ಕನ್ನಡದ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ನಾಲ್ಕು ಪ್ರಖ್ಯಾತ ಕತೆಗಳ ಸಂಕಲನ ಇದು. ಮೊದಲನೆಯ ಕತೆ “ಕಿರಗೂರಿನ ಗಯ್ಯಾಳಿಗಳು” ಇದರ ನಾಟಕದ ರೂಪಾಂತರ ಹಲವು ಬಾರಿ ರಂಗಸ್ಥಳದ ಮೇಲೆ ಪ್ರದರ್ಶಿತವಾಗಿದೆ. “ಕೃಷ್ಣೇಗೌಡನ ಆನೆ” ಕತೆ ಹಲವು ಭಾಷೆಗಳಿಗೆ ಅನುವಾದವಾಗಿದೆ.
ಮಲೆನಾಡಿನ ಮೂಲೆಯ ಹಳ್ಳಿ ಕಿರಗೂರು. ಅಲ್ಲಿನ ಆಗುಹೋಗುಗಳ ಕಥನ “ಕಿರಗೂರಿನ ಗಯ್ಯಾಳಿಗಳು”. ತೇಜಸ್ವಿಯವರು ಮೂಡಿಗೆರೆಯ ಹತ್ತಿರ ಕಾಫಿ ಎಸ್ಟೇಟಿನಲ್ಲಿ ವಾಸಿಸುತ್ತಾ ಸುತ್ತಮುತ್ತಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದವರು. ಹಳ್ಳಿ ಬದುಕಿನ ಸೂಕ್ಷ್ಮ ಅವಲೋಕನದಿಂದಾಗಿಯೇ ಅವರಿಗೆ ಇಂತಹ ಕತೆ ಬರೆಯಲು ಸಾಧ್ಯವಾಗಿದೆ. ಅರಣ್ಯ ಇಲಾಖೆ, ರೆವಿನ್ಯೂ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಅವರ ಭ್ರಷ್ಟಾಚಾರ, ಅವರು ಹಳ್ಳಿಯ ಜನರನ್ನು…