73-ಶಾಂತಿ ನಿವಾಸ - ಒಂದು ಸುಂದರ ಅನುಭವ!

73-ಶಾಂತಿ ನಿವಾಸ - ಒಂದು ಸುಂದರ ಅನುಭವ!

73- ಶಾಂತಿ ನಿವಾಸ - ಸುದೀಪ್ ನಿರ್ದೇಶನದ ಎರಡನೇ ಚಿತ್ರ. ಹೃಷೀಕೇಶ್ ಮುಖರ್ಜಿಯವರ "ಬಾವರ್ಚಿ" ಚಿತ್ರವನ್ನು ಕನ್ನಡ ಪರದೆಯ ಮೇಲೆ ಹೇಗೆ ತಂದಿದ್ದಾರೋ ಎಂಬ ಸಣ್ಣ ಭಯದ ನಡುವೆಯೇ ಚಿತ್ರಮಂದಿರ ಪ್ರವೇಶಿಸಿದೆ... ಆರಂಭದಲ್ಲೇ ಒಂದು ಆಶ್ಚರ್ಯ ಕಾದಿತ್ತು... ಮೊದಲ ದೃಶ್ಯದಲ್ಲೇ ಶಿವಣ್ಣ ಪ್ರತ್ಯಕ್ಷ!!!. ಪಾತ್ರಗಳ ಪರಿಚಯಿಸುವ ರೀತಿ ಅತ್ಯಂತ ವಿಶಿಷ್ಟವಾಗಿ ಬಂದಿದೆ... ಈ ಕೆಲಸವನ್ನು ಶಿವಣ್ಣ ಅಚ್ಚುಕಟ್ಟಾಗಿ ಮಾಡಿದ್ದಾರೆ.

ಚಿತ್ರ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಎಲ್ಲೂ ಬೇಸರ ತರಿಸದ ರೀತಿಯಲ್ಲಿ ಎರಡೂ ಮುಕ್ಕಾಲು ಗಂಟೆಗಳಲ್ಲಿ ಒಂದು ಕೌಟುಂಬಿಕ ಕಥಾ ಹಂದರವನ್ನು ನವಿರಾಗಿ ನಿರೂಪಿಸಿದ್ದಾರೆ ಕಿಚ್ಚ ಸುದೀಪ್.. ಪ್ರತಿಯೊಂದು ಪಾತ್ರವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಯಾವೊಂದು ಪಾತ್ರವೂ, ಸನ್ನಿವೇಶವೂ ಅನವಶ್ಯಕವೆನಿಸುವುದಿಲ್ಲ... ಚಿತ್ರಕಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಸುದೀಪ್ ಸಫಲರಾಗಿದ್ದಾರೆ.

ಚಿತ್ರದ ಕಥೆ ಸರಳವಾದರೂ ಸುಂದರವಾದುದು. "73-ಶಾಂತಿ ನಿವಾಸ" -ಇದು ಹೆಸರಿಗೆ ಮಾತ್ರ ಶಾಂತಿ ನಿವಾಸ.. ಒಳಗಿರುವುದು ಬರೀ ಜಗಳ, ಅಶಾಂತಿ. ಇಂತಹ ಗಲಾಟೆ ಸಂಸಾರದಲ್ಲಿ ಅಡುಗೆ ಭಟ್ಟರಾಗಿ ಬಂದವರ್ಯಾರೂ ಬಹಳ ದಿನ ಉಳಿಯುವುದೇ ಇಲ್ಲ... ಈ ಅವಿಭಕ್ತ ಕುಟುಂಬದ ಮುಖ್ಯಸ್ಥ ಕೈಲಾಶನಾಥರಿಗೆ (ಮಾಸ್ಟರ್ ಹಿರಣ್ಣಯ್ಯ) ನಾಲ್ವರು ಗಂಡು ಮಕ್ಕಳು. ಹಿರಿಯ ಮಗ ರಾಮನಾಥ (ಶ್ರೀನಿವಾಸ ಮೂರ್ತಿ) ಮತ್ತು ಸೀತಾ ದೇವಿ (ವೈಶಾಲಿ ಕಾಸರವಳ್ಳಿ) ದಂಪತಿಗಳಿಗೆ ಒಬ್ಬಳು ಮಗಳು ನೀತಾ (ಅನು ಪ್ರಭಾಕರ್). ಎರಡನೇ ಮಗ ಮತ್ತು ಸೊಸೆ ಕಾರು ಅಪಘಾತದಲ್ಲಿ ಅಸು ನೀಗಿರುತ್ತಾರೆ. ಅವರ ಮಗಳು ರಾಧಾ (ದೀಪು) ಈ ಚಿತ್ರದ ನಾಯಕಿ.ಮೂರನೆಯವನು ಕಾಶೀನಾಥ (ರಮೇಶ್ ಭಟ್) ಮತ್ತು ಆತನ ಮಡದಿ ಶೋಭಾ (ಚಿತ್ರಾ ಶಣೈ) ದಂಪತಿಗಳಿಗೆ ಒಬ್ಬನೇ ಮಗ. ಇನ್ನು ನಾಲ್ಕನೆಯ ಸುಪುತ್ರನೇ ಜಗನ್ನಾಥ (ಕೋಮಲ್) - ಸ್ವಯಂ ಘೋಷಿತ ಸಂಗೀತ ನಿರ್ದೇಶಕ!. ತನ್ನ ಚಿತ್ರ ವಿಚಿತ್ರ ರಾಗ ಸಂಯೋಜನೆಗಳಿಂದ ಮನೆಯವರ ತಲೆ ತಿಂದು ನೋಡುಗರಿಗೆ ನಗೆ ಬುಗ್ಗೆಯನ್ನು ತರಿಸುವಾತ!!!ಈ ಕುಟುಂಬದ ಜನರಲ್ಲಿ ಸಾಮರಸ್ಯವೇ ಇಲ್ಲ!!. ಸೊಸೆಯರಿಬ್ಬರೂ ಮೈಗಳ್ಳಿಯರು. ಮನೆಗೆಲಸ ಮಾಡದ ಗಂಡು ಮಕ್ಕಳು... ನಾಟ್ಯಕಲಿಕೆಯಲ್ಲಿ ನಿರತಳಾದ ಅಹಂಕಾರೀ ಮೊಮ್ಮಗಳು ನೀತು (ಅನು ಪ್ರಭಾಕರ್) ಇವರುಗಳ ನಡುವೆ ಪಾಪ ಬೆಳಗಿನ ಕಾಫಿಯನ್ನು ಕೇಳುವವರೂ ಇಲ್ಲದ ಹಿರಿಯ ತಲೆ ಕೈಲಾಶನಾಥರು!. ಅಡುಗೆಯವರಿಲ್ಲದೇ ಇವರ ದಿನಚರಿಯೇ ಓಡುವುದಿಲ್ಲ.. ಆದರೆ ಈ ರೀತಿ ಕಲಹಪ್ರಿಯ, ಅಶಾಂತಿ ನಿಲಯದಲ್ಲುಳಿಯಲು ಯಾವ ಅಡುಗೆ ಭಟ್ಟನೂ ತಯಾರಿಲ್ಲ!!!ಹೀಗಿರುವ ಕುಟುಂಬಕ್ಕೆ ಅಡುಗೆ ಭಟ್ಟನಾಗಿ ನಾಯಕ ರಘು (ಸುದೀಪ್) ಪ್ರವೇಶಿಸುತ್ತಾನೆ. ಒಡೆದ ಮನಗಳನ್ನು ಬೆಸೆದು ಒಂದು ಮಾಡುತ್ತಾನೆ. ಎಲ್ಲರ ಹೃದಯದಲ್ಲೂ ಸ್ಥಾನ ಪಡೆಯುತ್ತಾನೆ. ದ್ವೇಷತುಂಬಿರುವ ಮನೆಯಲ್ಲಿ ಪ್ರೀತಿಯ ಕಂಪನ್ನು ಹರಡುತ್ತಾನೆ. ಸಕಲ ಕಲಾ ಪ್ರವೀಣನಾದ ಈತ ಅಡುಗೆಯ ಜೊತೆಗೆ, ಹಾಡುತ್ತಾನೆ, ನೃತ್ಯ ಕಲಿಸುತ್ತಾನೆ, ಮನೆಗೆಲಸ ಮಾಡುತ್ತಾನೆ, ಮನೆ ಪಾಠವನ್ನೂ ಹೇಳುತ್ತಾನೆ.. ಹೀಗೆ ಎಲ್ಲರ ಮನ ಗೆದ್ದು ಮನೆಯನ್ನು ನಿಜವಾದ ಶಾಂತಿನಿವಾಸವನ್ನಾಗಿಸುತ್ತಾನೆ... ಹೀಗಿರುವಾಗ, ತಾತ ಕೈಲಾಶನಾಥರು ಸದಾ ಕಾಪಾಡಿಕೊಂಡು ಬಂದಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಒಡವೆ, ನಗ ನಾಣ್ಯಗಳಿದ್ದ ಪೆಟ್ಟಿಗೆಯ ದರೋಡೆಯಾಗುತ್ತದೆ!!!! ಜೊತೆಗೆ ಅಡುಗೆ ಭಟ್ಟ ರಘು ಕೂಡ ನಾಪತ್ತೆ!!! ಮುಂದೇನಾಗುತ್ತದೆ??? ರಘು ಕಳ್ಳನೇ??? ಅವನೇಕೆ ಈ ಮನೆಗೆ ಬಂದ??? ಒಡವೆಗಳು ಕಾಣೆಯಾಗಲು ಕಾರಣವೇನು??? ತೆರೆಯ ಮೇಲೆ ವೀಕ್ಷಿಸಿ... ಚಿತ್ರದ ಅಂತ್ಯ ವಿಶಿಷ್ಟವಾಗಿ, ಸುಂದರವಾಗಿ, ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ.

ಚಿತ್ರ ಆರಂಭಗೊಳ್ಳುವುದು ಶಿವಣ್ಣನಿಂದಾದರೆ ಅಂತ್ಯಗೊಳ್ಳುವುದು ಸಾಹಸ ಸಿಂಹ ವಿಷ್ಣುವರ್ಧನರಿಂದ!!!...

ಸಕಲ ಕಲಾ ಪ್ರವೀಣನಾದ ಅಡುಗೆ ಭಟ್ಟ ರಘುವಿನ ಪಾತ್ರದಲ್ಲಿ ಸುದೀಪ್ ಪರಕಾಯ ಪ್ರವೇಶ ಮಾಡಿದ್ದು, ಬಹುಕಾಲ ನೆನಪಿನಲ್ಲುಳಿಯುವ ಅಭಿನಯವನ್ನು ನೀಡಿದ್ದಾರೆ. ಬಹಳ ಕಾಲದ ನಂತರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿರುವ ಕನ್ನಡ ರಂಗಭೂಮಿಯ ಹಿರಿಯ ನಟ, ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ಭಾವಪೂರ್ಣ ಅಭಿನಯವನ್ನು ಮನಃ ಪೂರ್ತಿಯಾಗಿ ಸವಿಯಬಹುದು. ಶ್ರೀನಿವಾಸಮೂರ್ತಿ, ರಮೇಶ್ ಭಟ್, ದೀಪು, ಅನು ಪ್ರಭಾಕರ್, ವೈಶಾಲಿ ಕಾಸರವಳ್ಳಿ, ಚಿತ್ರ ಶಣೈ ಎಲ್ಲರ ಅಭಿನಯವೂ ಸೂಪರ್!. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಬಾಲಿವುಡ್, ಟಾಲಿವುಡ್, ಕಾಲಿವುಡ್‍ಗಳಿಂದ ನಟಿಯರನ್ನು ಆಮದು ಮಾಡಿಕೊಳ್ಳುವ ನಮ್ಮ ನಿರ್ಮಾಪಕ, ನಿರ್ದೇಶಕರ ಕಪಾಳಕ್ಕೆ ಹೊಡೆಯುವ ರೀತಿಯಲ್ಲಿ ನಮ್ಮ ದೀಪು ನಟಿಸಿದ್ದಾಳೆ.ನಾಟ್ಯ ಗುರುವಾಗಿ ಅರುಣ್ ಸಾಗರ್, "ಸಂಗೀತ ನಿರ್ದೇಶಕ"ನಾಗಿ ಕೋಮಲ್ ಕುಮಾರ್ ಚೆನ್ನಾಗಿ ನಗಿಸುತ್ತಾರೆ.ಹಾಡುಗಳು ಅತ್ಯುತ್ತಮವಲ್ಲದಿದ್ದರೂ ತೀರಾ ಕಳಪೆಯೂ ಅಲ್ಲ... ಆದರೆ ಸಂಗೀತ ಇನ್ನೂ ಸ್ವಲ್ಪ ಚೆನ್ನಾಗಿ ಬರಬಹುದಾಗಿತ್ತು.. ಹಾಡುಗಳ ಚಿತ್ರೀಕರಣ ಚೆನ್ನಾಗಿ ಬಂದಿದೆ. ರಾಜೇಶ್ ಕೃಷ್ಣನ್ ಹಾಡಿರುವ "ಪ್ರೀತಿ ಎಂದರೆ ಹೀಗೇನೆ" ಶಾಸ್ತ್ರೀಯ ಸಂಗೀತವಾಗಿದ್ದು ಇದರ ಚಿತ್ರೀಕರಣ ಚನ್ನಾಗಿ ಬಂದಿದೆ. ಮೇಲುಕೋಟೆಯಲ್ಲಿ ರಾತ್ರಿ ಹೊತ್ತು ದೀಪಗಳ ಮಧ್ಯೆ ಚಿತ್ರೀಕರಣಗೊಂಡ ಇನ್ನೊಂದು ಹಾಡೂ ಸಹ ಮನ ಗೆಲ್ಲುವಂತಿದೆ.

ಒಟ್ಟಿನಲ್ಲಿ 73-ಶಾಂತಿ ನಿವಾಸ ಮನೆ ಮಂದಿಯೆಲ್ಲ ಕುಳಿತು ಆನಂದಿಸಬಹುದಾದ ಸುಂದರ ಕೌಟುಂಬಿಕ ಚಿತ್ರ.ಇಂತಹ ಸುಂದರ ಚಿತ್ರ ಮೊದಲು ಕನ್ನಡದಲ್ಲಿ ಬರದೇ ಹಿಂದಿಯಲ್ಲಿ ಬಂತಲ್ಲಾ ಎಂಬುದೊಂದೇ ಕೊರಗು. ಆದರೂ ಇದು ಅತ್ಯಂತ ಸುಂದರವಾಗಿ ಕನ್ನಡೀಕರಣಗೊಂಡಿದೆ. ರೀಮೇಕ್, ಸ್ವಮೇಕ್‍ಗಳೆಂಬ ಚರ್ಚೆಯನ್ನು ಬದಿಗೊತ್ತಿ ಎಲ್ಲರೂ ನೋಡಿ ಸವಿಯಬಹುದಾದ ಚಿತ್ರ. 73-ಶಾಂತಿ ನಿವಾಸಕ್ಕೆ ಶುಭವಾಗಲಿ.

Rating
No votes yet

Comments