ದಂಡಂ ಸಹಸ್ರ ಗುಣಂ ಭವೇತ್!
ಸರಕಾರಿ ಆಸ್ಪತ್ರೆಯ ಮುದಿ ನರ್ಸು ನಮ್ಮೆರಡೂ ಕಾಲುಗಳ ಪಾದಗಳನ್ನು ತನ್ನ ಕೈಗಳಲ್ಲಿ ಒತ್ತಿ ಹಿಡಿದು ನಮ್ಮ ತಾಯಿಯ ಗರ್ಭದಿಂದ ಹೊರಗೆಳೆದ ಕ್ಷಣದಲ್ಲೇ ನಮಗೆ ಒಂದು ಸಂಗತಿ ಅರಿವಾಗಿ ಹೋಗಿತ್ತು: ನಾವು ಸಾಮಾನ್ಯವಲ್ಲ. ನಾವು ಸಮ್ರಾಟರು. ಇಷ್ಟು ದೊಡ್ಡ ಹೊಟ್ಟೆಯ ನರ್ಸು ನಮ್ಮ ಪಾದಗಳನ್ನು ಹಿಡಿದಿರುವಾಗ ನಾವು ಮಹಾಮಹಿಮರೇ ಇರಬೇಕು.
ಮರುದಿನ ತರಗತಿಗೆ ಕಾಲಿಟ್ಟೊಡನೆ ಆತ ತನ್ನ ಟೇಬಲಿನಿಂದ ಬಾರು ಕೋಲನ್ನು ಹೊರ ತೆಗೆಯುತ್ತಿದ್ದ. ಕಡೇ ಬೆಂಚಿನಿಂದ ಶುರು ಮಾಡಿಕೊಂಡು ತಾನು ಹಿಂದಿನ ದಿನ ‘ಬೋಧಿಸಿದ’ ವಿಷಯವನ್ನು ಒಪ್ಪಿಸುವಂತೆ ಗದರುತ್ತಿದ್ದ. ಎದ್ದು ನಿಂತ ಹುಡುಗ ಏನಾದರೊಂದು ಒದರಿದ್ದರೂ ನಡೆದು ಹೋಗುತ್ತಿತ್ತು. ಏಕೆಂದರೆ ಆ ಶಿಕ್ಷಕನಿಗೆ ತಾನು ಬೋಧಿಸಿದ ವಿಷಯವೇನು ಎನ್ನುವುದೇ ನೆನಪಿರುತ್ತಿರಲಿಲ್ಲ. ಉತ್ತರ ಪರೀಕ್ಷಿಸುವುದಕ್ಕೆಂದು ಎಲ್ಲರೆದುರು ನೋಟ್ ಬುಕ್ ತೆರೆಯುವುದು ಅಪಮಾನ ಎಂದೆಣಿಸಿ, ಉತ್ತರ ಹೇಳುತ್ತಿರುವವನ ಧ್ವನಿಯ ಏರಿಳಿತ, ಹಣೆಯ ಮೇಲಿನ ಬೆವರ ಸಾಲು, ಒಂದೇ ಸಾಲನ್ನು ಪುನರುಚ್ಚಿಸುವಾಗಿನ ಮುಖಭಾವ, ನಿಂತುಕೊಂಡ ಭಂಗಿ ಹೀಗೆ ನಾನಾ ಮೂಲದ ಮಾಹಿತಿ ಸಂಗ್ರಹಿಸಿ ಟಿವಿಯ ಕ್ವಿಜ್ ಕಾರ್ಯಕ್ರಮದಲ್ಲಿ ವಿಚಿತ್ರ ಮುಖ ಮಾಡಿಕೊಂಡು ಉತ್ತರ ಊಹಿಸುವವರ ಹಾಗೆ ಆತ ಊಹೆ ಮಾಡುತ್ತಿದ್ದ. ವಿಭಕ್ತಿ ಪ್ರತ್ಯಯದಿಂದ ಉತ್ತರ ಶುರು ಮಾಡಿ ಪ್ಲಾಸಿ ಕದನದ ವಿವರಣೆಯೊಂದಿಗೆ ಮುಗಿಸಿದರೂ ಆತನಿಗೆ ವ್ಯತ್ಯಾಸವಾಗುತ್ತಿರಲಿಲ್ಲ. ಹೆದರದೆ, ತೊದಲದೆ, ನಿರಂತರವಾಗಿ ಟಿವಿ ನಿರೂಪಕಿಯ ಹಾಗೆ ಉಲಿಯುವುದೇ ಉತ್ತಮ ವಿದ್ಯಾರ್ಥಿಯ ಲಕ್ಷಣ ಎಂಬುದು ಆತನ ಸಿದ್ಧಾಂತವಿದ್ದಂತಿತ್ತು. ಹೀಗಾಗಿ ಸುಂದರ ಮುಖದ, ಟಿವಿ ನಿರೂಪಕಿಯರೋ, ಗಗನ ಸಖಿಯರೋ ಆಗುವ ಉಜ್ವಲ ಭವಿಷ್ಯವಿದ್ದ ವಿದ್ಯಾರ್ಥಿನಿಯರಿಗೆ ಆತನ ಬಾರು ಕೋಲಿನ ಸ್ಪರ್ಶದ ಅನುಭವ ಸಿಕ್ಕುತ್ತಲೇ ಇರಲಿಲ್ಲ!
ಚಿಕ್ಕಂದಿನಲ್ಲಿಯೇ ನಮ್ಮ ಅವತಾರದ ಉದ್ದೇಶ ಅರಿತಿದ್ದ ನಾವು, ಮಾತು ಮಿತವಾದಷ್ಟೂ ವ್ಯಕ್ತಿತ್ವಕ್ಕೆ ಹಿತ ಎಂದು ನಂಬಿದ್ದೆವು. ಸಾಮ್ರಾಟರಾದ ನಮ್ಮನ್ನು ಪ್ರಶ್ನಿಸುವ ಹಕ್ಕು ಯಾವ ಹುಲು ಮಾನವನಿಗೂ ಇಲ್ಲ ಎನ್ನುವುದೇ ನಮ್ಮ ನಂಬುಗೆಯಾಗಿತ್ತು. ಹೀಗಾಗಿ ನಮಗೂ ಆ ಶಿಕ್ಷಕನ ಬಾರು ಕೋಲಿಗೂ ಗಳಸ್ಯ-ಕಂಠಸ್ಯ ನಂಟು ಬೆಳೆದಿತ್ತು. ಪ್ರತಿಬಾರಿ ನಮ್ಮ ರಾಜಠೀವಿಯ ಅಂಗೈಗಳ ಮೇಲೆ ಬಾರು ಕೋಲಿನ ಮುದ್ರೆ ಮೂಡಿಸುವಾಗಲೂ ಆ ಶಿಕ್ಷಕ ಒಂದು ಕತೆ ಹೇಳುತ್ತಿದ್ದ.
ಒಂದಾನೊಂದು ಊರಿನಲ್ಲಿ ಎರಡು ಕಲ್ಲು ಬಂಡೆಗಳಿದ್ದವು. ಶಿಲ್ಪಿಯು ಅವರೆಡನ್ನೂ ತಂದು ಉಳಿಯ ಏಟು ಕೊಡಲಾರಂಭಿಸಿದ. ಅಸಂಖ್ಯಾತ ಏಟುಗಳನ್ನು ತಾಳ್ಮೆಯಿಂದ ಸಹಿಸಿಕೊಂಡ ಕಲ್ಲು ದೇವಾಲಯದಲ್ಲಿ ದೇವರ ಮೂರ್ತಿಯಾಗಿ ಪೂಜೆ ಪಡೆಯಿತು, ಏಟು ತಿನ್ನಲು ನಿರಾಕರಿಸಿ ಒಡೆದ ಕಲ್ಲು ಚಪ್ಪಡಿಯು ಮೆಟ್ಟಿಲಿನ ಹಾಸಾಗಿ ಬಂದು ಹೋದುವವರಿಂದ ತುಳಿಸಿಕೊಂಡು ಒದೆಸಿಕೊಂಡು ಕಾಲ ಕಳೆಯುತ್ತಿತ್ತು ಎಂದು.
ಜೀವನದಲ್ಲಿ ಪ್ರತಿಬಾರಿ ಏಟು, ಒದೆತ ತಿನ್ನುವಾಗಲೂ ನಮಗೆ ಈ ಕತೆ ನೆನಪಾಗುತ್ತಿತ್ತು. ಈಗ ಬಿದ್ದ ಏಟು ಮುಂದೆ ನಾವು ಸಮಸ್ತ ಸಾಮ್ರಾಜ್ಯದ ಸಾಮ್ರಾಟರಾಗುವುದಕ್ಕೆ ನೆರವಾಗುವಂಥದ್ದು ಎಂದೇ ಭಾವಿಸುತ್ತಿದ್ದೆವು. ಅದಕ್ಕೇ ಒಂದು ಏಟು ಬೀಳುವ ಸಂದರ್ಭದಲ್ಲಿ ಕಿತಾಪತಿ ಮಾಡಿ ಎರಡು, ಮೂರು ಏಟು ತಿನ್ನುತ್ತಿದ್ದೆವು. ಬದುಕಿನಲ್ಲಿ ಅಷ್ಟು ಏಟು ತಿಂದಿರುವುದಕ್ಕೇ ನಾವಿಂದು ಹೀಗಿರುವುದು.