ಬರಹ - ಕಾಮೆಂಟು - ಕಲಹ - ಬೇಸರ

ಬರಹ - ಕಾಮೆಂಟು - ಕಲಹ - ಬೇಸರ

ಕೆಲವೇ ತಿಂಗಳುಗಳ ಹಿಂದೆ ನಾನು ಮತ್ತು ಕೆಲವು ಗೆಳೆಯರು ನಮ್ಮಲ್ಲೇ ಇದ್ದ ಒಬ್ಬ ಪತ್ರಕರ್ತರೊಡನೆ ಮಾತಾಡುತ್ತಿದ್ದೆವು. ಆಗ ತಾನೇ ಸಂಪದದ ಒಂದು ಚರ್ಚೆ ಬಹಳ ಬಿಸಿಯಾಗಿತ್ತು. ಆದದ್ದು ಇಷ್ಟೇ. ಹಿರಿಯರೊಬ್ಬರು ಬರೆದ ಬರಹ ಸರಿಯಿಲ್ಲ ಅಂತ ಕೆಲವರು ಕಮೆಂಟು ಹಾಕಿದ್ದರು. ಅದಕ್ಕೆ ಹಿರಿಯರ ಕೋಪ. ನಾನು ಇಂದ್ರ/ಚಂದ್ರ ನನಗೆ ಹೇಳಲು ನೀವ್ಯಾರು ಅಲ್ಲ ಎಂದೆಲ್ಲಾ ಮಾತುಗಳು. ನಿಜಜೀವನದಲ್ಲಿ ಬರಹಗಾರ ಒಬ್ಬ ದೊಡ್ಡವ್ಯಕ್ತಿಯೇ ಸರಿ. ಆದರೆ ಅವರಿಗೆ ತಾವು ಬರೆದದ್ದೇ ಸರಿ ಎನ್ನುವ ಅಹಂಕಾರ. ಈ ಅಹಂಕಾರ ಇಂಟರ್ನೆಟ್ ಅನ್ನುವ ಸಣ್ಣ ಸೂಜಿಯಿಂದ ಟಪ್ ಅಂದಿತ್ತು. ಆಗ ನಮ್ಮ ಪತ್ರಕರ್ತ ಗೆಳೆಯರೊಡನೆ ಚರ್ಚೆ ಮಾಡಿದ ಸಾರಾಂಶ.
೧. ಇಂಟರ್ನೆಟ್ನಲ್ಲಿ ಬರೆದ ಬರಹ ಎಲ್ಲರೂ ಓದುವಂಥದ್ದು. ಇಲ್ಲಿ ಹಿರಿಯ/ಕಿರಿಯ, ಹೆಣ್ಣು/ಗಂಡು, ಬಡವ/ಚಿನ್ನದ ಚಮಚ ಬಾಯಲ್ಲೇ ಇಟ್ಟುಕೊಂಡು  ಹುಟ್ಟಿದವ, ೧೦ ಡಿಗ್ರಿ ತೆಗೆದುಕೊಂಡವ/sslc ಫೇಲ್ ಆದವ ಅನ್ನೋ ಬೇಧ ಭಾವ ಇಲ್ಲ. ತಪ್ಪಿದ್ದರೆ ಅದನ್ನು ಹೇಳೋ ಹಕ್ಕು ಎಲ್ಲರಿಗು ಇದೆ
೨. ಹೇಳೋ ಮಾತನ್ನು ಅನೇಕ ರೀತಿ ಹೇಳಬಹುದು. ಕೆಲವರಿಗೆ ನೇರವಾಗಿ ಹೇಳಿದರೆ ಬೇಸರ. ಹಾಗೆಯೇ ಸರ್ಕ್ಯಾಸಮ್ (sarcasm) ಬಹಳ ಸಾಮಾನ್ಯ. ತಾಳಿಕೊಳ್ಳಬೇಕು.
೩. ತಾನೇ ಸರಿ, ತಾನು ಬರೆದಿದ್ದೆ ಸರಿ ಎಂದಿದ್ದರೆ ಒಂದಲ್ಲಾ ಒಂದು ದಿನ ಅಹಂಕಾರಕ್ಕೆ ಪೆಟ್ಟು ಬೀಳುತ್ತದೆ.
೪. ಬ್ಲಾಗ್ ಬರವಣಿಗೆ (ಸಂಪದದಲ್ಲೋ ಬೇರೆಲ್ಲೋ ಬರೆವ ಬರವಣಿಗೆ)  ಹೆಚ್ಚು ಜನರನ್ನು ತಲುಪುತ್ತದೆ. ಹಾಗೆಯೇ ಓದಿದವರಿಗೆ ತಕ್ಷಣ ಪ್ರತಿಕ್ರಿಯೆ ನೀಡುವ ಅವಕಾಶ ಕೊಡುತ್ತದೆ. ಅದೇ ಪೇಪರಿನಲ್ಲಿ ಬರೆವ ಲೇಖನಕ್ಕೆ ಬರುವ ಪ್ರತಿಕ್ರಿಯೆಗಳ ಸಂಖ್ಯೆ ಕಡಿಮೆ. ಇದಕ್ಕೆ ಕಾರಣಗಳು ಅನೇಕ. ಹೀಗಾಗಿ ಸಂಪದದಲ್ಲಿ  ಬಂದ ಪ್ರತಿಕ್ರಿಯೆಗಳು ಕಂಡು ಬೇಸರ ಆಗಬಹುದು. ಅತೀವ ಸಂತೋಷವೂ ಆಗಬಹುದು. ಎರಡನ್ನೂ ಸಮನಾಗಿ ತೆಗೆದುಕೊಳ್ಳಬೇಕು.
೫. ಕಂಡ ಬರಹಗಳಿಗೆಲ್ಲಾ "ಚೆನ್ನಾಗಿದೆ. ವಾಹ್. ತುಂಬಾ ಚೆನ್ನಾಗಿ ಬರೆದಿದ್ದೀರ" ಅನ್ನೋದು, ಅದಕ್ಕೆ ಮತ್ತೆ ಲೇಖಕ "ಧನ್ಯವಾದಗಳು ಓದಿದ್ದಕ್ಕೆ" ಅನ್ನೋದು ಬಾಲಿಶ ಅನ್ನಿಸುತ್ತೆ. ಸುಮ್ಮನೆ bandwidth ಹಾಳು. "ನಾನು ಹೊಸಬ ಇಲ್ಲಿಗೆ ಬಂದಿದ್ದೇನೆ, ಸ್ವಾಗತಿಸಿ" ಅನ್ನೋದು ಇನ್ನೂ ತಮಾಷೆ. ಇಲ್ಲಿಗೆ ಬರಲು ಯಾವ ಬಾಗಿಲೂ ಇಲ್ಲ. ಬರೆಯುವುದು ನಮ್ಮ ಚಟಕ್ಕೆ ಅಷ್ಟೇ. ಸ್ವಾಗತಿಸಿದರೂ ಬಿಟ್ಟರೂ ಯಾವ ವ್ಯತ್ಯಾಸ ಆಗುವುದಿಲ್ಲ. 

ಇದಿಷ್ಟು ನನಗೆ ಈಗ ನೆನಪಿಗೆ ಬಂದದ್ದು. ಇನ್ನಷ್ಟನ್ನು ನಾನು ಮುಂಚೆಯೇ ಹೇಳಿದ್ದೆ. href=http://sampada.net/blog/inchara123/16/02/2009/16918#comment-52953

ವಿ.ಸೂ:
೧. ಬರಹ ಚೆನ್ನಾಗಿದೆ ಅಂತ ಪ್ರತಿಕ್ರಿಯೆ ಕೊಡಬೇಡಿ. :)  irony  ಆಗಿಹೋಗುತ್ತದೆ!
೨. ಇವು ನನ್ನ ಅನಿಸಿಕೆ ಅಷ್ಟೇ.

Rating
No votes yet

Comments