ಬರಹಗಾರನ ಬಡಾಯಿ 

ಬರಹಗಾರನ ಬಡಾಯಿ 

ಸಣ್ಣ ಕಥೆ ಬರೆಯ ಹೊರಟು, ಎರಡು ಮೂರು ಕಂತಲ್ಲಿ ಮುಗಿಸೋಣವೆಂದು ನಿರ್ಧರಿಸಿ, ಕೊನೆಗೆ ನೀಳ್ಗತೆಯಾಗಿಸಾದರೂ ಮುಗಿಸೋಣವೆಂದು ನಿರ್ಧರಿಸಿ ಮುನ್ನುಗ್ಗಿದವನಿಗೆ ಅವೆಲ್ಲವನ್ನು ಅಣಕಿಸುವಂತೆ ಮಿನಿ ಕಾದಂಬರಿ, ಕಾದಂಬರಿಯಾಗಿ ಕೊನೆಗೆ ಸಹೃದಯೀ ಸಂಪದಿಗರೊಬ್ಬರು ಹೇಳಿದಂತೆ ಗ್ರಂಥ, ಮಹಾನ್ ಗ್ರಂಥವಾಗ ಹೊರಟ (ಗಾತ್ರದಲ್ಲಿ, ಗುಣಮಟ್ಟದಲ್ಲಲ್ಲ!) ಪರಿಭ್ರಮಣ ಸ್ಥಿತಿಯ ಕಥಾನಕದ ಕಥೆ ಇದು - ಕವಿತೆಯ ರೂಪದಲ್ಲಿ :-) ಪ್ಲಾನಿಂಗಿನ ನಿಖರತೆಗೆ ಇದು ಒಂದು 'ಉತ್ತಮ' ಉದಾಹರಣೆಯಾಗುವ ಎಲ್ಲಾ ಅರ್ಹತೆ ಹೊಂದಿದಂತೆ ಕಾಣುತ್ತದೆ ಮಾತ್ರವಲ್ಲ ಟೀವಿ ಧಾರವಾಹಿಗಳಲ್ಲಿ ಚಿಕ್ಕ ಕಥೆಗಳನ್ನು ದೊಡ್ಡ ಹಿಗ್ಗಿಸುವ ಕಲೆ ಹೇಗೆಂದು ಗೊತ್ತಿರದವರಿಗೆ ಅದನ್ನು ಹೇಗೆ ಮಾಡಬಹುದೆಂಬ ಉದಾಹರಣೆಯೂ ಆಗುತ್ತದೊ ಏನೊ? ಅದೇನೆ ಇರಲಿ ಆ ಕಥಾನಕದ ಸರಳ ಕವಿತೆಯನ್ನು ಇಲ್ಲಿ ಓದಿ ಆನಂದಿಸಿ :-)

ಬರಹಗಾರನ ಬಡಾಯಿ 
______________________

ಇಲ್ಲಾವನೊ ವಕ್ರದಂತ 
ಅಂದುಕೊಂಡು ತಾನೆ ಸಂತ
ಕಥೆಯನೊಂದ ಬರೆಯ ಹೊರಟ
ಹುಡುಗಾಟ ತೆವಲು ಬರಿ ಒರಟೊರಟ ||

ಕೊಚ್ಚಿಕೊಂಡನಂತೆ ಸಣ್ಣಕಥೆ
ಮಿತಿ ಮೀರುತೆ ಬೆಳೆಯಿತಂತೆ
ಸಣ್ಣಕಥೆ ತಪ್ಪು, ಭಾಗವಾಗಿಸಿ ಒಪ್ಪು
ಕೈ ಮೀರಿದ ಹೊತ್ತು, ನೀಳ್ಗಥೆಯಾಗಿ ಬೆಪ್ಪು ||

ನೀಳವಾದರು ಕಥೆ ತೋಳು
ಮೆಚ್ಚುವರೆಂದು ಸಹೃದಯಿಗಳು
ಬೆಳೆಯಿತಂತೆ ನೋಡು, ಕಬಂಧ ಬಾಹು
ಮಿನಿ ಕಾದಂಬರಿಯಾಗಿಸಲಿದೆಯೆ ಹರಹು ||

ಮಿನಿ ಮಿಡಿ ಮಡಿ ಗಡಿದಾಟಿ
ಮ್ಯಾಕ್ಸಿಯಿಂದಾಚೆಗೆ ಲಂಗೋಟಿ
ಸಂತೈಸಿದರೆಲ್ಲ ಇದು ಕಾದಂಬರಿ 
ಹೀಗೆ ನೀ ಬರಕೊಂಡು ಹೋದರೆ ಸರಿ ||

ಕಾದಂಬರಿಯಿಂದ ಗ್ರಂಥ
ಗ್ರಂಥವಾಗುತಿದೆಯಂತೆ ಬೃಹತ್ತ !
ಬರೆವವನಿಗಿಂದು ಒಂದೇ ಹೊಸ ಚಿಂತೆ
ಮಿಕ್ಕುಳಿದಿಹರೇನು ಇನ್ನು ಓದುವ ಜನತೆ? ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by neela devi kn Wed, 06/11/2014 - 09:15

ನಾಗೇಶ‌ ಮ್ಯೆಸೂರು ರವರಲ್ಲಿ ನಮಸ್ಕಾರಗಳು
ಕಾದಂಬರಿಯಿಂದ ಗ್ರಂಥ
ಗ್ರಂಥವಾಗುತಿದೆಯಂತೆ ಬೃಹತ್ತ !
ಬರೆವವನಿಗಿಂದು ಒಂದೇ ಹೊಸ ಚಿಂತೆ
ಮಿಕ್ಕುಳಿದಿಹರೇನು ಇನ್ನು ಓದುವ ಜನತೆ? ||

ಚಿಂತೆಯಾಕೆ ನಮ್ಮಂತ‌ ಓದುಗರು ಇರುವತನಕ‌ ಅದು ಸಣ್ಣ‌ ಕತೆಯಾಗಲಿ ಗ್ರಂಥವಾಗಲಿ ಓದಿಸಿಕೊಂಡು ಹೊಗುತ್ತಿರುವ‌ ತನಕ‌
ಓದುವವರಿಗೂ ಚಿಂತೆ ಇರುವುದಿಲ್ಲ‌. ಅದರಲ್ಲೂ ತಮ್ಮ‌ ಪೀಟಿಕೆ ಸಹಿತ‌ ಕವನ‌ ನನಗೂ ನನ್ನ‌ ಸ್ನೇಹಿತೆ / ಸ್ನೇಹಿತರಿಗೂತುಂಬಾ ಮೆಚ್ಚುಗೆ.
ತಮ್ಮ‌ ಕವನಗಳ‌ PDF ಪುಸ್ತಕಗಳನ್ನೇನಾದರು ಇಟ್ಟಿದ್ದರೆ ಕಳಿಸಿಕೊಡಿ ನನ್ನ‌ ಪುಸ್ತಕ‌ ಭಂಡಾರಕ್ಕೆ ಸೇರಿಸಿಕೊಳ್ಳುತ್ತೇನೆ.
ತಮ್ಮ‌ ಬರಹ‌ ಹೀಗೇ ಮುಂದುವರೆಯಲಿ.
ನೀಳಾ

Submitted by nageshamysore Wed, 06/11/2014 - 20:09

In reply to by neela devi kn

ನೀಳಾದೇವಿಯವರಿಗೆ ನಮಸ್ಕಾರ. ತಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಧನ್ಯವಾದಗಳು ಸಹ. ನಿಮ್ಮಂತಹ ಸಹೃದಯಿ ಓದುಗರನ್ನು ತಲುಪುವ ಧ್ಯೇಯವೆ ಈ ಬರವಣಿಗೆಗೆ ನಿರಂತರ ಸ್ಪೂರ್ತಿ. ಜತೆಗೆ ಹೊಸ ವಿಚಾರದ, ತುಸು ವಿಭಿನ್ನ ದೃಷ್ಟಿಕೋನದ ಪರಿಚಯ ಮಾಡಿಸಿತಂತಾದೀತೇನೊ ಎನ್ನುವ ಹಂಬಲ. ಓದಿಸಿಕೊಂಡು ಹೋಗುವ ಮಟ್ಟದಲ್ಲೆ ಬರವಣಿಗೆ ಮುಂದುವರಿಸಬೇಕೆಂದು ಆಶಯವಂತೂ ಇದೆ. ಅದು ದಾರಿ ತಪ್ಪುವಂತೆ ಕಂಡರೆ ನಿಮ್ಮಂತಹವರು ತುಸು ಎಚ್ಚರಿಸಿದರೆ ತಿದ್ದಿಕೊಳ್ಳಲು ಅವಕಾಶವಾಗುತ್ತದೆ. ಸದ್ಯಕ್ಕೆ ಕಥಾನಕದ ನೆಪದಲ್ಲಾದರೂ ಕನ್ನಡದಲ್ಲಿ ಬರೆಯಲಾಗುತ್ತಿದೆಯಲ್ಲಾ ಎನ್ನುವುದೇ ದೊಡ್ಡ ತೃಪ್ತಿ.

ಇದನ್ನು ಸಾಧ್ಯವಾದಷ್ಟು ಬೇಗ ಮುಗಿಸಬೇಕೆಂದು ಹೊರಟ ಕಾರಣ, ಬೇರೆಯದನ್ನು ಓದಿ ಪ್ರತಿಕ್ರಿಯಿಸಲು ಮತ್ತು 'ಟಿಪ್ಪಣಿ ಸಹಿತ ಕವನ'ದ ಕಡೆ ಹೆಚ್ಚು ಗಮನ ಕೊಡಲಾಗುತ್ತಿಲ್ಲ. ನಿಮಗೆ ಮತ್ತು ನಿಮ್ಮ ಸ್ನೇಹಿತರ ಬಳಗಕ್ಕೆ ಪ್ರಿಯವಾದ 'ಟಿಪ್ಪಣಿ ಸಹಿತ ಕವನ'ದ ಆ ವಿಭಾಗಕ್ಕೂ ಮುಂದೆ ಹೆಚ್ಚು ಗಮನ ನೀಡಲು ಯತ್ನಿಸುತ್ತೇನೆ. ಪಿಡಿಎಫ್ ಪ್ರತಿ ಮಾಡಿಡುವುದು ಒಳ್ಳೆ ಸಲಹೆ. ಅದನ್ನು ಕಾರ್ಯಗತಗೊಳಿಸಿ ನಂತರ  ಕಳಿಸುತ್ತೇನೆ. (ಅಂದಹಾಗೆ ಸಂಪದದಲ್ಲಿ ಹಾಕಿದ ಎಲ್ಲಾ ಬರಹಗಳು ನನ್ನ ಬ್ಲಾಗಿನಲ್ಲೂ ಇವೆ - ಇನ್ನೂರಕ್ಕೆ ಮೇಲ್ಪಟ್ಟು - ಅಲ್ಲಿ ಒಂದೆ ಕಡೆ ಎಲ್ಲಾ ಬರಹಗಳು ಒಟ್ಟಾಗಿ ಸಿಗುತ್ತವೆ). ನಿಮ್ಮ ನಿರಂತರ ಅಭಿಮಾನಕ್ಕೆ ಮತ್ತೆ ಧನ್ಯವಾದಗಳು.

Submitted by naveengkn Wed, 06/11/2014 - 12:57

ನಾಗೇಶರೇ ನಮಸ್ತೆ,,, ಸುಂದರ‌ ಕವನ‌ ನಿಮ್ಮದು, ಮನದ‌ ತುಮುಲಕ್ಕೆ ಹಿಡಿದ‌ ಅಕ್ಷರಗಳ‌ ಕನ್ನಡಿ,,,,,,,

ನಿಮಗಾಗಿ
"ಎಲ್ಲಾ ಓದಲಿ ಎಂದು ನಾನು ಬರೆಯುವುದಿಲ್ಲ‌
ಬರೆಯುವುದು ಅನಿವಾರ್ಯ‌ ಇಷ್ಟ‌ ನನಗೆ" ಎಂದು ಹಾಡಿ ಬಿಡಿ,,,,,,
,
,
"ಓದುವವರಿಹರೆಂದು,,,,,, ನೀವು ಬಲ್ಲಿರಿ ಅಲ್ಲವೇ

ಧನ್ಯವಾದಗಳು,

Submitted by nageshamysore Wed, 06/11/2014 - 20:06

In reply to by naveengkn

ನವೀನರೆ ನಮಸ್ಕಾರ ಮತ್ತು ಧನ್ಯವಾದಗಳು. ಬರೆಯುವುದು ಅನಿವಾರ್ಯ 'ಧರ್ಮ' ನನಗೆ ಎನ್ನುವುದಂತೂ ನಿಜ. ಸಂಪದದಂತಹ ವೇದಿಕೆಯಿಂದಾಗಿ ಅದನ್ನು ಓದಿ ಮೆಚ್ಚಿ ಪ್ರೋತ್ಸಾಹಿಸುವ ಸಹೃದಯಿ ಸಂಪದಿಗರಿರುವುದೂ ಅಷ್ಟೆ ನಿಜ. ಹೇಗೂ ಓದುವವರಿದ್ದಾರೆಂಬ ಉಢಾಫೆಯಲ್ಲಿ ಬರಹದ ದಾರಿ ತಪ್ಪಿಸಿಬಿಡುವೆನೇನೊ ಎನ್ನುವ ಆತಂಕವಿರುವುದು ಅಷ್ಟೆ ನಿಜ. ಅದರಲ್ಲೂ ಚೊಚ್ಚಲ ಕಾದಂಬರಿಯ ಹೆರಿಗೆ ಬೇರೆ :-) - ಜತೆಗೆ ಹೆತ್ತವರಿಗೆ ಹೆಗ್ಗಣ ಮೂದ್ದು ಅನ್ನೋದೂ ಇದೆಯಲ್ಲ !? ಆದರೆ ಸಂಪದದಂತಹ ಸೋಶಿಯಲ್ ಮೀಡಿಯಾ ವೇದಿಕೆಯ ಅನುಕೂಲವೆಂದರೆ, ಕೊನೆತನಕ ಕಾಯದೆ ನಡುನಡುವೆ ಪ್ರತಿಕ್ರಿಯೆ ನೀಡುತ್ತಿರಬಹುದು, ತಿದ್ದುತ್ತಿರಬಹುದು. ಆನ್ ದಿ ಜಾಬ್ ಟ್ರೈನಿಂಗಿನ ಹಾಗೆ - ಬರೆಯುತ್ತಲೆ ಕಲಿಯುತ್ತ ಹೋಗಬಹುದು.

ಒಟ್ಟಾರೆ ನೀವಂದಂತೆ ಓದುವ ಸಹೃದಯರಂತೂ ಇದ್ದೆ ಇದ್ದಾರೆ - ಅದೇ ಧೈರ್ಯ :-)

Submitted by ಗಣೇಶ Sun, 06/15/2014 - 22:03

ನಾಗೇಶರೆ,
ಪರಿಭ್ರಮಣ ಈ ದಿನ ಒಂದು ಸುತ್ತಾದರೂ ಮಾಡಿ ಬರಬೇಕು, ಅಂತ ಆಲೋಚಿಸುವುದು, ಮತ್ತೆ ಮುಂದೆ ಹಾಕುವುದು ಆಗುತ್ತಲೇ ಇದೆ. :) ನಿಮ್ಮ ಬರಹಗಳ ಅಭಿಮಾನಿ ನಾನು. ಗ್ರಂಥವಾದರೂ ಓದದೇ ಬಿಡೆನು.
ಕವನ,ಬರಹ, ಬರಹಗಾರನ ಬಡಾಯಿ ಚೆನ್ನಾಗಿದೆ.:) ಮಿನಿ, ಮಿಡಿ...ಕಾದಂಬರಿ, ಹಿಗ್ಗಿಸುವ ಕಲೆ ಅಂದಾಗ ನನ್ನದೂ ಒಂದು ಹಳೇ ನೆನಪು. ಹಿಗ್ಗಿಸುವ ಕಲೆ ನನಗೆ ಬರದಿದ್ದರೂ, ಬರೇ ೨-೩ ಪುಟಾಣಿ ಬರಹಗಳಲ್ಲಿ "ಚಲೋ ಮಲ್ಲೇಶ್ವರ" ಬರೆಯಲು ಹೊರಟೆ. ಸಂಪದಿಗರು ಪ್ರೋತ್ಸಾಹಿಸಿ, ಜತೆ ಸೇರಿ ಇಪ್ಪತ್ತಕ್ಕೂ ಮೀರಿ ಕಂತು ಮುಂದುವರೆಯುವಂತೆ ಮಾಡಿದ್ದರು. ಎಲ್ಲಾ ಬರಹಗಳನ್ನು ಓದಿ ಪ್ರೋತ್ಸಾಹಿಸುವ ಸಂಪದಿಗರಿಗೆ ಜೈ.

Submitted by venkatb83 Tue, 06/17/2014 - 18:27

In reply to by ಗಣೇಶ

"ಇಲ್ಲಾವನೊ ವಕ್ರದಂತ
ಅಂದುಕೊಂಡು ತಾನೆ ಸಂತ
ಕಥೆಯನೊಂದ ಬರೆಯ ಹೊರಟ
ಹುಡುಗಾಟ ತೆವಲು ಬರಿ ಒರಟೊರಟ ||

ಕೊಚ್ಚಿಕೊಂಡನಂತೆ ಸಣ್ಣಕಥೆ
ಮಿತಿ ಮೀರುತೆ ಬೆಳೆಯಿತಂತೆ
ಸಣ್ಣಕಥೆ ತಪ್ಪು, ಭಾಗವಾಗಿಸಿ ಒಪ್ಪು
ಕೈ ಮೀರಿದ ಹೊತ್ತು, ನೀಳ್ಗಥೆಯಾಗಿ ಬೆಪ್ಪು ||"

ಈ ಬರವಣಿಗೆ ಎನ್ನುವುದು ಡಬ್ಬಿಯೊಳಗಿನ ಭೂತದ ತರ್ಹ -ಅದನ್ನು ನಾವೇ ನಿಯಂತ್ರಿಸಬೇಕು -ಇಲ್ಲವಾದರೆ ಲಂಗು ಲಗಾಮಿಲ್ಲದೆ ...........:()))))))
ಈ ಹಿಂದೆ ಹಲವು ಬರಹಗಳನ್ನು ಚಿಕ್ಕದಾಗಿ ಬರೆಯಲು ಹೋಗಿ ಬೃಹದಾಕಾರ ತಾಳಿ ನಾನೇ :((( ಹಾಗೋ ಹಾಗೆ ಆಗಿತ್ತು ..!! ಅದಕ್ಕೆ ಉದಾಹರಣೆ ಬಡ ಬೋರ ಮತ್ತು ಸೀ ಎಮ್ಮು ಕುರ್ಚಿ ಮತ್ತು ನವ ಜೀವಿಯ ರಹಸ್ಯ ಸೃಷ್ಟಿ ...!! ಎರಡನ್ನೂ ಬಬ್ಬಲ್ ಗಂ ತರಹ ಎಳೆದೆನ ಅನ್ನಿಸ್ತು....!!

"ಕಾದಂಬರಿಯಿಂದ ಗ್ರಂಥ
ಗ್ರಂಥವಾಗುತಿದೆಯಂತೆ ಬೃಹತ್ತ !
ಬರೆವವನಿಗಿಂದು ಒಂದೇ ಹೊಸ ಚಿಂತೆ
ಮಿಕ್ಕುಳಿದಿಹರೇನು ಇನ್ನು ಓದುವ ಜನತೆ? ||"

ಮೇಲಿನ ಸಾಲುಗಳು ಬಹುಶ ನಿಮ್ಮ ಪರಿಭ್ರಮಣ ಬರಹದ ಬಗ್ಗೆ ಅನಿಸುತ್ತಿದೆ ...!!
ದೀರ್ಘ ಬರಹಗಳು ಬೋರು ಅನ್ನೋದು ಮಾಮೂಲು ಪ್ರತಿಕ್ರಿಯೆ ,.....!! ಆದ್ರೂ ಚಿಕ್ಕ ಚೊಕ್ಕ ಬರಹಗಳು ಬೆಸ್ಟ್ ಅನಿಸುತ್ತೆ ..

ಶುಭವಾಗಲಿ

;|/

Submitted by nageshamysore Sat, 06/21/2014 - 06:48

In reply to by venkatb83

ಸಪ್ತಗಿರಿಗಳೆ ನಮಸ್ಕಾರ ಹಾಗು ಧನ್ಯವಾದಗಳು. ಹೌದು ಈ ವಿಚಾರ ಪರಿಭ್ರಮಣದ ಕುರಿತದ್ದೆ. ಉದ್ದವಾಯಿತು ಎನ್ನುವುದಕ್ಕಿಂತ ಹೆಚ್ಚಾಗಿ ಇಷ್ಟೊಂದು ಬರೆಯುವ ವಸ್ತುವನ್ನು ಮೊದಲೆ ಪಟ್ಟಿ ಹಾಕಿಕೊಂಡಿದ್ದರೂ ಇದೊಂದು ಸಣ್ಣ ಕಥೆಯೊ, ನೀಳ್ಗತೆಯೊ ಆಗುತ್ತದೆಂದು ಊಹಿಸಿಕೊಂಡಿದ್ದ ಅನುಭವದ ಕೊರತೆಯ ಪೆದ್ದುತನವೆ ಹೆಚ್ಚು ಪೆಕರನನ್ನಾಗಿಸಿದ್ದು. ನಾನು ಪ್ರಯತ್ನಪೂರ್ವಕವಾಗಿ ಹಿಗ್ಗಿಸಲೆತ್ನಿಸದಿದ್ದರೂ ಮೊದಲೆ ಗುರುತು ಹಾಕಿಕೊಂಡಿದ್ದ ಅಂಶಗಳನ್ನೆಲ್ಲ ಯಾವುದೂ ಬಿಟ್ಟು ಹೋಗದಂತೆ ಸೇರಿಸಿಕೊಂಡು ಬರುತ್ತಿದ್ದೇನೆ. ಆ ಯತ್ನದಲ್ಲಿ ಒಟ್ಟಾರೆ ಹಂದರ ಸಡಿಲವಾಗುವ ಅಪಾಯ ಇದ್ದದ್ದೆ ಆದರೂ ಅಂತಿಮ ಬಂಧದಲ್ಲಿ ಎಲ್ಲವೂ ನೊರಾಯಾಸವಾಗಿ ಸಂಗಮಿಸುತ್ತದೆನ್ನುವ ಆಶಾಭಾವವಿದೆ, ಕಾದು ನೋಡೋಣ :-) ಆದರೆ ನೀವಂದಂತೆ ಈಗಿನ ಬಿಡುವಿಲ್ಲದ ಜಮಾನದಲ್ಲಿ ಹೆಚ್ಚು ಜನ ಪ್ರೀತಿಯಿಂದ ಆದರಿಸುವುದು ಬೇಗ ಮುಗಿಸಲಾಗುವ ಪುಟಾಣಿಗಳನ್ನೆ ಎನ್ನುವುದು ಎಷ್ಟು ಸತ್ಯವೊ, ಓದನ್ನೆ ಹವ್ಯಾಸವಾಗಿಟ್ಟುಕೊಂಡು ಸೂಕ್ತವಿರುವ ಉದ್ದನೆಯ ಬರಹಗಳನ್ನು ತಾಳ್ಮೆಯಿಂದ ಓದಿ ಪ್ರತಿಕ್ರಿಯಿಸುವ ಓದುಗ ಬಳಗವೂ ಇದೆಯೆಂಬುದು ಅಷ್ಟೆ ಸತ್ಯ. ಸಂಪದದ ವೇದಿಕೆ ಅದನ್ನು ಸುಲಭ ಸಾಧ್ಯವಾಗಿಸಿರುವುದು ನಮ್ಮಂತಹವರ ಸೌಭಾಗ್ಯ !

Submitted by nageshamysore Sat, 06/21/2014 - 06:45

In reply to by ಗಣೇಶ

ಗಣೇಶ್ ಜಿ ನಮಸ್ಕಾರ ಹಾಗು ಧನ್ಯವಾದಗಳು, ನಿಮ್ಮ ಮಾತು ನೂರಕ್ಕೆ ನೂರು ನಿಜ. ಸಂಪದದ ಸಹೃದಯೀ ಓದುಗ ಬಳಗದ ದೆಸೆಯಿಂದಾಗಿ ಬರಹಗಳು ಸ್ವಯಂಸ್ಪೂರ್ತಿಯಿಂದಲೆ ರೆಕ್ಕೆಪುಕ್ಕ ಕಟ್ಟಿಕೊಂಡಂತೆ ಹರಡಿಕೊಳ್ಳುವುದರಲ್ಲಿ ಅಚ್ಚರಿಯೇನೂ ಇಲ್ಲ. ನನ್ನ ನಿಜವಾದ ಆತಂಕವಿರುವುದು ಓದುವುದಿಲ್ಲ ಅನ್ನುವುದಕ್ಕಿಂತ ಬರಹ ಓದಿಸಿಕೊಳ್ಳುವ ಮಟ್ಟದಲ್ಲಿ ಮುಂದುವರೆಯುತ್ತಿದೆಯೊ ಇಲ್ಲವೊ ಎನ್ನುವ 'ಸ್ವಯಂಪಾಕದ' ಕುರಿತಾದ ಅನುಮಾನವಷ್ಟೆ...:-)

Submitted by nageshamysore Sat, 06/21/2014 - 06:46

In reply to by kavinagaraj

ಕವಿಗಳೆ ನಮಸ್ಕಾರ ಹಾಗು ಧನ್ಯವಾದಗಳು. ಬರಿ ಓದುವುದು ಮಾತ್ರವಲ್ಲ, ನಿರಂತರ ಪ್ರತಿಕ್ರಿಯೆ ಸಲಹೆ ಸೂಚನೆಗಳೊಂದಿಗೆ ಪ್ರೋತ್ಸಾಹಿಸುತ್ತಲೆ ಇದ್ದೀರಿ. ಬರೆವವನಿಗೆ ಮತ್ತೇನು ತಾನೆ ಬೇಕು? ಒಂದು ವಾರದಿಂದೀಚೆಗೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ನಾನು ಸಂಪದಕ್ಕೆ ಭೇಟಿ ನೀಡಿ ಪ್ರಕಟಿಸಲು / ಉತ್ತರಿಸಲು ಆಗುತ್ತಿಲ್ಲ. ಆದರೆ ಈ ವಾರ ಎಲ್ಲವು ಸುಗಮವಾಗಿರುತ್ತದೆಯೆಂಬ ನಿರೀಕ್ಷೆಯಿದೆ. ಅಲ್ಲಿಂದಾಚೆಗೆ ಮತ್ತೆ ಮಾಮೂಲಿನಂತೆ ತೊಡಗಿಸಿಕೊಳ್ಳುತ್ತೇನೆ.