ಅರಣ್ಯ ರೋದನ

ಅರಣ್ಯ ರೋದನ

ಅನಿಲ್‍ರಮೇಶ್ ಅವರ ಈ ಸುಂದರ ಚಿತ್ರ ನೋಡಿದಾಗ ಆದ ಸಂತೋಷ ಮತ್ತೆ ಶಿವು ಅವರ ‘ಮರ ಉಳಿಸಿ, ಮೆಟ್ರೊ ಕಳಿಸಿ’ ಬ್ಲಾಗ್ ಓದಿದಾಗ ಆದ ಆತಂಕವೇ ನನ್ನ ಈ ಅಳಲಿಗೆ ಕಾರಣವಾದವು.
ಓ ರವಿತೇಜ....
ನಿನ್ನ ತಡೆದು, ಇಳೆಗೆ ನೆರಳನೀವ
ಭಾಗ್ಯ ನನಗಿನ್ನಿಲ್ಲ ದೊರೆಯೇ,
ಹುಲುಮಾನವರೆನ್ನ ಕುಲವನೀಗ
ಸಂಪೂರ್ಣ ನಾಶದಾ ಹಾದಿಗಟ್ಟಿಹರು - ನಿನಗೆ
ತಡೆಯಿಲ್ಲದಂತೆ ಕದವ ತೆರೆದಿಹರು
ಅಲ್ಲಲ್ಲಿ ಓಜೋನ್ ಪದರವ ಕೊರೆದಿಹರು.
ಅನಿಲ್‍ರವರ ಈ ಚಿತ್ರವನೇ ತೋರಿಸಿ,
ತಮಗರಿವಿಲ್ಲದೇ ಮಾಡಿದ ತಪ್ಪಿಗೆ,
ಅರಿವಿದ್ದೂ ಈಗ ಮಾಡುತಿಹ ತಿಳಿಗೇಡಿತನಕೆ
ವನಸಿರಿಯ ಸೊಬಗು ಹಿಂದಿತ್ತು ಹೀಗೆ
ಎಂದುಲಿಯಲಿ ತಮ್ಮ ಮುಂದಿನ ಪೀಳಿಗೆಗೆ!
ಅವರ ಕರ್ಮವದು ಅನುಭವಿಸಲಿ
ಚಿಂತಿಸಿ ಫಲವೇನು? ಸಾವೆನಗೆ ಕಟ್ಟಿಟ್ಟ ಬುತ್ತಿ
ಬುದ್ಧಿಯಿಲ್ಲದವರಿಗೆ ತಿಳಿಹೇಳಲಾರಿಗಿಹುದು ಶಕ್ತಿ?

Rating
No votes yet

Comments