ ಸಂಕಟಕ್ಕೆ ಕಾರಣಗಳನ್ನು ಮುಂದಿಟ್ಟರೆ ಹೆಚ್ಚು ಸೂಕ್ತ.
ಶಿವಾಜಿ ಚಿತ್ರ ಬಿಡುಗಡೆಯಾಗಿದ್ದು, ಒಂದೆರಡು ಮಹಾನಗರಗಳಲ್ಲಿ ಮಾತ್ರವಲ್ಲ, ಪುಣೆ, ಸೂರತ್, ದೆಹಲಿ, ಬರೋಡಾ, ಸೊಲ್ಲಾಪುರದಂಥ ತಮಿಳು ಭಾಷೆಯ ಗಂಧ ಗಾಳಿಯೂ ಇಲ್ಲದಂಥ ನಗರಗಳಲ್ಲಿ. ಪ್ರತಿಯಾಗಿ, ಪುಣೆ, ಸೊಲ್ಲಾಪುರ ನಗರಗಳಲ್ಲಿ, ಕನ್ನಡಿಗರು ಜನಸಂಖ್ಯೆಯ ಪ್ರಮುಖ ಭಾಗವಾಗಿದ್ದಾರೆ.

ಹಾಗಿದ್ದರೆ, ಕನ್ನಡಿಗರು ತಮಿಳು ಚಿತ್ರಗಳನ್ನು ಪ್ರೋತ್ಸಾಹಿಸುತ್ತಿದ್ದಾರೆಯೇ..? ಹೌದೆಂಬುದು ನನ್ನ ಅನಿಸಿಕೆ. ಪುಣೆಯಲ್ಲಿ, ಶಿವಾಜಿಯ ಪ್ರಥಮ ದಿನದ ಪ್ರಥಮ ಪ್ರದರ್ಶನವನ್ನು, ಮಲ್ಟಿಪ್ಲೆಕ್ಸಿನಲ್ಲಿ ನೋಡುವ ನನ್ನ ಕನ್ನಡಿಗ ರೂಂ ಮೇಟ್ ಗಳಿಂದ ಹಿಡಿದು, ೩ ಕೋಟಿ ರೂಪಾಯಿಗಳಿಗೆ, ಈ ಚಿತ್ರದ ಕರ್ನಾಟಕ ಪ್ರದರ್ಶನದ ಹಕ್ಕುಗಳನ್ನು ಪಡೆದ, ಕನ್ನಡದ ಚಲನಚಿತ್ರ ವಾಣಿಜ್ಯ ಮಂಡಳದ ಅಧ್ಯಕ್ಷರಾಗಿದ್ದ (ಇವರು ಈಗಲೂ ಅಧ್ಯಕ್ಷ ಪದವಿಯಲ್ಲಿದ್ದಾರೋ ಗೊತ್ತಿಲ್ಲ) ಮಹಾಶಯರವರೆಗೂ ಕನ್ನಡ-ತಮಿಳರ ದಂಡು ದಿನೇ ದಿನೇ ವೃದ್ಧಿಸುತ್ತಿದೆ. ಎಷ್ಟೆಂದರೆ, ಇಂದು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ತಮಿಳು, ತೆಲುಗು ಬಾರದಿದ್ದಲ್ಲಿ, ಆ ವ್ಯಕ್ತಿಯನ್ನು ಅನ್ಯಗ್ರಹ ಜೀವಿಯಂತೆ ನೋಡುವ ಕಾಲ ಬಂದೊದಗಿದೆ.

ಇನ್ನಾವುದೇ ಭಾಷಾ ಸಮುದಾಯದಲ್ಲೂ ಕಾಣಸಿಗದ ಈ ಉದಾರ ಮನೋಭಾವ ಕನ್ನಡಿಗರಿಗೆ ಪ್ರಾಪ್ತವಾಗಿದ್ದು ಹೇಗೇ ಇದ್ದರೂ, ಅದನ್ನು ಶಪಿಸುವ ಕಾಲ ಬಂದಿದೆ. ನಮ್ಮ ಉದಾರತೆಯೇ, ನಮ್ಮ ಸಂಸ್ಕೃತಿಯ ಬೆಳವಣಿಗೆಗೆ, ಉರುಳಾದರೆ, ಅಂತಹ ಉದಾರತೆಗೆ ಅರ್ಥವೇನು..?
ಇಷ್ಟಾಗ್ಯೂ, ಭಾಷಾಭಿಮಾನವು ಅಂಧಾಭಿಮಾನವಾಗಿ ಮಾರ್ಪಾಡಾಗುವ, ತಮಿಳುನಾಡಿನಂಥಹ ಪರಿಸ್ಥಿತಿ ನಮ್ಮಲ್ಲಿಲ್ಲ.. ಹೀಗಿದ್ದರೂ, ನಾವುಗಳು, ಅಭಿಮಾನಿಗಳು, ಸ್ವಾಭಿಮಾನಿಗಳಾಗಲೂ ಏಕೆ ಹೆದರುತ್ತೇವೆ ?

ದುರಭಿಮಾನಿಗಳೆಂದು ಜರೆಯಲ್ಪಟ್ಟು, ಅವಕಾಶಗಳಿಂದ ವಂಚಿತರಾಗುವ, ಪೂರ್ವಾಗ್ರಹ ಪೀಡಿತ ಆಲೋಚನೆಗಳಿಂದಯಿಂದ ಕನ್ನಡ ಮನಸ್ಸುಗಳು ನರಳುತ್ತಿವೆ ಎಂಬುದು ನನ್ನ ಗುಮಾನಿ.. ಈ ರೋಗಕ್ಕೆ ಸೂಕ್ತ ಮದ್ದು ತಕ್ಷಣಕ್ಕೆ ಕಾಣುತ್ತಿಲ್ಲ.

ಇಷ್ಟೆಲ್ಲ ವಿಶ್ವಾಸ ಕುಂದಿಸುವ ಬೆಳವಣಿಗೆಗಳ ನಡುವೆಯೂ, ಅಸೆಯನ್ನು ಜೀವಂತವಾಗಿಡುವ, ಸಣ್ಣ ವರ್ತಮಾನವೊಂದಿದೆ. ಅದೇನೆಂದರೆ, ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ, ಅತ್ಯಂತ ಯಶಸ್ವಿ ಕನ್ನಡ ಚಿತ್ರವೆನ್ನಿಸಿಕೊಂಡಿರುವ, ’ಮುಂಗಾರು ಮಳೆ ’ , ೧೧ ಜೂನ್, ೨೦೦೭ ರಂದು ಪುಣೆಯ, ಅತ್ಯಂತ ಪ್ರಮುಖವೆನಿಸಿದ, ಈ-ಸ್ಕ್ವೇರ್‍ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡು, ಜನಭರಿತ ಯಶಸ್ವಿ ಪ್ರದರ್ಶನದ ನಂತರ, ಮೂರನೇ ವಾರದಲ್ಲಿ, ಪುಣೆಯ ೬ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇವುಗಳಲ್ಲಿ ನಾಲ್ಕು ಮಲ್ಟಿಪ್ಲೆಕ್ಸ್ ಗಳು!!!

ಇನ್ನು ಮುಂದಿನ ದಿನಗಳಲ್ಲಿ ಇದೇ ರೀತಿಯ ಯಶಸ್ಸು, ಭಾರತದ ಇತರ ನಗರಗಳಲ್ಲೂ, ಕನ್ನಡ ಚಿತ್ರಗಳಿಗೆ ಲಭಿಸೀತು ಎಂಬ ಪುಟ್ಟ ಆಶಾವಾದವನ್ನು ಪ್ರಕಟಿಸುವುದೇ ಈ ಲೇಖನಕ್ಕೆ ಮೂಲ ಪ್ರೇರಣೆ.

ಮೇಲೆ ಪ್ರಸ್ತಾಪಿಸಿರುವ, ಕೆಲ ವಿಚಾರಗಳ ಬಗೆಗೆ, ಆರೋಗ್ಯಕರ ಪ್ರತಿಕ್ರಿಯೆಗಳು ಬಂದರೆ, ಈ ಚರ್ಚೆಯನ್ನು ಆರಂಭಿಸಿದ ಉದ್ದೇಶವೂ ಸಫಲವಾದೀತು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet