ಮಂಕೀಸ್ ಪಾ (ಕೋತಿಯ ಮುಂಗೈ

ಮಂಕೀಸ್ ಪಾ (ಕೋತಿಯ ಮುಂಗೈ

ಪುಸ್ತಕದ ಲೇಖಕ/ಕವಿಯ ಹೆಸರು
ವಿಲಿಯಂ ವೇಮರ್ಕ್ ಜಾಕೋಬ್
ಪ್ರಕಾಶಕರು
ಸೆಪ್ಟೆಂಬರ್ ೧೯೦೨ , ಇಂಗ್ಲೆಂಡ್

ಕೆಲವು ಸಣ್ಣ ಕತೆಗಳು, ನಾಟಕಗಳು ಒಮ್ಮೆ ಓದಿದರು ಜೀವನ ಪೂರ್ತಿ ನೆನಪಿರುತ್ತವೆ ! . ಅಂತಹ ಒಂದು ನಾಟಕ, ಕತೆ , ಮಂಕೀಸ್ ಪಾ.

ಅದು ಸುಮಾರು ೧೯೭೬-೭೭ ನಾನಾಗ ತುಮಕೂರಿನಲ್ಲಿ ಪದವಿಪೂರ್ವವನ್ನು ಸಿದ್ದಗಂಗ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಅಂಗ್ಲ ಬಾಷೆ ಓದಿಗಾಗಿ 'ಮಾಡ್ರನ್ ಒನ್ ಆಕ್ಟ್ ಪ್ಲೇ ಶೀರ್ಷಿಕೆಯಲ್ಲಿ ಇದ್ದ ಪ್ರಸಿದ್ದ ನಾಟಕ ಮಂಕೀಸ್ ಪಾ. ಕಾಲೇಜಿನಲ್ಲಿ ಆಗ ಧ್ರುವಕುಮಾರ್ ಎಂಬ ಅಂಗ್ಲ ಉಪನ್ಯಾಸಕರಿದ್ದರು. ವಿಶಿಷ್ಟ ವ್ಯಕ್ತಿತ್ವ ಅವರದು, ಅವರ ಮಾತು, ನಡೆ ನುಡು ಎಲ್ಲ ನಮಗೊಂದು ಕುತೂಹಲ. ಹುಡುಗಿಯರು ಅವರನ್ನು ಧರ್ಮೇಂದ್ರ ಎಂದೆ ಕರೆಯುತ್ತಿದ್ದರು. ಪಾಠ ಮಾಡಲು ನಿಂತರೆ ಕಣ್ಣೆದುರು ಪಾತ್ರಗಳು ಕುಣಿಯುವಂತೆ ವರ್ಣಿಸುತ್ತಿದ್ದರು. ಆಗ ಅವರು ತೆಗೆದುಕೊಂಡ ನಾಟಕ ಪಠ್ಯ ಈ ಮಂಕೀಸ್ ಪಾ

ನಾಟಕದ ವಿವರ:

ಕತೆಯಲ್ಲಿ ಮಿ! ವೈಟ್ ಹಾಗು ಅವನ ಪತ್ನಿ ಮಿಸೆಸ್ ! ವೈಟ್ ಪ್ರಮುಖ ಪಾತ್ರಗಳು, ವೃದ್ದರು, ಅವರ ಮಗ ಹರ್ಬರ್ಟ್ , ಫ್ಯಾಕ್ಟರಿ ಒಂದರಲ್ಲಿ ಕೆಲಸಗಾರ. ಮೇಜರ್ ಮೋರಿಸ್ ಎಂಬಾಗ ಭಾರತದಲ್ಲಿ ಸೈನ್ಯದಲ್ಲಿ ಇದ್ದವನು, ಮಿ!ವೈಟ್ ರ ಸ್ನೇಹಿತ. ಅವನು ಒಮ್ಮೆ ತಾನು ಭಾರತದಲ್ಲಿದ್ದಾಗ ಫಕೀರನೊಬ್ಬನಿಂದ ಪಡೆದ ತಾಯಿತ ತೋರುವನು, ಅದು ಕೋತಿಯ ಮುಂಗೈನಿಂದ ಮಾಡಿರುವುದು. ಮತ್ತು ಅದು ಮಂತ್ರ ಶಕ್ತಿ ಹೊಂದಿದ್ದು , ಅದನ್ನು ಪಡೆದವ ಬೇಡುವ ಯಾವುದೆ ಮೂರು ವರಗಳನ್ನು ಖಂಡೀತ ನೆರವೇರಿಸುವದೆಂದು, ತನಗೆ ಅದರ ಅವಶ್ಯಕತೆ ಇಲ್ಲವೆಂದು ತಿಳಿಸಿ ಕೊಟ್ಟು ಹೋಗುವನು.

ಲಘು ಸ್ವಭಾವದಿಂದ, ಅದನ್ನು ಪರೀಕ್ಷಿಸಲು ಎಂಬಂತೆ, ಮಿ! ವೈಟ್ ದಂಪತಿಗಳು, ತಾವು ಕಟ್ಟ ಬೇಕಿದ್ದ ಮನೆಯ ಸಾಲದ ಕಡೆಯ ಕಂತು ಎರಡು ನೂರು ಪೌಂಡ್ ಗಳು ಹೇಗಾದರು ಸಿಗಲಿ ಎಂದು , ಅ ಮಂತ್ರ ಶಕ್ತಿಯ ತಾಯಿತ ಹಿಡಿದು ಕೇಳಿಕೊಳ್ಳುವರು. ಆ ದಂಪತಿಗಳಿಗೆ ಅಘಾತವೊಂದು ಕಾದಿರುತ್ತದೆ, ಸಂಜೆ ಮಗನನ್ನು ಕಾಯುತ್ತಿರುವಾಗ ಮಗನ ಬದಲಿಗೆ ಅವನು ಕೆಲಸ ಮಾಡುವ ಪ್ಯಾಕ್ಟರಿ ಯಿಂದ್ ಸುದ್ದಿ ಬರುತ್ತದೆ, ಕೆಲಸ ಮಾಡುವಾಗ ಅಜಾಗರುಕತೆಯಿಂದ ಅವರ ಮಗ ಹರ್ಬಟ್ ಯಂತ್ರಕ್ಕೆ ಸಿಕ್ಕಿ ಛಿದ್ರ ಛಿದ್ರವಾಗಿ ಸತ್ತು ಹೋದನೆಂದು ತಿಳಿಸಿ, ಶವವನ್ನು ತಂದು ಒಪ್ಪಿಸಿ, ಕಂಪನಿಯ ಮಾಲಿಕರು ಪರಿಹಾರಾರ್ಥವಾಗಿ ಎರಡು ನೂರು ಪೌಂಡ್ ಗಳನ್ನು ಕೊಟ್ಟು ಕಳಿಸುವರು.

ಮೊದಲ ವರ ನೆರವೇರಿದ ರೀತಿಗೆ ದಂಪತಿಗಳಿಬ್ಬರು ಅಘಾತ ಹೊಂದುವರು. ಮಗನ ಶವ ಸಂಸ್ಕಾರ ಮುಗಿಸಿ ಕೆಲವು ದಿನದ ನಂತರ, ಮನದ ಸಮತೋಲನೆ ಕಳೆದು ಕೊಂಡಂತೆ , ಹರ್ಬರ್ಟ್ ನ ತಾಯಿ, ಅದೆ ತಾಯಿತವನ್ನು ತನ್ನ ಮಗು ಬದುಕಿ ಬರುವಂತೆ ಕೇಳಿಕೊಳ್ಳಲು ತಿಳಿಸುವಳು, ಅವನು ಅವಳನ್ನು ಸಮಾದಾನಪಡಿಸಲು ಅಂತೆಯೆ ಮಾಡುವನು. ಮರುಕ್ಷಣದಲ್ಲಿ ಹೊರಗೆ ಬಾಗಿಲು ತಟ್ಟುವ ಶಬ್ದ ಮತ್ತು ಯಾರೊ ಅಮ್ಮನನ್ನು ಕೂಗುತ್ತಿರುವ ಶಬ್ದ, ದಂಪತಿಗಳು ಸ್ವಷ್ಟವಾಗಿ ಗುರುತಿಸುವರು, ಹೊರಗೆ ಕೂಗುತ್ತಿರುವುದು ಹರ್ಬರ್ಟ್ ಅಂದರೆ ಅವರ ಮಗನ ದ್ವನಿ. ತಾಯಿ ಮಗ ಬಂದನೆಂದು ಭ್ರಮೆಯಿಂದ ಬಾಗಿಲು ತೆರೆಯಲು ನಡೆಯುವಳು. ಮಿ! ವೈಟ್ ಸಾಕಷ್ಟು ಗಾಭರಿ ಹೊಂದುವನು, ತಾನೆ ದೇಹ ಛಿದ್ರಗೊಂಡಿದ್ದ ಮಗನನ್ನು ಗೋರಿಗೆ ಸೇರಿಸಿ ಬಂದಿರುವ ಈಗ, ಅವನು ಎದ್ದು ಬಂದಿದ್ದಾನೆ ಎಂದರೆ ಏನು ಗತಿ. ತಕ್ಷಣ ನಿರ್ದಾರ ತೆಗೆದುಕೊಂಡು, ಮೂರನೆ ವರವಾಗಿ ತನ್ನ ಮಗನು ಮತ್ತೆ ಮೊದಲಿನ ಸ್ಥಳಕ್ಕೆ ತೆರಳಲಿ ಹಿಂದೆ ಬರುವುದು ಬೇಡ ಎಂದು ತಾಯಿತ ಹಿಡಿದು ಕೇಳುವ, ಹೊರಗೆ ಕೇಳುತ್ತಿದ್ದ ಮಗನ ದ್ವನಿ ನಿದಾನಕ್ಕೆ ಕರಗಿ ಹೋಯಿತು.

ದು:ಖ ಪೂರ್ಣಳಾದ ತಾಯಿ ತನ್ನ ಮಗನನ್ನು ನಿರೀಕ್ಷಿಸುತ್ತ ಬಂದು ಬಾಗಿಲು ತೆರೆದಳು. ಹೊರಗೆ ಯಾರು ಇರುವದಲ್ಲಿ, ಅದೆ ನೀರಸ ಇಳಿಬೆಳಕಿನ ವಾತವಾರಣ. ತಣ್ಣಗೆ ಬೀಸುತ್ತಿರುವ ಕುಳಿರ್ಗಾಳಿ, ಮಳೆಯ ತುಂತುರು ಅಷ್ಟೆ. ಗಂಡ ಆಕೆಯನ್ನು ಮತ್ತೆ ಒಳಗೆ ಕರೆದೊಯ್ಯುವ.

ಕತೆಯ ನೀತಿ ಪಕೀರ ಹೇಳುವಂತೆ, ನಮ್ಮ ಜೀವನವನ್ನು ನಿಯಂತ್ರಿಸುವುದು ಒಂದು ವಿದಿ, ನಾವು ಅದರ ವಿರುದ್ದ ಹೋರಟರೆ, ಪರಿಣಾಮ ಬೀಕರ

ವಿದ್ಯಾರ್ಥಿ ಜೀವನದಲ್ಲಿ ಓದಿದ ಸಣ್ಣ ಕತೆಯಾದರು, ಕತೆಯ ಪಾತ್ರಗಳು, ಪರಿಣಾಮ, ಎಲ್ಲಕ್ಕಿಂತ ಹೆಚ್ಚಾಗಿ, ಪ್ರಾಧ್ಯಾಪಕರು ಅದನ್ನು ವಿವರಿಸಿದ ಶೈಲಿ ಎಲ್ಲವು ಸೇರಿ ಮನದಲ್ಲಿ ಹಸಿರಾಗಿ ನಿಂತಿದೆ. ಪ್ರಾಧ್ಯಾಪಕರು ನಾಟಕದ ಪಾತ್ರಗಳ ಸಂಬಾಷಣೆ ಹೇಳುವಾಗ, ಅದಕ್ಕೆ ತಕ್ಕಂತೆ ತಮ್ಮ ದ್ವನಿ ಸಹ ಬದಲಾಯಿಸುತ್ತ ಇದ್ದದ್ದ, ಹೆಣ್ಣು ಪಾತ್ರ ವಿದ್ದರೆ ಅವರ ದ್ವನಿ ಸಹ ಹೆಣ್ಣಿನಂತೆಯೆ ದ್ವನಿಸುತ್ತ ಇದ್ದದ್ದು, ಯಾವುದೊ ಹಳೆಯ ಭ್ರಮೆಯ ಲೋಕಕ್ಕೆ ಕೊಂಡೊಯ್ಯುತ್ತದೆ.