ಬಿಟ್ಟು ಬಿಡಿ ಅವರುಗಳನ್ನ ಅವರ ಪಾಡಿಗೆ

ಬಿಟ್ಟು ಬಿಡಿ ಅವರುಗಳನ್ನ ಅವರ ಪಾಡಿಗೆ

ಶಿವಮೊಗ್ಗದಲ್ಲಿ ಗಲಾಟೆ, ಹಾಸನದಲ್ಲಿ ದೊಂಬಿ, ಬೆಂಗಳೂರಿನಲ್ಲೂ ಒಂಚೂರು ಗಲಭೆ, ಇದು ಮೊನ್ನೆ ನಡೆದದ್ದು. ಕಾರಣ ಕನ್ನಡಪ್ರಭದ ಲೇಖನ. ಬಲಿಯಾದವರು ಯಾರೋ...?. ಇರಲಿ ಕಾರಣರು ಕಾರಣೀಕರ್ತರು ಹೊಣೆಗಾರರೂ ಎಲ್ಲವೂ ಒತ್ತಟ್ಟಿಗಿರಲಿ. ಪ್ರಪಂಚದ ಬಹಳ ಕಡೆ ಬೇರೆ ಬೇರೆ ರೂಪಾಂತರವಾಗಿ ಹೀಗೆ ನಡೆಯುತ್ತಲಿದೆ, ನಡೆಯುತ್ತದೆ. ಅವನ್ನೆಲ್ಲಾ ತಲೆಗೇರಿಸಿಕೊಂಡು ಕುಳಿತರೆ ನಮ್ಮ ಬದುಕು ಬೆಳಕಾಗುವುದಿಲ್ಲ.
ಮಾತೆತ್ತಿದರೆ ನಾವು ಇಪ್ಪತ್ತೊಂದನೇ ಶತಮಾನದ ವಿಷಯ ಎತ್ತಿ ಆಡಲು ಶೂರರು. ಇಂತಹ ವಿಷಯ ಬಂದಾಗ ಸಹಸ್ರಮಾನ ಹಿಂದೆ ಹೋಗಿಬಿಡುತ್ತೇವೆ. ಒಂದೆಡೆ ಆರಾಧಿಸುವ ಜನ ಮತ್ತೊಂದೆಡೆ ವಿರೋಧಿಸುವ ಜನ. ಎರಡೂ ಪ್ರಯೋಜನ ಇಲ್ಲ ಕೇವಲ ನಂಬಿಕೆ ಅಂತ ಮೂರನೆಯವರಾಗಿ ನಿಂತು ನೋಡಿದಾಗ ಅರ್ಥವಾಗುತ್ತದೆ. ಆದರೂ ಇವೆಲ್ಲಾ ನಡೆಯುತ್ತಲೇ ಇರುತ್ತದೆ. ಧರ್ಮಾಂಧತೆ ಎಷ್ಟರ ಮಟ್ಟಿಗೆ ಯಡವಟ್ಟೋ ಬುದ್ಧಿಜೀವಿಗಳೆಂದು ಹಣೆ ಪಟ್ಟಿ ಅಂಟಿಸಿಕೊಂಡ ವಿರೋಧಿಗಳೂ ಅಷ್ಟೇ ಯಡವಟ್ಟು.
ನಮ್ಮ ರಕ್ತಗಳಲ್ಲಿ ಒಂದಿಷ್ಟು ನಂಬಿಕೆಗಳನ್ನು ಅಂಟಿಸಿಕೊಂಡೇ ಜೀವನ ನಮ್ಮದು. ಒಬ್ಬರು ಹಿಂದೂ, ಮತ್ತೊಬ್ಬರು ಮುಸಲ್ಮಾನ ಮಗದೊಬ್ಬರು ಕ್ರಿಶ್ಚಿಯನ್ ಆನಂತರ ಜೈನ್ ಪಾರ್ಸಿ ಹೀಗೆ ಸಾಲು ಸಾಲುಗಳು. ಮತ್ತೊಂದೆಡೆ ಜಾತಿಯಿಲ್ಲ ಜನಿವಾರ ವಿಲ್ಲ ಅವೆಲ್ಲಾ ಕಪೋಲಕಲ್ಪಿತ. ಮನುಷ್ಯ ಎಂಬುದೊಂದೆ ಸತ್ಯ ಎಂದು ಸಾರುವ ಯತ್ನದ ಆ ತುದಿಯಲ್ಲಿರುವ ಜನರು. ಇವರುಗಳು ಧರ್ಮಾಂಧರಿಗಿಂತ ಅಪಾಯ. ನಾನು ಕಂಡಂತೆ ಜಾತಿಯಿಲ್ಲ ಜನಿವಾರ ವಿಲ್ಲ ಎಂದು ಮಧ್ಯ ವಯಸ್ಸಿನ ತನಕ ಹಾರಾಡಿ ನಂತರ ತಮ್ಮ ಮಕ್ಕಳ ಮದುವೆ ಸಮಯ ಬಂದಾಗ ಬ್ಯಾಟರಿ ತೆಗೆದುಕೊಂಡು ಹುಡುಕಿ ತಮ್ಮದೇ ಜಾತಿ ಒಳಪಂಗಡಕ್ಕೆ ಮದುವೆ ಮಾಡಿದ್ದು ಕಂಡಿದ್ದೇನೆ. ಇವರುಗಳು ಸುಮ್ಮನಾದರೆ ಕೆಣಕದಿದ್ದರೆ ತಾಕತ್ತಿಲ್ಲದ ಬಹಳಷ್ಟು ವಿಷಯ ತನ್ನಷ್ಟಕ್ಕೆ ಸತ್ತು ಹೋಗುತ್ತದೆ. ಆದರೆ ಅಸ್ತಿತ್ವದ ವಿಷಯದಲ್ಲಿ ತಗಾದೆ ತೆಗೆಯುವ ಇವರುಗಳು ಕಿತಬಿ ಎಬ್ಬಿಸಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಾರೆ.
ದೇವರಿಲ್ಲ ಅಂತ ನಂಬಿದವರಿಗೂ ದೇವರಿದ್ದಾನೆ ಅಂತ ನಂಬಿದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎರಡೂ ನಂಬಿಕೆಗಳಷ್ಟೆ. ಅದರಾಚೆ ಮತ್ತೊಂದು ಇರಬಹುದು. ತರ್ಕದ ತಾಕತ್ತಿನಮೇಲೆ ಜೀವನ ಅಷ್ಟೆ.
ಮಂಗಳೂರಿನಲ್ಲಿ ಶ್ರೀರಾಮ ಸೇನೆಯವರು ಪಬ್ ಗೆ ನುಗ್ಗಿ ಗಲಾಟೆ ಎಬ್ಬಿಸಿದಾಗ ನಮ್ಮೂರಲ್ಲಿ ಎರಡು ಜನರು ವಾಗ್ವಾದಕ್ಕಿಳಿದಿದರು.
ಒಬ್ಬ: ಮುತಾಲಿಕ್ ಮಾಡಿದ್ದು ಸರಿ , ಬಡ್ಡಿ ಮಕ್ಕಳು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಾರೆ.

ಮತೊಬ್ಬ:ಅದು ಹ್ಯಾಗೆ ಸರಿ, ಡ್ಯಾನ್ಸ್ ಮಾಡುವುದು ಪಬ್ ಗೆ ಹೋಗುವುದು ಅವರವರ ವೈಯಕ್ತಿಕ ವಿಷಯ, ಇದಕ್ಕೆ ಅಡ್ಡಿಪಡಿಸಲು ಮುತಾಲಿಕ್ ಯಾರು?
ಒಬ್ಬ: ನಿನ್ನ ತಂಗಿಗೋ ಅಕ್ಕನಿಗೋ ಹೀಗೆ ಎಳೆದುಕೊಂಡು ಹೋಗಿ ಹಾಳು ಮಾಡಿದ್ದರೆ ನಿನಗೆ ಅರ್ಥವಾಗುತ್ತಿತ್ತು , ಮುತಾಲಿಕ್ ಯಾರು ಅಂತ.
ಮತ್ತೊಬ್ಬ: ನೋಡು ನಾವು ಬದುಕುತ್ತಿರುವುದು ತಾಲಿಬಾನ್ ನಲ್ಲೋ ಭಾರತದಲ್ಲೋ? ನನ್ನ ತಂಗಿ ಮಾನಸಿಕವಾಗಿ ಪಬ್ ಗೆ ಹೋಗುವುದನ್ನು ಬಯಸಿದರೆ ಅಡ್ಡ ಗಾಲು ಹಾಕಲು ನಾನ್ಯಾರು?
ಒಬ್ಬ: ಇವೆಲ್ಲಾ ಭಾಷಣ ಬಿಗಿಯಲು ಚಂದ, ನಿಮ್ಮಂತಹ ಹೇತ್ಲಾಂಡಿಗಳು ಇರೋದ್ರಿಂದ ಅವರು ಹೆಚ್ಕೊಂಡಿರೋದು, ನಿಮ್ಗೆ ಮೊದಲು ಬಾರಿಸಬೇಕು
ಮೂರನೆಯವ- ಅಯ್ಯಾ ನೀವು ಅಲ್ಲಿಗೆ ಹೋಗೋರಲ್ಲ ಇಲ್ಲಿ ಕಿತ್ತಾಡ್ತೀರಿ. ಅಲ್ಲಿಗೆ ಹೋಗೋರು ಅರಾಮಾಗಿ ಮಜಾ ಮಾಡ್ತಾ ಇದಾರೆ. ಅವರವರದ್ದು ಅವರವರಿಗೆ ಬಿಡಿ, ನಿಮ್ಮ ವಾದದಿಂದ ಯಾವ ನಾಲ್ಕಾಣೆ ಬದಲಾವಣೆಯೂ ಆಗೋದಿಲ್ಲ.
ಹೀಗಾಗಿದೆ ನಮ್ಮ ಪರಿಸ್ಥಿತಿ. ದೇವರ ಧರ್ಮದ ಗಂಟು ಹೊತ್ತವನಿಗೆ ಯಾರು ವಿರೋಧಿಸುತ್ತಾರೆ ಎಂದು ನೋಡುವ ಚಟ. ಅವರನ್ನು ಬೆನ್ನೆತ್ತಿ ಬಡಿಯುವ ಆಸೆ. ದೇವರ ಅಸ್ತಿತ್ವದಲ್ಲಿ ಧರ್ಮದ ಸಮುದ್ರದಲ್ಲಿ ಕಿಂಚಿತ್ತೂ ನಂಬಿಕೆ ಯಿಲ್ಲದವನಿಗೆ ಅವರುಗಳನ್ನು ಕೆಣಕುವ ಚಟ, ನಾನೇ ಸೂಪರ್ ಎಂದು ಬಿಂಬಿಸುವ ಮಹದಾಸೆ. ಪರಸ್ಪರ ಎರಚುವ ಕೆಸರು ಅಮಾಯಯಕರ ಮೈಮೇಲೆ.
ಒಮ್ಮೆ ಇವೆಲ್ಲವನ್ನೂ ಬದಿಗಿರಿಸಿ ಭೂಮಿಯಿಂದ ಒಂದತ್ತು ಕಿಲೋಮೀಟರ್ ಮೇಲೆ ಮನಸ್ಸನ್ನು ಒಯ್ದು ನಿಲ್ಲಿಸಿಕೊಂಡರೆ ಅವಾಗ ಪರಮ ಸತ್ಯ ಗೋಚರಿಸುತ್ತದೆ. ಅಯ್ಯೋ ಇಷ್ಟು ದಿವಸ ನಾನು ಸುಮ್ಮನೆ ಗುದ್ದಾಡಿದೆನಲ್ಲ. ಇಷ್ಟು ಸೂಪರ್ ಸ್ವರ್ಗ ಮತ್ತೆಲ್ಲಿದೆ. ನಮ್ಮ ಪಾಡಿಗೆ ನಾವಿರುವ ವಿಚಾರದಲ್ಲಿ. ಹಾಗಾಗಿ ಬುದ್ದಿಜೀವಿಗಳೆಂದು ಕರೆಯಿಸಿಕೊಂಡು ಮುತಾಲಿಕ್ ಚರ್ಚೆಗೋ, ಬುರ್ಕಾ ವಿವಾದಕ್ಕೋ, ಬುಡನ್ ಗಿರಿ ವಿವಾದಕ್ಕೋ ಹೋಗಿ ವೇದಿಕೆಯೇರಿ ಕುಳಿತುಕೊಂಡು ಗಡ್ಡ ನೀವುವ ನಿಮ್ಮ ಚಟ ಕೈಬಿಡಿ. ನೀವೇ ಹೇಳುವಂತೆ ಧರ್ಮದ ಅಮಲಿನಲ್ಲಿ ತೇಲುತ್ತಿರುವವರಿಗೆ ಮಾನವೀಯತೆ ಕಾಣುವುದಿಲ್ಲ ಅಂದಾದ ಮೇಲೆ ಎಲ್ಲ ಅರ್ಥವಾದಂತಿರುವ ನಿಮಗೆ ಪ್ರಪಂಚ ತಿದ್ದುವ ಚಟ ಯಾಕೆ? ನೂರಾರು ವರ್ಷದಿಂದ ಹೀಗೆ ಎನೆಲ್ಲಾ ನಡೆದಿದೆ. ಸತ್ಯದ ತಾಕತ್ತು ಯಾವುದಕ್ಕೆ ಇಲ್ಲವೋ ಅದು ಅಳಿಸಿ ಹೋಗುತ್ತದೆ. ಅದಕ್ಕೆ ಯಾರ ಪ್ರಯತ್ನದ ಅಗತ್ಯವೂ ಇರುವುದಿಲ್ಲ.
ಅರಿವು ಎಂಬುದು ನಿಜವಾದ ವೈಯಕ್ತಿಕ ವಿಷಯ. ಅದಾದಾಗ ಎಲ್ಲವೂ ಶಾಂತ. ಆದರೆ ಪ್ರಕೃತಿ ಎಲ್ಲಾ ಮನುಷ್ಯರಿಗೂ ಅರಿವು ಮೂಡಿಸುವುದಿಲ್ಲ ಎಂಬುದು ಅಷ್ಟೇ ಸತ್ಯದ ವಿಷಯ.

Rating
No votes yet

Comments