ಕನ್ನಡದ ನುಡಿಚಿತ್ರ ಬರಹಗಾರರು ಎನ್ನುವಾಗ ತಟ್ಟನೆ ನೆನಪಾಗುವ ಹೆಸರು ನಿರಂಜನ ವಾನಳ್ಳಿ. ೧೯೮೦ರ ದಶಕದಲ್ಲಿ ನುಡಿಚಿತ್ರಗಳನ್ನು ಬರೆಯಲಾರಂಭಿಸಿದ ಡಾ. ನಿರಂಜನ ವಾನಳ್ಳಿ, ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಾ ಇಂದಿಗೂ ನುಡಿಚಿತ್ರಗಳನ್ನು ಬರೆಯುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ, ಪತ್ರಿಕೋದ್ಯಮದ ಪಾಠ ಮಾಡುತ್ತಿದ್ದರೂ ವರುಷಕ್ಕೊಂದು ಬರಹವನ್ನೂ ಬರೆಯದಿರುವ ಪತ್ರಿಕೋದ್ಯಮದ ಹಲವಾರು ಪ್ರಾಧ್ಯಾಪಕರಿಗಿಂತ ಇವರು ಭಿನ್ನ.
ತಮ್ಮ ಎಂ.ಎ. ಶಿಕ್ಷಣ ಮುಗಿಸಿದೊಡನೆ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ಪ್ರಾಧ್ಯಾಪಕರಾಗಿ ಸೇರಿಕೊಂಡರು ನಿರಂಜನ ವಾನಳ್ಳಿ. ಅನಂತರ, ಆರು ವರುಷ ಅಲ್ಲಿ ವೃತ್ತಿಯಲ್ಲಿ ಇದ್ದುಕೊಂಡೇ ಬೆಳ್ತಂಗಡಿ ತಾಲೂಕಿನ ಮೂಲೆಮೂಲೆಯ ಹಳ್ಳಿಗಳಿಗೂ ಹೋಗಿ ಬಂದು, ತಮ್ಮ…