ಯೂಯಮ್ ತತ್ ಸತ್ಯ ಶವಸ

ಯೂಯಮ್ ತತ್ ಸತ್ಯ ಶವಸ

ಈ ಘಟನೆ ನಡೆದು ನಾಲ್ಕೈದು ವರ್ಷಗಳೇ ಕಳೆದಿವೆ. ಪೂಜಾಗೃಹದಲ್ಲಿ ದೇವರಿಗೆ ಅಭಿಶೇಕ ಮಾಡುತ್ತಿದ್ದೆ. ಪುಟ್ಟ ಪುಟ್ಟ ನಾಲ್ಕೈದು ಬೆಳ್ಳಿ  ವಿಗ್ರಹಗಳು! ಅದೇಕೋ ಮನದಲ್ಲಿ ದುಸ್ಸೆಂದು ಒಂದು ವಿಚಾರ ಬರಬೇಕೇ! “ಅಯ್ಯೋ ,ಇದೇನು ನಾನು ಮಕ್ಕಳಾಟ ಆಡ್ತಾ ಇದ್ದೀನಾ? ಇದ್ದಕ್ಕಿದ್ದಂತೆ ನನ್ನ ಬಾಲ್ಯದ ನೆನಪುಗಳೆಲ್ಲಾ ಕಣ್ಮುಂದೆ ಸುಳಿದಾಡಿದವು.  ಸಮಾನ ವಯಸ್ಸಿನ ಬೇರೆ ಮಕ್ಕಳೊಡನೆ “ಅಮ್ಮನ ಆಟ” ಆಡುತ್ತಿದ್ದ ನೆನಪುಗಳು! ಹೆಣ್ಣು ಗಂಡು ಎಂಬ ಭೇದವಿಲ್ಲದೆ ನಾಲ್ಕೈದು     ಮಕ್ಕಳನ್ನು ಒಟ್ಟುಗೂಡಿಸಿ “ಅವಳು ಅಮ್ಮ, ನಾನು ಅಪ್ಪ, ಇವನು ಮಗ, ಅವಳು ಮಗಳು” ಎಲ್ಲರಿಗೂ ನಾಮಕರಣ ಮಾಡಿ ಆಟ ಆರಂಭಮಾಡ್ತಾ ಇದ್ದ ಆ ದಿನದ ನೆನಪುಗಳು! ಅಪ್ಪ ಅಂದರೆ ಅಂಗಡಿಗೆ ಹೋಗಿ ಸಾಮಾನು ತರಬೇಕು, ತೋಟಕ್ಕೆ ಹೋಗಿ ಬರಬೇಕು, ಅಮ್ಮ ಮನೆ ಕೆಲಸ ಮಾಡಬೇಕು, ಅಡಿಗೆ ಮಾಡಬೇಕು ...ಎಲ್ಲ ಯಥಾಪ್ರಕಾರ ಸಂಸಾರವೇ. ಅವಳು ಹೆಂಡ್ತಿ, ನಾನು ಗಂಡ. ಮಗ-ಮಗಳು. ಮನೆ ಅಂದಮೇಲೆ ದೇವರ ಮನೆ [ಈಗ ಪೂಜಾ ಗೃಹ ಅಂತಾರೆ] ಇರಲೇ ಬೇಕಲ್ಲಾ! ನನ್ನ ಕೆಲಸ ಅಂದರೆ ಎಲ್ಲಕ್ಕಿಂತ ಹೆಚ್ಚಾಗಿ ದೇವರ ಪೂಜೆ ಮಾಡೋದು. ಮಕ್ಕಳು  ನನಗೆ ಅಸ್ಸಿಸ್ಟ್ ಮಾಡಬೇಕು. ನಮ್ಮನೇಲೀ ಇದ್ದ ಆಟದ ಗೊಂಬೆಗೇ ಅಭಿಶೇಕ ಮಾಡಿ ಮಂಗಳಾರತೀ ಮಾಡಿ ಎಲ್ಲಾರಿಗೂ ಕೊಡುವಾಗ  ಕಾಣುತ್ತಿದ್ದ ಧನ್ಯತೆಯ ಭಾವ ! ಪೂಜೆ ನಂತರ  ತೀರ್ಥ ಪ್ರಸಾದವೂ ತಪ್ಪುತ್ತಿರಲಿಲ್ಲ. ಅಮ್ಮನ್ನ ಕಾಡಿಬೇಡಿ  ಎರಡು ಬಾಳೆಹಣ್ಣು, ಒಂಚೂರು ತೆಂಗಿನಕಾಯಿ, ಸ್ವಲ್ಪ ಹಾಲು, ಮೊಸರು, ಒಂಚೂರು ಬೆಲ್ಲ ಎಲ್ಲಾ ತಗೊಂಡು ಬರುತ್ತಿದ್ದೆ. ತೀರ್ಥ ಮಾಡಿ , ತುಪ್ಪಾಳೆಹಣ್ಣು ಮಾಡಿ ಹಂಚುತ್ತಾ ಇದ್ದೆ. ಹಾಡು, ಶ್ಲೋಕ, ಮಂತ್ರ, ಭಜನೆ….ಅಬ್ಬಬ್ಭಾ! ಮಂಗಳಾರತಿ ಮಾಡುವ ಮುಂಚೆ  ಅದೇನು ಭಜನೆಯ ಆರ್ಭಟವೋ! ಕೊನೇಲೀ ಮಂಗಳ, ನಂತರ ಲಾಲಿ ಹಾಡಿ ದೇವರನ್ನು ಮಲಗಿಸಿಬಿಡ್ತಾ ಇದ್ವು.

ಎಲ್ಲಾ ನೆನಪುಗಳೂ ಮನದಲ್ಲಿ ಸುಳಿದು ಅಭಿಶೇಕವನ್ನು ಅಷ್ಟಕ್ಕೇ ನಿಲ್ಲಿಸಿದೆ. ಅರೇ, ಬಾಲ್ಯದ ಮಕ್ಕಳಾಟವನ್ನು ಇವತ್ತೂ ಮಾಡ್ತಾ ಇದ್ದೀನಾ?  ಕಣ್ಮುಚ್ಚಿ ಕೂತೆ.  ಅವತ್ತಿನಿಂದ ಇವತ್ತಿನವರಗೂ ನನ್ನ ಪೂಜೆ ಅಂದರೆ ಕಣ್ಮುಚ್ಚಿ ಕುಳಿತು ಭಗವಂತನ ಸ್ಮರಣೆ ಮಾಡುವುದೇ ಆಗಿದೆ. ಅಭಿಶೇಕ ,ಮಂಗಳಾರತಿ ಮಾಡುವುದೇ ಇಲ್ಲಾ, ಎಂದು ಹಠವನ್ನೇನೂ ತೊಟ್ಟಿಲ್ಲ. ಖುಷಿಗೆ ಮಾಡಿದ್ದುಂಟು.

ಅಭಿಶೇಕ ಅರ್ಧಕ್ಕೆ ನಿಲ್ಲಿಸಿ ಕಣ್ಮುಚ್ಚಿ ಕುಳಿತ ಘಟನೆಯನ್ನು ನನ್ನ ಮಿತ್ರನಿಗೆ ಹೇಳಿದೆ. “ಎಲ್ಲಾ    ಕಡೆಯಲ್ಲೂ ದೇವರನ್ನು ಕಾಣುವ ನಿಮಗೆ  ಆ ವಿಗ್ರಹದಲ್ಲಿ  ದೇವರು ಕಾಣದೆ ಹೋದನೇ? ಅವರ ಮಾತಿನಲ್ಲಿ ವ್ಯಂಗ್ಯ ಅಡಕವಾಗಿತ್ತು. “ಈ ಬಗ್ಗೆ  ಚರ್ಚೆಯನ್ನು ಈಗ ಮಾಡುವುದಿಲ್ಲ. ಕಾರಣ ನಿಮ್ಮ ಈ ಮಾನಸಿಕ  ಸ್ಥಿತಿಯಲ್ಲಿ ನಿಮಗೆ ಕನ್ವಿನ್ಸ್ ಮಾಡುವುದು ಕಷ್ಟ. ನಿಧಾನವಾಗಿ ಯಾವಾಗಲಾದರೂ ಮಾತನಾಡೋಣ, ಎಂದೆ. ಆದಿನ ಇವತ್ತು ಬಂತು. ಅವರೊಡನೆ ನೇರವಾಗಿ ಮಾತನಾಡುತ್ತಿಲ್ಲ. ಆದರೆ ನನ್ನ ಅಭಿಪ್ರಾಯವನ್ನು ನಾಲ್ಕು ಜನರೊಡನೆ ಹಂಚಿಕೊಂಡಾಗ ಅವರಿಗೂ ವಿಷಯ ತಲುಪದೇ ಇರದು. ಈಗ  ಈ ವಿಚಾರ ಕುರಿತು ಸ್ವಲ್ಪ ಚಿಂತನ-ಮಂಥನ ನಡೆಸೋಣ. ಈ ಚರ್ಚೆಯಲ್ಲಿ ಗೆಲವು ನನ್ನದೇ ಆಗಬೇಕೆಂಬ ಶರತ್ತೇನೂ ಇಲ್ಲ. ಅಂತಿಮವಾಗಿ ಸತ್ಯದ್ದೇ ಗೆಲುವಾಗುವುದರಲ್ಲಿ ಸಂಶಯವಿಲ್ಲ.
ನನ್ನ ಮಿತ್ರನ ಪ್ರಶ್ನೆ ಏನು? ಎಲ್ಲೆಲ್ಲೂ ಇರುವ ಭಗವಂತನು ಈ ಪುಟ್ಟ ಮೂರ್ತಿಯಲ್ಲಿಲ್ಲದೇ ಹೋದನೇ?
ಖಂಡಿತವಾಗಿಯೂ    ಆ ಪುಟ್ಟ ಮೂರ್ತಿಯಲ್ಲಿ ದೇವರಿಲ್ಲ, ಎಂದು ನಾನು ಹೇಳುವುದಿಲ್ಲ.  ಆ ಮೂರ್ತಿಯಲ್ಲಷ್ಟೇಅಲ್ಲ, ಮಂಗಳಾರತಿ ಮಾಡಲಿಟ್ಟಿರುವ ತಟ್ಟೆಯಲ್ಲಿ, ಅಭಿಶೇಕದ ಸಾಮಗ್ರಿಯಲ್ಲಿ, ನಾನು ಕುಳಿತಿದ್ದ ಚಾಪೆಯಲ್ಲಿ ಎಲ್ಲೆಲ್ಲೂ ದೇವರಿದ್ದಾನೆ. ಅಂದಮೇಲೆ ದೇವರಿಂದ ದೇವರಿಗೆ ಮಂಗಳಾರತಿ, ದೇವರನ್ನೇ ಅಭಿಶೇಕವಾಗಿ ಮಾಡುತ್ತಿರುವ ನನ್ನಲ್ಲೂ ದೇವರಿದ್ದಾನೆ. ಓದುತ್ತಿರುವ ನಿಮ್ಮಲ್ಲೂ ದೇವರಿದ್ದಾನೆ. ಆ ದೇವರನ್ನು  ಚಿಕ್ಕ ವಿಗ್ರಹಮಾಡಿ ಕುಬ್ಜಗೊಳಿಸಲು ನನಗೆ ಇಷ್ಟವಾಗಲಿಲ್ಲ. ಬಾಲ್ಯದಲ್ಲೇನೋ ಮಕ್ಕಳಾಟ ಆಡಿ ತೀರ್ಥ ಕುಡಿದು ಪ್ರಸಾದ ತಿಂದಿದ್ದಾಯ್ತು. ಅಷ್ಟೇ ಏಕೆ? ಅವನನ್ನು ಮಲಗಿಸಿದ್ದೂ ಆಯ್ತು! ಅಬ್ಭಾ ಈಗ ನನಗೆ ನಗು ಬರುತ್ತದೆ, ಯಾಕೆ ಗೊತ್ತಾ?  ಈ ಬ್ರಹ್ಮಾಂಡದ ಎಲ್ಲಾ ಆಟದ ಸೂತ್ರದಾರನನ್ನು ನಾನು ಲಾಲಿ ಹೇಳಿ ಮಲಗಿಸಿ ಬಿಟ್ಟರೆ, ಈ ಬ್ರಹ್ಮಾಂಡದ ಗತಿ- ದೇವರೇ ಗತಿ, ಎನ್ನುವಂತಿಲ್ಲ. ಅವನನ್ನು ಮಲಗಿಸಿದ್ದಾಗಿದೆಯಲ್ಲಾ.!
ಹೀಗೆ ಮನದಲ್ಲಿ ಮೂಡಿದ    ಭಾವನೆಗಳನ್ನು ಗೆಳೆಯರೊಡನೆ ಹಂಚಿಕೊಂಡಾಗ “ನಿನಗೆ ಆರ್ಯ ಸಮಾಜದವರು ಬ್ರೈನ್ ವಾಶ್, ಮಾಡಿದ್ದಾರೆ! “ ಅಂತಾರೆ. ಹೌದು, ಆರ್ಯಸಮಾಜ ಹಲವು ಪುಸ್ತಕಗಳನ್ನು ನಾನು ಓದುತ್ತಿರುತ್ತೇನೆ. ಆದರೆ ಅವರ ಹತ್ತು ನಿಯಮಗಳಿವೆ, ಅವನ್ನು ಪಾಲಿಸಿದರೆ ಮಾತ್ರ ಅವನು ಆರ್ಯಸಮಾಜಿ, ಎಂದು ಆರ್ಯಸಮಾಜವು ಒಪ್ಪಿಕೊಳ್ಳುತ್ತದೆ. ಅದೊಂದು ಕಠಿಣ ವ್ರತ .ಅದು ನನ್ನ ಕೈಲಾಗದ ಕೆಲಸ. ಆದರೆ ನನ್ನ ಅಂತರಾಳದಲ್ಲಿ ಮೂಡುವ ತುಡಿತಕ್ಕೆ ಬೆಲೆಕೊಡುವ ನಾನು “ನೀವು ಹೀಗಿರಬೇಕೆಂದು ಹೇಳುವುದಿಲ್ಲ. ಸತ್ಯವಾಗಿ ಕಂಡದ್ದನ್ನು ಬರೆಯಲು ,ಹೇಳಲು ಹಿಂಜರೆಯುವುದಿಲ್ಲ. ಆದರೆ ಯಾರೊಬ್ಬರಿಗೂ ಹೀಗೆಯೇ ಇರಬೇಕೆಂದು ಒತ್ತಾಯ ಮಾಡುವುದೂ ಇಲ್ಲ. ಕೆಲವೆಲ್ಲಾ ಬಾಲಿಶವಾಗಿ ಕಂಡಿದ್ದನ್ನು ಒಪ್ಪಲು ನನ್ನ ಮನ ಹಿಂದೇಟು ಹೊಡೆದಾಗ ನನ್ನ ಅಂತರಾಳ ದ ಕರೆಗೆ ಓಗೊಟ್ಟು ನನ್ನ ಪಾಡಿಗೆ ನಾನಿರುವೆ. 
ಈಗ ನೀವೇನಂತೀರಿ? ಎಂದು ಕೇಳುವುದಿಲ್ಲ. ಕಾರಣ ಈ ಬರಹ ಓದುವ ಪ್ರತಿಶತ 99ಜನರಲ್ಲಿ ನಾನೂ ಸೇರಿದಂತೆ ನೂರಾರು ವರ್ಷಗಳಿಂದ ಬೆಳೆದುಬಂದಿರುವ ಆಚರಣೆಗಳು, ಸಂಪ್ರದಾಯಗಳ ಬಂಧನಕ್ಕೆ ನಾವೆಲ್ಲಾ ಒಳಗಾಗಿರುವುದರಲ್ಲಿ ಸಂಶಯವಿಲ್ಲ. ಯಾವ ಆಚರಣೆಗಳನ್ನೂ ಯಾಕೆ ಹೀಗೆ? ಎಂದು ಕೇಳುವಂತಿಲ್ಲ. ಕೇಳಿದರೆ ಅವನು ತಲೆಹರಟೆ. ಯಾಕೆ ಗೊತ್ತಾ? ನಮಗೆ ಅದರ ಅರ್ಥ ಗೊತ್ತಿಲ್ಲ. ಆದ್ದರಿಂದ ಹೀಗೊಂದು ಮಾತನ್ನು ಸೃಷ್ಟಿ ಮಾಡಿದವರೂ ನಾವೇ? ಏನು ಗೊತ್ತಾ” ಋಷಿ ಮೂಲ, ನದಿ ಮೂಲ ಕೇಳಬೇಡಿ. ಯಾಕೆ ಗೊತ್ತಾ? ಒಬ್ಬ ಋಷಿ  ಹತ್ತಾರು ವರ್ಷಗಳ ಹಿಂದೆ ಕಟುಕನಾಗಿದ್ದಿರಬಹುದು.ಇನ್ನೂ ಏನೋ ಆಗಿರಬಹುದು, ನದಿಯೊಂದರ ಮೂಲ ಹುಡುಕುತ್ತಾ ಹೋದರೆ ಅದರಲ್ಲಿ ಕೊಚ್ಚೆ ನೀರು ಸೇರುವುದನ್ನು ಕಣ್ಣಾರೆ ಕಾಣಬೇಕಾಗುತ್ತದೆ! ಆದರೆ  ವೇದವು ಹೇಳುತ್ತದೆ-
”   ಯೂಯಮ್ ತತ್   ಸತ್ಯಶವಸ ಆವಿಶ್ಕರ್ತ ಮಹಿತ್ವನಾ| ವಿಧ್ಯತಾ ವಿದ್ಯುತಾ ರಕ್ಷ: || 
[ಋಕ್- 1.86.9]
ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ, ನಿಮ್ಮ ಸ್ವಸಾಮರ್ಥ್ಯದಿಂದ ಸತ್ಯವನ್ನುಆವಿಷ್ಕರಿಸಿ,ದುಷ್ಕಾಮನೆಯನ್ನು ನಿಮ್ಮ ಜ್ಞಾನ ಜ್ಯೋತಿಯಿಂದ ಸೀಳಿಹಾಕಿರಿ ಅಷ್ಟೇ ಅಲ್ಲ, ಇನ್ನೊಂದು ಕಡೆ ವೇದವು ಕರೆ ಕೊಡುತ್ತದೆ” ಯಾವುದು ಪ್ರಾಚೀನವೋ, ಯಾವುದು ನೂತನವೋ , ಎಲ್ಲಕ್ಕೂ ಕಿವಿಗೊಡಿ, ಯಾವುದು ನಿಮ್ಮ ಅಂತ: ಕರಣದಲ್ಲಿ ಮೂಡುತ್ತದೋ, ಅದನ್ನೂ ಗಮನಿಸಿ, ವಿದ್ವಾಂಸರುಗಳು ತಿಳಿಸುವ ಸದ್ವಿಚಾರಗಳಿಗೂ ಕಿವಿಗೊಡಿ, ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ಕರೆದುಕೊಂಡು ಹೋಗುವುದೋ ಆ ಮಾರ್ಗದಲ್ಲಿ ನಿಮ್ಮ ಜೀವನ ರಥ ಸಾಗಲಿ. ವೇದ ಕರೆ ನೋಡಿ, ಹೇಗಿದೆ! ಆದರೆ  ಇಂದಿನ ಸಮಾಜದಲ್ಲಿ ಏನಾಗಿದೆ ಎಂದರೆ  ಸಂಪ್ರದಾಯಕ್ಕೆ ಶರಣಾಗಿರುವವರು “ಆಸ್ತಿಕ”ರೆನಿಸಿಕೊಳ್ಳುತ್ತಾರೆ. ಅವರು ಯಾವ ಪ್ರಶ್ನೆ ಮಾಡುವಂತಿಲ್ಲ. ಅವರಿಗೂ ಯಾರೂ ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನೆ ಮಾಡುವವರು ನಾಸ್ತಿಕರು! ನೋಡಿ ಹೇಗಿದೆ ನಮ್ಮ ಚಿಂತನೆ!! ನಿಜವಾಗಿ ಈ ನಾಸ್ತಿಕ ಎಂದು ಹಣೆಪಟ್ಟಿ ಹಚ್ಚಿಸಿಕೊಳ್ಳುವವನು ದೇವರ ಅಸ್ತಿತ್ವವನ್ನು ನಂಬುತ್ತಾನೆ. ಆದರೆ  ಸರ್ವಾಂತರ್ಯಾಮಿಯಾದ ಆ ಭಗವಂತನಿಗೆ ರೂಪಕೊಟ್ಟು ಕುಬ್ಜನನ್ನು ಮಾಡಲಾರ. ಅಸತ್ಯ ಆಚರಣೆಗಳನ್ನು ಒಪ್ಪಲಾರ. ಇವನನ್ನ ನಾಸ್ತಿಕನೆನ್ನುತ್ತೀರಾ? ಈಗ ಹೇಳಿ  ನೀವೇನಂತೀರಾ?
 
Rating
No votes yet

Comments

Submitted by gopinatha Tue, 12/25/2012 - 12:46

ಶ್ರೀಧರ್ ಅವರೇ
ನೀವು ಹೇಳಿದುದು ನಿಜ
ನಮ್ಮ ಧರ್ಮ ಅಲ್ಲದೇ ಪ್ರಪಂಚದ ಬೇರೆ ಯಾವ ಧರ್ಮದಲ್ಲೂ ಇಷ್ಟು ಸ್ವಾತಂತ್ರ್ಯವಿದ್ದಹಾಗೆ ಕಾಣುವುದಿಲ್ಲ. ಇನ್ನು ಪೂಜೆ ನಮ್ಮ ಮನಸ್ಸಿನ ತ್ರಪ್ತಿಗಲ್ಲವೇ..?. ಬೇರೆಯರನ್ನು ಮೆಚ್ಚಿಸಿದ ಪೂಜೆಯಿಂದ ನಮಗೆ ಆಗಬೇಕಾಗಿದ್ದೇನಿದೆ..??
ಮೊನ್ನೆ ಮೊನ್ನೆ ನಮ್ಮ ಮನೆಗೆ ಒಂದು ದೇವಾಲಯದ ಮಾಲೀಕರೊಬ್ಬರು ಬಂದರು. ನೀವು ಯಾಕೆ ದೇವಸ್ಥಾನಕ್ಕೆ ಬರುತ್ತಿಲ್ಲ ಎಂದರು, ದೇವರು ನಿಮ್ಮ ಎಲ್ಲಾ ಬೇಡಿಕೆಯನ್ನು ಪೂರೈಸಿಕೊಡುತ್ತಾನೆ ಒಮ್ಮೆ ಬಂದು ನೋಡಿ ಎಂದರು. ನಾನು ದೇವರಲ್ಲಿ ಏನನ್ನೂ ಬೇಡಿಕೊಳ್ಳುವುದಿಲ್ಲ, ನನಗೆ ಬೇಕಿದ್ದನ್ನೆಲ್ಲಾ ಅವನೇ ಕೊಟ್ಟಿದ್ದಾನಲ್ಲ ಎಂದೆ, ನನ್ನನ್ನು ವಿಚಿತ್ರ ಪ್ರಾಣಿಯಂತೆ ನೋಡಿದರು. ನೀವು ದೇವಾಲಯದ ಊಟದ ಪ್ರಸಾದ ಯಾಕೆ ತೆಗೆದುಕೊಳ್ಳುವುದಿಲ್ಲ ಎಂದರು. ನನ್ನ ಬದಲು ಯಾರಾದರೂ ಅವಷ್ಯಕತೆ ಯಿದ್ದವರಿಗೆ ಕೊಡಿ, ನನ್ನಿಂದ ಮರೆಯದೇ ದುಡ್ಡು ತೆಗೆದುಕೊಂಡು ಹೊರಟೇ ಹೋದರು.
ನಿಜ ರಾಮಕೃಷ್ಣರು ಹೇಳುವಂತೆ ಒಂದು ಹಂತದ ವರೆಗೆ ಮಾತ್ರ ಮಾರ್ಗದರ್ಶಕರು ಬೇಕು ಅನಂತರದ್ದೆಲ್ಲಾ ಜಿಜ್ಞಾಸೆ.... ಹುಡುಕಾಟ... ಅಷ್ಟೆ...ಜೀವನ.

Submitted by kavinagaraj Tue, 12/25/2012 - 15:18

ಉತ್ತಮ ಚಿಂತನೆ, ಶ್ರೀಧರ್. ಮಾನವರಲ್ಲಿ ಅರ್ಥಹೀನ ಬೇಧ ಮಾಡುವ ಕೆಲವು ರೂಢಿಗತ ಸಂಪ್ರದಾಯಗಳು ಎಲ್ಲಾ ಜಾತಿ/ಮತಗಳಲ್ಲಿವೆ. ಅವಕ್ಕಿಂತ ನಾಸ್ತಿಕರಾಗಿರುವುದು ಮೇಲು. ಎಲ್ಲಾ ಸಂಪ್ರದಾಯಗಳೂ ಸಾರಾಸಗಟಾಗಿ ಕೆಟ್ಟವಲ್ಲ. ಆದರೆ ಅವು ಮೂಢ ಆಚರಣೆಗಳಾಗಬಾರದಷ್ಟೆ.

Submitted by hariharapurasridhar Wed, 12/26/2012 - 14:02

In reply to by kavinagaraj

ಧನ್ಯವಾದಗಳು ನಾಗರಾಜ್, ಮಿತ್ರರಿಗೆ ಕೊಟ್ಟ ಉತ್ತರ ಅದು. ಅವರು ಓದುವುದಿಲ್ಲ. ಅಂತೂ ಮನದಲ್ಲಿದ್ದ ವಿಚಾರ ಹೊರಹಾಕಿಯಾಗಿದೆ

Submitted by ಗಣೇಶ Wed, 12/26/2012 - 00:03

>>> ಯೂಯಮ್ ತತ್ ಸತ್ಯಶವಸ............
ಅಬ್ಬಾ..ಅಬ್ಬಬ್ಬಾ..ನಾನು ಏನೋ ಭಯಂಕರ ಶಾಪ ಹಾಕುತ್ತಿದ್ದೀರಾ ಅಂದುಕೊಂಡೆ! ಸತ್ಯವನ್ನೇ ಶಕ್ತಿಯಾಗಿ ಹೊಂದಿಕೊಂಡ ಧೀರರೇ....ಅಂತಾನಾ. ಈಗ ಸಮಾಧಾನವಾಯಿತು.:) >>> ಇಂದಿನ ಸಮಾಜದಲ್ಲಿ ಏನಾಗಿದೆ ಎಂದರೆ ಸಂಪ್ರದಾಯಕ್ಕೆ ಶರಣಾಗಿರುವವರು “ಆಸ್ತಿಕ”ರೆನಿಸಿಕೊಳ್ಳುತ್ತಾರೆ. ಅವರು ಯಾವ ಪ್ರಶ್ನೆ ಮಾಡುವಂತಿಲ್ಲ. ಅವರಿಗೂ ಯಾರೂ ಪ್ರಶ್ನೆ ಮಾಡುವಂತಿಲ್ಲ...---------ಏನೆಲ್ಲಾ ಬರೆದಿದ್ದೀರಿ. ಕೆಲದಿನಗಳ ಹಿಂದೆ ನಮ್ಮ ಪ್ರೇಮಶೇಖರ ಅವರು ಕೇಳಿದ ಪ್ರಶ್ನೆಗೆ,ಹಿರಿಯರನ್ನು ಕೇಳಿ ಉತ್ತರಿಸುವೆ ಅಂದಿದ್ದೀರಿ. ಆ ಕತೆ ಏನಾಯಿತು? ನಿಮ್ಮ ಲೇಖನ ಚೆನ್ನಾಗಿದೆ.
-ಗಣೇಶ.

Submitted by hariharapurasridhar Wed, 12/26/2012 - 14:03

In reply to by ಗಣೇಶ

ಪ್ರೇಮಶೇಖರ ಅವರು ಕೇಳಿದ ಪ್ರಶ್ನೆ ಏನೆಂದು ದಯಮಾಡಿ ನೆನಪು ಮಾಡಿ. ನಾನು ಅದನ್ನೇನಾದರೂ ಶ್ರೀ ಸುಧಾಕರಶರ್ಮರಿಗೆ ಕಳಿಸಿಕೊಟ್ತಿರುವೆನೋ ಏನೋ, ನೆನಪಿಲ್ಲ.

Submitted by partha1059 Wed, 12/26/2012 - 14:34

ಶ್ರೀಧರರವರೆ ಜಿಜ್ನಾಸೆಯ‌ ಮನಸಿಗೆ ಇ0ತ‌ ಭಾವನೆಗಳೆಲ್ಲ ಬರುತ್ತಲೆ ಇರುತ್ತವೆ. ಹಿ0ದಾದರೆ ಇವೆಲ್ಲ ಕಲಿ ಪ್ರಭಾವ‌ ಅನ್ನುತ್ತಿದ್ದರೇನೊ. ಮೂರ್ತಿ ಪೂಜೆ ದೈವ‌ ನ0ಭಿಕೆ ಒ0ದು ಭಾಗ‌ ಅಷ್ಟೆ. ಹೀಗೆ ಇರಬೇಕೆ0ಬ‌ ನಿಯಮ‌ ಏನಿಲ್ಲ. ಷೋಡಶೋಪಚಾರ‌ ಪೂಜೆಗಳನ್ನು ಮನಸಿನಲ್ಲಿಯೆ ಕಲ್ಪಿಸಿ ಮಾಡಬಹುದು. ಅಥವ‌ ಮ0ತ್ರ ಪೂರ್ವಕವಾಗಿಯು. ನಿಜವೆ0ದರೆ ಅದೆಲ್ಲ ಮಾಡುವುದು ನಮಗಾಗಿ ನಮ್ಮ ಮನಸಿನ‌ ತ್ರುಪ್ತಿಗಾಗಿ ಅನ್ನಿಸುತ್ತೆ. ನಮ್ಮ ಪೂಜೆಯನ್ನು ದೈವ‌ ಮೆಚ್ಚುತ್ತೊ ಇಲ್ಲವೊ ಗೊತ್ತಿಲ್ಲ. ಮತ್ತು ಮು0ದು ಹೋದರೆ ದೇವರೆ ಇಲ್ಲ

Submitted by kavinagaraj Wed, 12/26/2012 - 16:17

In reply to by partha1059

<<ಮತ್ತು ಮುಂದು ಹೋದರೆ ದೇವರೆ ಇಲ್ಲ>> ದೇವರು ಇದ್ದಾನೋ, ಇಲ್ಲವೋ ಕಂಡವರಾರು? ಆದರೆ ಜಗತ್ತು, ಜೀವಾತ್ಮಗಳ ಅಸ್ತಿತ್ವ ಅರಿವಿಗೆ ಬರುತ್ತದೆ. ಇವುಗಳ ಅಸ್ತಿತ್ವಕ್ಕೆ ಕಾರಣವಾದ ಆ ಶಕ್ತಿಯೇ ದೇವರೆನ್ನಬಹುದು. ಜಿಜ್ಞಾಸೆಯ ದೃಷ್ಟಿಯಿಂದ ನೋಡಿದರೆ, ನನ್ನ ಅನಿಸಿಕೆಯಂತೆ ಆ ದೇವರು ಜೀವಾತ್ಮರ ಪಾಲಿಗೆ ಇದ್ದರೂ, ಇಲ್ಲದಿದ್ದರೂ ಎರಡೂ ಒಂದೇ! ಏಕೆಂದರೆ ಅವರವರ ಪತನ/ಏಳಿಗೆಗೆ ಅವರವರೇ ಹೊಣೆ, ದೇವರಲ್ಲ! ಪಾರ್ಥರೇ, ನಿಮ್ಮ ಪ್ರತಿಕ್ರಿಯೆ ನನ್ನಲ್ಲಿ ಈ ಭಾವ ಮೂಡಿಸಿದೆ. ಧನ್ಯವಾದಗಳು.