ಕೊನೆಯ ಬೇಡಿಕೆ

ಕೊನೆಯ ಬೇಡಿಕೆ

ಕವನ

ಓ ತಾಯೆ,ಕನ್ನಡಾಂಬೆ,

ಬೆಳ್ಳಿ ಜರಿಯಂಚಿನ ದಿವ್ಯ ವಸ್ತ್ರಾನ್ವಿತೆಯೇ,

ನೀನು ಕಣ್ಣೋಡಿಸಿ ನೋಡದ

ನಿರ್ಭಾಗ್ಯ ಮಕ್ಕಳು ನಾವು,

ಕಾಸರಗೋಡಿನವರು.

 

ಮೊದಲು ಮಹಾಬಲಶಾಲಿಗಳಾಗಿದ್ದೆವು,

ಉತ್ಸಾಹ ಉಲ್ಲಾಸಗಳ ಪ್ರತೀಕವಾಗಿದ್ದೆವು,

ಈಗ ನಿನಗಾಗಿ ಕುಣಿದೂ,ದಣಿದೂ

ಕುಬ್ಜರಾಗಿದ್ದೇವೆ-

ನಿನ್ನೆದುರು ಮಾತ್ರವಲ್ಲ ತಾಯೀ-

ಎಲ್ಲರೆದುರೂ!

 

ನಿನ್ನಲ್ಲಿ ಕೊನೆಯ ಪ್ರಾರ್ಥನೆ ತಾಯೆ,

ನಿನಗೆ ಬೇಡದ ಮಕ್ಕಳನ್ನು

ಮಲಯಾಳ ಮಾತೆಗೆ ಮಾರಿ

ಸ್ವರ್ಣದಾಭರಣಗಳ ಕೊಂಡು ತೊಡು,

ನಿನ್ನ ದಿವ್ಯಮೂರ್ತಿಯನ್ನೊಮ್ಮೆ

ನೋಡಿ,ಆನಂದಿಸಿ

ಕಣ್ಮುಚ್ಚಿ ಕೃತಾರ್ಥರಾಗುತ್ತೇವೆ ನಾವು.

Comments