ಸಾಮಾನ್ಯನ ಓದು

ಹಳೆಯ ತುಷಾರ ( ತಿಂಗಳ ಪತ್ರಿಕೆ ) ಒಂದನ್ನು ಓದುತ್ತಿದ್ದೆ. ಅದರಲ್ಲಿ ಮಹಾಭಾರತ ಕುರಿತಾದ ಲಕ್ಷ್ಮೀಶ ತೋಳ್ಪಾಡಿಯವರ ಒಂದು ಲೇಖನ ಕಂಡಿತು. ಅದು ಮುಂದಿನ ಸಂಚಿಕೆಯಲ್ಲಿ ಮುಂದುವರಿದದ್ದು , ಸದ್ಯ ಆ ಸಂಚಿಕೆಯು ನನ್ನಲ್ಲಿತ್ತು. 

ಮಹಾಭಾರತದಲ್ಲಿ ಕೃಷ್ಣ ಮತ್ತು ಧರ್ಮರಾಜನ ಕುರಿತಾಗಿ ಈ ಲೇಖನ ಇತ್ತು. ಕೃಷ್ಣನು ಸಾಕ್ಷಾತ್ ಕಾಲನೇ ಆಗಿದ್ದು ಲೋಕದ ನಾಶಕ್ಕೆ ಕಾರಣ ಎಂದು ಸ್ವತಃ ಹೇಳಿಕೊಂಡಿದ್ದಾನೆ. ಅವನ ಪಾಲಿಗೆ ಮಹಾಭಾರತದಲ್ಲಿ ಬರುವ 14 ಅಕ್ಷೋಹಿಣಿ ಸೈನ್ಯದಷ್ಟು ಜನರ ಸಾವು ಸಹಜ. ಅವನ ಪಾಲಿಗೆ ಎಲ್ಲರೂ ಈ ಸರ್ವನಾಶದ ನೆಪ ಮಾತ್ರರು, ಕೇವಲ ನಿಮಿತ್ತರು. ಇದೆಲ್ಲ ಆಗಬೇಕಾದದ್ದೇ ಎಂಬ ನಿರ್ಲಿಪ್ತತೆ ಅವನಲ್ಲಿ ಇದೆ.

ಆದರೆ ಧರ್ಮರಾಯನು ಧರ್ಮಸ್ವರೂಪಿಯಾಗಿದ್ದಾನೆ.  ಅವನು ರಾಜಸೂಯಯಾಗ ಮಾಡಿದಾಗಲೇ ವ್ಯಾಸ ಮಹರ್ಷಿಯವರು ನೀನು ಕುಲ ನಾಶಕ್ಕೆ ಕಾರಣನಾಗುತ್ತೀಯ ಎಂದು ಹೇಳಿದ್ದರು. ಅವನು ಮೊದಲೇ ಸೂಕ್ಷ್ಮ ಮನಸ್ಸಿನವನು. 

(ಎಚ್ ಎಸ್ ವೆಂಕಟೇಶಮೂರ್ತಿ ಅವರು ಯಾವುದೋ ಒಂದು ಲೇಖನದಲ್ಲಿ ಹೇಳಿದ ಹಾಗೆ ಬಾಲ್ಯದ ವಿದ್ಯಾಭ್ಯಾಸ ಕಾಲದಲ್ಲಿ ಆಚಾರ್ಯರು ಅರ್ಜುನನಿಗೆ   ಒಂದು ಹಕ್ಕಿಯು ಕೂತ ಮರವನ್ನು ತೋರಿಸಿ ನಿನಗೆ ಏನು ಕಾಣಿಸುತ್ತದೆ ಎಂದು ಕೇಳಿದ್ದರು. ಅರ್ಜುನನು ಶ್ರೇಷ್ಠ ಧನುರ್ಧಾರಿ ಅಲ್ಲವೇ ? ಅವನು ಹಕ್ಕಿಯ ಕಣ್ಣು ಕಾಣಿಸುತ್ತದೆ ಎಂದು ಹೇಳಿದೆ. ಅವನು ತನ್ನ ಗುರಿಯನ್ನು ಅರಿತವನು, ಅದನ್ನು ಸಾಧಿಸಬಲ್ಲವನು. ಆದರೆ ಧರ್ಮರಾಯನಿಗೆ ಕೇವಲ ಹಕ್ಕಿಯ ಕಣ್ಣು ಕಾಣಿಸುವುದಿಲ್ಲ,  ಹಕ್ಕಿ,  ಹಕ್ಕಿಯ ಗೂಡು, ಹಕ್ಕಿಯ  ಸಂಸಾರ, ಹಕ್ಕಿಯ ಮರಿಗಳು ಹೀಗೆ ಎಲ್ಲವನ್ನೂ ಅವನು ನೋಡುತ್ತಾನೆ. ಒಂದು ಸಮಗ್ರ ದೃಷ್ಟಿಕೋನ ಇದೆ ಅವನಲ್ಲಿ, ಒಂದು ಹಕ್ಕಿಯನ್ನು ಬಾಣಕ್ಕೆ ಗುರಿ ಮಾಡುವುದರಿಂದ ಆಗಬಹುದಾದ ಅನಾಹುತಗಳನ್ನು ಭೂತದಯಾ ದೃಷ್ಟಿಯಿಂದ ಅವನು ನೋಡುತ್ತಾನೆ.)

ಇರಲಿ, ಲಕ್ಷ್ಮೀಶ ತೋಳ್ಪಾಡಿಯವರ ಈ ಲೇಖನದಲ್ಲಿ ಧರ್ಮರಾಜನಲ್ಲಿ ತನ್ನ ಕುಲನಾಶಕ್ಕೆ ತಾನೇ ಕಾರಣನಾಗುತ್ತಾಗುವುದರ ಬಗೆಗೆ ಆತಂಕ ಇದೆ, ಅಳುಕು ಇದೆ.  ದ್ಯೂತ ಪ್ರಸಂಗದಲ್ಲಿ , ದ್ರೌಪದಿ ವಸ್ತ್ರಾಪಹರಣದಂತಹ ಕಠಿಣ ಪ್ರಸಂಗಗಳಲ್ಲಿ ಇತರರ ಆಕ್ಷೇಪಕ್ಕೆ ಕಾರಣವಾದರೂ ಕೂಡ ಅಪಾರ ಸಂಯಮವನ್ನು ತೋರಿಸುತ್ತಾನೆ. 

ಮಹಾಭಾರತ ಯುದ್ಧ ಈಗ  ಮುಗಿದಿದೆ,   14 ಅಕ್ಷೋಹಿಣಿ ಸೈನ್ಯ ಸಂಪೂರ್ಣವಾಗಿ ನಾಶವಾಗಿದೆ, ಮಹಾಭಾರತ ಯುದ್ಧದ ಕೊನೆಯಲ್ಲಿ ಉಳಿದವರು ಕೇವಲ ಹನ್ನೊಂದು ಜನ ಅಂತೆ.  ಐವರು ಪಾಂಡವರು, ಕೃಷ್ಣ,  ಅಶ್ವತ್ಥಾಮ, ಭೀಷ್ಮ , ಧೃತರಾಷ್ಟ್ರ ಮತ್ತು ಇನ್ನು ಯಾರೋ ಇಬ್ಬರು ಜನ,  ನನಗೆ ನೆನಪಿನಲ್ಲಿಲ್ಲ. 

ದುರ್ಯೋಧನನು ತನ್ನ ಮರಣದ ಸಮಯದಲ್ಲಿ ನನಗಾಗಿ ಯಾರು ದುಃಖಿಸಕೂಡದು , ನನಗೆ ವೀರಸ್ವರ್ಗ ದೊರೆಯುತ್ತಿದೆ ಎನ್ನುತ್ತಾನಂತೆ. 

ಮತ್ತೆ ಧರ್ಮರಾಯ ?
ಸತ್ತ ತನ್ನ ಕಡೆಯವರಿಗೂ ಕೌರವರ ಕಡೆಯವರೆಗೂ ಮಹಾಭಾರತದ ಸ್ತ್ರೀ ಪರ್ವದಲ್ಲಿ ತರ್ಪಣವನ್ನು ಕೊಡುತ್ತಾನೆ.  ಸತ್ತವರ ಬಂಧು-ಬಾಂಧವರು ತನ್ನತ್ತ ಆಕ್ಷೇಪದ ದೃಷ್ಟಿಯಿಂದ ನೋಡಿದಂತೆ ಅವನಿಗೆ ಅನಿಸುತ್ತದೆ. ಇಷ್ಟೆಲ್ಲಾ ಜನರ ಸಾವಿಗೆ ಕಾರಣನಾಗಿ ರಾಜನಾದ ಧರ್ಮರಾಯ ಈತನೇ ಎಂದು ತಮ್ಮ ತಮ್ಮಲ್ಲಿ ಅಂದುಕೊಂಡಂತೆ ಅವನಿಗೆ ಅನಿಸುತ್ತದೆ. ಅವನು ಗಾಂಧಾರಿಯನ್ನು ಭೇಟಿಯಾಗಿ ನಮಸ್ಕರಿಸುತ್ತ  'ನಿನ್ನ ಮಕ್ಕಳ ಮರಣಕ್ಕೆ  ಕಾರಣನಾದ ಈ ನನ್ನನ್ನು  ಕ್ಷಮಿಸು'  ಎಂದು ಕೇಳಿಕೊಳ್ಳದೆ  'ನನ್ನನ್ನು ಶಪಿಸು'  ಎಂದು ಬೇಡಿಕೊಳ್ಳುತ್ತಾನಂತೆ.  

ಈ ಎಲ್ಲ ಸಂಗತಿ ನನಗೆ ಗೊತ್ತಿದ್ದಿಲ್ಲ. ನಿಮಗೆ ಗೊತ್ತಿರಬಹುದು. ಯಾರಿಗಾದರೂ ಗೊತ್ತಿಲ್ಲದಿದ್ದರೆ ಅವರಿಗೆ ತಿಳಿಸೋಣ ಅಂತ ಈ ನಾಲ್ಕು ಸಾಲು ಬರೆದಿದ್ದೇನೆ . ಯಾರಿಗಾದರೂ ಸಂತೋಷವಾದರೆ ನನಗೆ ಸಂತೋಷ. 

 

ಈ ತಿಂಗಳ ಮಯೂರದಲ್ಲಿ ಸಿದ್ದಲಿಂಗು ಪರಿಣಯ ಎಂಬ ಕಥೆ ಇದೆ. ಇದರಲ್ಲಿ ನೋಡಲು ತುಂಬ ಕುರೂಪಿಯಾಗಿರುವಾತನ ಮದುವೆ ತಡವಾಗಿ ಆಗುತ್ತದೆ. ಹುಡುಗಿ ನಂಬಲು ಅಸಾಧ್ಯವಾಗುವಷ್ಟು ಸುಂದರಿ. ಮದುವೆಯನ್ನು ಗೊತ್ತು ಮಾಡುವಾಗ ಅವಳು ಮೂಕಿ ಎಂದು ಹೇಳಿರುತ್ತಾರೆ.  

 

ಆದರೆ ಮೊದಲ ರಾತ್ರಿ ಅವಳು ಮೂಕಿಯಲ್ಲ ಎಂದು ಗೊತ್ತಾಗುತ್ತದೆ. ಆದರೆ ಅದು ತೃತೀಯಲಿಂಗದ ವ್ಯಕ್ತಿ ! ಮುಂದೆ ಆಗುವುದೇನು ? ನೀವೇ ಕತೆಯನ್ನು ಓದಿ. 

 

ಓದುಗರಿಗೆ ಹಳಗನ್ನಡವನ್ನು ಪರಿಚಯಿಸುವ ನಿಚ್ಚಂ ಪೊಸತು ಎಂಬ ನಿಯತ ಅಂಕಣದಲ್ಲಿ ನಾಗವರ್ಮನ ಕರ್ನಾಟಕ ಕಾದಂಬರಿಯ ಬಗೆಗೆ ಲೇಖನ ಇದೆ.

 

ಜಾಗತಿಕ ವಲಸೆಗಾರರ ಜೀವನದ ಕುರಿತಾದ , ಕರ್ಕಿ ಕೃಷ್ಣಮೂರ್ತಿಅವರು ಬರೆದ ಚುಕ್ಕಿ ಬೆಳಕಿನ ಜಾಡು ಕಾದಂಬರಿಯ ಪರಿಚಯವನ್ನು ನರೇಂದ್ರ ಪೈಯವರು ಮಾಡಿಕೊಟ್ಟಿದ್ದಾರೆ

 

ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಕೆಲಸ ಕಳೆದುಕೊಂಡು ಹಳ್ಳಿಗೆ ಹೋದವರು ಅಲ್ಲಿಯ ಜನಕ್ಕೆ ಬೇಡವಾದ ಚಿತ್ರಣದ ಕಥೆಯೊಂದು ಇಲ್ಲಿದೆ. 

 

ಇಂಗ್ಲಿಷ್ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾದ ನಂತರ 35 ವರ್ಷಗಳ ಕಾಲ ಕನ್ನಡದಲ್ಲಿ ಅಧ್ಯಯನ ಬರಹ ವಿಮರ್ಶೆಗಳಲ್ಲಿ ತೊಡಗಿದ ಜಿ ಎಸ್ ಅಮೂರ ಅವರ ಕುರಿತು ಎರಡು ಲೇಖನಗಳಿವೆ. 

 

ಶರ್ಲಾಕ್ ಹೋಂಸ್ ಪಾತ್ರ ಸೃಷ್ಟಿಯ ಜಾತಿಯ ಅರ್ಥರ್ ಕಾನನ್ ಡೈಲ್ ಅವರು ಬರೆದ ಒಂದು ರಹಸ್ಯಮಯ ಕಥೆ ಕೂಡ ಇದೆ.

 

ಇನ್ನೊಂದು ಕಥೆಯಲ್ಲಿ ಮಾರಿಗೆ ಬಿಟ್ಟ ಕೋಣವೊಂದು ಒಂದು ಊರಿನಲ್ಲಿ ನುಗ್ಗಿ ಹಾವಳಿ ಎಬ್ಬಿಸಿದಾಗ ಸುತ್ತಮುತ್ತಲ ಹಳ್ಳಿಯವರು ಅದು ತಮ್ಮ ಕೋಣ ಎನ್ನುವರು. ಆಮೇಲೆ ಅದು ತಮ್ಮ ಊರಿನದಲ್ಲ ಎನ್ನುವರು.

 

ಸಂಸಾರದ 108 ತಾಪತ್ರಯಗಳ ನಡುವೆ ಗಟ್ಟಿಗಿತ್ತಿಯಾದ ಅಡಿಗೆಯವಳ ಕಥೆಯು ನನಗೆ ಇಷ್ಟವಾಯಿತು. 

 

ಕೇಶವರೆಡ್ಡಿ ಹಂದ್ರಾಳ ಅವರ ಇನ್ನಾದರೂ ಸಾಯಬೇಕು ' ಎಂಬ  ನೀಳ್ಗತೆ ಇಲ್ಲಿದೆ. ಅದರಲ್ಲಿ  ಆತ್ಮಹತ್ಯೆಯ ಪ್ರಯತ್ನದಲ್ಲಿ ಆಸ್ಪತ್ರೆ ಸೇರಿದವನಿಗೆ ಕಥೆಯ ಮುಖ್ಯಪಾತ್ರವು ಹೇಳುವುದೇನು ಗೊತ್ತೆ? - ಏನು ಅವಿವೇಕ ಮಾಡಿದೆಯಪ್ಪ, ನೀನು ಆತ್ಮಹತ್ಯೆಗೆ ಸರಿಯಾಗಿ ತಯಾರಿ ಮಾಡಬೇಕಾಗಿತ್ತು. ಆಗ ಸರಿಯಾಗಿ ಹತ್ತಿಪ್ಪತ್ತು ಸೆಕೆಂಡಿನಲ್ಲಿ ಪ್ರಾಣ ಹೋಗಿರೋದು, ಮುಂದಿನ ಸಾರಿ ಪ್ರಯತ್ನ ಮಾಡುವಾಗ ನಾನು ಹೇಳುವ ಹಾಗೆ ಮಾಡು, ಡಿಫಿನೇಟ್ಲೀ ಯೂ ವಿಲ್ ನಾಟ್ ಫೈಲ್ . (ಅಯ್ಯಯ್ಯೋ!)

 

ಕವಿತೆಗಳು ಪ್ರಬಂಧ ಇವೆಲ್ಲ ಎಂದಿನಂತೆ ಇವೆ. ಅವುಗಳಲ್ಲಿ ನನಗೆ ರುಚಿ ಇರದ ಕಾರಣನಾನು ಓದಲಿಲ್ಲ. ಅಷ್ಟೇ . 

ಈ ಸಲದ ಪ್ರಜಾವಾಣಿ ವಿಶೇಷಾಂಕವು, ಎರಡೂವರೆ ಸಾವಿರ ವರ್ಷ ಹಳೆಯದಾದರೂ ಹೊಸ ಹೊಳಹುಗಳನ್ನು ಕಾಣ್ಕೆಗಳನ್ನು ಕೊಡುತ್ತಲೇ ಇರುವ ರಾಮಾಯಣ ಕಥಾನಕಗಳ ಕುರಿತಾಗಿದೆ. ರಾಮನು ಧರ್ಮವೇ ಮೂರ್ತಿವೆತ್ತಂತೆ ಅಂತೆ . ಧರ್ಮ ಯಾವುದು, ರಾಮನು ಅದನ್ನು ಹೇಗೆ ಬದುಕಿ ತೋರಿದನು ಎಂಬೆಲ್ಲ ವಿಷಯಗಳು ಇಲ್ಲಿವೆ. ಈ ದೀಪಾವಳಿ ಸಂಚಿಕೆಯಲ್ಲಿ ಯಾವುದೇ ಕಟ್ಟುಪಾಡಿಗೆ ಸೀಮಿತಗೊಳ್ಳದೆ ತುಂಬ ವ್ಯಾಪಕವಾಗಿ ಜನಮಾನಸದಲ್ಲಿ ನೆಲೆಯೂರಿದ್ದು ಹೇಗೆ? ಇಷ್ಟೊಂದು ರಾಮನ ಕಥೆಗಳು ಏಕೆ ರೂಪುಗೊಂಡವು? ಎಂಬುದನ್ನು ಇನ್ನೊಂದು ಲೇಖನದಲ್ಲಿ ಚರ್ಚಿಸಲಾಗಿದೆ. ಕನ್ನಡದಲ್ಲಿನ ರಾಮ ಕಥೆಗಳು, ತೆಲುಗಿನಲ್ಲಿ ರಾಮ ಕಥೆಗಳು, ವಿದೇಶಗಳಲ್ಲಿನ ರಾಮಕಥೆಗಳ ಕುರಿತಾಗಿ ಲೇಖನಗಳಿವೆ. ಅಷ್ಟೇ ಅಲ್ಲದೆ ಟೀವಿಯ ರಾಮಾಯಣಗಳು, ಜನಪದ ಕಥನಗಳು,ಯಕ್ಷಗಾನದಲ್ಲಿನ ರಾಮಾಯಣಗಳು, ಭಾರತೀಯ ಮತ್ತು ಕನ್ನಡ ಚಲನಚಿತ್ರಗಳಲ್ಲಿನ ರಾಮಾಯಣಗಳ ಚಿತ್ರಣ, ಪ್ರಖ್ಯಾತ ಸಮಾಜವಾದಿ ನಾಯಕ ಲೋಹಿಯಾರ ಕಣ್ಣಲ್ಲಿ ರಾಮಾಯಣ ಮುಂತಾದ ಬರಹಗಳಿವೆ. ರಾಮ, ಕೃಷ್ಣ ಮತ್ತು ಬುದ್ಧರು ಮನುಷ್ಯರಾಗಿದ್ದೂ ಮರ್ತ್ಯದ ಚೌಕಟ್ಟನ್ನು ಮೀರಿದ ಕಾರಣಕ್ಕಾಗಿ ನಮಗೆ ಮುಖ್ಯರು. ಅವರನ್ನು ಕಥೆ ರೂಪದಲ್ಲಿ ಮಾತ್ರವಲ್ಲದೆ ನಮ್ಮ ಬದುಕಿನ ಭಾಗವಾಗಿ ನೋಡುತ್ತೇವೆ. ರಾಮ ಮತ್ತು ಅವನಂತೆಯೇ ಧರ್ಮವೇ ಮೂರ್ತಿವೆತ್ತ ಗಾಂಧಿ ಕುರಿತಾಗಿ ಬಂದಿರುವ ಚಲನಚಿತ್ರಗಳಾದ ಹೇಮಾವತಿ ಮತ್ತು ಹೇ ರಾಮ್ ಕುರಿತು ವಿಸ್ತಾರವಾದ ಚರ್ಚೆ ಇಲ್ಲಿದೆ. ಇಂದಿನ ದಿನಗಳಲ್ಲಾದರೆ ಈ ಚಿತ್ರಗಳು ತೆರೆಯನ್ನು ಕಾಣುತ್ತಿರಲಿಲ್ಲವಂತೆ. ಈ ಚಲನಚಿತ್ರಗಳನ್ನು ( ಯೂಟ್ಯೂಬ್ನಲ್ಲಿ ಸಿಗಬಹುದು) ನೋಡುವ ಕುತೂಹಲವು ನನ್ನಲ್ಲಿ ಹುಟ್ಟಿತು. ಏ. ಕೆ. ರಾಮಾನುಜನ್ ಅವರ ಮುನ್ನೂರು ರಾಮಾಯಣಗಳು ಪುಸ್ತಕದ ಬಗೆಗೊಂದು ಲೇಖನ ಇದೆ. ಈ ಹೊತ್ತು ನಮ್ಮ ದೇಶದಲ್ಲಿ ಜನರ ಮನಸ್ಸಿನಲ್ಲಿ ರಾಮನ ರೂಪವು ಬಿಲ್ಲುಬಾಣ ಹಿಡಿದು ದೇಶದ ಅಸ್ಮಿತೆಯಾಗಿರುವುದರ ಬಗ್ಗೆಯೂ ಆತಂಕ ಒಂದು ಲೇಖನದಲ್ಲಿದೆ. ರಾಮಾಯಣ ಹೊರತಾಗಿ ಈ ಸಂಚಿಕೆಯಲ್ಲಿ ಏನೇನಿದೆ? ಈಗ ಹೆಚ್ಚು ಬಳಕೆಗೆ ಬಂದಿರುವ ಓಟಿಟಿ ವೇದಿಕೆಯ ಕುರಿತೂ ಒಂದು ಲೇಖನವಿದೆ. ಕಟ್ಟೆ ಹೆಸರಿನ ಒಂದು ಕನ್ನಡದ್ದೇ ಆದ ಓಟಿಟಿ ವೇದಿಕೆ ಬಗೆಗೆ ಮಾಹಿತಿ ಇಲ್ಲಿ ದೊರಕಿತು. ಪ್ರತಿವರ್ಷದಂತೆ ಕಥಾಸ್ಪರ್ಧೆಯ ಫಲಿತಾಂಶ, ಮತ್ತು ಪ್ರಶಸ್ತಿವಿಜೇತ ಮೂರು ಕಥೆಗಳು ಇಲ್ಲಿವೆ. ಈ ಮೂರು ಕಥೆಗಳಲ್ಲಿ ಎರಡು ಕಥೆಗಳು ನನಗೆ ಇಷ್ಟವಾದವು. ಒಂದು ಕಥೆಯಂತೂ ಕೊರೋನಾ ಮತ್ತು ಧಾರ್ಮಿಕ ಮೈಮನಸ್ಸುಗಳ ಹಿನ್ನೆಲೆಯದ್ದು. ಇನ್ನೊಂದು ಕಥೆಯು ಲಿವಿಂಗ್ ಟುಗೆದರ್ ಕುರಿತಾಗಿದೆ. ಅಲ್ಲಿ ಸಿಕ್ಕ ಒಂದು ಪದ - ಯುಗನದ್ಧ ಆ ಕುರಿತು ಅಂತರ್ ಜಾಲವನ್ನು ಜಾಲಾಡಿಸುವಂತೆ ನನ್ನನ್ನುಮಾಡಿತು. ಇದು ನಿಜಕ್ಕೂ ತುಂಬಾ ಒಳ್ಳೆಯ ಸಂಚಿಕೆ ಆದ್ದರಿಂದ ನೀವು ಒಂದು ಪ್ರತಿಯನ್ನು ಖರೀದಿಸಿ ಇಟ್ಟುಕೊಳ್ಳಿ. ನಿಜಕ್ಕೂ ಇದು ಸಂಗ್ರಾಹ್ಯ ಸಂಚಿಕೆ.