ಪುಸ್ತಕನಿಧಿ

ಭಾಸನ ನಾಟಕವಾದ 'ಪಂಚರಾತ್ರ'ವು  ಗದ್ಯ ಪದ್ಯಗಳಿಂದ ಕೂಡಿದ್ದುದರಿಂದ ತಿಳಿದುಕೊಳ್ಳಲು ಸುಲಭವಾಗಲಿ ಎಂದು ಒಬ್ಬರು ಪೂರ್ತಿ ಗದ್ಯದಲ್ಲಿ ನಾಟಕವನ್ನು ಬರೆದಿದ್ದಾರೆ. ಇದು ನನಗೆ archive.org ತಾಣದಲ್ಲಿ ಸಿಕ್ಕಿತು.

ಸುಮಾರು 90 ಪುಟಗಳ ಈ ನಾಟಕದಲ್ಲಿ ಮಹಾಭಾರತದ ಸಂಗತಿ ಇದೆ. ಪಾಂಡವರು ವಿರಾಟ ರಾಜನ ಆಸ್ಥಾನದಲ್ಲಿ ಮಾರು ವೇಷದಿಂದ ತಮ್ಮ ವನವಾಸದ ಅಜ್ಞಾತವಾಸದ ಸಮಯವನ್ನು ಕಳೆಯುತ್ತಿರುವರು. 

ಅತ್ತ ದ್ರೋಣನು  ದುರ್ಯೋಧನನಲ್ಲಿ ಪಾಂಡವರ ರಾಜ್ಯವನ್ನು ಅವರಿಗೆ ಮರಳಿಸಲು ಹೇಳುವುದು. ಆಗ ದುರ್ಯೋಧನನು ಒಂದು ಶರತ್ತನ್ನು ಹಾಕುವನು. ಅದು ಏನೆಂದರೆ ಐದು ದಿನಗಳ ಸಮಯದಲ್ಲಿ ಪಾಂಡವರ ಪತ್ತೆ ಆಗಬೇಕು.

ಅದಕ್ಕಾಗಿ ದ್ರೋಣ ಹಾಗೂ ಭೀಷ್ಮರು ಒಂದು ಉಪಾಯ ಮಾಡುತ್ತಾರೆ. ಅದರ ಪ್ರಕಾರ ವಿರಾಟನ ಗೋವುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಈ ಸೈನ್ಯದಲ್ಲಿ ಅಭಿಮನ್ಯು ಕೂಡ ಕೌರವರ ಪರವಾಗಿ ಇರುತ್ತಾನೆ.

 ಗೋವುಗಳನ್ನು ರಕ್ಷಿಸಲು ವಿರಾಟನ ಮಗ ಉತ್ತರಕುಮಾರನು  ಬೃಹನ್ನಳೆಯ ವೇಷದಲ್ಲಿರುವ ಅರ್ಜುನನನ್ನು ಸಾರಥಿಯಾಗಿ ಇಟ್ಟುಕೊಂಡು ಯುದ್ಧ ಮಾಡಲು ಬರುತ್ತಾನೆ. ಆಗ ಅರ್ಜುನನು ಯುದ್ಧದಲ್ಲಿ ಸಹಾಯ ಮಾಡುತ್ತಾನೆ. ಇತ್ತ ಅಭಿಮನ್ಯುವನ್ನು ಮಾರುವೇಷದಲ್ಲಿರುವ ಭೀಮನು ಬರಿಗೈಯಲ್ಲಿ ಬಂದು ಬಂಧಿಸಿಕೊಂಡು ಹೋಗುವನು.

ಹೀಗಾಗಿ ಪಾಂಡವರ ಪತ್ತೆಯು ನಿಗದಿತ ಸಮಯದಲ್ಲಿ ಆಗಿ ಕೊಟ್ಟ ಮಾತಿನಂತೆ ದುರ್ಯೋಧನನು ಪಾಂಡವರ ರಾಜ್ಯವನ್ನು ಪಾಂಡವರಿಗೆ ಮರಳಿ ಕೊಡುವನು.

ಇದು ಕಥೆಯ ಹಿನ್ನೆಲೆ. ಇಲ್ಲಿ ನನ್ನ ಗಮನ ಸೆಳೆದ ಸಂಭಾಷಣೆಗಳು ಇವು: 

1) ಗಳಿಸಿದ ಹಣವನ್ನು ದಾನ ಮಾಡಿ ಮಕ್ಕಳಿಗೆ ಹಣ ಗಳಿಸುವ ಮತ್ತು ಬದುಕುವ ರೀತಿಯ ಸಾಧನೆಯನ್ನು ಮಾತ್ರ ಬಿಡಬೇಕು.

2) ಕರ್ಣನು ದುರ್ಯೋಧನನಿಗೆ ಹೇಳುತ್ತಾನೆ:  ರಾಜ್ಯವನ್ನು ಪಾಂಡವರಿಗೆ ಕೊಡುವುದು ನಿನಗೆ ಬಿಟ್ಟಿದ್ದು, ಆದರೆ ಯುದ್ಧ ಪ್ರಸಂಗ ಬಂದರೆ ನಿನ್ನ ನೆರವಿಗೆ ಬರುವುದು ನನ್ನ ಕರ್ತವ್ಯ.

3) ವಿರಾಟನು ಹೇಳುವುದು - ಆ ಯುಧಿಷ್ಠಿರನು ಬೇಕಾದರೆ ಕ್ಷಮಿಸಬಹುದು, ನಾನು ಕ್ಷಮಿಸುವವನಲ್ಲ.

ಆಗ ಒಂದು ಪಾತ್ರವು ಹೇಳುವುದು - ಆ ಪಾಂಡವರು ಅನುಭವಿಸುವ ಕಷ್ಟ ಈಗ ಫಲವನ್ನು ಕಂಡಿದೆ. ಆ ಯುಧಿಷ್ಠಿರನ ಕ್ಷಮಾಗುಣ ವು ನಾಣ್ಣುಡಿ ಆಯಿತು.

4) ಯುದ್ಧದಲ್ಲಿ  ಸೋತ ವಿರಾಟ ಮಹಾರಾಜನು ಭೀಷ್ಮರನ್ನು ಪೂಜ್ಯ ಗಂಗಾಪುತ್ರ ಎಂದು ಸಂಭೋಧಿಸುವನು. ಆಗ 'ಅಪಮಾನಿತನಾದರೂ ರಾಜನು ಮರ್ಯಾದೆ ಮೀರಲಿಲ್ಲ' ಎಂಬ ಮೆಚ್ಚುಗೆಯನ್ನು ಅವನು ಗಳಿಸುವನು.

5) ರೂಪವಾಗಲಿ ಕುಲವಾಗಲಿ ಮುಖ್ಯವಲ್ಲ; ಮಹಾತ್ಮರು ತಮ್ಮ ಕಾರ್ಯದಿಂದಲೇ ತಿಳಿದುಬರುವರು.

6) ಉತ್ತಮರನ್ನು ನೀಚ ಜನರು ಹೆಸರು ಹಿಡಿದು ಕರೆಯುವರು.

7) ಅಭಿಮನ್ಯು - ಸ್ವಂತ ಸಾಹಸವನ್ನು ಹೊಗಳಿಕೊಳ್ಳುವುದು ನಮ್ಮ ಕುಲಧರ್ಮ ಅಲ್ಲ.

8) ಆಯುಧ ರಹಿತನಾಗಿ ಮಾರುವೇಷದಲ್ಲಿ  ಬಂದ ಭೀಮನಿಗೆ ಸೆರೆ ಸಿಕ್ಕ ಅಭಿಮನ್ಯು ಹೇಳುವುದು - ( ಅವನಿಗೆ ಇವನು ಭೀಮಸೇನ ಎಂದು ಅರಿವಿಲ್ಲ) -  ಆಯುಧರಹಿತನಾಗಿ ನೀನು ಬಂದ ಕಾರಣ ನಾನು ಸೆರೆ ಸಿಕ್ಕಬೇಕಾಯಿತು. ನನ್ನ ಪಿತನು ಅರ್ಜುನನಾಗಿರಲು ನಾನು ಆಯುಧರಹಿತರಾಗಿ ಬಂದವರ ಮೇಲೆ ಶಸ್ತ್ರ ಎತ್ತುವದೇ ?

 

 

 

 

 

 

 

 

 

 

 

ಈ ಪುಸ್ತಕವು archive.org ತಾಣದಲ್ಲಿ ಇದ್ದು, 'ಶ್ರೀ ರಾಮಚಂದ್ರ' ಎಂದು ಹುಡುಕಿ ಪಡೆಯಬಹುದು.

ಇದರಲ್ಲಿ ರಾಮಾಯಣದ ಕಥೆಯು ತುಂಬಾ ಸರಳವಾಗಿ 120 ಪುಟಗಳಲ್ಲಿ ಶ್ರೀ ರಾಮನು ರಾವಣನನ್ನು ಕೊಂದು ಸೀತೆಯನ್ನು ಕರೆದುಕೊಂಡು ಅಯೋಧ್ಯೆಗೆ ಬಂದು ಅಧಿಕಾರವನ್ನು ವಹಿಸಿಕೊಂಡವರೆಗೆ ಕಥೆಯನ್ನು ಹೇಳಿದ್ದಾರೆ. ಬಹುಶ: ವಾಲ್ಮೀಕಿ ರಾಮಾಯಣವೇ ಇದಕ್ಕೆ ಆಧಾರವಾಗಿರಬೇಕು. ಇದರಲ್ಲಿ ಯಾವುದೇ ಮುನ್ನುಡಿ ಇಲ್ಲದ್ದರಿಂದ ಈ ಬಗ್ಗೆ ಏನೂ ತಿಳಿಯುವದಿಲ್ಲ.

ರಾಮಾಯಣದ ಕಥೆ ನನಗೆ ಈಗಾಗಲೇ ಗೊತ್ತಿತ್ತಾದರೂ ಈ ಪುಸ್ತಕದಲ್ಲಿ ಏನಾದರೂ ಸದ್ಗುಣದ ಮತ್ತು ಸನ್ನಡತೆಯ ಉದಾಹರಣೆಗಳು ನಮಗೆ ಸಿಗಬಹುದು ಎಂದುಕೊಂಡು ಇದನ್ನು ಪೂರ್ತಿಯಾಗಿ ಓದಿದೆ.

ಅಲ್ಲಿ ಕೆಳಗಿನ ಸಂಗತಿಗಳು ನನ್ನ ಗಮನಕ್ಕೆ ಬಂದವು.

1) ರಾಮನು ಪರಶುರಾಮನಿಗೆ ಹೇಳಿದ- ನೀನು ಸಾಹಸಿ ಹೌದು. ಆದರೆ ಉಳಿದವರನ್ನು ಅಸಾಹಸಿಗಳೆಂದೂ ನಿರ್ವೀಯರೆಂದೂ ಹಳಿಯುವದು, ಹೀಗೆ ಗರ್ವಿತನಾಗಿರುವದು ನಿನ್ನಂತವನಿಗೆ ತಕ್ಕದ್ದಲ್ಲ.

2) ರಾಮನು ವನವಾಸಕ್ಕೆ ಹೊರಟ ಸಂದರ್ಭದಲ್ಲಿ ರಥದಲ್ಲಿ ಕುಳಿತಿದ್ದ ಅವನನ್ನು ಪ್ರಜೆಗಳು ನಡೆಯುತ್ತ ಹಿಂಬಾಲಿಸುವುದನ್ನು ನೋಡಿ ರಾಮನು ರದದಿಂದ ಇಳಿದು ಅವನೂ ಪಾದಚಾರಿಯಾಗಿ ನಡೆದನು.

3) ಭರತನು ರಾಮನನ್ನು  ಭೇಟಿಯಾಗಲು ಹೊರಟು ತನ್ನ ಕ್ಷತ್ರಿಯ ವೇಷವು ನಾರುಮಡಿ ಧರಿಸಿರುವ ರಾಮನ ಮುಂದೆ ಸರಿಯಾಗದೆಂದು ಅದನ್ನು ಕಳಚಿ ತಾನು ಕೂಡ ನಾರುಮಡಿಯನ್ನು ಧರಿಸಿದ.

4) ಭರತನು ಅಯೋಧ್ಯೆಗೆ ಮರಳಿ ರಾಜನಾಗು ಎಂದು ಶ್ರೀರಾಮನನ್ನು ಕೇಳಿಕೊಂಡನು. ಅದಕ್ಕೆ ವಸಿಷ್ಟ ಮುನಿ ತನ್ನ ಬೆಂಬಲವನ್ನು ನೀಡಿ ರಾಜನಾಗು ಎಂದು ಹೇಳಿ ಆಚಾರ್ಯನಾದ ತನ್ನ ಮಾತನ್ನು ಶ್ರೀ ರಾಮ ನಡೆಸಬೇಕೆಂದು ಹೇಳಿದನು. ಅದಕ್ಕೆ ಪ್ರತಿಯಾಗಿ ಆಚಾರ್ಯ ವಚನಕ್ಕಿಂತ ಪಿತೃವಾಕ್ಯವೇ ಹೆಚ್ಚಿನದೆಂದು ರಾಮನು ಹೇಳಿದನು.

5) ಭ್ರತ್ಯರಿರುವಾಗ ಒಡೆಯನು ತಾನೇ ಕೆಲಸಕ್ಕೆ ನಿಲ್ಲಬಾರದು ಎಂದು ವಾನರರು ಹೇಳಿದರು.

ಮುನ್ನುಡಿಯಲ್ಲಿ ಹೇಳುವಂತೆ ಇದು ಅವಧೂತ ಮಾರ್ಗದ ಒಂದು ಚರಿತ್ರ ಗ್ರಂಥ. 

ಭಗವದ್ ಭಕ್ತರು 'ನಾನು ಇದನ್ನು ಬರೆದಿಲ್ಲ, ಭಗವಂತ ಬರೆಸಿದ ' ಎಂದು ಹೇಳುವಂತೆ ಗಳಗನಾಥರು ಇದನ್ನು ಪರಮಹಂಸರು ಬರೆಸಿದ್ದಾರೆ ಅಂತ ಹೇಳುತ್ತಾರೆ. ಇದು ಎರಡನೇ ಭಾಗವಂತೆ ಆದರೆ ಮೊದಲು ಮುದ್ರಿಸಿದ್ದಂತೆ. 

ಅದರ ಪ್ರಾರಂಭದ ಕೆಲವು ಸಾಲುಗಳು ಹೀಗಿವೆ - ಈ ಜಗತ್ತಿನಲ್ಲಿ ದೇವರು ಹಾಗೂ ಅವನ ಸೃಷ್ಟಿ ಎರಡು ಇರುತ್ತವೆ. ದೇವರ ಸ್ವರೂಪ ಕಣ್ಣಿಗೆ ಕಾಣದೆ ಇದ್ದು ಆತನ ಸೃಷ್ಟಿಯು ವ್ಯಕ್ತ ಇರುತ್ತದೆ. ದೇವರು ತನ್ನ ಇಚ್ಛೆಯಂತೆ ಏನನ್ನಾದರೂ ಮಾಡಬಲ್ಲನು, ಮಾಡದೆ ಇರಬಲ್ಲನು, ಅಥವಾ ಮತ್ತೇನೋ ಮಾಡಬಲ್ಲನು. ಏನರ ಮನಸ್ಸನ್ನು ಇವತ್ತು ಎಳೆಯಲು ಮಹಾತ್ಮರು ಪವಾಡಗಳನ್ನು ಮಾಡುತ್ತಾರೆ. 

ಜ್ಞಾನ ಮತ್ತು ಸಿದ್ಧಿ ಪ್ರಾಪ್ತವಾಗಲು ಗುರುಭಕ್ತಿ ಬೇಕು ಅಥವಾ ಕರ್ಮಯೋಗ ಬೇಕು. ಗುರು ಭಕ್ತಿ ಇದ್ದರೆ ಕರ್ಮಗಳ ಅಗತ್ಯ ಇಲ್ಲ. ಆಗ ಸದಾಚಾರ ಅಥವಾ ದುರಾಚಾರಗಳ ಹಂಗೇ ಇಲ್ಲ.

ಗುರು ಭಕ್ತಿಯೊಂದರ ಬಲದಿಂದಲೇ ಜ್ಞಾನ, ಸಿದ್ದಿ ಪಡೆದರೆ ಆ ಕರ್ಮಹೀನತೆಯೂ  ಸದಾಚಾರದುರಾಚಾರಗಳ ತಾರತಮ್ಯ ರಾಹಿತ್ಯವೂ ಐಹಿಕ ಸುಖಕ್ಕೂ ವಿವೇಕ ಸಂಗ್ರಹಕ್ಕೂ ಲೌಕಿಕ ವ್ಯವಸ್ಥೆಗೂ  ಬಾಧಕವಾಗಿ ಆ ಕರ್ಮ ಹೀನತೆಯು (ಅಜ್ಞಾನಿಗಳ - ನಾನು ಸೇರಿಸಿದ ಶಬ್ದ ಇದು) ಐಹಿಕ ಸುಖವನ್ನೂ ಪಾರಲೌಕಿಕ ಸುಖವನ್ನೂ ಮಣ್ಣುಗೂಡಿಸುವದು.

ಧರ್ಮಸಮ್ಮತವಾಗಿ ಅರ್ಥವನ್ನು ಗಳಿಸಿ ಧರ್ಮಸಮ್ಮತವಾದ  ಕಾಮವನ್ನು ಭೋಗಿಸಿ ಆ ಧರ್ಮಾರ್ಥಕಾಮಗಳನ್ನು ಒಂದರಿಂದ ಒಂದಕ್ಕೆ ಬಾಧೆ ಬಾರದಂತೆ ವಿವೇಕದಿಂದ ಸಾಧಿಸುವ ಜನರ ವರ್ಗವು ಲೋಕ ಹೆಚ್ಚು ಹಿತಕಾರಿಯಾಗಿದೆ.

ಅವಧೂತಮಾರ್ಗಿಗಳು ವರ್ಣಾಶ್ರಮ ಧರ್ಮಗಳನ್ನು ಅತಿಕ್ರಮಿಸುವರು.

 

ಮುಂದೆ ಒಬ್ಬ ಸಂತನ ಬಾಲ್ಯ ಹಾಗೂ ಜೀವನದ ವಿವರಗಳು ಇದ್ದು ನಾನು ಸರಿಯಾಗಿ ಓದಲಿಲ್ಲ.

ಈ ಪುಸ್ತಕವನ್ನು https://archive.org/details/dli.osmania.3077

ಕೊಂಡಿಯಲ್ಲಿ ಪುಕ್ಕಟೆ ಓದಬಹುದು ಅಥವಾ ಇಳಿಸಿಕೊಳ್ಳಬಹುದು.

 

 

ಈ ಪುಸ್ತಕವನ್ನು ನಾನು archive.org ತಾಣದಿಂದ ಪುಕ್ಕಟೆ ಇಳಿಸಿಕೊಂಡಿದ್ದೆ . ಆದರೆ ಇದರ ಕೊಂಡಿಯನ್ನು ನಾನು ಈಗ ಕೊಡಲಾರೆ. ಕ್ಷಮಿಸಿ.  ಇದು ಹೊಸ ಪುಸ್ತಕವಾಗಿದ್ದು ಸುಮಾರು 160 ಪುಟಗಳಲ್ಲಿ ಸುಮಾರು ಹತ್ತು ಕಥೆಗಳಿವೆ. ಇದರ ಮುನ್ನುಡಿಯಲ್ಲಿ ಕಥೆ ಎಂದರೇನು ಎಂಬ ವಿವೇಚನೆ ಇದೆ. ಓದಲು ತಕ್ಕದಾಗಿದೆ. 

ಕಥೆಗಳಿಂದ ನಾವು ಸ್ವತಃ ಅನುಭವಿಸದೆ ಇದ್ದುದನು ತಿಳಿಯಬಹುದು. ಇಲ್ಲಿನ ಕಥೆಗಳು ಹಾಗೆ ಇವೆ. ಬಹುತೇಕ ಮಧ್ಯಮ ವರ್ಗದ ಅಥವಾ ಮೇಲಿನ ವರ್ಗದ ಹಿನ್ನೆಲೆಯನ್ನು ಹೊಂದಿವೆ. 

ಇದರಿಂದ ನಾನು ಮಾಡಿಕೊಂಡ ಟಿಪ್ಪಣಿಗಳು ಎರಡು ಸಂಭಾಷಣೆಗಳನ್ನು ಒಳಗೊಂಡಿವೆ. ಅವು ಹೀಗಿವೆ.

1) ಹೊಲದಾಗಾದ್ರೂ ಗೇಯಿ , ಅಥವಾ ಏನಾದ್ರೂ ಬದುಕು ಮಾಡಿ ಊಟಕ್ ಒಂದು ದಾರಿ ಮಾಡಿಕೋ.

2) 'ಅಪ್ಪ, ನಿಮಗೊಂದು ವಿಷಯ ಹೇಳಬೇಕು. ಅದನ್ನ ಯಾರು ಹೇಳುವುದಿಲ್ಲ ಎಂದು ಪ್ರಮಾಣ ಮಾಡಿ'

'ನಿನಗೇ ಗೊತ್ತಲ್ಲ, ನನಗೆ ಎಲ್ಲರ ಕಲ್ಪನೆಯ ದೇವರ ಮೇಲೆ ನಂಬಿಕೆ ಇಲ್ಲ ಅಂತ'

'ಇಲ್ಲ, ನೀವು ಪ್ರಮಾಣ ಮಾಡಲೇಬೇಕು'

'ನನ್ನ ಪ್ರಮಾಣದ ಸ್ಥಿರತೆ ನೀನು ಹೇಳುವ ವಿಷಯದ ಮೇಲೆ ಅವಲಂಬಿಸುತ್ತದೆ. ನಾನು ನನ್ನ ಪ್ರಮಾಣವನ್ನು ಮುರಿಯಬಹುದು. ... ನನ್ನ ಮೇಲೆ ನಂಬಿಕೆ ಇದ್ದರೆ ಹೇಳು, ಇಲ್ಲದಿದ್ದರೆ ಬೇಡ. ನಾನು ಯಾವುದೇ ಪ್ರಮಾಣ ಮಾಡುವುದಿಲ್ಲ. ನನಗೆ ಇದರಲ್ಲೆಲ್ಲ ನಂಬಿಕೆ ಇಲ್ಲ'

ಈ ಪುಸ್ತಕದಿಂದ ನಾನು ಮಾಡಿಕೊಂಡ ಕೆಲವು ಟಿಪ್ಪಣಿಗಳು ಇಲ್ಲಿವೆ.
ಇಲ್ಲಿನವು ಭಾರತದ ಹಿತಕಾರಕ ರಹಸ್ಯಗಳು. ಧರ್ಮಕ್ಕೆ ಅಂತರಂಗ ಬಹಿರಂಗ ಎಂಬ ಎರಡು ಅಂಗಗಳು ಇರುವವು. ಧರ್ಮದ ಅಂತರಂಗವು ಜಗದ್ ಕಾರಣನಾದ ದೇವರ ಪ್ರೀತಿಗೆ ಸಂಬಂಧ ಇರುವುದು. ಧರ್ಮದ ಬಹಿರಂಗವು ಜಗತ್ತಿನ ಸುಖದ ಪ್ರಾಪ್ತಿಗೆ ಸಂಬಂಧಿಸಿದ್ದಾಗಿರುವುದು. ಧರ್ಮದ ಅಂತರಂಗವು ಶಾಶ್ವತವಾಗಿ ಇರುವುದು. ಜಗತ್ತು ಯಾವಾಗಲೂ ರೂಪಾಂತರ ಹೊಂದತಕ್ಕದ್ದಾಗಿದ್ದು ಈ ಜಗತ್ತು ಚಂಚಲವಾಗಿರುವುದರಿಂದ ಜಗತ್ತಿನ ಸುಖದ ಪ್ರಾಪ್ತಿಗೆ ಕಾರಣವಾದ ಲೌಕಿಕ ಆಚಾರ ಮಯನಿಸುವ ಧರ್ಮದ ಬಹಿರಂಗವೂ ಚಂಚಲವೇ. ಅಂದರೆ ದೇಶಕಾಲ ಪರಿಸ್ಥಿತಿಗೆ ಅನುರೂಪವಾಗಿ ಹೆಚ್ಚು ಕಡಿಮೆ ಆಗತಕ್ಕದ್ದೇ ಆಗಿರುವುದು. ಧರ್ಮದ ಮುಖ್ಯ ಅಂಶವಾದ ಧರ್ಮದ ಅಂತರಂಗದ ರಕ್ಷಣಕ್ಕೆ ಧರ್ಮದ ಬಹಿರಂಗವು ಬೇಲಿಯಂತೆ ಇರುತ್ತದೆ. ಧರ್ಮದ ಬಹಿರಂಗದ ರೂಪಾಂತರವು ಅಧಿಕಾರ ಸಂಪನ್ನರಾದ ನಿಸ್ಪ್ರಹ ವೃತ್ತಿಯ ಅಲೌಕಿಕ ಶಕ್ತಿಯ ಮಹಾಜ್ಞಾನಿಗಳ ಶಾಸನ ರೂಪದಿಂದ ಆಗುತ್ತದೆ. ಅವರು ಮನುಷ್ಯನ ವಿಷಯ ಆಸಕ್ತಿಯನ್ನು ನಿಯಂತ್ರಿಸುತ್ತಾರೆ. 
ಧರ್ಮಾಂತರವು ಯಾವಾಗ ಸರಿ ಎಂಬುದನ್ನು ಲೇಖಕರು ಹೇಳಿದ್ದಾರೆ. ಆಮಿಷ, ಒತ್ತಾಯಗಳ ಧರ್ಮಾಂತರವು ತಪ್ಪು. ಯೋಗ್ಯ ರೀತಿಯಿಂದಾದ ಧರ್ಮಾಂತರವು ಧರ್ಮದ ರಕ್ಷಣೆಯೇ ಆಗಿರುವುದು. ಸ್ಪಧರ್ಮನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಇವು ಧರ್ಮಿಷ್ಠರ ಅಗತ್ಯ ಗುಣಗಳು. 

ತನ್ನ ಹಿತವು ಸ್ವಾರ್ಥವಾಗಿರುವಂತೆ ತನ್ನವರ, ತನ್ನ ಸಮಾಜದ, ತನ್ನ ರಾಷ್ಟ್ರದ ಹಿತವು ಕೂಡ ಸ್ವಾರ್ಥವೇ ಆಗಿರುತ್ತದೆ.  ಕೇವಲ ನೀತಿಯ ಆಚರಣೆಯಿಂದ ಜಗತ್ತಿನ ಧಾರಣೆ ಆಗಲಿಕ್ಕಿಲ್ಲ. ಯಾಕೆಂದರೆ ಜಗತ್ತನ್ನು ಪರಮೇಶ್ವರನು ನೀತಿ - ಅನೀತಿ ಪಾಪ- ಪುಣ್ಯ ಒಳಿತು- ಕೆಡುಕು ಇವುಗಳಿಂದ ಮಾಡಿರುವುದರಿಂದ ಕೇವಲ ನೀತಿಯನ್ನಾಗಲಿ ಅನೀತಿಯನ್ನಾಗಲಿ ಆಚರಿಸುವುದರಿಂದ ಜಗತ್ತು ಉಳಿಯಲಿಕ್ಕಿಲ್ಲ ಆದರೆ ಧರ್ಮಾಚರಣೆಯಿಂದ ಜಗತ್ತಿನ ಧಾರಣೆ ಆಗುತ್ತದೆ. 

ಧಾರ್ಮಿಕರು ಕೇವಲ ತಮ್ಮ ಕರ್ತವ್ಯ ಬುದ್ಧಿಯಿಂದ ಧರ್ಮದಂತೆ ನಡೆಯುವರು. ಅವರು ತಮ್ಮ ಸೌಜನ್ಯವನ್ನು ಧರ್ಮದ ದೃಷ್ಟಿಯಿಂದ ತೋರಿಸುವವರಲ್ಲದೆ ಸ್ವಾರ್ಥ ದೃಷ್ಟಿಯಿಂದ ಅಂದರೆ ಅನ್ಯರ ಭಯದಿಂದ ಅಥವಾ ಅನ್ಯರಿಗೆ ಪ್ರಿಯರಾಗುವ ಇಚ್ಛೆಯಿಂದ ಅಥವಾ ಅನ್ಯ ರಿಂದ ಏನನ್ನಾದರೂ ಸಂಪಾದಿಸುವುದಕ್ಕಾಗಿ ಸೌಜನ್ಯವನ್ನು ತೋರಿಸುವುದಿಲ್ಲ. 

ಕೃಷ್ಣ ದುರ್ಯೋಧನ ಧರ್ಮರಾಯ ಇವರುಗಳ ನಡತೆಯ ವಿಮರ್ಶೆ ಇಲ್ಲಿದೆ. 

ಸಂಸಾರಿಕ ಮನುಷ್ಯನು ಬೆಳಗಿನಲ್ಲಿ ನಿತ್ಯನೈಮಿತ್ತಿಕ ಕಾರ್ಯಗಳನ್ನು ಮಾಡಬೇಕು. ಮಧ್ಯಾಹ್ನ ಹಣದ ಗಳಿಕೆ ಮುಂತಾದವುಗಳನ್ನು ಮಾಡಬೇಕು. ಸಂಜೆ ಸುಖವನ್ನು ಬೋಗಿಸಬೇಕು ಅಂತ ಮಹಾಭಾರತದಲ್ಲಿ ನಾರದರು ಹೇಳಿದ್ದಾರಂತೆ. 

ದೇವತೆಗಳಿಗೂ ಪ್ರಾಣಿಗಳಿಗೂ ಕರ್ಮದ ಅಧಿಕಾರವಿಲ್ಲ. ಕೇವಲ ಸುಖ-ದುಃಖಗಳನ್ನು ಭೋಗಿಸುವ ಅಧಿಕಾರ ಇದೆ . ಆದರೆ ಮನುಷ್ಯರಿಗೆ ಮಾತ್ರ ಪಾಪ ಪುಣ್ಯ ಸಂಪಾದನೆಯ ಕರ್ಮಗಳನ್ನು ಮಾಡುವ ಅಧಿಕಾರವಿದೆ. ಮನುಷ್ಯನು ಪುಣ್ಯಗಳನ್ನು ಹೆಚ್ಚಾಗಿ ಸಂಪಾದಿಸಿದರೆ ಮುಂದಿನ ಜನ್ಮದಲ್ಲಿ ದೇವತೆಯಾಗಿ ಹೆಚ್ಚು ಸುಖವನ್ನು, ಪಾಪಗಳನ್ನು ಹೆಚ್ಚು ಮಾಡಿದರೆ ಪ್ರಾಣಿಯಾಗಿ ಹೆಚ್ಚು ದುಃಖವನ್ನು ಅನುಭವಿಸುವರು, ಪಾಪ ಪುಣ್ಯಗಳನ್ನು ಸಮನಾಗಿ ಮಾಡಿದರೆ ಮನುಷ್ಯ ಜನ್ಮವನ್ನು ಹೊಂದುವರು. ಪಾಪು ಪುಣ್ಯಗಳ ಇಚ್ಛೆ ಇಲ್ಲದೆ ಈಶ್ವರಾರ್ಪಣ ಬುದ್ಧಿಯಿಂದ ನಿಷ್ಕಾಮಕರ್ಮವನ್ನು ಮಾಡಿ ಮೋಕ್ಷವನ್ನು ಸಾಧಿಸುವರು. ಇಂಥ ಸ್ವಾತಂತ್ರ್ಯವು ಮನುಷ್ಯನಿಗೆ ಇರುವುದರಿಂದ ದೇವತೆಗಳು ಕೂಡ ಮಾನವ ಜನ್ಮವನ್ನು ಬಯಸುತ್ತಾರೆ. 
ಸಮಾಜದಲ್ಲಿ ಯಾರ್ಯಾರು ಏನೇನು ಮಾಡಬೇಕು ಎಂದು ಈ ಪುಸ್ತಕದಲ್ಲಿ ಹೇಳಿದ್ದಾರೆ. 

ಈ ಪುಸ್ತಕದ 30 ನೇ ಪುಟದಲ್ಲಿ ಮಹಾತ್ಮರು ಎಂಬುವವರ ಅಸ್ಪೃಶ್ಯತಾ ನಿವಾರಣೆ ಆಂದೋಲನವನ್ನು ಖಂಡಿಸಿದ್ದಾರೆ.
ಈ ಪುಸ್ತಕವನ್ನು https://archive.org/details/dli.osmania.4764 ಈ ಕೊಂಡಿಯಲ್ಲಿ ಓದಬಹುದು.

ಇವತ್ತು ಹಿಂದೆ ಇಳಿಸಿಕೊಂಡಿದ್ದ 'ಭಾಸನ ಭಾರತ' ಎಂಬ ಸುಮಾರು 100 ಪುಟಗಳ ಪುಸ್ತಕವನ್ನು ಓದಿದೆ. 

ಇದನ್ನು ಜಿ. ಪಿ. ರಾಜರತ್ನಂ ಅವರು ಬರೆದಿದ್ದಾರೆ. 

ಭಾಸನು ಸಂಸ್ಕೃತದಲ್ಲಿ 13 ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಆರು ನಾಟಕಗಳು ಮಹಾಭಾರತದ ವಸ್ತುವನ್ನು ಹೊಂದಿವೆ. ಇವುಗಳಲ್ಲಿ ಐದು ಏಕಾಂಕ ನಾಟಕಗಳು. ಅವು ಯಾವುವು ಎಂದರೆ ಮಧ್ಯಮವ್ಯಾಯೋಗ, ದೂತ ವಾಕ್ಯ, ದೂತ ಘಟೋತ್ಕಚ, ಕರ್ಣ ಭಾರ ಮತ್ತು ಊರುಭಂಗ. 

ಇವುಗಳಲ್ಲಿ ಕರ್ಣಭಾರವು ನಾವು ಕಲಿಯುವಾಗ ಸಂಸ್ಕೃತ ಪಠ್ಯಪುಸ್ತಕದಲ್ಲಿ ಇತ್ತು.

ಈ ನಾಟಕಗಳ ಗದ್ಯಾನುವಾದ ಪುಸ್ತಕದಲ್ಲಿದೆ.

ಇವುಗಳಲ್ಲಿ ಊರುಭಂಗ ನಾಟಕವು ಇಷ್ಟವಾಯಿತು. ಇದರಲ್ಲಿ ದುರ್ಯೋಧನ ಭೀಮರ ಗದಾಯುದ್ಧದ ಕಥೆ ಇದೆ. ದುರ್ಯೋಧನನು ಸ್ವರ್ಗಕ್ಕೆ ಹೋದನಂತೆ. ಅವನು ಸಾಯುವಾಗ ಅವನಲ್ಲಿ ವೈರ ಭಾವ ಉಳಿದಿರಲಿಲ್ಲ. ತಾಯಿ ಗಾಂಧಾರಿಯನ್ನು ಜನ್ಮ ಜನ್ಮಕ್ಕೂ ನೀನೇ ತಾಯಿಯಾಗು ಎಂದು ಬೇಡಿಕೊಂಡನು. 

ನಿನ್ನೆ ಕೃಷ್ಣಾವತಾರದ ಕೊನೆಯ ಗಳಿಗೆಗಳು ಎಂದು ಪುಸ್ತಕದಲ್ಲಿ ರಾಮಾಯಣ, ಮಹಾಭಾರತ ಹಾಗೂ ಭಾಗವತಗಳನ್ನು ಸಂಪೂರ್ಣವಾಗಿ ಯಾರೂ ಪಾರಾಯಣ ಮಾಡುವುದಿಲ್ಲ ಎಂಬ ಸಂಗತಿಯನ್ನು ಓದಿದ್ದೆ . ಈ ಪುಸ್ತಕದಲ್ಲಿ ನಾನು ಓದಿದ ಪ್ರಕಾರ ವ್ಯಾಸರ ಮಹಾಭಾರತದಲ್ಲಿ 18 ಪರ್ವಗಳಿದ್ದು, 10ನೇ ಪರ್ವದಲ್ಲಿ ಕೌರವ ಪಾಂಡವರ ಯುದ್ಧವಾಗಿ ಕೌರವರು ಸೋಲು ಉಂಟಾಗುತ್ತದಂತೆ. ಹಾಗಾದರೆ ಮುಂದಿನ ಎಂಟು ಪರ್ವಗಳಲ್ಲಿ ಇರುವುದು ಏನು? ಮುಂದೊಮ್ಮೆ ನನಗೆ ತಿಳಿದೀತು.

 

ಈ ಪುಸ್ತಕವು archive.org ತಾಣದಲ್ಲಿ https://archive.org/details/dli.osmania.3600/mode/1up ಕೊಂಡಿಯಲ್ಲಿ ಲಭ್ಯವಿದೆ.

'ಕಸ್ತೂರಿ' ಹೆಸರಿನ ಮಾಸಪತ್ರಿಕೆ ನಿಮಗೆ ಗೊತ್ತಿರಬೇಕು . ಅದು ಇಂಗ್ಲೀಷಿನ ರೀಡರ್ಸ್ ಡೈಜೆಸ್ಟ್ ಮಾದರಿಯ ಕನ್ನಡ ಡೈಜೆಸ್ಟ್ ಆಗಿದೆ.

ಇದೇ ತರಹದ ಕೆಲವು ಡೈಜೆಸ್ಟ್‌ಗಳು ಕನ್ನಡದಲ್ಲಿ ಹಿಂದೆ ಇದ್ದವು.  ಅವುಗಳಲ್ಲಿ ಈ 'ಕಲ್ಯಾಣ'  ಒಂದು. ಇದರ ಕೆಲವು ಸಂಚಿಕೆಗಳು ಹಳೆಯ ಸಂಪದಿಗ ಗೆಳೆಯ ಶ್ರೀ ಓಂ ಶಿವಪ್ರಕಾಶರಿಂದಾಗಿ archive.org ಎಂಬ ತಾಣದಲ್ಲಿ ಸಿಕ್ಕವು . (ಅಲ್ಲಿ 'ಕಲ್ಯಾಣ ಡೈಜೆಸ್ಟ್‌' ಎಂದು ಕನ್ನಡದಲ್ಲಿ ಟೈಪ್ ಮಾಡಿ ಹುಡುಕುವುದರಿಂದ ಸಿಗುತ್ತವೆ. )

ಈ ಡೈಜೆಸ್ಟ್  ಇಂದಿನ ವಿಜಯಪುರ (ಹಿಂದಿನ ವಿಜಾಪುರ) ನಗರದಿಂದ ಹೊರಡುತ್ತಿತ್ತು. ಶ್ರೀ ಆರ್. ಬಿ. ಕುಲಕರ್ಣಿಯವರ ಒಡೆತನದ ಈ ಪತ್ರಿಕೆಯನ್ನು ಸುಪ್ರಸಿದ್ಧ ಸಾಹಿತಿ 'ಸತ್ಯಕಾಮ'ರು ಸಂಪಾದಿಸುತ್ತಿದ್ದರು.

ಈ ಪತ್ರಿಕೆಯ ಡಿಸೆಂಬರ್ 1961 ರ ಸಂಚಿಕೆಯನ್ನ ನಾನು ಇತ್ತೀಚೆಗೆ ಓದಿದೆ. ಅದರಲ್ಲಿ ನಾ ಕಂಡ ವಿಶೇಷವನ್ನು ನಿಮಗೆ ಇಲ್ಲಿ ತಿಳಿಸುವೆ.

1) ಶ್ರೀ ಶಂಕರಾಚಾರ್ಯರು ಪ್ರತಿ ದಿನವೂ ಸ್ನಾನದಿಂದ ಬರುವಾಗ ಒಬ್ಬ ಶೂದ್ರ ಶಿಷ್ಯನ ಹೆಗಲ ಮೇಲೆ ಕೈಯಿಟ್ಟುಕೊಂಡು ಬರುತ್ತಿದ್ದರು. ಕೆಲವರು ಇದನ್ನು ಆಕ್ಷೇಪಿಸಿದರು.  ಆಗ ಶಂಕರರು ಹೇಳಿದರು - 'ಶರೀರ ದ ಮಲಕಳೆದುಕೊಂಡು ಶುದ್ಧ ನಾಗಿ ಮಠಕ್ಕೆ ಬಂದು ಪೂಜೆಮಾಡಲು ಮನಸ್ಸು ಶುದ್ಧ ವಾಗಿ ಮಡಿಯಾಗ ಬೇಡ ವೆ ? ನಾವು ಉಚ್ಚ ಜಾತಿಯವರೆಂಬುದೂ ಮನಸ್ಸಿನ ಮೈಲಿಗೆ, ಅದನ್ನು ಕಳೆದುಕೊಳ್ಳಲು ಶೂದ್ರ ಶಿಷ್ಯನ ಹೆಗಲು ಅನುಸರಿಸಿ ಬರುವೆ. '
2) ಸಾಮ್ರಾಟ್ ಅಶೋಕನು ಕಳಿಂಗದ ಮೇಲೆ ದಾಳಿ ಮಾಡಿದನು. ಆಗ ಕಳಿಂಗಕ್ಕೆ ಪುಟ್ಟ ಬಾಲಕಿ ಅಮಿತಾ ರಾಣಿಯಾಗಿದ್ದಳು. ಅವಳು ಅಶೋಕನನ್ನು ಕೇಳಿದಳು - " ಯಾಕೆ ನಮ್ಮ ಜನರನ್ನು ಹೆದರಿಸುತ್ತಿದ್ದೀಯ ? ಕೊಲ್ಲುತ್ತಿದ್ದೀಯ ? ಯಾಕೆ ನಿನಗೆ ತಿನ್ನಲು ಅನ್ನ ಕಡಿಮೆಯಾಗಿದೆಯೇ ? ದುಡ್ಡು ಬೇಕಾಗಿದೆಯೇ ? ಆಡಲು ಆಟಿಕೆಗಳಿಲ್ಲವೇ? "
ಆಗ ಅವನ ಮನಃಪರಿವರ್ತನೆ ಆಯಿತು.
3) ಹಿರಿಯ ಸುಪ್ರಸಿದ್ಧ  ಸಾಹಿತಿ ಶ್ರೀರಂಗ ಅವರ ಒಂದು ವಿಡಂಬನೆ ಇಲ್ಲಿದೆ. ಸ್ವಾತಂತ್ರ್ಯದ ಕುರಿತು. ಶ್ರೀರಂಗರ ಅನೇಕ ಪುಸ್ತಕಗಳು archive.org ಯಲ್ಲಿ ಇರುವವಾದರೂ ನಾನು ಇನ್ನೂವರೆಗೆ ಓದಿಲ್ಲ. ಈ ಲೇಖನವು ಅವರ ಶೈಲಿಯ ಪರಿಚಯವನ್ನು ನನಗೆ ಮಾಡಿ ಕೊಟ್ಟಿತು. ಮೂರು ಪುಟಗಳ ಈ ಲೇಖನವನ್ನು  ಪೂರ್ತಿ ಓದಿಯೇ ಸವಿಯಬೇಕು.

ಈ ಪುಸ್ತಕವು https://archive.org/details/unset0000unse_o3v0 ಈ ಕೊಂಡಿಯಲ್ಲಿ ಸಿಗುತ್ತದೆ. ಅದನ್ನು ಅಲ್ಲೇ ಓದಬಹುದು. ಅಥವಾ pdf ರೂಪದಲ್ಲಿ ನಿಮ್ಮ ಕಂಪ್ಯೂಟರ್ / ಲ್ಯಾಪ್‌ಟಾಪ್ / ಮೊಬೈಲಿಗೆ ಇಳಿಸಿಕೊಂಡು ನಂತರ ಓದಬಹುದು.

ಇದು ಒಂದು ಪುಟ್ಟ ಅಂದರೆ 150 ಪುಟಗಳ ಒಂದು ಐತಿಹಾಸಿಕ ಕಾದಂಬರಿ. ಇದನ್ನು ಓದಲು pustaka.sanchaya.net ಅಂತರ್ಜಾಲತಾಣದಲ್ಲಿ 'ಈಶ ಸಂಕಲ್ಪ' ಎಂದು ಹುಡುಕಿದರೆ ಸಿಗುತ್ತದೆ.

ದಕ್ಷಿಣ ಭಾರತವನ್ನೆಲ್ಲ ಗೆದ್ದು ದಕ್ಷಿಣಾಪಥೇಶ್ವರ ಎಂದು ಕರೆಸಿಕೊಂಡ, ಕರ್ನಾಟಕ ಸಾಮ್ರಾಜ್ಯದ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯು ಉತ್ತರಾಪಥ (ಉತ್ತರ ಭಾರತ)ದ ಚಕ್ರವರ್ತಿ ಹರ್ಷವರ್ಧನನ ಜತೆಗೆ ತನ್ನ ಸಾಮ್ರಾಜ್ಯದ ಉತ್ತರದ ಸೀಮೆ ಗೋದಾವರಿ ನದಿಯಲ್ಲ ಆದರೆ ನರ್ಮದಾ ನದಿ ಎಂದು ಸಾಧಿಸಲು ಯುದ್ಧ ಮಾಡಿ ಯಶಸ್ವಿಯಾಗುತ್ತಾನೆ. ಈ ಯುದ್ಧದ ಕಥೆ ಮತ್ತು ಜೊತೆ ಜೊತೆಗೆ ಈತನ ಸೇನಾಪತಿಯ ಸೊಸೆಯು ಪುರುಷ ವೇಷದಲ್ಲಿ ಸಾಹಸ ಮಾಡಿ ಯುದ್ಧದ ಗೆಲುವಿಗೆ ಕಾರಣಳಾದ ಸಂಗತಿ ಮೊದಲ ಅರ್ಧಭಾಗದಲ್ಲಿದ್ದರೆ ನಂತರದ ಭಾಗದಲ್ಲಿ ಮುಂದಿನ ಸಾಮ್ರಾಟ್ ಯಾರು ಎಂದು ಅಧಿಕಾರಕ್ಕಾಗಿ ಅವನ ಮಕ್ಕಳ ನಡುವೆ ನಡೆದ ಜಗಳ, ಅದರಿಂದಾಗಿ ದಕ್ಷಿಣದ ಪಲ್ಲವ ರಾಜನು ಲಾಭ ಪಡೆದು ರಾಜಧಾನಿ ಬಾದಾಮಿಯನ್ನು ವಶಪಡಿಸಿಕೊಂಡು ನಾಶ ಮಾಡಿದನು. ಇಮ್ಮಡಿ ಪುಲಕೇಶಿಯು ಆಗ ಅರ್ಧಾಂಗ ವಾಯುವಿನಿಂದ ಹಾಸಿಗೆ ಹಿಡಿದಿದ್ದನು. ಆದ ಘಟನೆಗಳಿಗೆ ಈಶ ಸಂಕಲ್ಪವೇ ಹಾಗೆ ಇದೆ ಎಂದು ಸಮಾಧಾನ ಮಾಡಿಕೊಳ್ಳದೆ ಬೇರೆ ಹಾದಿಯೇ ಇಲ್ಲ!

ಈ ಪುಸ್ತಕದ ಮುನ್ನುಡಿಯಲ್ಲಿ ಇರಾಣದ ಚಕ್ರವರ್ತಿಯು ಇಮ್ಮಡಿ ಪುಲಕೇಶಿಯ ಸಹಾಯ ಕೋರಿದ ಸಂಗತಿ ಇದೆ. ಇದು ನನಗೆ ಗೊತ್ತಿರಲಿಲ್ಲ. ಇಮ್ಮಡಿ ಪುಲಕೇಶಿಯು 42 ವರ್ಷ ಈ ಸಾಮ್ರಾಜ್ಯವನ್ನು ಆಳಿದನಂತೆ.

ಈ ಕಾದಂಬರಿಯನ್ನು ಬರೆದವರು ನಾಗೇಶ ಎಂಬುವವರು. ಇವರೇ ಬರೆದ ಚಾಲುಕ್ಯರ ಕುರಿತಾದ ಇನ್ನೊಂದು ಕಾದಂಬರಿ 'ಸತ್ಯಮೇವ ಜಯತೆ' . ಇದೇ ಗಾತ್ರದ್ದು. ನನ್ನ ಮುಂದಿನ ಓದು ಅದು. 

(ಈ ಪುಸ್ತಕವನ್ನು ಓದಲು /ಇಳಿಸಿಕೊಳ್ಳಲು pustaka.sanchaya.net ತಾಣದಲ್ಲಿ 'ಕೃಷ್ಣಾನಂದ ಕಾಮತ್‌' ಎಂದು ಬರೆದು ಹುಡುಕಿ.

ಈ ಪುಸ್ತಕವನ್ನು ಓದುವಾಗ ನಮ್ಮ ಬದುಕಿಗೆ ಮಾರ್ಗದರ್ಶಕವಾಗಬಹುದಾದ ಅನೇಕ ವಿಚಾರಗಳು ದೊರೆತವು . ಅವನ್ನು ನಿಮ್ಮೊಂದಿಗೆ  ಹಂಚಿಕೊಳ್ಳುತ್ತಿದ್ದೇನೆ.

ಕೃಷ್ಣಾನಂದ ಲಕ್ಷ್ಮಣ ಕಾಮತ್‌ ಅವರು ತಮಗೆ ಇಷ್ಟವಾದದ್ದನ್ನು ಮಾಡಿದರು, ಓದಿದರು, ಬರೆದರು, ಬದುಕಿದರು.ಬಯಸಿದಂತೆ ಬದುಕಿದ ಅವಧೂತರು. ನಿಜವಾದ ಅರ್ಥದಲ್ಲಿ ಜೀವಿಸಿದರು.

... ಗೌರವಕ್ಕೆ ಅರ್ಹರಾಗಿದ್ದರೂ ಅದನ್ನು ಪಡೆಯದೇ ಹೋದವರು ಕಾಮತರು. ಕಾಮತರು ಈ ಬಗ್ಗೆ ತಲೆಕೆಡಿಸಿಕೊ೦ಡವರೇ ಅಲ್ಲ. ಅವರಿಗೆ ತಾವಾಯಿತು ತಮ್ಮ ಕೆಲಸವಾಯಿತು. ಜನಸಂಪರ್ಕ ಕಡಿಮೆ. ಜನರೊಡನೆ ಮಾತನಾಡಿದ್ದು ಕಡಿಮೆ. ಹರಟೆ ಹೊಡೆಯುವ ಜಾಯಮಾನದವರಲ್ಲ.

ಪ್ರತಿಯೊಂದು ವಿಷಯದಲ್ಲಿಯೂ ಆಸಕ್ತಿಯಿತ್ತು. ಅವರಲ್ಲಿ ಮಗುವಿನಲ್ಲಿರ ಬೇಕಾದ ಮುಗ್ಧತೆಯೂ ಇತ್ತು. ತಿಳಿದುಕೊಳ್ಳಬೇಕೆಂಬ ಕುತೂಹಲವಿತ್ತು.

ಹಾಗಾಗಿ ಅವರು ವಿಭಿನ್ನ ವಿಷಯಗಳ ಮೇಲೆ ಅನೇಕ ಪುಸ್ತಕಗಳನ್ನು ಬರೆದರು. ಪ್ರವಾಸ ಕಥನ, ಕಲೆ, ಪರಿಸರ, ಪ್ರಬ೦ಧ, ಕಾದ೦ಬರಿ, ಪ್ರಾಣಿ-ಪಕ್ಷಿಗಳ 22 ಪುಸ್ತಕಗಳು.

"ಹೊಟ್ಟೆ ಹೊರೆಯುವುದಕ್ಕಾಗಿ ಶಿಕ್ಷಣ ಎ೦ದು ಹೇಳುವುದು ತಪ್ಪು ಗ್ರಹಿಕೆ. ವಿದ್ಯಾಭ್ಯಾಸದ ಮೂಲ ಉದ್ದೇಶ ಮಾನವನ ಮಾನಸಿಕ ವಿಕಾಸ. ಮಾನವನಿಗೆ ಸುಖ-ಸಂಪತ್ತುಗಳಿಗಿಂತ ಆತ್ಮಗೌರವ, ದೇಶಾಭಿಮಾನಗಳು ಹೆಚ್ಚಿನ ನೆಮ್ಮದಿ ಕೊಡಬಲ್ಲವು.

ಕೃಷ್ಣಾನಂದ ಕಾಮತ್‌ ಮತ್ತು ಜ್ಯೋತ್ಸ್ನಾ ಕಾಮತರ ಜೋಡಿ ಅನುರೂಪ ದಾಂಪತ್ಯಕ್ಕೊಂದು ಮಾದರಿ.

ನಮ್ಮಲ್ಲಿ ಹುದುಗಿಕೊ೦ಡಿರುವ ಕ್ರಿಯಾಶಕ್ತಿ ಹೊರಹೊಮಬೇಕಾದರೆ ಅದಕ್ಕೆ ಪ್ರೋತ್ಸಾಹ ಅತ್ಯವಶ್ಯ.

ಜೀವನದಲ್ಲಿ ಅತೀವ ಶ್ರದ್ಧೆ ಮತ್ತು ಆಸಕ್ತಿಯನ್ನು ಬೆಳೆಸಿಕೊ೦ಡು ಅದರ ಆಳವನ್ನು ಅರಿಯಲು ಸದಾಕಾಲ ಹವಣಿಸುತ್ತಿದ್ದ ಮನಸ್ಸು ಅವರದ್ದಾಗಿತ್ತು.

ಸರಳವಾದ ಉಡುಗೆ, ಸರಳವಾದ ನಡವಳಿಕೆ ಅವರ ಹೆಗ್ಗುರುತು.

ಮಿತಭಾಷಿಯಾಗಿ, ಕಾಡುಹರಟೆಗಳಿಂದ ಮೈಲಿ ದೂರವಿದ್ದು, ಸದಾ ಏನಾದರೂ ಕೆಲಸವನ್ನು ಹಚ್ಚಿಕೊಂಡು ಇರುತ್ತಿದ್ದರು. ತನ್ನ ಸುತ್ತಮುತ್ತಲಿನ ಆಗುಹೋಗುಗಳನ್ನು, ಜನರ ಚಲನವಲನಗಳನ್ನು ಸೂಕ್ಷ ವಾಗಿ ಗಮನಿಸುತ್ತಿದ್ದರು. ದೊಡ್ಡಸ್ತಿಕೆ ಎನ್ನುವುದು ಅವರ ಹತ್ತಿರವೂ ಸುಳಿಯುತ್ತಿರಲಿಲ್ಲ.

ಸಾಮಾನ್ಕರಿಂದ ಅತೀ ಸಾಮಾನ್ಕರವರೆಗೆ ಎಲ್ಲರೊಂದಿಗೆ ಸಮಾನ ರೀತಿಯಲ್ಲಿ ಬೆರೆಯುವ ಸ್ವಭಾವ. ಅವರ ಪ್ರಕಾರ ಕಷ್ಟದಲ್ಲಿ ಇರುವವರಿಗೆ ನೆರವಾಗುವುದು ಮಾನವಧರ್ಮ. “ನಮ್ಮ ಸುಖ-ಸಂಪತ್ತುಗಳನ್ನು ಅಭಾಗಿಗಳೊಂದಿಗೆ ಹಂಚಿಕೊ೦ಂಡಾಗಲೇ ಜೀವನಕ್ಕೆ ಒ೦ದು ಅರ್ಥ ಬರುತ್ತದೆ” ದಾನಶೀಲತೆಯನ್ನು ವೈಭವೀಕರಿಸದೆ, ಅದು ನಿತ್ಯದ ಸಂಗತಿಗಳಲ್ಲಿ ಒಂದು ಎಂಬ ನಡವಳಿಕೆಯನ್ನು ರೂಢಿಸಿಕೊಂಡಿದ್ದ ಕೃಷ್ಣಾನಂದರು ಈ ಪ್ರವೃತ್ತಿ ತನ್ನಲ್ಲಿ ಸದಾಕಾಲ ಉಳಿದುಕೊಂಡಿರಲಿ, ನಿರ್ಭಾಗ್ಯರ ಹೃದಯದಲ್ಲಿ ನಮ್ಮಂಥವರಿಗೆ ಸ್ಥಾನವಿರುತ್ತಲ್ಲ ಅಷ್ಟು ಸಾಕು ಎನ್ನುತ್ತಿದ್ದ ಸಹೃದಯಿ.

ಐಷಾರಾಮಿ ಬದುಕು ಹಾಗೂ ಕೊಳ್ಳುಬಾಕ ಸಂಸ್ಕೃತಿಯ ಕುರಿತು ಕಿ೦ಚಿತ್ತೂ ಒಲವು ತೋರದ ಕೃಷ್ಣಾನಂದರು ಯಾರಿಂದಲೂ, ಯಾವುದರಿಂದಲೂ ಏನನ್ನೂ ಅಪೇಕ್ಷಿಸಿದವರಲ್ಲ. ನಿರೀಕ್ಷೆ ಮನುಷ್ಯರಲ್ಲಿ ನಿರಾಶೆಯನ್ನು ಹುಟ್ಟಿಸುತ್ತದೆ. ಎಂಬ ಮಾತನ್ನು ಬದುಕಿಗೆ ಅನ್ನಯಿಸಿಕೊಂಡಿದ್ದರಿ೦ದ ಬದುಕನ್ನು. ಸಹನೀಯಗೊಳಿಸುವುದು ಅವರಿಗೆ: ಸಾಧ್ಯವಾಯಿತು.

ಕೈಗೊಳ್ಳುವ ಕೆಲಸ ಕಾರ್ಯಗಳ ಉದ್ದೇಶ ಹಾಗೂ ಫಲಿತಾಂಶ ಮುಖ್ಯವೆಂದು ಪರಿಗಣಿಸಿದ್ದರಿ೦ದ ಲಾಭನಷ್ಟಗಳ ಲೆಕ್ಕಾಚಾರದ ಕಡೆಗೆ ಅವರ ಗಮನ ಹರಿಯಲಿಲ್ಲ.

ಈ ಐತಿಹಾಸಿಕ ಕಾದಂಬರಿಯನ್ನು ಬರೆದವರು - ರಾಮಚಂದ್ರ. ತ್ರ್ಯಯಂಬಕ. ಕರ್ಪೂರ. ಈ ಕಾದಂಬರಿಯು ವಾಚಕರ ಪುಣ್ಯದಿಂದ ಪೂರ್ಣವಾಯಿತು ಎಂದು ಲೇಖಕರು ಬರೆಯುತ್ತಾರೆ! ಭೂವಡ ಎಂಬ ಚಾಲುಕ್ಯಸಾಮ್ರಾಟನು ಗುರ್ಜರ (ಗುಜರಾತ್) ಪ್ರಾಂತವನ್ನು ಮೇಲಾದ ಧರ್ಮ-ನೀತಿಗಳ ಬೆಂಬಲದಿಂದಲೇ ಗೆದ್ದುದನ್ನು ಈ ಕಾದಂಬರಿ ಹೇಳುತ್ತದೆ. ಇದರ ವಾಚನದಿಂದ ಕನ್ನಡಿಗರಲ್ಲಿ ಸ್ವಾಭಿಮಾನವು ಜಾಗೃತವಾದರೆ ತಾವು ಕೃತಾರ್ಥರಾಗುವುದಾಗಿ ಲೇಖಕರು ಹೇಳುತ್ತಾರೆ.

ಆರಂಭಿಕ ಪುಟಗಳಲ್ಲಿ ಸುಂದರ ಯುವತಿ ಯೊಬ್ಬಳ ಅಪಹರಣ, ರಕ್ಷಣೆಯ ಸಂಗತಿಯಿದೆ. ನಂತರ ಒಬ್ಬ ಗುಜರಾತಿ ಒಬ್ಬ ಮುದಿ ರಾಜನೂ ಅವನ ಚಿಕ್ಕ ವಯಸ್ಸಿನ ರಾಣಿ ವಿಮಲೆಯ ಸಂಗತಿಯಿದೆ. ಈ ರಾಜನ ಪಾವಗಡ ಕೋಟೆಯ ಮೇಲೆ ಚಾಲುಕ್ಯರ ಸಾಮ್ರಾಟನಾದ ಭೂವಡನು ಸಾಮ್ರಾಜ್ಯ ವಿಸ್ತರಣೆಗಾಗಿ ಮುತ್ತಿಗೆ ಹಾಕಿದ ಸಂಗತಿಯೂ ಆ ಎಳೆವಯಸ್ಸಿನ ರಾಣಿಯು ಇವನಲ್ಲಿ ಆಸಕ್ತಳಾಗಿ ತನ್ನ ಗಂಡನ ಅಧೀನದ ಕೋಟೆಯನ್ನು ಭೂವಡನ ವಶಪಡಿಸುವಳು, ಆದರೆ ಅವಳ ಅನೀತಿಗಾಗಿ ಭೂವಡನು ಅವಳನ್ನು ತಿರಸ್ಕರಿಸುವನು. ಈಗ ವಿಮಲೆಯು ಅವನ ನಾಶಕ್ಕಾಗಿ ಯೋಜಿಸುವಳು. ಅದು ಹೇಗೆ? ಅದರಿಂದ ಈ ಭೂವಡನು ಹೀಗೆ ಪಾರಾಗುವನು, ಮತ್ತು ಆರಂಭದಲ್ಲಿದ್ದ ಸುಂದರಿಯ ರಕ್ಷಣೆ ಹೇಗಾಗುವುದು ಎಂಬುದು ಉಳಿದ ಕತೆ. 

ಅಲ್ಲಿನ ಕೆಲವು ಒಳ್ಳೆಯ ಸಾಲುಗಳು: -

ಲೋಕದಲ್ಲಿ ವೀರರಾದವರಿಗೆ ಅನಾಥರನ್ನೂ ನಿರ್ಬಲರನ್ನೂ ರಕ್ಷಿಸುವುದೇ ಶ್ರೇಷ್ಠ ಧರ್ಮವಾಗಿರುವುದು.

ಇಂಥ ಪುಣ್ಯ ಕೆಲಸಕ್ಕೆ ಸಹಾಯ ಮಾಡದಿರುವುದು ಅನುಚಿತ.

ಪರಸ್ತ್ರೀಯನ್ನು ಹತ್ತಿರ ಇರಿಸಿಕೊಳ್ಳುವುದು ಅಪಕೀರ್ತಿಗೆ ಸಾಧನ.

ಈ ಕಾದಂಬರಿಯನ್ನು ಓದಲು ಮತ್ತು ಡೌನ್ ಲೋಡ್ ಮಾಡಿಕೊಳ್ಳಲು pustaka.sanchaya.net ತಾಣದಲ್ಲಿ ಈ ಕಾದಂಬರಿಯ ಹೆಸರು ಬರೆದು ಹುಡುಕಿರಿ.