ಕನಸುಗಳನ್ನು ಕಾಣುವುದ ಕಲಿತೆ

ಕನಸುಗಳನ್ನು ಕಾಣುವುದ ಕಲಿತೆ

ವಯಸ್ಸು ೧೬-೧೭ ಇರಬೇಕು.  ಅವನ ಕಣ್ಣಲ್ಲಿ ಅದೇನೋ ಜಗತ್ತನ್ನೇ ಗೆಲ್ಲಬಲ್ಲನೆಂಬ ಅದಮ್ಯವಾದ ಆತ್ಮ ವಿಶ್ವಾಸ, ಹಳೇ ಡ್ರೆಸ್, ಕೆದರಿದ ಕೂದಲು. ಕೆಲಸ ಹುಡುಕಿಕೊಂಡು ಬಂದಿದ್ದ.  ಇವನ ಕೈಯಲ್ಲಿ ಎಂತಹ ಕೆಲಸ ಮಾಡಿಸುವುದು, ಇನ್ನೂ ೧೮ ತುಂಬಿಲ್ಲ.  ಕಾನೂನಿನ ಪ್ರಕಾರ ಅಪರಾಧವಾಗಬಹುದೇನೋ ಎನ್ನುವುದು ನನ್ನ ಚಿಂತೆ.  ಅವನಾದರೋ ‘ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ ಮೇಡಮ್. ದಯವಿಟ್ಟು ನನಗೊಂದು ಕೆಲಸ ಕೊಡಿ, ಎಸ್ ಎಸ್ ಎಲ್ ಸಿ ೮೦% ನಲ್ಲಿ ಪಾಸಾಗಿದ್ದೀನಿ, ತಂದೆ ತೀರಿ ಹೋದರು, ಮನೆಯಲ್ಲಿ ಬಹಳ ಕಷ್ಟ, ನಾನೇ ಮೊದಲ ಮಗ, ಮುಂದೆ ಓದಲು ಸಾಧ್ಯವಾಗುತ್ತಿಲ್ಲ’ ಎಂದೆಲ್ಲಾ ಹೇಳುತ್ತಿದ್ದ.  ನಾನು ಕೂಡ ಕಷ್ಟ ಪಟ್ಟು, ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು,  ಸ್ಕಾಲರ್ ಶಿಪ್ ನಲ್ಲಿ ಓದಿದ್ದರಿಂದ ಮನ ಕರಗಿ ಕೆಲಸ ಕೊಡಲು ಒಪ್ಪಿಕೊಂಡರೂ, ಬೇರೆಯವರೆಲ್ಲರ ವಿರೋಧ.  ‘ಮೇಡಮ್, ಇವನಿಗೆ ಇನ್ನೂ ೧೭ ತುಂಬಿಲ್ಲ, ಎಲ್ಲೂ ಕೆಲಸ ಮಾಡಿದ ಅನುಭವವಿಲ್ಲ. ಅಂತಹವನಿಗೆ ಕ್ಯಾಷಿಯರ್ ಕೆಲಸ ಕೊಡುತ್ತೀರಾ?  ಇವನೇನಾದರೂ ಕಲೆಕ್ಷನ್ ಎತ್ತಿಕೊಂಡು ಓಡಿಹೋದರೆ? ಅವನ ಕಣ್ಣುಗಳಲಿದ್ದ ಆತ್ಮವಿಶ್ವಾಸ ಕಂಡು ಕೊನೆಗೂ ಕ್ಯಾಶಿಯರ್ ಕೆಲಸ ಕೊಟ್ಟೇಬಿಟ್ಟೆ.  ಮೊದಲ ದಿವಸವೇ ಒಳ್ಳೆ ಬಟ್ಟೆ ಕೊಂಡುಕೊಳ್ಳಲು ಹಾಗೂ ಸಂಜೆ ಕಾಲೇಜು ಸೇರಲು ಮುಂಗಡ ಹಣ ಕೂಡ ಕೊಟ್ಟೆ.  

ಮಾರನೇ ದಿವಸ ಇನ್ನೂ ಹೆಚ್ಚಿನ ಆತ್ಮವಿಶ್ವಾಸದಿಂದ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಬಂದ.  ಹೇಳಿಕೊಟ್ಟದನ್ನೆಲ್ಲಾ ಥಟ್ಟನೆ ಕಲಿತುಬಿಡುತ್ತಿದ್ದ.  ಬುದ್ಧಿವಂತ. ಎಷ್ಟೇ ಕಷ್ಟವಾದರೂ ಕಾಲೇಜು ಮಾತ್ರ ಬಿಡದಿರುವಂತೆ ದಿವಸವೂ ಬುದ್ಧಿ ಹೇಳುತ್ತಿದ್ದೆ.  ಬೇಕಿದ್ದರೆ ನಾನೇ ಕಾಲೇಜು ಪುಸ್ತಕಗಳನ್ನೂ ಹಾಗೂ ಫೀಸನ್ನು ಕೊಡುವೆನೆಂದು ಕೂಡ ಭರವಸೆ ಕೊಡುತ್ತಿದ್ದೆ.  ನಾನು ಹಾಗೇ ಕಷ್ಟ ಪಟ್ಟಿದ್ದಕ್ಕೆ ಇಂದೀಗ ಒಂದು ಸಂಸ್ಥೆಯ ಮಾಲೀಕಳಾಗಿದ್ದೇನೆಂದು ಹೇಳುವಾಗ ಆತನ ಕಣ್ಣಲ್ಲಿ ಕೂಡ ಕನಸುಗಳು ಮೂಡುತ್ತಿದ್ದವು.  ಅವನ ಆಸೆಗಳನ್ನೂ, ಮನೆಯಲ್ಲಿನ ಕಷ್ಟಗಳನ್ನೂ ಹೇಳಿಕೊಳ್ಳುತ್ತಿದ್ದ.  ನನಗೆ ಕಂಡಂತಹ ಪರಿಹಾರವನ್ನೂ ನಾನು ನೀಡುತ್ತಿದ್ದೆ.  ಹೀಗೆ ಸುಮಾರು ೮ ತಿಂಗಳು ಕಳೆಯಿತು.  ಒಂದು ದಿವಸ ಹೇಳದೇ ಕೇಳದೇ ಪರಾರಿಯಾದ. ಯಾಕೆಂದು ನನಗೆ ತಿಳಿಯಲೇ ಇಲ್ಲ. ಎಲ್ಲರೂ ನಾವಂದೇ ಹೇಳಿದ್ದೆವೆಂದು, ನಾ ಅವರ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲವೆಂದು ಮೂದಲಿಸಿದರು. ಬೇಸರವಾಯಿತು.  ನಾನು ಅವನನ್ನು ನಂಬಿದ್ದೇ ತಪ್ಪಾಯಿತೇನೋ ಎಂದು ಕೂಡ ಅನ್ನಿಸಿತು.  ಆದರೆ ಒಂದು ಸಮಾಧಾನವೇನೆಂದರೆ ಆತ ಹಿಂದಿನ ದಿನದ ಕಲೆಕ್ಷನ್ ನನಗೆ ಒಪ್ಪಿಸಿ ಹೊರಟು ಹೋಗಿದ್ದ. ದುಡ್ಡು ಕದ್ದಿರಲಿಲ್ಲ.

ಇಂದು ನಾನು ಕೆಲಸದಲ್ಲಿ ಮಗ್ನಳಾಗಿದ್ದೆ.  ಒಬ್ಬ ಯುವಕ (ಮೆಡಿಕಲ್ ರೆಪ್) ಸುಮಾರು ೨೬ ವರ್ಷಗಳಾಗಿರಬಹುದು.  ನನ್ನ ಗಂಡ (ಡಾಕ್ಟರ್) ನನ್ನು ಭೇಟಿ ಮಾಡುವ ಸಲುವಾಗಿ ಬಂದು ಕುಳಿತಿದ್ದ.  ಅವನತ್ತ ನೋಡಿದೆ.  ಯಾಕೋ ಅವನು ನನ್ನ  ಕಣ್ಣುಗಳನ್ನು ತಪ್ಪಿಸುತ್ತಿರುವಂತೆ ಭಾಸವಾಯಿತು.  ಬಹುಶಃ ರಶ್ ಇದ್ದಾಗಲೂ ಡಿಸ್ಟರ್ಬ್ ಮಾಡುವೆನೆಂದು ನಾನು ಹೇಳುತ್ತೇನೆ ಎಂದಿರಬಹುದೇನೋ ಅಂದುಕೊಂಡು ಸುಮ್ಮನಾಗಿಬಿಟ್ಟೆ.  ಒಳಗೆ ಹೋದವನೇ ಅವರನ್ನು ಮಾತನಾಡಿಸಿ, ತಕ್ಷಣ ಹೊರಗೆ ಬಂದು ಒಂದು ಕ್ಷಣವೂ ನಿಲ್ಲದಂತೆ ಹೊರಟುಬಿಟ್ಟ.  ಇವರು ನನ್ನನ್ನು ಒಳಕರೆದು ಅವನು ಅದೇ ಕ್ಯಾಶಿಯರ್ ಕೆಲಸ ಮಾಡುತ್ತಿದ್ದ ಹುಡುಗ, ಯಾಕೆ ಮಾತನಾಡಿಸಲಿಲ್ಲ? ಎಂದರು.  ಓಡಿ ಹೋಗಿ ಮಾತನಾಡಿಸಿದೆ.  ತಕ್ಷಣ ಅಳಲು ಶುರು ಮಾಡಿದ.  ನಂತರ ಸುಧಾರಿಸಿಕೊಂಡು, ಜೀವನದಲ್ಲಿ ನಾನು ಏನನ್ನಾದರೂ ಸಾಧಿಸಿ ನಿಮ್ಮ ಬಳಿಗೆ ಬರುವವನಿದ್ದೆ ಮೇಡಮ್. ನಿಮಗೆ ನನ್ನ ಗುರುತಾಗಲಿಲ್ಲ ಎಂದು ತಿಳಿಯಿತು. ಹಾಗಾಗಿ ಮಾತನಾಡಿಸಲಿಲ್ಲ ಎಂದ.  ನಂತರ ಭಾವುಕನಾಗಿ ಇದುವರೆವಿಗೂ ನಾನೇನಾಗಿದ್ದೇನೆ ಎಲ್ಲದಕ್ಕೂ ನೀವೇ ಕಾರಣ.  ಈಗಲೂ ಅಷ್ಟೇ ಐಎ ಎಸ್ ಪರೀಕ್ಷೆ ಕಟ್ಟಿದ್ದೇನೆ. ಹೊಟ್ಟೆಪಾಡಿಗಾಗಿ ಈ ಕೆಲಸ, ಮನೆಯಲ್ಲಿ ಎಲ್ಲ ಕಷ್ಟಗಳು ನೀಗಿದವು.  ಅಂದು ಮನೆಯಲ್ಲಿ ಆದ ಯಾವುದೋ ಗಲಾಟೆಯಿಂದಾಗಿ ನಿಮಗೂ ಕೂಡ ತಿಳಿಸದಂತೆ ಊರಿಗೆ ಹೊರಟುಬಿಟ್ಟೆ.  ಅಲ್ಲಿಂದ ಬಂದ ನಂತರದ ಮೂರು ವರ್ಷಗಳು ಬಹಳ ಕಷ್ಟವಾಯಿತು.  ಆದ್ರೂ ಎಷ್ಟೇ ಕಷ್ಟವಾದರೂ ಓದನ್ನು ನಿಲ್ಲಿಸಬೇಡ ಎಂದಿದ್ದ ನಿಮ್ಮ ಬುದ್ಧಿ ಮಾತಿನಿಂದಾಗಿ ಓದನ್ನು ಮಾತ್ರ ನಿಲ್ಲಿಸಲೇ ಇಲ್ಲ.  ಗೆಳೆಯರೆಲ್ಲರೂ ನಿನ್ನ ಕೆರಿಯರ್ ರೂಪಿಸಿದ ಅವರನ್ನು ಒಂದು ಬಾರಿ ಭೇಟಿಯಾಗಿ ಕೃತಜ್ಞತೆಯನ್ನು ಹೇಳಿ ಬಾ ಎಂದು ಹೇಳುತ್ತಲೇ ಇದ್ದರು.  ನಾನು ಐ ಎ ಎಸ್ ಪರೀಕ್ಷೆ ಪಾಸ್ ಮಾಡಿದ ದಿವಸ ಬಂದು ಭೇಟಿಯಾಗಿ ಆಶೀರ್ವಾದ ಪಡೆಯಬೇಕೆಂದಿದ್ದೆ.  ಆದರೆ ಇಂದೇ ನಿಮ್ಮ ಭೇಟಿಯಾಗಿಬಿಟ್ಟಿತು. ಸಾಧಿಸಿಯೇ ಸಾಧಿಸುತ್ತೇನೆ ಮೇಡಮ್.  ಬೆಂಗಳೂರಿನಲ್ಲಿ ಕೆಲಸ ಕೊಟ್ಟು ಕನಸುಗಳನ್ನು ಕಾಣುವುದನ್ನು ಕಲಿಸಿದವರು ನೀವು! ಎಂದೆಲ್ಲಾ ಹೇಳುತ್ತಲೇ ಇದ್ದ. ನನ್ನ ಕಣ್ಣಲ್ಲಿ ಮಾತ್ರ ಆನಂದ ಭಾಷ್ಪ.  

Rating
No votes yet

Comments