T20=ತೇಜಸ್ವಿ ಟ್ವೆಂಟಿ : ಸ್ವರೂಪ ಪಂಚಿಂಗ್ ಲೈನ್ಸ್

T20=ತೇಜಸ್ವಿ ಟ್ವೆಂಟಿ : ಸ್ವರೂಪ ಪಂಚಿಂಗ್ ಲೈನ್ಸ್

 


T20 = ತೇಜಸ್ವಿ ಟ್ವೆಂಟಿ! ಮಾಲಿಕೆಯಲ್ಲಿ ಈ ಬಾರಿ ಅವರ ‘ಸ್ವರೂಪ’ ಕಿರುಕಾದಂಬರಿಯ ಪಂಚಿಂಗ್ ಲೈನ್‌ಗಳನ್ನು ಆರಿಸಿದ್ದೇನೆ.
ಈಗಾಗಲೇ ‘ಸ್ವರೂಪ’ವನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ‘ಸ್ವರೂಪ’ವನ್ನು ಓದಿದವರೂ ಮತ್ತೊಮ್ಮೆ ಓದುವಂತಾದರೆ ಡಬಲ್ ಖುಷಿ ನನ್ನದು.
ಪುನರಾವರ್ತನೆಯಾದರೂ ಓದುಗರಲ್ಲಿ ಈ ವಿನಂತಿಯನ್ನು ನಾನು ಮಾಡಿಕೊಳ್ಳಲೇ ಬೇಕಾಗಿದೆ. ಇಲ್ಲಿನ ಎಲ್ಲಾ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು.


1.    ಈ ಕೋರ್ಟುಕಚೇರಿಗಳಿಗೆ ತಿರುಗಾಡಿ ನೂರೆಂಟು ಕೇಸುಗಳನ್ನು ಮಾಡಿಕೊಳ್ಳುವ ಹೇಸಿಗೆ ಲೆಕ್ಕಾಚಾರ ಯಾರಿಗೆ ಬೇಕು?


2.    ಆರ್ಥಿಕದಾಸ್ಯದಲ್ಲಿ ಆತ್ಮಸ್ವಾತಂತ್ರ್ಯದ ಸಿದ್ದಿ ಸಾಧ್ಯವೇ ಇಲ್ಲ. ದುಡ್ಡು, ದುಡ್ಡಿನಿಂದ ಬರುವ ಅಧಿಕಾರ, ಅದು ಬೇಕೆನಿಸಿದಾಗ ಕೊಡುವ ಸುಖ ಸಂತೋಷ ಇವನ್ನೆಲ್ಲಾ ತ್ಯಾಜ್ಯ ಎಂದು ನೀನು ಹೇಳಿದರೆ ನಿನ್ನನ್ನ ಪಂಚೇಂದ್ರಿಯಗಳಲ್ಲೇ ಏನೋ ಒಂದು ಊನವಿರಬೇಕು.


3.    ಸೋಷಲಿಸಂ, ಶೋಷಣೆ ಎನ್ನುವ ಮೂರಕ್ಷರದ ಪದ ಹಣ ಕಂಡೊಡನೆ ದಿಗಿಲು ಬೀಳುವಂತೆ ಮಾಡುತ್ತದೆ. ಪ್ರತಿ ನೂರು ರೂಪಾಯಿ ನೋಟಿನ ಹಿಂದೂ ಒಂದು ಅಮಾನುಷ ಹೇಯತೆಯನ್ನು ಗುಮಾನಿಸುತ್ತದೆ.


4.    ಸೋಷಲಿಸಂಮ್ಮಿಗೆ ಸಿಕ್ಕುವುದು ದುಡಿಸಿ ಉತ್ಪಾದನೆ ಮಾಡಿದವನ ಶೋಷಣೆ. ಇನ್ನೊಂದು ಅನ್ಯತರದ್ದು ಅದರ ಹಿಡಿತಕ್ಕೆ ಸಿಗುವುದಿಲ್ಲ.


5.    ಶೋಷಣೆ ಒಂದಲ್ಲ ಒಂದು ರೀತಿಯಲ್ಲಿ ಅನಿವಾರ‍್ಯ. ಇಲ್ಲ ಉತ್ಪಾದಿಸಲು ಶೋಷಿಸಬೇಕು. ಇಲ್ಲ ಹಾಳುಮಾಡಲು ಶೋಷಿಸಬೇಕು.


6.    ದುಷ್ಟದೇವತೆ ಆಗಿದ್ದರೆ ಅದು ಸದಾ ರಕ್ತಮಾಂಸಾದಿ ಹೊಲಸಿಗೆ ಹಂಬಲಿಸುವಂಥದಾದರೆ ನಿನ್ನ ಉಗುಳಿನಿಂದ ಮೈಲಿಗೆ ಆಗುತ್ತದೆ ಎನ್ನುವುದು ಸುಳ್ಳು. ಅದು ಒಳ್ಳೆಯ ದೇವತೆ ಆಗಿದ್ದರೆ ಕೇವಲ ಉಗಿದ ಮಾತ್ರಕ್ಕೆ ಕೋಪಿಸಿಕೊಳ್ಳಬೇಕೇಕೆ?


7.    ಅವರ ನಂಬಿಕೆ ಬಟ್ಟೆಯ ಒಳಗೆ ಅಂತರಾಳದಲ್ಲಿ, ಕುಳಿತಾಗ ಎದ್ದಾಗ ಕೊರೆಯುವ ದಾರದ ನೋವನ್ನು ಸಹಿಸುವ ನಿಷ್ಠೆಯಾದಾಗ ಅದನ್ನು ಹೇಗೆ ಲೇವಡಿ ಮಾಡಲಿ?


8.    ಇಬ್ಬರಲ್ಲೊಬ್ಬರು ಎಲ್ಲಾದರೂ ಒಂದು ಕಡೆ ಒಬ್ಬರ ಪ್ರಾಮಾಣಿಕತೆಯನ್ನು ನಂಬಬೇಕು.


9.    ನನ್ನ ತಪೋಭಂಗಕ್ಕೆ ಮೇನಕೆಯೇ ಬೇಕೆಂದಿಲ್ಲ. ಅತಿ ಕುದ್ರವಾದುದೊಂದು ಹಲ್ಲಿ ಬಾಲವಲ್ಲಾಡಿಸಿದರೆ ಸಾಕು. ಹಲ್ಲಿ ಬಾಲ ಅಲ್ಲಾಡಿಸಿದ್ದೂ ಮೇನಕೆ ಮೊಲೆ ಅಲ್ಲಾಡಿಸಿ ಕುಣಿದದ್ದು ಬಿ.ಎ., ಎಂ.ಎ.ಗಳಂಥ ಒಂದಕ್ಕಿಂತ ಇನ್ನೊಂದು ಹೆಚ್ಚಿನ ಯೋಗ್ಯತೆ ಪಡೆದ ಪರೀಕ್ಷೆಗಳೆಂದು ಹೇಗೆ ಹೇಳೋಣ.


10.  ನನ್ನಂಥವರು ಇನ್ನೊಂದಿಷ್ಟು ಜನ ಇದ್ದರೆ ಈ ಕರ್ನಾಟಕದಲ್ಲಿ ಮರ‍್ಯಾದಸ್ತರೇ ಉಳಿಯುವುದಿಲ್ಲ.


11.  ಕನ್ನಡದ ಸಾಹಿತಿಯಾಗಬೇಕಾದವನು ಮೊದಲು ಬ್ರಾಹ್ಮಣದ್ವೇಷಿಯಾಗಬೇಕಾಗುವುದು ಅನಿವಾರ‍್ಯ ಹಾಗೂ ಅದು ನ್ಯಾಯ.


12.  ಬುದ್ಧಿ ಎಂದರೆ ತಿಳುವಳಿಕೆ ಎಂದರೆ ಇನ್ನೇನು! ಹಳೆಯ ಘಟನೆಗಳ ಹಿನ್ನೆಲೆಯಲ್ಲಿ ವರ್ತಮಾನವನ್ನು ಕುರಿತು ಆಲೋಚಿಸುವುದು ತಾನೆ!


13.  ಬದುಕು ಎಂದರೆ ನನಗೆ ಅನಂತವೂ ಬುದ್ಧಿಯುತವೂ ಆದ ತಂತ್ರ, ರಾಜತಂತ್ರ.


14.  ಸ್ತಬ್ಧ ಮೌನದಲ್ಲಿ ದೂರದ ಸಾವಿನಲ್ಲಿ ಹೆಜ್ಜೆ ಸಪ್ಪಳ ಕೇಳುತ್ತದೆ - ಯೌವ್ವನ ಅಲೆ ಎದ್ದ ಕೊಳದಂತೆ.


15.  ಕೇವಲ ಅಭಿವ್ಯಕ್ತಿ ಮಾಧ್ಯಮದ ದೆಸೆಯಿಂದ ನನ್ನ ಮಹತ್ವದ ಅರ್ಥವೆಲ್ಲಾ ನನ್ನೊಳಗೇ ಉಳಿದುಕೊಂಡಿದೆ ಎಂದು ನನ್ನ ನಂಬಿಕೆ.


16.  ಶಿಕಾರಿ ಎಂದರೆ ಉವಿನ ಅಳಿವಿನ ಹೋರಾಟ.


17.  ಶಿಕಾರಿ ಒಂದು ಅನಂತವಾದ ಜೂಜು.


18.  ಶಿಕಾರಿ ಒಂದು ವ್ಯಸನ. ಅದೊಂದು ಆಲೋಚನೆಗೆ ಹತ್ತುವ ಚಟ. ಆದರೆ ಶಿಕಾರಿಯನ್ನು ಕಂಡರೆ ನನಗೆ ಇಷ್ಟ. ಏಕೆಂದು ನನಗೆ ಸರಿಯಾಗಿ ಗೊತ್ತಿಲ್ಲ. ಮಾಂಸದಾಸೆಗಂತೂ ಅಲ್ಲ.


19.  ಅವಿವಾಹಿತರಾಗಿ ಒಟ್ಟಿಗೆ ಮಲಗುವುದು ಅಧಾರ್ಮಿಕ ಎಂದಲ್ಲ. ಎಲ್ಲಿ ಗರ್ಭಿಣಿಯಾಗಿಬಿಡುತ್ತಾಳೋ ಎಂಬ ಭಯದಿಂದ.


20.   ಸೃಷ್ಟಿಯ ಬಗ್ಗೆ, ಜೀವನದ ಬಗ್ಗೆ, ಆಲೋಚಿಸಿದಂತೆಲ್ಲಾ ನನ್ನ ಬಗ್ಗೆಯೇ ನನಗೆ ಒಂದು ತಿಳಿವು ಮೂಡತೊಡಗಿತು.

Rating
No votes yet

Comments