“ಪೂರ್ಣಿಮಾ ಸುರೇಶ್ ಅವರ "ಸಂತೆಯೊಳಗಿನ ಏಕಾಂತ" ಕವನ ಸಂಕಲನದುದ್ದಕ್ಕೂ ಕೇಳಿಸುವುದು ಕವಿತೆಗಳ ಎದೆಬಡಿತ. ಈ ಕವಿತೆಗಳು ಕವಿಕಟ್ಟಿದ ಪದಮಹಲ್ ಅಲ್ಲ, ಅವು ಗರ್ಭಕಟ್ಟಿ ಹುಟ್ಟಿದ ಗರ್ಭಗುಡಿಗಳು, ಒಳಗೆ ಮೂರ್ತಿಗಳು, ಪ್ರತಿಮೆಗಳು. ಕವನ ಸಂಕಲನದಲ್ಲಿ ಅರ್ಥಕ್ಕಿಂತ ಅನುಭೂತಿಗೇ ಪ್ರಾಮುಖ್ಯತೆ.
ಇಲ್ಲಿನ ಕಾವ್ಯತಂತ್ರ, ಕೆ. ವಿ. ತಿರುಮಲೇಶ್ ಅವರು ಗಮನಿಸಿದಂತೆ, ಅಪೂರ್ಣ ವಾಕ್ಯಗಳ ಮಾಲೆಗಳು.
ಈ ಮಾರ್ಗ ಪೂರ್ಣಿಮಾ ಅವರ ನ್ಯಾಚುರಲ್ ಮಾರ್ಗ. ನಾಟಕಗಳಲ್ಲಿ ವಾಕ್ಯಗಳ ನಡುವಿನ ಅರ್ಧವಿರಾಮಗಳು ಸೂಚಿಸುವಷ್ಟು, ನಿಟ್ಟುಸಿರುಗಳು ಹೇಳಿದಷ್ಟು, ಬಿಕ್ಕಳಿಕೆಯ ಬಿಂದುಗಳು ಪ್ರತಿಫಲಿಸಿದಷ್ಟು ಅರ್ಥ, ಪೂರ್ಣವಾಕ್ಯಗಳು ಹೇಳಲಾರವು. ಇಲ್ಲಿನ ಕವಿತೆಗಳೂ ಅಷ್ಟೇ, ಸಾಕಷ್ಟು…